ತಾಯಿಯಾಗಿರುವ ನಟಿಯಿಂದ ಜಾಸ್ತಿ ಕೆಲಸ ಮಾಡಿಸಬಾರದು: ದೀಪಿಕಾ ಪರ ಮಾತನಾಡಿದ ನಟಿಯರು!
ನಿರ್ದೇಶಕ ಸಂದೀಪ್ ರೆಡ್ಡಿ ಅವರಿಗೆ ದೀಪಿಕಾ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸೂಕ್ಷ್ಮ ಇರಬೇಕಿತ್ತು. ಈಗ ದೀಪಿಕಾ ಆ ಸಿನಿಮಾದಿಂದ ಹೊರಬಂದಿದ್ದು ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ.

ದೀಪಿಕಾ ಪಡುಕೋಣೆ ‘ಸ್ಪಿರಿಟ್’ ಸಿನಿಮಾದಿಂದ ಹೊರ ನಡೆದದ್ದೇ ನೆವವಾಗಿ ಸಿನಿಮಾ ರಂಗದಲ್ಲಿ ತಾಯಿಯಾಗಿರುವ ನಟಿಯರ ಪರವಾದ ಅಲೆ ಎದ್ದಿದೆ.
‘ಚಿಕ್ಕ ಮಗುವಿರುವ ನಟಿಯರ ಕೆಲಸದ ಅವಧಿಯನ್ನು 6 ಅಥವಾ 8 ಗಂಟೆಗೆ ಸೀಮಿತಗೊಳಿಸಬೇಕು’ ಎನ್ನುವ ಬೇಡಿಕೆಗೆ ಖ್ಯಾತ ನಿರ್ದೇಶಕ ಮಣಿರತ್ನಂ, ಕಲಾವಿದರಾದ ರಮ್ಯಾ, ಪಂಕಜ್ ತ್ರಿಪಾಠಿ, ರಾಧಿಕಾ ಆಪ್ಟೆ, ಅಜಯ್ ದೇವಗನ್, ಕಾಜಲ್ ಮೊದಲಾದವರು ದನಿಗೂಡಿಸಿದ್ದಾರೆ.
ಈ ಕುರಿತು ರಮ್ಯಾ, ‘ಚಿಕ್ಕ ಮಗುವಿನ ತಾಯಿಯಾಗಿರುವ ಕಾರಣಕ್ಕೆ 8 ಗಂಟೆ ಕೆಲಸ ಮಾಡಲು ಅವಕಾಶ ನೀಡಬೇಕು ಎಂದು ದೀಪಿಕಾ ಕೇಳಿಕೊಳ್ಳುವ ನೀಡುವ ಅವಶ್ಯಕತೆಯೇ ಇರಲಿಲ್ಲ. ಅದು ಅವರ ಹಕ್ಕು.
ನಿರ್ದೇಶಕ ಸಂದೀಪ್ ರೆಡ್ಡಿ ಅವರಿಗೆ ದೀಪಿಕಾ ಪರಿಸ್ಥಿತಿ ಅರ್ಥಮಾಡಿಕೊಳ್ಳುವ ಸೂಕ್ಷ್ಮ ಇರಬೇಕಿತ್ತು. ಈಗ ದೀಪಿಕಾ ಆ ಸಿನಿಮಾದಿಂದ ಹೊರಬಂದಿದ್ದು ಸರಿಯಾಗಿಯೇ ಇದೆ’ ಎಂದು ಹೇಳಿದ್ದಾರೆ.
ಖ್ಯಾತ ನಿರ್ದೇಶಕ ಮಣಿರತ್ನಂ, ‘ದೀಪಿಕಾ ಪಡುಕೋಣೆಯದು ಉತ್ತಮ ನಡೆ. ಈ ಮೂಲಕ ಅವರು ಇತರ ಕಲಾವಿದರಿಗೂ ನ್ಯಾಯ ಸಿಗುವಂತೆ ಮಾಡುತ್ತಿದ್ದಾರೆ. ಇಂಥಾ ವಿಚಾರಗಳಲ್ಲಿ ಸಿನಿಮಾ ತಂಡಗಳು ಸ್ಪಂದಿಸಲೇ ಬೇಕು. ಚಿಕ್ಕ ಮಕ್ಕಳ ತಾಯಂದಿರಿಗೆ ಸಮಯ ಹೊಂದಾಣಿಕೆಯ ಆಯ್ಕೆ ನೀಡಬೇಕು’ ಎಂದಿದ್ದಾರೆ.