ಕ್ಯಾಟರಿಂಗ್ ಒಂದರಲ್ಲಿ ಕೆಲಸ ಮಾಡುವ ಮೂವರಲ್ಲಿ ಒಬ್ಬನಿಗೆ ಹೆಣ್ಣು ನೋಡಲು ಹೋಗುವಲ್ಲಿಂದ ಪ್ರಾರಂಭವಾಗುವ ಚಿತ್ರ ಹಲವು ಆಯಾಮಗಳ ಒಳಹೊಕ್ಕು ಮೋಸ, ವಂಚನೆಯ ಪ್ರಪಂಚದಲ್ಲಿ ತಮ್ಮ ಆಸೆ ಸಾಧಿಸಲಾಗದೆ ತೊಳಲಾಡುವ ಮೂವರು, ಅವರೊಂದಿಗೆ ಸೇರಿಕೊಳ್ಳುವ ಇತರ ಪಾತ್ರಗಳ ಅಪರೂಪದ ಕಥಾಹಂದರದ ಕಥೆ ಹೇಳುತ್ತಾ ಸಾಗುತ್ತೆ.

‘ಪುತ್ತೂರಿನ ಮುತ್ತು’ ಅಕ್ಷಯ್ ನಾಯಕ್ ನಿರ್ದೇಶನದ ‘ಜೇವಣ್’

ಪುತ್ತೂರಿನ (Puttur) ಗೌರವಕ್ಕೊಂದು ಗರಿ ಮೂಡಿದ ಸುದ್ಧಿ ಬಂದಿದೆ. ಪುತ್ತೂರಿನ ಹುಡುಗ ಅಕ್ಷಯ್ ನಾಯಕ್ (Karopaady akshay Nayak) ಅವರು ರಚಿಸಿ, ನಿರ್ಮಿಸಿ, ನಿರ್ದೇಶಿಸಿರುವ ಕೊಂಕಣಿ ಚಿತ್ರ "ಜೆವಣ್" (Jevann) 17ನೇ ಬೆಂಗಳೂರು ಅಂತರರಾಷ್ಟೀಯ ಚಿತ್ರೋತ್ಸವದ ಅನ್ಸಂಗ್ ಇನ್ಕ್ರೆಡಿಬಲ್ ಇಂಡಿಯಾ ಭಾರತೀಯ ಉಪಭಾಷಾ ವಿಭಾಗದಲ್ಲಿ ಪ್ರದರ್ಶನಗೊಳ್ಳಲು ಆಯ್ಕೆ ಆಗಿದ್ದು ಬೆಂಗಳೂರಿನ ಲುಲು ಮಾಲ್ ನಲ್ಲಿ ಪ್ರದರ್ಶನಗೊಳ್ಳಲಿದೆ.

ಈಗಾಗಲೇ ಮಂಗಳೂರು,ಉಡುಪಿ,ಪುತ್ತೂರು, ಕುಂದಾಪುರ, ಹುಬ್ಬಳ್ಳಿ, ಬೆಂಗಳೂರು, ಮುಂಬೈ, ಶಿವಮೊಗ್ಗ ದಲ್ಲಿ ಪ್ರದರ್ಶನ ಕಂಡಿದ್ದು, ಕುವೈತ್, ಅರಿಝೋನಾ, ಮೆಲ್ಬೋರ್ನ್, ಕ್ಯಾಲಿಫೋರ್ನಿಯಾಗಳಲ್ಲೂ ಪ್ರದರ್ಶನ ಕಂಡು ವಿದೇಶದಲ್ಲಿರುವ ಪ್ರೇಕ್ಷಕರಿಗೂ "ಜೆವಣ್" ಕೊಂಕಣಿ ಚಿತ್ರ ಮೋಡಿ ಮಾಡಿದೆ. ಕೊಂಕಣಿ ಚಿತ್ರವೊಂದು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ವಿಷಯ ಕೊಂಕಣಿ ಭಾಷಿಕರ ನಡುವೆ ಹೆಮ್ಮೆ ಮೂಡಿಸಿದ್ದು, ಅಕ್ಷಯ್ ಅವರ ನಿರ್ದೇಶನದಲ್ಲಿ ಇನ್ನಷ್ಟು ಸದಭಿರುಚಿಯ ಕೊಂಕಣಿ ಚಿತ್ರಗಳು ಮೂಡಿಬರಲಿ ಎಂದು ಹಾರೈಸಿದ್ದಾರೆ.

"ಅನ್‌ಸಂಗ್ ಇನ್‌ಕ್ರೆಡಿಬಲ್ ಇಂಡಿಯಾ - ಕಡಿಮೆ ತಿಳಿದಿರುವ ಭಾಷೆಗಳಿಂದ ಚಲನಚಿತ್ರಗಳು"ಎಂಬ ಶೀರ್ಷಿಕೆಯ ಸ್ಪರ್ಧಾತ್ಮಕವಲ್ಲದ ವಿಭಾಗಕ್ಕಾಗಿ ಉತ್ಸವದ ಸಲಹಾ ಸಮಿತಿಯು "ಜೆವಣ್" ಅನ್ನು ಆಯ್ಕೆ ಮಾಡಿದೆ. ಈ ವಿಶೇಷ ವಿಭಾಗವು ಪ್ರಾದೇಶಿಕ ಮತ್ತು ಕಡಿಮೆ ಪ್ರಾತಿನಿಧ್ಯ ಹೊಂದಿರುವ ಭಾರತೀಯ ಭಾಷೆಗಳಿಂದ ಸಿನಿಮೀಯ ಧ್ವನಿಗಳನ್ನು ಆಚರಿಸುತ್ತದೆ, ಅವುಗಳ ಸಾಂಸ್ಕೃತಿಕ ಆಳ ಮತ್ತು ಕಥೆ ಹೇಳುವ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ.

ಜೆವಣ್ (ಕೊಂಕಣಿ ಚಿತ್ರ) ಹಾಸ್ಯಕ್ಕಾಗಿಯೇ ಕೊಂಕಣಿ ಭಾಷೆಯಲ್ಲಿ ತಯಾರಾಗಿರುವ ಒಂದು ಕೌಟುಂಬಿಕ ಚಿತ್ರ. ಹಾಸ್ಯದ ಆಳ ಅಗಲಗಳನ್ನು ಪ್ರೇಕ್ಷಕರಿಗೆ ಉಣಬದಿಸಲಿಕ್ಕಾಗಿಯೇ ಸಿದ್ಧವಾದಂತಿರುವ ಈ ಚಿತ್ರದಲ್ಲಿ ಘಟಾನುಘಟಿ ಕೊಂಕಣಿ ಭಾಷಿಕ ಕಲಾವಿದರ ಕೂಡುವಿಕೆ ಇದೆ.

ಕಥೆಯಲ್ಲಿ ವಿಶೇ‍ಷತೆ ಏನು?

ಕ್ಯಾಟರಿಂಗ್ ಒಂದರಲ್ಲಿ ಕೆಲಸ ಮಾಡುವ ಮೂವರಲ್ಲಿ ಒಬ್ಬನಿಗೆ ಹೆಣ್ಣು ನೋಡಲು ಹೋಗುವಲ್ಲಿಂದ ಪ್ರಾರಂಭವಾಗುವ ಚಿತ್ರ ಹಲವು ಆಯಾಮಗಳ ಒಳಹೊಕ್ಕು ಮೋಸ, ವಂಚನೆಯ ಪ್ರಪಂಚದಲ್ಲಿ ತಮ್ಮ ಆಸೆ ಸಾಧಿಸಲಾಗದೆ ತೊಳಲಾಡುವ ಮೂವರು ಮತ್ತು ಅವರೊಂದಿಗೆ ಸೇರಿಕೊಳ್ಳುವ ಇತರ ಪಾತ್ರಗಳ ಅಪರೂಪದ ಕಥಾಹಂದರ ಕಥೆ ಹೇಳುತ್ತಾ ಸಾಗುತ್ತೆ. ನಾಯಕನ ಪ್ರವೇಶದಿಂದ ಇನ್ನೊಂದು ಆಯಾಮಕ್ಕೆ ತೆರೆದುಕೊಳ್ಳುವ ಚಿತ್ರದ ಕಥಾವಸ್ತು ಆಕೆಯನ್ನೇ ವರಿಸುವುದರೊಂದಿಗೆ ಚಿತ್ರ ಮುಕ್ತಾಯವಾಗತ್ತೆ. ಚಿತ್ರದ ನಡುವೆ ಕಥೆಗೆ ಪೂರಕವಾಗಿ ಬರುವ ಪಾತ್ರಗಳು ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸುವುದರಲ್ಲಿ ಯಶಸ್ವಿಯಾಗತ್ತೆ. ಇದಿಷ್ಟು ಜೇವಣ್ ಚಿತ್ರದ ಸಂಕ್ಷಿಪ್ತ ಕಥಾ ರೂಪ.

ಶ್ರೀ ಮಹಮ್ಮಯಿ ಸಿನಿ ಕ್ರಿಯೇಷನ್ಸ್ ಹಾಗು ಧಾತ್ರಿ ಸಿನಿ ಕಂಬೈನ್ ಲಾಂಛನದಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರಕೆ, ಕುಂಬ್ಳೆ ವೆಂಕಟೇಶ್ ಭಟ್, ಕರೋಪಾಡಿ ಅಕ್ಷಯ್ ನಾಯಕ್ ನಿರ್ಮಾಪಕರಾಗಿದ್ದಾರೆ. ಚಿತ್ರಕತೆ-ನಿರ್ದೇಶನ-ಸಂಕಲನ ಈ ಎಲ್ಲವನ್ನೂ ಕರೋಪಾಡಿ ಅಕ್ಷಯ ನಾಯಕ್ ಮಾಡಿರುವುದು ವಿಶೇಷ. ರಾಜ್ಯ ಪ್ರಶಸ್ತಿ ಪುರಸ್ಕೃತ ನಟ ಎಮ್‌ಕೆ ಮಠ ಮತ್ತು ಸೂರಜ್ ಭಟ್ ಬಂಟ್ವಾಳ್ ಕಥೆ-ಸಂಭಾಷಣೆ ಇದ್ದು ಅರುಣ್ ರೈ ಪುತ್ತೂರು ಛಾಯಾಗ್ರಹಣ, ಚಿತ್ರಕ್ಕೆ ಗೀತ ಸಾಹಿತ್ಯವನ್ನು ಸೂರಜ್ ಭಟ್ ಬಂಟ್ವಾಳ್ ಹಾಗೂ ಸಾತ್ವಿಕ್ ಪಡಿಯರ್ ಬರೆದಿದ್ದು, ಸಂಗೀತ ನಿರ್ದೇಶನ ಸಾತ್ವಿಕ್ ಪಡಿಯರ್ ನೀಡಿರುತ್ತಾರೆ.

ಬಂಟ್ವಾಳ ಅಸೂಪಾಸಿನಲ್ಲಿ ಸಿನಿಮಾದ ಚಿತ್ರೀಕರಣ

ಸುಮಂತ್ ಸಹ ನಿರ್ದೇಶಕರಾಗಿ ದುಡಿದಿದ್ದು, ಕೃಷ್ಣ ಪ್ರಸಾದ್ ಸಹಾಯಕ ಕ್ಯಾಮೆರಾ ನಿರ್ವಾಹಕರಾಗಿ, ಆಚಾರ್ಯ ಗುರುಪ್ರಸಾದ್ ಚಿತ್ರಕ್ಕೆ ಗಿಈಘಿ ಮಾಡಿರುತ್ತಾರೆ . ಚಿತ್ರದಲ್ಲಿ ಒಟ್ಟು ೩ ಹಾಡುಗಳಿದ್ದು , ಪ್ರಕಾಶ್ ಮಹಾದೇವನ, ಮಿಲನ್, ಹಾಗೂ ಅಪೇಷ ಪೈ ಹಾಡಿದರೆ. ಗುರು ಸವನ್ ಬೆಂಗಳೂರ್ ನೃತ್ಯ ಸಂಯೋಜನೆ, ಚಿತ್ರಕ್ಕೆ ಉತ್ತಮ ವಾಗಿ ಮೂಡಿ ಬಂದಿದೆ. 5.1 ಡಿ.ಟಿ.ಎಸ್ ಮಿಕ್ಸಿಂಗ್ & ಮಾಸ್ಟರಿಂಗ್ ನಿಕಿಲೇಶ್ ಬೆಂಗಳೂರ್ ಮಾಡಿರುತ್ತಾರೆ. ಬಂಟ್ವಾಳ ಅಸೂಪಾಸಿನಲ್ಲಿ ಸಿನಿಮಾದ ಚಿತ್ರೀಕರಣವನ್ನು ಮಾಡಲಾಗಿದೆ. ಚಿತ್ರವು ಹಾಸ್ಯ ಭರಿತ, ಮನೋರಂಜನೆ ನೀಡುವ ಜೊತೆಗೆ ಕೌಟುಂಬಿಕವಾಗಿ ನೋಡುವ ಸಿನಿಮಾ ಇದಾಗಿದೆ.

ಕೊಂಕಣಿ ಸಮುದಾಯದಲ್ಲಿನ ಪ್ರತಿಭಾವಂತ ಕಲಾವಿದರ ದಂಡೇ ಈ ಚಿತ್ರದಲ್ಲಿದ್ದು ಈಗಾಗಲೇ ನಟನೆಯಲ್ಲಿ ಮುಂಚೂಣಿಯಲ್ಲಿರುವ ಹಲವು ನಾಟಕ, ಚಲನಚಿತ್ರ, ಧಾರಾವಾಹಿಯಲ್ಲಿ ನಟಿಸಿ ಹಲವು ಜನರ ಪ್ರಶಂಸೆಗೆ ಪಾತ್ರರಾದ ಕರಾವಳಿ ಮೂರು ಮುತ್ತು ಖ್ಯಾತಿ ಸತೀಶ್ ಪೈ ಕುಂದಾಪುರ, ಸಂತೋಷ್ ಪೈ, ಕುಂದಾಪುರ, ಕಾಮಿಡಿ ಕಿಲಾಡಿ ಖ್ಯಾತಿಯ ರಾಧೇಶ್ ಶೆಣೈ, ಕಲರ್ಸ್ ಕನ್ನಡ ಧಾರಾವಾಹಿಯ ಶಿಲ್ಪಾ ಕಾಮತ್ ನಾಯಕಿಯಗಿ ರಾಕೇಶ್ ಕಾಮತ್ ಪುತ್ತೂರು ನಾಯಕನಾಗಿ, ಸೂರಜ್ ಭಟ್ ಬಂಟ್ವಾಳ್, ರಾಮನಾಥ್ ನಾಯಕ್ ಪುತ್ತೂರು, ವೆಂಕಟೇಶ್ ಭಟ್ ಪುತ್ತೂರು, ಚಂದ್ರಕಾAತ್ ಭಟ್ ಪುತ್ತೂರು, ವತ್ಸಲಾ ನಾಯಕ್ ಪುತ್ತೂರು, ಸುಲತಾ ನಾಯಕ್ ಪುತ್ತೂರು, ದಾಮೋದರ್ ಹೆಗಡೆ ಪುತ್ತೂರು, ಮಂಗೇಶ್ ಭಟ್ ವಿಟ್ಲ, ಕರೋಪಾಡಿ ವರುಣ್ ನಾಯಕ್, ದೀಪಕ್ ಪೈ ಉಪ್ಪಿನಂಗಡಿ,ಸ್ವಾತಿ ಅಕ್ಷಯ್ ನಾಯಕ್, ಸುಚಿತ್ರಾ ನಾಯಕ್ ,ನಟಿಸಿದ್ದು ೪೫ಕ್ಕೂ ಮಿಕ್ಕಿ ತಾರಾಂಗಣ ಈ ಚಿತ್ರದಲ್ಲಿ ಇದೆ. ಈ ಚಿತ್ರವು ಸಾರಸ್ವತ ಕೊಂಕಣಿ (GSB ಕೊಂಕಣಿ ಚಲನಚಿತ್ರ) ಇತಿಹಾಸದಲ್ಲಿ 9 ನೇ ಚಿತ್ರವಾಗಿದೆ.