ಸೀತಾರಾಮ ಸೀರಿಯಲ್​ ಮುಗಿಯುತ್ತಿದ್ದಂತೆಯೇ ನಟರೆಲ್ಲಾ ಕಣ್ಣೀರಿನ ವಿದಾಯ ಹೇಳಿದ್ದಾರೆ. ಅದರಲ್ಲಿಯೂ ರಾಮ್​ ಮತ್ತು ಸಿಹಿ ದುಃಖ ತಡೆದುಕೊಳ್ಳಲಾಗದೇ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

ಒಂದು ಧಾರಾವಾಹಿ ಎಂದರೆ ಅದರಲ್ಲಿ ನಟಿಸುವ ಕಲಾವಿದರಿಗೆ ಅದೊಂದು ರೀತಿಯಲ್ಲಿ ಮನೆಯೇ ಆಗಿಬಿಟ್ಟಿರುತ್ತದೆ. ಅಲ್ಲಿ ಇರುವವರೆಲ್ಲರೂ ಕುಟುಂಬದವರೇ ಆಗಿಬಿಡುತ್ತಾರೆ. 3-4 ವರ್ಷಗಳ ವರೆಗೆ ದಿನಂಪ್ರತಿ ಮನೆಗಿಂತಲೂ ಹೆಚ್ಚಾಗಿ, ಮನೆಯ ಸದಸ್ಯರಿಗಿಂತಲೂ ಹೆಚ್ಚಾಗಿ ಆ ಸೀರಿಯಲ್​ ನಟ-ನಟಿಯರ ಜೊತೆ ಹೆಚ್ಚು ಕಾಲ ಕಳೆಯುವ ಕಾರಣದಿಂದ ಅದೊಂದು ರೀತಿಯ ಸುಮಧುರ ಬಾಂಧವ್ಯ ಮೂಡಿಬಿಟ್ಟಿರುತ್ತದೆ. ಹಲವಾರು ಕಲಾವಿದರು ಸೀರಿಯಲ್​ಗಳಲ್ಲಿ ತುಂಬಾ ಎಂಜಾಯ್​ ಮಾಡುತ್ತಾ, ಅಲ್ಲಿರುವ ನಟ-ನಟಿಯರ ಜೊತೆ ತಮಾಷೆ ಮಾಡುತ್ತಾ ಕಾಲ ಕಳೆಯುತ್ತಿರುತ್ತಾರೆ. ಆದ್ದರಿಂದ ಅವರಿಗೆ ಮನೆಯವರಂತೆಯೇ ಸಹ ನಟರೂ ತುಂಬಾ ಕ್ಲೋಸ್​ ಆಗಿರುತ್ತಾರೆ. ಇಂಥ ಸಂದರ್ಭಗಳಲ್ಲಿ ಆ ಸೀರಿಯಲ್​ ಮುಗಿಯುತ್ತೆ ಎಂದಾಗ ಹೇಳಿಕೊಳ್ಳಲಾಗದ ನೋವು, ಸಂಕಟ ಉಂಟಾಗುವುದು ಸಹಜ. ತಮ್ಮದೇ ಮನೆಯವರಿಂದ ದೂರ ಆಗ್ತಿದ್ದವೋ ಎನ್ನುವ ಭಾವನೆ ಬರುತ್ತದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಅದೇ ರೀತಿ ಇದೀಗ ಕಳೆದ ಎರಡೂವರೆ ವರ್ಷಗಳಿಂದ ಲಕ್ಷಾಂತರ ವೀಕ್ಷಕರನ್ನು ರಂಜಿಸಿದ್ದ ಸೀತಾರಾಮ ಸೀರಿಯಲ್​ನ ಬಹುತೇಕ ಕಲಾವಿದರಿಗೂ ಇದೇ ರೀತಿ ಆಗಿದೆ. ಕೆಲವು ಕಲಾವಿದರು ಈ ಸಂಕಟವನ್ನು ತಡೆದುಕೊಳ್ಳುತ್ತಾರೆ. ಮತ್ತೆ ಕೆಲವರಿಗೆ ಇನ್ನೊಂದು ಸೀರಿಯಲ್​ನಲ್ಲಿ ನಟಿಸುವ ಅವಕಾಶ ಇರುವುದಿಂದ ಅದರಲ್ಲಿ ಬಿಜಿಯಾಗಿ, ಹಿಂದಿನ ಸೀರಿಯಲ್​ ಮರೆತೇ ಬಿಡುತ್ತಾರೆ. ಮತ್ತೆ ಕೆಲವರು ತಾವೊಬ್ಬರು ಕಲಾವಿದರು ಅಷ್ಟೇ ಎನ್ನುವುದನ್ನು ಅರ್ಥ ಮಾಡಿಕೊಂಡಿರುತ್ತಾರೆ. ಮತ್ತೆ ಕೆಲವರಿಗೆ ಇದುಕಲಾವಿದನ ಲೈಫ್​ ಅಷ್ಟೇ ಎನ್ನುವುದು ತಿಳಿದಿರುತ್ತದೆ. ಆದರೆ ಕೆಲವರು ಹಾಗಲ್ಲ. ತುಂಬಾ ಭಾವನಾಜೀವಿಗಳಾಗಿ ಬಿಟ್ಟಿರುತ್ತಾರೆ. ಅದರಲ್ಲಿಯೂ ರಿಯಲ್​ ಲೈಫ್​ನಲ್ಲಿ ಏನೇನೋ ನೋವು ಅನುಭವಿಸಿದ ಕಲಾವಿದರ ವಿಷಯಕ್ಕೆ ಬಂದರೆ, ಸೀರಿಯಲ್​ ನಟರನ್ನೇ ತಮ್ಮ ಬಂಧುಗಳು ಎಂದುಕೊಂಡಿರುವ ಅವರಿಗೆ ಈ ವಿದಾಯ ಅಕ್ಷರಶಃ ನಲುಗಿಸಿಬಿಡುತ್ತದೆ.

ಸೀತಾರಾಮ ಸೀರಿಯಲ್​ನಲ್ಲಿ ತುಂಬಾ ನೋವು, ಸಂಕಟ ಅನುಭವಿಸುತ್ತಲೇ ಆ ದುಃಖವನ್ನು ನಿಯಂತ್ರಿಸಿಕೊಳ್ಳಲು ಆಗದವರು ಎಂದರೆ ರಾಮ್​ ಪಾತ್ರಧಾರಿ ಗಗನ್​ ಚಿನ್ನಪ್ಪ ಮತ್ತು ಸೀರಿಯಲ್​ನ ಸೆಂಟರ್​ ಆಫ್​ ಅಟ್ರಾಕ್ಷನ್​ ಸಿಹಿ-ಸುಬ್ಬಿ ರೀತು ಸಿಂಗ್​. ಸೀತಾ ಪಾತ್ರಧಾರಿ ವೈಷ್ಣವಿಗೆ ಮದುವೆ ಫಿಕ್ಸ್​ ಆಗಿದ್ದು, ಅದರ ಬಿಜಿಯಲ್ಲಿದ್ದಾರೆ. ಪ್ರಿಯಾ ಪಾತ್ರಧಾರಿ ಮೇಘನಾ ಶಂಕರಪ್ಪ ಅವರದ್ದೂ ಜಸ್ಟ್​ ಮ್ಯಾರೇಜ್​ ಆಗಿದೆ. ಅಶೋಕ್​ ಪಾತ್ರಧಾರಿ ಅಶೋಕ್​ ಶರ್ಮಾ ಇದಾಗಲೇ ಸಂದರ್ಶನವೊಂದರಲ್ಲಿ ತಮಗೂ ಸಂಕಟ ಆಗಿದ್ದರೂ ಅದನ್ನು ಮ್ಯಾಜೇಜ್ ಮಾಡಿದೆ ಎಂದಿದ್ದಾರೆ. ಉಳಿದ ಕಲಾವಿದರು ಹಿರಿಯ ಕಲಾವಿದರಾಗಿದ್ದು, ಅವರಿಗೆ ಇದಾಗಲೇ ಸಾಕಷ್ಟು ಅನುಭವವಾಗಿದೆ. ಈ ಸೀರಿಯಲ್​ ದೊಡ್ಡ ಬ್ರೇಕ್​ ಕೊಟ್ಟಿರೋದು ರಾಮ್​ ಆಗಿರೋ ಗಗನ್​ ಮತ್ತು ಸಿಹಿ ಆಗಿರೋ ರೀತು ಸಿಂಗ್​ಗೆ. ಅದರಲ್ಲಿಯೂ ರೀತು ದೊಡ್ಡ ಮಟ್ಟದ ಸ್ಟಾರ್​ ಆಗಿ ಬೆಳೆದುಬಿಟ್ಟಿದ್ದಾಳೆ.

ಕೊನೆಯ ದಿನದ ಶೂಟಿಂಗ್​ ಜೀ ಕನ್ನಡ ವಾಹಿನಿ ಶೇರ್​ ಮಾಡಿದ್ದು, ಅದರಲ್ಲಿ ಗಗನ್​ ಮತ್ತು ಸಿಹಿ ಬಿಕ್ಕಿ ಬಿಕ್ಕಿ ಅತ್ತಿರುವುದನ್ನು ಕಾಣಬಹುದು. ಈ ಕುರಿತು ಇದಾಗಲೇ ಸಂದರ್ಶನದಲ್ಲಿ ಅಶೋಕ್​ ಶರ್ಮ ಕೂಡ ಹೇಳಿದ್ದರು. ಅವರಿಬ್ಬರಿಗೂ ಅಳು ತಡೆದುಕೊಳ್ಳಲು ಆಗಲಿಲ್ಲ. ಗಗನ್​ ಅವರು ತುಂಬಾ ಭಾವುಕ ಜೀವಿ. ಅವರಿಗೆ ಈ ಅಗಲಿಕೆ ಸಹಿಸಲು ಆಗಲಿಲ್ಲ. ಇನ್ನು ರೀತು ಸಿಂಗ್​, ಮುಂದೆ ನಾನು ಏನು ಮಾಡಲಿ ಎಂದೇ ಪದೇ ಪದೇ ಅಳುತ್ತಿದ್ದಳು. ಅವಳನ್ನು ಸಮಾಧಾನ ಪಡಿಸೋದೇ ಕಷ್ಟವಾಗಿತ್ತು ಎಂದಿದ್ದರು. ಆ ನೋವನ್ನು ಇಲ್ಲಿಯೂ ನೋಡಬಹುದಾಗಿದೆ.

View post on Instagram