Ananthan Kaadu: ಮುರಳಿ ಗೋಪಿ ಕಥೆ ಬರೆದಿರುವ, ಜಿ.ಎನ್. ಕೃಷ್ಣಕುಮಾರ್ ನಿರ್ದೇಶನದ 'ಅನಂತನ್ ಕಾಡು' ಸಿನಿಮಾ ಜೂನ್ 25ಕ್ಕೆ ರಿಲೀಸ್ ಆಗಲಿದೆ. 'ಕಾಂತಾರ' ಖ್ಯಾತಿಯ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಅವರ ಮೊದಲ ಮಲಯಾಳಂ ಚಿತ್ರ.
ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಮೆಚ್ಚುಗೆ ಗಳಿಸಿದ್ದ 'ಟಿಯಾನ್' ಚಿತ್ರದ ನಂತರ, ಮುರಳಿ ಗೋಪಿ ಅವರ ಕಥೆಗೆ ಜಿ.ಎನ್. ಕೃಷ್ಣಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಚಿತ್ರವೇ 'ಅನಂತನ್ ಕಾಡು'. ನಟ ಆರ್ಯ ನಾಯಕರಾಗಿರುವ ಈ ಮಲಯಾಳಂ ಚಿತ್ರದ ಬಗ್ಗೆ 'ಕಾಂತಾರ' ಖ್ಯಾತಿಯ ಸಂಗೀತ ನಿರ್ದೇಶಕ ಅಜನೀಶ್ ಬಿ. ಲೋಕನಾಥ್ ಮಾತನಾಡಿದ್ದಾರೆ. 'ಅನಂತನ್ ಕಾಡು ಒಂದು ಭಾವನಾತ್ಮಕ ಹಾಗೂ ವಾಸ್ತವಕ್ಕೆ ಹತ್ತಿರವಾದ ಸಿನಿಮಾ' ಎಂದು ಅಜನೀಶ್ ಹೇಳಿದ್ದಾರೆ. ಈ ಸಿನಿಮಾ ಜೂನ್ 25 ರಂದು ವಿಶ್ವಾದ್ಯಂತ ತೆರೆ ಕಾಣಲಿದೆ.
ಇತ್ತೀಚೆಗೆ ರಿಲೀಸ್ ಆದ ಸಿನಿಮಾದ ಕ್ಯಾರೆಕ್ಟರ್ ಪೋಸ್ಟರ್ಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಾಗಿದ್ದವು. ಈ ಚಿತ್ರವು ಅನಂತಪುರಿಯ ಇತಿಹಾಸದ ಒಂದು ಭಾಗವನ್ನು ತೆರೆ ಮೇಲೆ ತರಲಿದೆ ಎಂದು ಹೇಳಲಾಗುತ್ತಿದೆ. ನಾಯಕ ನಟ ಆರ್ಯ ಈ ಚಿತ್ರದಲ್ಲಿ ತಮಿಳು ಮಾತನಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಸಿನಿಮಾದ ಟ್ರೇಲರ್ ಕೂಡ ಬಿಡುಗಡೆಯಾಗಿದ್ದು, ಅದ್ಭುತ ದೃಶ್ಯಗಳು ಮತ್ತು ಪವರ್ಫುಲ್ ಡೈಲಾಗ್ಗಳಿಂದ ಪ್ರೇಕ್ಷಕರಿಗೆ ಹೊಸ ಅನುಭವ ನೀಡುವ ಸೂಚನೆ ಕೊಟ್ಟಿದೆ.
ರಿಲೀಸ್ಗೂ ಮುನ್ನವೇ ಭಾರೀ ಹೈಪ್
ಭಾರೀ ಯಶಸ್ಸು ಕಂಡ 'ಮಾರ್ಕ್ ಆ್ಯಂಟನಿ' ಚಿತ್ರದ ನಂತರ, ಮಿನಿ ಸ್ಟುಡಿಯೋ ಬ್ಯಾನರ್ ಅಡಿಯಲ್ಲಿ ಎಸ್. ವಿನೋದ್ ಕುಮಾರ್ ನಿರ್ಮಿಸುತ್ತಿರುವ 14ನೇ ಚಿತ್ರ ಇದಾಗಿದೆ. ಶ್ರೀ ಗೋಕುಲಂ ಮೂವೀಸ್ ಬ್ಯಾನರ್ನಲ್ಲಿ ಗೋಕುಲಂ ಗೋಪಾಲನ್ ಈ ಚಿತ್ರವನ್ನು ಅರ್ಪಿಸುತ್ತಿದ್ದಾರೆ. ಕನ್ನಡದ 'ಕಾಂತಾರ' ಭಾಗ 1 ಮತ್ತು 2ರ ಸಂಗೀತ ನಿರ್ದೇಶಕ ಬಿ. ಅಜನೀಶ್ ಲೋಕನಾಥ್ ಅವರು ಮಲಯಾಳಂ ಚಿತ್ರರಂಗಕ್ಕೆ ಕಾಲಿಡುತ್ತಿರುವ ಮೊದಲ ಸಿನಿಮಾ ಇದಾಗಿದೆ. ಚಿತ್ರದ ಅಪ್ಡೇಟ್ಗಳನ್ನು ನೋಡಿದರೆ, ಇದು ಖಂಡಿತವಾಗಿಯೂ ಥಿಯೇಟರ್ನಲ್ಲಿ ನೋಡಲೇಬೇಕಾದ ಸಿನಿಮಾ ಎನಿಸುತ್ತಿದೆ.
ಇಂದ್ರನ್ಸ್, ಮುರಳಿ ಗೋಪಿ, 'ಪುಷ್ಪ' ಖ್ಯಾತಿಯ ಸುನಿಲ್, ಅಪ್ಪಾನಿ ಶರತ್, ನಿಖಿಲಾ ವಿಮಲ್, ದೇವ್ ಮೋಹನ್, ಸಾಗರ್ ಸೂರ್ಯ, ರೆಜಿನಾ ಕಸಾಂಡ್ರ, ಶಾಂತಿ ಬಾಲಚಂದ್ರನ್, ಅಜಯ್ ಹಾಗೂ ಕನ್ನಡದ ನಟ ಅಚ್ಯುತ್ ಕುಮಾರ್ ಸೇರಿದಂತೆ ದೊಡ್ಡ ತಾರಾಗಣವೇ ಚಿತ್ರದಲ್ಲಿದೆ. ಮಲಯಾಳಂ ಮತ್ತು ತಮಿಳಿನಲ್ಲಿ ತಯಾರಾಗಿರುವ ಈ ಬಿಗ್ ಬಜೆಟ್ ಚಿತ್ರದಲ್ಲಿ ಬೇರೆ ಭಾಷೆಯ ಹಲವು ನಟರು ಒಟ್ಟಿಗೆ ನಟಿಸಿದ್ದಾರೆ. ಈಗಾಗಲೇ ವೈರಲ್ ಆಗಿರುವ ಟೀಸರ್, ಚಿತ್ರದ ಮೇಕಿಂಗ್ ಅದ್ಭುತವಾಗಿದೆ ಎಂಬುದಕ್ಕೆ ಸಾಕ್ಷಿ ಒದಗಿಸಿದೆ.


