Asianet Suvarna News Asianet Suvarna News

ವಿಶ್ವವಿಖ್ಯಾತ ಮೈಸೂರು ದಸರೆಗೆ ಮೆರುಗು ತಂದ ಮಹಿಳೆಯರ ಡ್ಯಾನ್ಸ್‌..!

ವಿಶ್ವವಿಖ್ಯಾತ ದಸರಾ ಮಹೋತ್ಸವದ ಮೂರನೇ ದಿನವಾದ ಇಂದು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿ ಆಯ್ತು. ಮಕ್ಕಳ ದಸರಾ ಅಂಗವಾಗಿ ಕಲಾಮಂದಿರದಲ್ಲಿ ಪುಟಾಣಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳು ಪ್ರಕೃತಿ, ದಸರಾ ಸಡಗರ, ಮಹಿಷ ಮರ್ದಿನಿ, ಪಾರಂಪರಿಕ ಸ್ಮಾರಕ, ಇತಿಹಾಸ ಪುರುಷರು, ಚಂದ್ರಯಾನ ಸೇರಿ ತರಹೇವಾರಿ ಚಿತ್ರ ಬಿಡಿಸಿ ಖುಷಿಪಟ್ಟರು

Womens Dance program Held During Dasara Festival in Mysuru grg
Author
First Published Oct 17, 2023, 11:00 PM IST

ಮಧು.ಎಂ.ಚಿನಕುರಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಮೈಸೂರು

ಮೈಸೂರು(ಅ.17):  ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಮೂರನೇ ದಿನವೂ ಹತ್ತು ಹಲವು ಕಾರ್ಯಕ್ರಮಗಳು ಮೇಳೈಸಿವೆ. ದಸರಾ ಕವಿಗೋಷ್ಠಿಯಲ್ಲಿ ಸಾಹಿತಿ ಜಯಂತ್ ಕಾಯ್ಕಿಣಿ, ಕನ್ನಡದ ತವಕ- ತಲ್ಲಣಗಳನ್ನು ಪ್ರತಿಪಾದಿಸಿದ್ರೆ ಮಹಿಳೆಯರ ಡ್ಯಾನ್ಸ್, ಬಿಂದಿಗೆ ಓಟ ಹಾಗೂ ಹಗ್ಗಜಗ್ಗಾಟ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡು ಸಂಭ್ರಮಿಸಿದ್ರು. ಮತ್ತೊಂದೆಡೆ ದಸರಾ ಆನೆಗಳಿಗೆ ಇಂದೂ ಕೂಡ ಪಿರಂಗಿ ತಾಲೀಮು ನಡೆಯಿತು.

ಮಹಿಳೆಯರ ಮಸ್ತ್ ಡ್ಯಾನ್ಸ್, ಹಗ್ಗಜಗ್ಗಾಟ 

ವಿಶ್ವವಿಖ್ಯಾತ ದಸರಾ ಮಹೋತ್ಸವದ ಮೂರನೇ ದಿನವಾದ ಇಂದು ವೈವಿಧ್ಯಮಯ ಕಾರ್ಯಕ್ರಮಗಳಿಗೆ ಸಾಕ್ಷಿ ಆಯ್ತು. ಮಕ್ಕಳ ದಸರಾ ಅಂಗವಾಗಿ ಕಲಾಮಂದಿರದಲ್ಲಿ ಪುಟಾಣಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಶಾಲಾ ಮಕ್ಕಳು ಪ್ರಕೃತಿ, ದಸರಾ ಸಡಗರ, ಮಹಿಷ ಮರ್ದಿನಿ, ಪಾರಂಪರಿಕ ಸ್ಮಾರಕ, ಇತಿಹಾಸ ಪುರುಷರು, ಚಂದ್ರಯಾನ ಸೇರಿ ತರಹೇವಾರಿ ಚಿತ್ರ ಬಿಡಿಸಿ ಖುಷಿಪಟ್ಟರು. ಅದೇ ರೀತಿ ದಸರಾ ಕವಿಗೋಷ್ಠಿಗೆ ಖ್ಯಾತ ಸಾಹಿತಿ ಜಯಂತ್ ಕಾಯ್ಕಿಣಿ ಚಾಲನೆ ನೀಡಿದ್ರು. 50 ವರ್ಷಗಳ ಹಿಂದೆ ದಸರಾ ಕವಿಗೋಷ್ಠಿಯಲ್ಲಿ ಭಾಗವಹಿಸಿದ್ದೆ ಆಗ ಘಟಾನುಘಟಿ ಕವಿಗಳು ಭಾಗವಹಿಸಿದರು. ಸೋಷಿಯಲ್ ಮೀಡಿಯಾದಲ್ಲಿ ಬಹಳಷ್ಟು ಕವಿತೆಗಳು ಬರುತ್ತಿದೆ. ಆದರೆ ನೇರ ನೆಟ್ ವರ್ಕ್ ಸಿಗದ ಸ್ಥಳದಲ್ಲಿ ಉತ್ತಮ ಕವಿತೆ ಉದ್ಬವವಾಗುತ್ತದೆ ಎಂದು ಸಾಹಿತಿ ಜಯಂತ್ ಕಾಯ್ಕಿಣಿ ತಿಳಿಸಿದ್ದಾರೆ.  

416ನೇ ದಸರಾ ಉದ್ಘಾಟನಾ ಕಾರ್ಯಕ್ರಮಕ್ಕೆ ಜನವೋ ಜನ..ಅರಮನೆಯಲ್ಲಿ ಹೇಗಿತ್ತು ಗೊತ್ತಾ ಖಾಸಗಿ

ಮಹಿಳಾ ದಸರಾದಲ್ಲೂ ಹಲವು ಕಾರ್ಯಕ್ರಮಗಳು ಮೆರಗು ನೀಡಿದ್ವು, ಸಮೂಹ ನೃತ್ಯ ಸ್ಪರ್ಧೆ, ಸ್ತ್ರೀಶಕ್ತಿ ಸಂಘಗಳ ಮಹಿಳೆಯರು ಜಾನಪದ ಗೀತೆಗಳಿಗೆ ಭರ್ಜರಿ ಡ್ಯಾನ್ಸ್ ಮಾಡಿದ್ರು. ಬಿಂದಿಗೆ ಹೊತ್ತು ಓಡುವ ಸ್ಪರ್ಧೆಯಂತೂ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ ನಾರಿಶಕ್ತಿಯ ಬಲ ಪ್ರದರ್ಶನವಾಯ್ತು. ಅಲ್ಲದೇ ದಸರಾ ವಸ್ತು ಪ್ರದರ್ಶನದಲ್ಲಿ ಮರಳು ಶಿಲ್ಪಗಳು ಪ್ರವಾಸಿಗರ ಮನಸೆಳೆದವು. ಸರ್ಕಾರದ ಐದು ಗ್ಯಾರಂಟಿಗಳು,  ಚಂದ್ರಯಾನ-3ರ ವಿಕ್ರಂ ಲ್ಯಾಂಡರ್, ಪ್ರಗ್ಯಾನ್ ರೋವರ್ ಹಾಗೂ ಪುನೀತ್ ರಾಜ್ ಕುಮಾರ್ ಅವರ ಮರಳಿನ ಶಿಲ್ಪಗಳು ವಸ್ತುಪ್ರದರ್ಶನಕ್ಕೆ ಮೆರಗು ನೀಡಿದ್ವು.

ಮತ್ತೊಂದೆಡೆ ಗಜಪಡೆಗೆ ಮೂರನೇ ಹಂತದ ಅಂತಿಮ ಸಿಡಿಮದ್ದು ತಾಲೀಮು ನಡೆಸಲಾಯಿತು. ನಗರ ಸಶಸ್ತ್ರ ಮೀಸಲು  ಪಡೆಯ ಸಿಬ್ಬಂದಿ  ಫಿರಂಗಿಯಲ್ಲಿ ಸಿಡಿಮದ್ದುಗಳನ್ನು ಸಿಡಿಸಿ ಆನೆಗಳು ಹೊರಗಿನ ಭಾರೀ ಸದ್ದಿಗೆ ಹೊಂದಿಕೊಳ್ಳುವಂತೆ ಅಂತಿಮ ಹಂತದ ತರಬೇತಿ ನೀಡಿದರು. ವಿಜಯದಶಮಿಯ ದಿನದಂದು ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವಾಗ ಮತ್ತು ರಾಷ್ಟ್ರಗೀತೆ ನುಡಿಸುವಾಗ ಗೌರವಾರ್ಥವಾಗಿ 3 ಸುತ್ತಿನಲ್ಲಿ 21 ಕುಶಾಲ ಬಾರಿ ಕುಶಲತೋಪುಗಳನ್ನು ಸಿಡಿಸುವುದು ಸಂಪ್ರದಾಯ. ಹೀಗೆ ಸಿಡಿಮದ್ದು ಸಿಡಿಸಿದಾಗ ಉಂಟಾಗುವ ಭಾರೀ ಶಬ್ದದಿಂದ ಆನೆಗಳು ಕುದುರೆಗಳು ಬೆದರುತ್ತವೆ, ವಿಚಲಿತಗೊಳ್ಳುತ್ತವೆ. ಹೀಗಾಗಿ ಆನೆಗಳು ಕುದುರೆಗಳು ಈ ಸಿಡಿಮದ್ದು ಶಬ್ದಕ್ಕೆ ಹೊಂದಿಕೊಳ್ಳಲು ಈ ತಾಲೀಮು ನಡೆಸಲಾಯಿತು. 

ಜನರ ಆಚಾರ- ವಿಚಾರ ಗೌರವಿಸಲು ಚಾಮುಂಡಿಬೆಟ್ಟ ಪ್ರಾಧಿಕಾರ ರಚನೆ

ಅರಮನೆಯ ಎದುರಿನ ವಸ್ತು ಪ್ರದರ್ಶನ ಆವರಣದಲ್ಲಿ ಆನೆಗಳಿಗೆ ಈ ತರಬೇತಿ ನೀಡಲಾಯಿತು. ಒಟ್ಟು 12 ಆನೆಗಳು, 41 ಕುದುರೆಗಳು ತಾಲೀಮಿನಲ್ಲಿ ಭಾಗವಹಿಸಿದ್ದವು.ಮೊದಲಬಾರಿಗೆ ನಾಡಹಬ್ಬಕ್ಕೆ ಆಗಮಿಸಿರೋ ಹಿರಣ್ಯ, ರೋಹಿತ ಆನೆಗಳು ಮೊದಲಬಾರಿ ಸಿಡಿಮದ್ದು ತಾಲೀಮಿನಲ್ಲಿ ವಿಚಲಿತಗೊಂಡಿದ್ದ ಹಿನ್ನಲೆ ಈ ಅಂತಿಮ ಹಂತದ ಸಿಡಿಮದ್ದು ತಾಲೀಮಿನಲ್ಲಿ ಹಿರಣ್ಯ, ರೋಹಿಯ ಆನೆಗಳನ್ನ ತಾಲೀಮಿನಿಂದ ಹೊರಗುಳಿಸಲಾಗಿತ್ತು.

ಒಟ್ಟಾರೆ ಮೂರನೇ ದಿನದ ದಸರಾ ಸಂಭ್ರಮವೂ ಹತ್ತುಹ ಲವು ಕಾರ್ಯಕ್ರಮಗಳ ಮೂಲಕ ಪ್ರವಾಸಿಗರ ಗಮನಸೆಳೆದಿದೆ. ನಾಳೆಯಿಂದ ಯುವದಸರಾ ಸೇರಿ ಮತ್ತಷ್ಟು ಕಾರ್ಯಕ್ರಮಗಳು ಆರಂಭವಾಗಲಿದ್ದು ದಸರಾ ಮಹೋತ್ಸವ ರಂಗುಪಡೆದುಕೊಳ್ಳಲಿದೆ.

Follow Us:
Download App:
  • android
  • ios