ರಾಮನ ಪಾತ್ರಕ್ಕೆ ನ್ಯಾಯ ಸಲ್ಲಿಸೋದಕ್ಕೆ ನನ್ನಿಂದಾಗದು ಅಂದುಕೊಂಡಿದ್ದೆ. ಆ ಕ್ರಮೇಣ ಆ ಭಯ ಕೃತಜ್ಞತೆಯಾಗಿ ಬದಲಾಯ್ತು. ಏಕೆಂದರೆ ನನ್ನ ಬದುಕಿಗೆ ನಿಜವಾಗಿಯೂ ಇಂಥಾ ಅವಕಾಶದ ಅಗತ್ಯ ಇತ್ತು ಎಂದರು ರಣಬೀರ್ ಕಪೂರ್.

‘ನನಗಿನ್ನೂ ನೆನಪಿದೆ, ರಾಮಾಯಣ್‌ ಸಿನಿಮಾ ನಿರ್ಮಾಪಕ ನಮಿತ್‌ ನಾಲ್ಕು ವರ್ಷಗಳ ಕೆಳಗೆ ನನ್ನನ್ನು ಭೇಟಿಯಾಗಿ ರಾಮನ ಪಾತ್ರ ಮಾಡಬೇಕು ಅಂದಿದ್ದರು. ನನ್ನ ತಕ್ಷಣದ ಪ್ರತಿಕ್ರಿಯೆ - ಆ ಪಾತ್ರಕ್ಕೆ ನಾನು ನಾಲಾಯಕ್ಕು. ಅದಕ್ಕೆ ಬೇಕಾದ ಗುಣ, ಚೆಂದ ನನಗಿಲ್ಲ ಅನ್ನೋದಾಗಿತ್ತು. ರಾಮನ ಪಾತ್ರಕ್ಕೆ ನ್ಯಾಯ ಸಲ್ಲಿಸೋದಕ್ಕೆ ನನ್ನಿಂದಾಗದು ಅಂದುಕೊಂಡಿದ್ದೆ. ಆ ಕ್ರಮೇಣ ಆ ಭಯ ಕೃತಜ್ಞತೆಯಾಗಿ ಬದಲಾಯ್ತು. ಏಕೆಂದರೆ ನನ್ನ ಬದುಕಿಗೆ ನಿಜವಾಗಿಯೂ ಇಂಥಾ ಅವಕಾಶದ ಅಗತ್ಯ ಇತ್ತು.’

Add Asianetnews Kannada as a Preferred SourcegooglePreferred

ಅಮೆರಿಕಾದಲ್ಲಿ ನಡೆದ ಬಹುಕೋಟಿ ವೆಚ್ಚದ ‘ರಾಮಾಯಣ’ ಸಿನಿಮಾ ಟ್ರೇಲರ್ ಬಿಡುಗಡೆ ಬಳಿಕ ಪತ್ರಕರ್ತರೊಂದಿಗೆ ರಣಬೀರ್‌ ಈ ವಿವರ ಹಂಚಿಕೊಂಡರು. ‘ನನ್ನ ಲೈಫ್‌ಸ್ಟೈಲ್‌ ಬದಲಾದ ಸಮಯವದು. ನಾನು ಆಗಷ್ಟೇ ಮೊದಲ ಬಾರಿ ತಂದೆಯಾಗಿದ್ದೆ. ರಾಮನ ಪಾತ್ರವನ್ನು ಮಾಡುತ್ತಿದ್ದ ಸಮಯದಲ್ಲೇ ತಂದೆಯಾದದ್ದು ನನ್ನ ಬದುಕಿನ ಮಧುರ ಕ್ಷಣ. ಇದು ಬದುಕಿನ ಬಹುದೊಡ್ಡ ತಿರುವೂ ಹೌದು. ಈ ಪಾತ್ರಕ್ಕೆ ದೈಹಿಕ ತಯಾರಿಗಿಂತ ಭಾವನಾತ್ಮಕ ಸಿದ್ಧತೆಗೆ ಹೆಚ್ಚು ಒತ್ತು ನೀಡಬೇಕಿತ್ತು. ಈ ಜವಾಬ್ದಾರಿಯನ್ನು ಗಂಭೀರವಾಗಿ ತೆಗೆದುಕೊಂಡು ಪಾತ್ರ ನಿರ್ವಹಿಸಿದ್ದೇನೆ’ ಎಂದೂ ರಣಬೀರ್‌ ಹೇಳಿದ್ದಾರೆ.

ದೊಡ್ಡ ತಾರಾಗಣ, ಭರ್ಜರಿ ಪ್ಲಾನ್

ದಂಗಲ್ ಖ್ಯಾತಿಯ ನಿತೇಶ್ ತಿವಾರಿ ಈ ಮಹಾಕಾವ್ಯವನ್ನು ಬೆಳ್ಳಿತೆರೆಯ ಮೇಲೆ ತರುತ್ತಿದ್ದಾರೆ. ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮನಾಗಿ ಕಾಣಿಸಿಕೊಂಡರೆ, ಸಾಯಿ ಪಲ್ಲವಿ ಸೀತೆಯ ಪಾತ್ರಕ್ಕೆ ಜೀವ ತುಂಬಲಿದ್ದಾರೆ. ವಿಶೇಷವೆಂದರೆ, ಕನ್ನಡದ ಹೆಮ್ಮೆಯ ನಟ ರಾಕಿಂಗ್ ಸ್ಟಾರ್ ಯಶ್ ಈ ಚಿತ್ರದಲ್ಲಿ ರಾವಣನ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಲಕ್ಷಣ್ ಪಾತ್ರದಲ್ಲಿ ರವಿ ದುಬೆ ಮತ್ತು ಹನುಮಂತನಾಗಿ ಸನ್ನಿ ಡಿಯೋಲ್ ಕಾಣಿಸಿಕೊಳ್ಳುತ್ತಿರುವುದು ಚಿತ್ರದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ.

ವರದಿಗಳ ಪ್ರಕಾರ, ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಮೊದಲ ಭಾಗವು 2026 ರ ದೀಪಾವಳಿಗೆ ತೆರೆಕಂಡರೆ, ಎರಡನೇ ಭಾಗವು 2027 ರ ದೀಪಾವಳಿ ಹಬ್ಬಕ್ಕೆ ಬಿಡುಗಡೆಯಾಗುವ ಸಾಧ್ಯತೆಯಿದೆ. ಒಟ್ಟಿನಲ್ಲಿ, ಬಾಲಿವುಡ್‌ನ ಚಾಕೊಲೇಟ್ ಬಾಯ್ ರಣಬೀರ್ ಕಪೂರ್ ಮತ್ತು ತಂಡ 'ರಾಮಾಯಣ' ಮೂಲಕ ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಲು ಸಜ್ಜಾಗಿದೆ.