ನಿಮ್ಮ ಬಳಿ ಎಲ್ಲವೂ ಇದ್ದಾಗಲೂ ಅದನ್ನು ಅನುಭವಿಸಲು ಪುಣ್ಯ ಬೇಕು. ನಿಮ್ಮಲ್ಲಿ ಈ ಆರು ದುರ್ಗುಣಗಳಲ್ಲಿ ಯಾವುದೇ ಇದ್ದರೂ ನಿಮ್ಮಲ್ಲಿರೋ ಭಾಗ್ಯಗಳನ್ನು ಅನುಭವಿಸಲಾರಿರಿ ಎನ್ನುತ್ತಾರೆ ವಿದುರ. 

ಮನುಷ್ಯನು ಎಂಥ ಜೀವಿಯೆಂದರೆ ಅವನಲ್ಲಿ ಪ್ರತಿ ಕ್ಷಣವೂ ಹೊಸದನ್ನು ಪಡೆಯಬೇಕು ಅಥವಾ ಹೊಸದನ್ನು ಮಾಡಬೇಕೆಂಬ ಬಯಕೆ ಇರುತ್ತದೆ. ಈ ಕುತೂಹಲದಿಂದಾಗಿ, ಅವನು ಒಂದು ಸಂತೋಷಕ್ಕೆ ತೃಪ್ತನಾಗಲಾರ. ಆದರೂ, ಬದುಕಿನ ಸಣ್ಣ ಸಣ್ಣ ಖುಷಿಗಳನ್ನು ಎಂಜಾಯ್ ಮಾಡಿದರೇ ಬದುಕು ಚೆನ್ನಾಗಿರುವುದು ಎಂಬುದೂ ಸತ್ಯ. ಹೀಗೆ ಬದುಕಿನ ಆಶೀರ್ವಾದಗಳನ್ನೆಲ್ಲ ಅನುಭವಿಸುವುದು ಎಲ್ಲರಿಂದಲೂ ಸಾಧ್ಯವಿಲ್ಲ. ಕೆಲವರ ಬಳಿ ಆಸ್ತಿ ಅಂತಸ್ತು ಎಲ್ಲ ಇದ್ದರೂ ನೆಮ್ಮದಿ ಇರುವುದಿಲ್ಲ. ಮತ್ತೆ ಕೆಲವರ ಬಳಿ ಏನೂ ಇಲ್ಲದೆಯೂ ಅವರು ಸಂತೋಷದಿಂದಿರುತ್ತಾರೆ. ಇದಕ್ಕೆ ನಮ್ಮ ಮನಸ್ಸೇ ಕಾರಣ. 
ಮನುಷ್ಯನಲ್ಲಿ ಈ ಆರು ದೋಷಗಳಿದ್ದರೆ ಅಥವಾ ಇವುಗಳಲ್ಲಿ ಯಾವೊಂದಿದ್ದರೂ ಆತ ಜೀವನದಲ್ಲಿ ನೆಮ್ಮದಿಯಾಗಿರಲು ಸಾಧ್ಯವಿಲ್ಲ ಎಂದು ವಿದುರ ನೀತಿಯಲ್ಲಿ ವಿದುರ ತಿಳಿಸಿದ್ದಾರೆ. ಈ ದೋಷಗಳಲ್ಲಿ ಯಾವೊಂದು ಇದ್ದರೂ ವ್ಯಕ್ತಿಯು ಯಾವ ಸೌಕರ್ಯ ಪಡೆದರೂ ಸಂತೋಷವಾಗಿರುವುದಿಲ್ಲ ಎನ್ನುತ್ತಾರೆ ವಿದುರ. ಅಂಥ ಆ ಆರು ದೋಷಗಳು ಯಾವುವು, ಅವು ನಿಮ್ಮಲ್ಲಿದೆಯೇ, ಇದ್ದರೆ ಕಳಚಿಕೊಳ್ಳುವ ದಾರಿಗಳನ್ನು ಕೂಡಲೇ ಕಂಡುಕೊಳ್ಳಿ.

Add Asianetnews Kannada as a Preferred SourcegooglePreferred

ಈ 6 ದೋಷಗಳಿಂದ ದೂರವಿರಿ
ಅಸೂಯೆ(Jealousy):
ವಿದುರನೀತಿಯಲ್ಲಿ, ವಿದುರರು ಅಸೂಯೆ ಮನುಷ್ಯನ ದೊಡ್ಡ ದೋಷ ಎಂದು ಹೇಳಿದ್ದಾರೆ. ಅಸೂಯೆ ಪಡುವ ವ್ಯಕ್ತಿಯು ತನ್ನನ್ನು ತಾನು ಕೀಳು ಎಂದು ಪರಿಗಣಿಸುತ್ತಾನೆ. ಆತ ಎಷ್ಟೇ ಸಾಧಿಸಿದರೂ ತನ್ನನ್ನು ಇನ್ನೂ ಮೇಲಿರುವವರ ಜೊತೆ ಹೋಲಿಸಿಕೊಂಡು ತಾನು ಕೀಳೆಂದು ಭಾವಿಸುತ್ತಾನೆ. ಅಲ್ಲದೆ, ಮತ್ತೊಬ್ಬರ ಬಳಿ ಇರುವುದು ತನ್ನಲ್ಲಿಲ್ಲ ಎಂದು ಹಲುಬುತ್ತಾನೆಯೇ ಹೊರತು ತನ್ನ ಬಳಿ ಏನಿದೆ ಎಂದು ನೋಡುವುದಿಲ್ಲ. ಹಾಗಾಗಿ, ಆ ವ್ಯಕ್ತಿ ಎಂದಿಗೂ ಸಂತೋಷವಾಗಿರುವುದಿಲ್ಲ. ಅವನು ಯಾವಾಗಲೂ ಇತರರನ್ನು ನೋಡಿ ಅಸೂಯೆಪಡುತ್ತಾನೆ.

ಬೆಳೆದು ನಿಂತ ಮಕ್ಕಳಿಗೆ ಮದ್ವೆ ಆಗ್ತಿಲ್ಲ, ಕೆಲಸ ಸಿಕ್ತಿಲ್ಲವೆಂದರೆ ಜ್ಯೋತಿಷ್ಯ ಪರಿಹಾರ ಇಲ್ಲಿವೆ!

ದ್ವೇಷ(hatered): ದ್ವೇಷವು ಮಾನವನ ಜನ್ಮ ದೋಷವಾಗಿದೆ. ಪ್ರತಿಯೊಬ್ಬರೂ ಏನನ್ನಾದರೂ ಅಥವಾ ಯಾರನ್ನಾದರೂ ದ್ವೇಷಿಸುತ್ತಾರೆ. ತನ್ನೊಳಗಿನ ಕಿಚ್ಚು ತನ್ನನೇ ಸುಡುವುದಲ್ಲದೆ ನೆರೆಮನೆಯ ಸುಡದು ಕೂಡಲಸಂಗಮ ದೇವಾ ಎನ್ನುವಂತೆ ದ್ವೇಷವು ಭಾವನೆಯನ್ನು ಹೊಂದಿದ ವ್ಯಕ್ತಿಯ ನೆಮ್ಮದಿಯನ್ನೇ ಕಸಿಯುತ್ತದೆ. ಮತ್ತೊಬ್ಬರನ್ನು ಅಥವಾ ಸಮಾಜವನ್ನು ಯಾವುದೋ ಕಾರಣಕ್ಕೆ ದ್ವೇಷಿಸುವ ವ್ಯಕ್ತಿ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಆತನಿಗೆ ಸಂತೋಷ ಬೇಕೆಂದರೆ ಕ್ಷಮಿಸುವ ಗುಣ ಬೆಳೆಸಿಕೊಳ್ಳಬೇಕು. 

ಕೋಪ(Anger): ಕೋಪವೇ ಮನುಷ್ಯನ ದೊಡ್ಡ ಶತ್ರು. ಕೋಪಗೊಂಡ ವ್ಯಕ್ತಿ ತನ್ನ ಆತ್ಮಸಾಕ್ಷಿಯನ್ನು ಕಳೆದುಕೊಳ್ಳುತ್ತಾನೆ. ಒಳ್ಳೆಯದು ಮತ್ತು ಕೆಟ್ಟದ್ದನ್ನು ಗುರುತಿಸಲು ಅವನಿಗೆ ಸಾಧ್ಯವಾಗುವುದಿಲ್ಲ, ಇದರಿಂದಾಗಿ ಅವನು ಯಾವಾಗಲೂ ಅತೃಪ್ತನಾಗಿರುತ್ತಾನೆ. ಅಷ್ಟೇ ಅಲ್ಲ, ಮತ್ತೊಬ್ಬರಿಗೆ ಹಾನಿ ಮಾಡುತ್ತಾನೆ. 

ಅತೃಪ್ತಿ(Dissatisfaction): ಎಷ್ಟೇ ಸಿಕ್ಕರೂ ಇನ್ನೂ ಬೇಕು, ಮತ್ತೂ ಬೇಕು ಎನ್ನುವಂಥ ಅತೃಪ್ತಿ ಹೊಂದಿದ ವ್ಯಕ್ತಿ ಎಂದಿಗೂ ಸಂತೋಷವಾಗಿರುವುದಿಲ್ಲ. ಆ ವ್ಯಕ್ತಿಯು ಒಬ್ಬನೇ ಮನುಷ್ಯನು ಎಲ್ಲವನ್ನೂ ಹೊಂದಲು ಸಾಧ್ಯವಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಲದೆ, ತಾವು ಎಲ್ಲವನ್ನು ಪಡೆದಿದ್ದಾರೆ ಎಂದುಕೊಂಡವರು ಕೂಡಾ ನೆಮ್ಮದಿ ಇಲ್ಲದೆ ಇರುವ ಬಗ್ಗೆ ಅವರು ತಿಳಿಯಬೇಕಿದೆ. ಇದ್ದಿದ್ದರಲ್ಲಿ ತೃಪ್ತಿ ಹೊಂದುವವನೇ ನಿಜವಾದ ಸಂತೋಷ ಅನುಭವಿಸುವವನು. 

ಅನುಮಾನ(suspicion): ಸಂದೇಹವೇ ಮನುಷ್ಯನ ದೊಡ್ಡ ದೋಷ. ಎಲ್ಲರನ್ನೂ ಅನುಮಾನದಿಂದ ನೋಡುವ ವ್ಯಕ್ತಿಯು ಜೀವನದಲ್ಲಿ ಎಂದಿಗೂ ಸಂತೋಷವಾಗಿರಲು ಸಾಧ್ಯವಿಲ್ಲ. ಏಕೆಂದರೆ ಅವನಲ್ಲಿ ಯಾವಾಗಲೂ ಭಯದ ಭಾವನೆ ಇರುತ್ತದೆ. ಯಾವುದನ್ನೂ, ಯಾರನ್ನೂ ನಂಬದವರ ಮನಸ್ಸಿನಲ್ಲಿ ಎಂದಿಗೂ ಸಮಾಧಾನ ಇರುವುದಿಲ್ಲ.

ಈ ಮೂರು ದೇವರನ್ನು ಪೂಜಿಸೋರಿಗೆ ಯಾವ ಶನಿ ಕಾಟವೂ ಕಾಡೋದಿಲ್ಲ!

ಅವಲಂಬಿತ ವ್ಯಕ್ತಿ(Dependent Person): ಇತರರ ಮೇಲೆ ಅವಲಂಬಿತನ್ದ ವ್ಯಕ್ತಿಗೆ ತನ್ನದೇ ಆದ ಅಸ್ತಿತ್ವವಿಲ್ಲ. ಅಂಥ ವ್ಯಕ್ತಿಯು ಎಂದಿಗೂ ಸಂತೋಷವಾಗಿರುವುದಿಲ್ಲ ಎಂದು ವಿದುರ ನೀತಿಯಲ್ಲಿ ಹೇಳಲಾಗಿದೆ.