ಫಿಗರ್ ಹಾಳಾಗ್ಬಾರ್ದೆಂದು ತಿನ್ನೋದೇ ಬಿಟ್ತಿದ್ರು ಶ್ರೀದೇವಿ; ಅಸಹಜ ಸಾವಿನ ರಹಸ್ಯ ಬಯಲು!
ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಶ್ರೀದೇವಿ ನಿಧನ ಹೊಂದಿ ವರ್ಷಗಳೇ ಕಳೆದಿವೆ. ಆದರೆ ಇವತ್ತಿಗೂ ಅವರ ಸಾವಿನ ಕುರಿತು ಹಲವಾರು ವದಂತಿಗಳಿವೆ. ಹೀಗಿರುವಾಗ ಶ್ರೀದೇವಿ ಪತಿ ಬೋನಿ ಕಪೂರ್, ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಭಾರತೀಯ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಎಂಬ ಬಿರುದನ್ನು ಪಡೆದಿರುವ ನಟಿ ಶ್ರೀದೇವಿ. ದಕ್ಷಿಣ ಭಾರತದಿಂದ ಸಿನಿ ಜರ್ನಿ ಆರಂಭಿಸಿ ಬಾಲಿವುಡ್ನಲ್ಲಿ ನೆಲೆ ಕಂಡುಕೊಂಡರು. ಅದೆಷ್ಟೋ ಸಿನಿಮಾಗಳಲ್ಲಿ ಅದ್ಭುತವಾಗಿ ನಟಿಸಿ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದವರು. ಶ್ರೀದೇವಿ ಅವರು ಫೆಬ್ರವರಿ 24, 2018ರಂದು ತಮ್ಮ 54 ನೇ ವಯಸ್ಸಿನಲ್ಲಿ ದುಬೈನಲ್ಲಿ ಹಠಾತ್ ನಿಧನರಾದಾಗ ಎಲ್ಲರೂ ಆಘಾತಕ್ಕೊಳಗಾಗಿದ್ದರು.
ನಟಿಯದ್ದು ಸಹಜ ಸಾವಲ್ಲ ಅನ್ನೋ ಸುದ್ದಿ ಹರಿದಾಡಿತ್ತು. ಬಾತ್ಟಬ್ನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ವಿಪರೀತ ಮದ್ಯಪಾನದಿಂದ ಸಾವಾಗಿದೆ ಎಂದಿದ್ದರು. ಮತ್ತೆ ಕೆಲವರು ಸಹಜ ಸಾವು ಎಂದು ತಿಳಿಸಿದ್ದರು. ಆದರೆ ಕುಟುಂಬ ಸಾವಿನ ಬಗ್ಗೆ ಯಾವುದೇ ಹೇಳಿಕೆ ನೀಡಿರಲ್ಲಿಲ್ಲ. ಸದ್ಯ ಶ್ರೀದೇವಿ ನಿಧನರಾದ ವರ್ಷಗಳ ನಂತರ ಪತಿ ಬೋನಿ ಕಪೂರ್, ಸಾವಿನ ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಬೋನಿ ಕಪೂರ್,'ಆಕೆಗೆ ಯಾವಾಗಲೂ ತಾನು ಪರದೆಯಲ್ಲಿ ಸುಂದರವಾಗಿ ಕಾಣಬೇಕೆಂಬ ಅತೀವ ತುಡಿತವಿತ್ತು. ಅದನ್ನು ಸಾಧಿಸಲು ಆಕೆ ನಿರಂತರವಾಗಿ ಪಥ್ಯದಲ್ಲಿರುತ್ತಿದ್ದಳು. ಹಲವು ಬಾರಿ ಉಪವಾಸ ಮಾಡುತ್ತಿದ್ದಳು. ಇದರ ಪರಿಣಾಮವಾಗಿ ಆಕೆ ಕಡಿಮೆ ರಕ್ತದೊತ್ತಡದಿಂದ ಬಳಲುತ್ತಿದ್ದಾಳೆ ಎಂದು ನಮ್ಮ ವೈದ್ಯರು ಕೂಡಾ ತಿಳಿಸಿದ್ದರು' ಎಂದು ಬೋನಿ ಕಪೂರ್ ಹೇಳಿದ್ದಾರೆ.
'ನಾನು ಸುಮಾರು 24 ಅಥವಾ 48 ಗಂಟೆಗಳ ಕಾಲ ನನ್ನನ್ನು ತನಿಖೆ ಮತ್ತು ವಿಚಾರಣೆಗೆ ಒಳಪಡಿಸಿದಾಗ ಅದರ ಬಗ್ಗೆ ಮಾತನಾಡಿದ್ದೇನೆ. ಭಾರತೀಯ ಮಾಧ್ಯಮಗಳಿಂದ ಹೆಚ್ಚಿನ ಒತ್ತಡವಿರುವುದರಿಂದ ಸುಮ್ಮನೆ ಇರಬೇಕಾಯಿತು. ಅದಲ್ಲದೆ, ಘಟನೆಯ ಬಗ್ಗೆ ಯಾವುದೇ ಮಾಹಿತಿಯನ್ನು ಮುಚ್ಚಿಡಲಾಗಿಲ್ಲ. ಸುಳ್ಳು ಪತ್ತೆ ಪರೀಕ್ಷೆ ಸೇರಿದಂತೆ ಎಲ್ಲಾ ಪರೀಕ್ಷೆಗೆ ನಾನು ಒಳಪಟ್ಟಿದ್ದೇನೆ' ಎಂದು ಬೋನಿ ಕಪೂರ್ ಹೇಳಿದರು.
'ಅವಳು ಚೆನ್ನಾಗಿ ಕಾಣಬೇಕೆಂದು ಬಯಸಿದ್ದಳು. ಶೇಪ್ನಲ್ಲಿ ಉಳಿದುಕೊಳ್ಳಲು ಬಯಸಿದ್ದಳು. ಅವಳು ನನ್ನನ್ನು ಮದುವೆಯಾದ ಸಮಯದಿಂದ ಒಂದೆರಡು ಸಂದರ್ಭಗಳಲ್ಲಿ ಬ್ಲ್ಯಾಕ್ಔಟ್ಗಳನ್ನು ಹೊಂದಿದ್ದಳು. ಕಡಿಮೆ ಬಿಪಿ ಸಮಸ್ಯೆ ಇದೆ ಎಂದು ವೈದ್ಯರು ಹೇಳುತ್ತಲೇ ಇದ್ದರು ಎಂದು ಬೋನಿ ಕಪೂರ್ ತಿಳಿಸಿದ್ದಾರೆ.
'ಜೊತೆಗೆ ಆಕೆಯ ಸಾವಿನ ನಂತರ ಮನೆಗೆ ಸಾಂತ್ವನ ಹೇಳಲು ಬಂದ ನಿರ್ಮಾಪಕ ನಾಗಾರ್ಜುನ ಕೂಡಾ ಆಕೆ ಕೆಲವು ದಿನಗಳ ಹಿಂದೆ ತಮ್ಮ ಚಿತ್ರೀಕರಣದ ವೇಳೆ ನಿಶ್ಯಕ್ತಿಯಿಂದಾಗಿ ನೆಲಕ್ಕೆ ಕುಸಿದು ಬಿದ್ದಿದ್ದಾಗಿ ತಿಳಿಸಿದ್ದರು. ಹೀಗೆ ಆಕೆ ಹಲವಾರ ಬಾರಿ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಒಮ್ಮೆಯಂತೂ ಶೂಟಿಂಗ್ ಸಮಯದಲ್ಲಿ ನೆಲಕ್ಕೆ ಬಿದ್ದು ಹಲ್ಲು ಮುರಿದುಕೊಂಡಿದ್ದಳು' ಎಂದು ಬೋನಿ ಕಪೂರ್ ಹೇಳಿದರು.
ವಾಸ್ತವವಾಗಿ ವೈದ್ಯರು ಶ್ರೀದೇವಿ ಅವರ ಆಹಾರದಲ್ಲಿ ಉಪ್ಪು ಸೇರಿಸಲು ಶಿಫಾರಸು ಮಾಡಿದರು. ಆದರೆ ನಟಿ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ ಎಂದು ಬೋನಿ ಕಪೂರ್ ನೋವಿನಿಂದ ನುಡಿದಿದ್ದಾರೆ. ಶ್ರೀದೇವಿ ಅವರು 2018ರ ಫೆಬ್ರವರಿಯಲ್ಲಿ ದುಬೈ ಹೊಟೇಲ್ವೊಂದರ ಬಾತ್ಟಬ್ನಲ್ಲಿ ಶವವಾಗಿ ಪತ್ತೆಯಾಗಿದ್ದರು. ನಂತರ ಆಕೆ ಆಕಸ್ಮಿಕವಾಗಿ ಮುಳುಗಿದ್ದರಿಂದ ಇಹಲೋಕ ತ್ಯಜಿಸಿದ್ದಾಳೆ ಎಂದು ತನಿಖಾ ಆಯೋಗವು ವರದಿ ನೀಡಿತ್ತು.