ಬೆಂಗಳೂರಿನ ಬೊಮ್ಮಸಂದ್ರದಲ್ಲಿ ವಿಶ್ವದ ಅತಿದೊಡ್ಡ 'ರಾಮೇಶ್ವರಂ ಕೆಫೆ' ಆರಂಭವಾಗಿದೆ. 90,000 ಚದರ ಅಡಿ ವಿಸ್ತೀರ್ಣದಿಂದ ಪ್ರಸಿದ್ಧಿಯಾಗಿರುವ ಬೆನ್ನಲ್ಲೇ ರಾಮೇಶ್ವರಂ ಕೆಫೆಯ ದುಬಾರಿ ಆಹಾರಗಳ ಬಗ್ಗೆ ಚರ್ಚೆಯಾಗುತ್ತಿದೆ. ಅಂಥದ್ದೇ ಒಂದು ಬಿಲ್​ ಈಗ ವೈರಲ್​ ಆಗಿದೆ.

ರಾಮೇಶ್ವರಂ ಕೆಫೆ ಇದೀಗ ಭಾರಿ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಬೆಂಗಳೂರಿನ ಬೊಮ್ಮಸಂದ್ರದಲ್ಲಿ ಹೊಸ ಲೇಔಟ್​ ಆರಂಭಿಸಲಾಗಿದ್ದು, ಇದು ಇಡೀ ವಿಶ್ವದಲ್ಲಿಯೇ ಅತ್ಯಂತ ದೊಡ್ಡ ಕೆಫೆ ಎಂದು ಹೆಸರು ಪಡೆದುಕೊಂಡಿದೆ. 90,000 ಚದರ ಅಡಿ ವಿಸ್ತೀರ್ಣದಲ್ಲಿ ಅಂದರೆ ಒಂದೂವರೆ ಎಕರೆಯಲ್ಲಿ ವಿಶಾಲ ಕೆಫೆ ಹೊಂದಿರುವ ಈ ಘಟಕ, 'ವಿಶ್ವದ ಅತಿದೊಡ್ಡ ರೆಸ್ಟೋರೆಂಟ್​ಕೆಫೆ' ಎಂದು ಕರೆಯುವ ಈ ಕೆಫೆಯಲ್ಲಿ 600+ ಜನರಿಗೆ ಆಸನ ವ್ಯವಸ್ಥೆ ಇದೆ ಮತ್ತು ಆದಿಯೋಗಿ ಪ್ರತಿಮೆಯೊಂದಿಗೆ ನೀರಿನ ಮೂಲವನ್ನು ಹೊಂದಿದೆ. 600 ಕ್ಕೂ ಹೆಚ್ಚು ಅತಿಥಿಗಳಿಗೆ ಆತಿಥ್ಯ ವಹಿಸಬಹುದಾದ ಸ್ಥಳವು ಸಾಂಪ್ರದಾಯಿಕ ದಕ್ಷಿಣ ಭಾರತದ ದೇವಾಲಯ ವಾಸ್ತುಶಿಲ್ಪವನ್ನು ಆಧುನಿಕ 'ಅನುಭವ ಕೇಂದ್ರ' ತತ್ವಶಾಸ್ತ್ರದೊಂದಿಗೆ ಸಂಯೋಜಿಸುತ್ತದೆ, ಊಟವನ್ನು ಕೇವಲ ಊಟಕ್ಕಿಂತ ಹೆಚ್ಚಾಗಿ ಆಧ್ಯಾತ್ಮಿಕ ಆಚರಣೆಯಾಗಿ ಪರಿಗಣಿಸಲಾಗುತ್ತದೆ. ಅಂದಹಾಗೆ ರಾಮೇಶ್ವರಂ ಕೆಫೆ ಭಾರತದ ವಿವಿಧ ಭಾಗಗಳಲ್ಲಿ ರೆಸ್ಟೋರೆಂಟ್​ ಹೊಂಗಿದ್ದು, ಇದೀಗ ಮುಂಬೈನ ಕೆಫೆಯ ಬಗ್ಗೆ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Add Asianetnews Kannada as a Preferred SourcegooglePreferred

ಸಿಕ್ಕಾಪಟ್ಟೆ ದುಬಾರಿ

ಇಷ್ಟೆಲ್ಲಾ ಇದ್ದ ಮೇಲೆ ಬೆಲೆನೂ ಹಾಗೆಯೇ ಇರಬೇಕಲ್ವಾ? ಈ ಕೆಫೆಗೆ ಸಿಕ್ಕ ಜಾಹೀರಾತು ನೋಡಿ, ಸೆಲೆಬ್ರಿಟಿಗಳಿಂದ ಬಂದ ಮಾತುಗಳನ್ನೆಲ್ಲಾ ಕೇಳಿ ಈ ಕೆಫೆಗೆ ಸಾಮಾನ್ಯ ಜನರು ಹೋದರೆ ಮಾತ್ರ ಇದ್ದ ಹಣವೆಲ್ಲಾ ಖಾಲಿಯಾಗೋದು ಗ್ಯಾರೆಂಟಿ ಎಂದು ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಮಂದಿ ಬರೆದಿದ್ದಾರೆ. ಸಿಕ್ಕಾಪಟ್ಟೆ ದುಬಾರಿ, ಇಲ್ಲಿ ಮಧ್ಯಮ ವರ್ಗದವರು ಹೋದರೆ ಅಷ್ಟೇ ಕಥೆ ಎಂದು ಹೇಳಲಾಗುತ್ತಿದೆ. ಇದೀಗ ಸತೀಶ್​ ಎನ್​.ರೆಡ್ಡಿ ಎನ್ನುವವರು, ಮುಂಬೈನ ರಾಮೇಶ್ವರಂ ಕೆಫೆಯ ಬಗ್ಗೆ, ಅಲ್ಲಿಯ ರೇಟ್​ ಬಗ್ಗೆ ಒಂದು ಕವನವನ್ನೇ ಬರೆದಿದ್ದು, ಅದರ ಜೊತೆ ಬಿಲ್​ ಕೂಡ ಅಟ್ಯಾಚ್​ ಮಾಡಿದ್ದಾರೆ.

ಬೆಲೆ ಹೀಗಿದೆ ನೋಡಿ

ಭಾರೀ ಧನಕನಕವ ಉಳ್ಳವರು ದಿ ರಾಮೇಶ್ವರಂ ಕೆಫೆಗೆ ಹೋಗುವರಯ್ಯಾ; ಭಾರೀ ಧನಕನಕವ ಉಳ್ಳವರಲ್ಲದಿರಲ್ಗೆ ಅಗ್ಗದ ಬೆಲೆಯ ಹೋಟೆಲಷ್ಟೇ ಸಾಕಯ್ಯ; ಭಾರೀ ಬೆಲೆಯ ತೆರುವಷ್ಟು ಉಳ್ಳವರು ದಿ ರಾಮೇಶ್ವರಂ ಕೆಫೆಗೆ ಹೋಗಿ ಬಂದು ರಶೀದಿಯ ನೋಡಿದೋಡೆ ಗೋಳಾಡುವವರನ್ನೆಂದು ಅಗ್ಗದ ಬೆಲೆಯ ಹೋಟೆಲ್​ನಲ್ಲಿ ಉಣ್ಣುವವರೆದುರು ತುಲನೆ ಮಾಡಿದೊಡೆ ಮೆಚ್ಚನಾ ರಾಮೇಶ್ವರಂನ ರಾಮನಾಥನು ಪೇಳಾ ದಿ ರಾಮೇಶ್ವರಂ ಕೆಫೆಯ ಮಾಲೀಕ ರಾಘವೇಂದ್ರನೇ? ಎಂದು ಬರೆದಿದ್ದಾರೆ. ಅವರು ಅಟ್ಯಾಚ್​ ಮಾಡಿರುವ ಬಿಲ್ ನೋಡಿದರೆ, ಒಂದು ಇಡ್ಲಿಗೆ 200 ರೂ. ವಡಾ ಸಾಂಬರ್​ಗೆ 240 ರೂ. ಬೆಳ್ಳುಳ್ಳಿ ದೋಸೆಗೆ 250 ರೂ. ಘೀಪುಡಿ ಮಸಾಲಾ ದೋಸೆಗೆ 295, ಫಿಲ್ಟರ್​ ಕಾಫಿ ಶೇಕ್​ಗೆ 300 ರೂ. ಓನಿಯನ್ ಉತ್ತಪ್ಪಮ್​ 295, ಫಿಲ್ಟರ್​ ಕಾಫಿಗೆ 120, ಫಿಲ್ಟರ್​ ಕಾಫಿ ಸಾಫ್ಟಿಗೆ 220 ರೂಪಾಯಿ ಬಿಲ್ + ಜಿಎಸ್​ಟಿ 128 ರೂ. ಹಾಕಲಾಗಿದೆ!

ಬೆಂಗಳೂರಿನ ಅತಿದೊಡ್ಡ ಕೆಫೆ ಹೀಗಿದೆ

ಸೌಂದರ್ಯಶಾಸ್ತ್ರದ ಥೀಮ್​ ಈ ರೆಸ್ಟೋರೆಂಟ್​ಗೆ ನೀಡಲಾಗಿದೆ. ದೇವಾಲಯದ ಒಳಹೊಕ್ಕಂತೆ ಭಾಸವಾಗುತ್ತದೆ. ಅತಿಥಿಗಳು ಬಂದ ತಕ್ಷಣ, ಅವರನ್ನು ಮಧ್ಯಭಾಗದಲ್ಲಿರುವ ಆದಿಯೋಗಿ ಪ್ರತಿಮೆ ಮತ್ತು ಕಾರಂಜಿಯನ್ನು ಹೊಂದಿರುವ ಪ್ರಶಾಂತವಾದ ನೀರಿನ ಮೂಲವು ಸ್ವಾಗತಿಸುತ್ತದೆ. ದಕ್ಷಿಣ ಭಾರತದ ದೇವಾಲಯಗಳ ಶ್ರೇಣೀಕೃತ ಮೇಲ್ಚಾವಣಿ ಇಲ್ಲಿ ಕಾಣಬಹುದು. ಒಳಹೊಕ್ಕರೆ ಕಿತ್ತಳೆ ಮತ್ತು ಹಳದಿ ಹೂವಿನ ಘಮಲು ನಿಮ್ಮನ್ನು ಸ್ವಾಗತಿಸುತ್ತದೆ. 'ದೈವಿಕ ಸ್ಪರ್ಶ' ಥೀಮ್‌ಗೆ ಅನುಗುಣವಾಗಿ, ಈ ಔಟ್‌ಲೆಟ್​ನಲ್ಲಿ ಧಾರ್ಮಿಕ ಸ್ಥಳಗಳನ್ನೂ ನೋಡಬಹುದು. ದೇವಿ ಲಿಂಗ ಭೈರವಿ ದೇವಾಲಯವು ಇಲ್ಲಿದೆ. ಪೂಜೆಗಾಗಿ ಮೀಸಲಾದ ಕಲ್ಲಿನ ದೇವಾಲಯವಾಗಿದೆ. ನಂತರ ಕರ್ನಾಟಕದ ಪರಂಪರೆಯ ಸಂಪರ್ಕವನ್ನು ಬಲಪಡಿಸುವ ಶಾಸ್ತ್ರೀಯ ನೃತ್ಯ ಭರತನಾಟ್ಯ ಮತ್ತು ವೀಣೆಯ ನೇರ ಪ್ರದರ್ಶನಗಳಿಗಾಗಿ ವಿನ್ಯಾಸಗೊಳಿಸಲಾದ ಅಡಿಟೋರಿಯಂ ಕೂಡ ಇದೆ. ಮರದ ಕೆತ್ತನೆಗಳು ಸೇವಾ ಕೌಂಟರ್‌ಗಳಲ್ಲಿ ಅದ್ಭುತ ದರ್ಶನ ನೀಡುತ್ತವೆ. ಬೃಹತ್ ಹಿತ್ತಾಳೆಯ ಗಂಟೆಗಳು ಇಲ್ಲಿ ನೇತಾಡುತ್ತಿವೆ. ಜಾಗದೊಳಗೆ ಮೀಸಲಾದ ಗೋಶಾಲೆ (ಹಸುಗಳು ಮತ್ತು ಕರುಗಳಿಗೆ ಸಾಂಪ್ರದಾಯಿಕ ಭಾರತೀಯ ರಕ್ಷಣಾತ್ಮಕ ಆಶ್ರಯ ಅಥವಾ ಅಭಯಾರಣ್ಯ) ಸಹ ಇದೆ. ಆಧ್ಯಾತ್ಮಿಕ ದೃಶ್ಯಗಳನ್ನು ಪ್ರದರ್ಶಿಸುವ ಹೈಟೆಕ್ ಡಿಜಿಟಲ್ ಪರದೆಗಳು ಮತ್ತು ಪ್ರಾಚೀನ ತೂಕದ ಕಲ್ಲಿನ ವಿಗ್ರಹಗಳ ಮಿಶ್ರಣದೊಂದಿಗೆ, ಬೊಮ್ಮಸಂದ್ರದಲ್ಲಿರುವ ರಾಮೇಶ್ವರಂ ಕೆಫೆ ಕೇವಲ ತಿನಿಸು ನೀಡುವ ಸ್ಥಳವಲ್ಲ - ಇದು ಒಂದು ತಲ್ಲೀನಗೊಳಿಸುವ ಸಾಂಸ್ಕೃತಿಕ ತೀರ್ಥಯಾತ್ರೆಯಾಗಿ ವಿನ್ಯಾಸಗೊಳಿಸಲಾದ ತಾಣವಾಗಿದೆ. ರಾಮೇಶ್ವರಂ ಕೆಫೆಯ ಸಂಸ್ಥಾಪಕ ರಾಘವೇಂದ್ರ ರಾವ್ ಅವರು ಬೃಹತ್ ಯೋಜನೆಯ ಹಿಂದಿನ ತತ್ವಶಾಸ್ತ್ರದ ಬಗ್ಗೆ ಧ್ವನಿ ಎತ್ತಿದ್ದಾರೆ, ಸಂಸ್ಕೃತಿ, ನಂಬಿಕೆ ಮತ್ತು ಆಹಾರವು ಒಂದಾಗಿ ಇರುವ ಸ್ಥಳವನ್ನು ಸೃಷ್ಟಿಸುವುದು ಗುರಿಯಾಗಿದೆ ಎಂದು ಹೇಳಿದ್ದಾರೆ.