ವಾರಣಾಸಿಯ ಪವಿತ್ರ ಗಂಗಾ ನದಿಯಲ್ಲಿ ಬೋಟ್ ಮೇಲೆ ಇಫ್ತಾರ್ ಕೂಟ ಆಯೋಜಿಸಿ, ಮಾಂಸಾಹಾರಿ ಬಿರಿಯಾನಿ ಸೇವಿಸಿ ಅದರ ಮೂಳೆಗಳನ್ನು ನದಿಗೆ ಎಸೆದ ಆರೋಪದ ಮೇಲೆ 14 ಯುವಕರನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿವೆ.

ಹಿಂದೂಗಳ ಅತ್ಯಂತ ಪವಿತ್ರ ಕ್ಷೇತ್ರವಾದ ವಾರಣಾಸಿಯ ಗಂಗಾನದಿಯ ಮಧ್ಯ ಬೋಟಿಂಗ್‌ನಲ್ಲಿ ಇಫ್ತಾರ್ ಕೂಟ ಆಯೋಜಿಸಿ, ಮಾಂಸಾಹಾರಿ ಬಿರಿಯಾನಿ ಸೇವಿಸಿ ಅದರ ಮೂಳೆಗಳನ್ನು ನದಿಗೆ ಎಸೆದ ಗಂಭೀರ ಆರೋಪದ ಮೇಲೆ ವಾರಣಾಸಿ ಪೊಲೀಸರು 14 ಯುವಕರನ್ನು ಬಂಧಿಸಿದ್ದಾರೆ.

ಈ ಘಟನೆಯಲ್ಲಿ ನಡೆದಿದ್ದೇನು?

ಸದ್ಯ ರಂಜಾನ್ ಮಾಸ ನಡೆಯುತ್ತಿದ್ದು, ಸೋಮವಾರ ಸಂಜೆ ವಾರಣಾಸಿಯ ಪಂಚಗಂಗಾ ಘಾಟ್ ಸಮೀಪದ ಗಂಗಾನದಿಯಲ್ಲಿ ಒಂದು ಗುಂಪು ಬೋಟ್‌ನಲ್ಲಿ ಇಫ್ತಾರ್ ಕೂಟವನ್ನು ಹಮ್ಮಿಕೊಂಡಿತ್ತು. ಈ ವೇಳೆ ನದಿಯ ಮಧ್ಯಭಾಗದಲ್ಲಿ ಬೋಟ್‌ ನಿಲ್ಲಿಸಿ ಎಲ್ಲರೂ ಸೇರಿ ಬಿರಿಯಾನಿ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು. ವಿಡಿಯೋದಲ್ಲಿ ಯುವಕರು ಮಾಂಸಾಹಾರ ಸೇವಿಸುವುದು ಮಾತ್ರವಲ್ಲದೆ, ತಿಂದ ನಂತರ ಉಳಿದ ಮೂಳೆಗಳನ್ನು ಪವಿತ್ರ ಗಂಗಾನದಿಯ ನೀರಿಗೆ ಎಸೆಯುತ್ತಿರುವುದು ಕಂಡುಬಂದಿತ್ತು.

ದೂರು ಮತ್ತು ಆಕ್ರೋಶ:

ಈ ವಿಡಿಯೋ ಸಾರ್ವಜನಿಕವಾಗಿ ಹರಿದಾಡುತ್ತಿದ್ದಂತೆ ಹಿಂದೂ ಸಂಘಟನೆಗಳು ಮತ್ತು ಸ್ಥಳೀಯರಲ್ಲಿ ಭಾರಿ ಆಕ್ರೋಶ ವ್ಯಕ್ತವಾಯಿತು. ಬಿಜೆಪಿ ಯುವ ಮೋರ್ಚಾದ ಮಹಾನಗರ ಅಧ್ಯಕ್ಷ ರಜತ್ ಜೈಸ್ವಾಲ್ ಅವರು ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. 'ಕೋಟಿಗಟ್ಟಲೆ ಹಿಂದೂಗಳ ಆರಾಧ್ಯ ದೇವತೆಯಾಗಿರುವ ಗಂಗೆಯನ್ನು ಈ ರೀತಿ ಅಪವಿತ್ರಗೊಳಿಸುವುದು ಅಕ್ಷಮ್ಯ ಅಪರಾಧ. ಉದ್ದೇಶಪೂರ್ವಕವಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಉದ್ದೇಶದಿಂದಲೇ ಈ ಕೃತ್ಯ ಎಸಗಲಾಗಿದೆ' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು.

View post on Instagram

ಪೊಲೀಸ್ ಕ್ರಮ:

ದೂರು ದಾಖಲಾದ ಬೆನ್ನಲ್ಲೇ ತಕ್ಷಣ ಕಾರ್ಯಪ್ರವೃತ್ತರಾದ ವಾರಣಾಸಿಯ ಕೊತ್ವಾಲಿ ಪೊಲೀಸರು ವಿಡಿಯೋದ ಆಧಾರದ ಮೇಲೆ ಆರೋಪಿಗಳನ್ನು ಪತ್ತೆಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಒಟ್ಟು 14 ಮುಸ್ಲಿಂ ಯುವಕರನ್ನು ಬಂಧಿಸಿ ಜೈಲಿಗೆ ಅಟ್ಟಲಾಗಿದೆ. ಆರೋಪಿಗಳ ವಿರುದ್ಧ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವುದು ಸೇರಿದಂತೆ ಐಪಿಸಿಯ ವಿವಿಧ ಗಂಭೀರ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಸೂಕ್ಷ್ಮ ಪರಿಸ್ಥಿತಿ:

ವಾರಣಾಸಿಯು ಧಾರ್ಮಿಕವಾಗಿ ಅತ್ಯಂತ ಸೂಕ್ಷ್ಮ ಪ್ರದೇಶವಾಗಿದ್ದು, ಅದರಲ್ಲೂ ರಾಮನವಮಿ ಹಬ್ಬದ ಸಂದರ್ಭದಲ್ಲಿ ಇಂತಹ ಘಟನೆ ನಡೆದಿರುವುದು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಗಂಗಾನದಿಯಲ್ಲಿ ಮಾಂಸಾಹಾರ ಸೇವನೆ ನಿಷೇಧಿತವಾಗಿದ್ದರೂ, ಕಾನೂನು ಉಲ್ಲಂಘಿಸಿ ನದಿಯ ಮಧ್ಯಭಾಗದಲ್ಲಿ ಇಂತಹ ಕೃತ್ಯ ಎಸೆಗಿರುವುದು ಆತಂಕಕ್ಕೆ ಕಾರಣವಾಗಿದೆ. 'ಪವಿತ್ರ ನದಿಯ ಗೌರವ ಕಾಪಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಕಾನೂನು ಕೈಗೆತ್ತಿಕೊಳ್ಳುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು' ಎಂದು ಪೊಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಘಟನೆಯು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಪರ-ವಿರೋಧದ ಚರ್ಚೆಗಳನ್ನು ಹುಟ್ಟುಹಾಕಿದ್ದು, ಪವಿತ್ರ ಸ್ಥಳಗಳ ಘನತೆಯನ್ನು ಕಾಪಾಡುವ ಬಗ್ಗೆ ಜಾಗೃತಿ ಮೂಡಬೇಕಿದೆ ಎಂಬ ಅಭಿಪ್ರಾಯ ವ್ಯಕ್ತವಾಗುತ್ತಿದೆ.