'ಆಗಸ್ಟ್‌ 1ಕ್ಕೆ ಸಿನಿಮಾ ಬರ್ತಿದೆ. ಜನ ಈ ಚಿತ್ರ ಹೇಗೆ ತೆಗೆದುಕೊಳ್ತಾರೋ ಎಂಬ ಭಯವಿದೆ. ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಸೆಲೆಬ್ರಿಟಿ ಮನೆಯವರಾಗಿ ಭಯ ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್‌ಗೆ ಏನೂ ಹೇಳದೇ ಮಾಡಿಲ್ಲ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ ನಮಗೂ ಖುಷಿ…

ರಾಕಿಂಗ್‌ ಸ್ಟಾರ್‌ ಯಶ್‌ ತಾಯಿ ಪುಷ್ಪ ಅರುಣ್‌ ಕುಮಾರ್‌ (Pushpa Arunkumar) ನಿರ್ಮಾಣದ 'ಕೊತ್ತಲವಾಡಿ' ಸಿನಿಮಾದ ಟ್ರೇಲರ್‌ ರಿಲೀಸ್‌ ಆಗಿದೆ. 'ಕೊತ್ತಲವಾಡಿ' ಎಂಬ ಊರಿನಲ್ಲಿ ನಡೆಯುವ ಕಥೆ ಇದಾಗಿದ್ದು, ರಾಜಕೀಯ ದಂಗಲ್‌, ಪೊಲೀಸ್‌ ವ್ಯವಸ್ಥೆ, ಅವಕಾಶವಾದಿತನ, ನಾಯಕನ ಹೋರಾಟ, ಛಲ ಈ ಅಂಶಗಳ ಸುತ್ತ ಸಿನಿಮಾ ಸಾಗುತ್ತದೆ. ಹಳ್ಳಿ ಹೈದನಾಗಿ ಪೃಥ್ವಿ ಅಂಬರ್‌ ರಗಡ್‌ ಅವತಾರ ತಾಳಿದ್ದು, ನಾಯಕಿಯಾಗಿ ಕಾವ್ಯಾ ಶೈವ ನಟಿಸಿದ್ದಾರೆ. ಗೋಪಾಲ ದೇಶಪಾಂಡೆ ಅದ್ಭುತ ಪಾತ್ರದಲ್ಲಿ ಅಭಿನಯಿಸಿದ್ದಾರೆ. ರಾಜೇಶ್ ನಟರಂಗ ಅವರು ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ.

ಟ್ರೇಲರ್‌ ಬಿಡುಗಡೆ ಬಳಿಕ ಮಾತನಾಡಿದ ಪುಷ್ಪ ಅರುಣ್‌ ಕುಮಾರ್‌, 'ಆಗಸ್ಟ್‌ 1ಕ್ಕೆ ಸಿನಿಮಾ ಬರ್ತಿದೆ. ಜನ ಈ ಚಿತ್ರ ಹೇಗೆ ತೆಗೆದುಕೊಳ್ತಾರೋ ಎಂಬ ಭಯವಿದೆ. ಜನ ನಮ್ಮ ಕೈಬಿಡುವುದಿಲ್ಲ ಎಂಬ ನಂಬಿಕೆ ಇದೆ. ಸೆಲೆಬ್ರಿಟಿ ಮನೆಯವರಾಗಿ ಭಯ ಭಕ್ತಿಯಿಂದ ಸಿನಿಮಾ ಮಾಡಿದ್ದೇವೆ. ಯಶ್‌ಗೆ ಏನೂ ಹೇಳದೇ ಮಾಡಿಲ್ಲ. ಜನ ಒಪ್ಪಿಕೊಂಡರೆ ಅವರಿಗೂ ಖುಷಿ ನಮಗೂ ಖುಷಿ. ಬೇರೆ ದೊಡ್ಡಸ್ತಿಕೆ ಇದರಲ್ಲಿ ಇಲ್ಲ. ಇವೆಲ್ಲಾ ಏನೂ ಅಂದುಕೊಳ್ಳಬೇಡಿ. ಮನೆಯಲ್ಲಿರುವ ಬಾಸ್‌ ನೋಡಿ ನಾವೂ ಸ್ಫೂರ್ತಿ ಪಡೆದು ಸಿನಿಮಾ ಮಾಡಿದ್ದೇವೆ' ಎಂದರು.

ನಿರ್ದೇಶಕ ಶ್ರೀರಾಜ್‌ ಮಾತನಾಡಿ, 'ಖುಷಿ ಅನ್ನೋದಕ್ಕಿಂತ ಇದು ಜವಾಬ್ದಾರಿ. ಆಗಸ್ಟ್‌ 1ಕ್ಕೆ ಆಡಿಯನ್ಸ್‌ ನೋಡಿ ಚಿತ್ರಕ್ಕೆ ಪ್ರತಿಕ್ರಿಯೆ ಕೊಡಬೇಕು. ಸದ್ಯ ಟ್ರೇಲರ್‌ ಬಿಟ್ಟಿದ್ದೇವೆ. ಈ ಕಥೆ ಶುರುವಾದಾಗ ಪುಷ್ಪ ಅಮ್ಮನ ಚರ್ಚೆ ಮಾಡಿದೆ. ಒಬ್ಬರೇ ಚಿತ್ರತಂಡ ಸೇರಿಕೊಂಡರು. ಯಾವುದಕ್ಕೂ ಕಾಂಪ್ರಮೈಸ್‌ ಆಗಬೇಡ. ನಿನಗೆ ಏನೂ ಬೇಕೋ ಅದು ತೆಗೆದುಕೋ ಎನ್ನುತ್ತಿದ್ದರು. ಇವತ್ತು ನೀವು ನೋಡುತ್ತಿರುವ ಕ್ವಾಲಿಟಿ, ಕಂಟೆಂಟ್‌ ಎಲ್ಲದಕ್ಕೂ ಕಾರಣ ಪುಷ್ಪ ಅಮ್ಮ. ಈ ರೀತಿ ನಿರ್ಮಾಪಕರು ಕನ್ನಡ ಇಂಡಸ್ಟ್ರೀಗೆ ಬೇಕು' ಎಂದು ಹೇಳಿದರು.

ಪೃಥ್ವಿ ಅಂಬರ್ ಹಾಗೂ ಕಾವ್ಯಾ ಶೈವ ಜೋಡಿ ನಟನೆಯ 'ಕೊತ್ತಲವಾಡಿ' ಸಿನಿಮಾಗೆ ಶ್ರೀರಾಜ್ ಆಕ್ಷನ್ ಕಟ್ ಹೇಳಿದ್ದಾರೆ. ಟ್ರೇಲರ್‌ ಕ್ವಾಲಿಟಿ ಅದ್ಭುತವಾಗಿದ್ದು, ಒಂದೊಳ್ಳೆ ಕಂಟೆಂಟ್‌ ಚಿತ್ರವನ್ನು ಶ್ರೀರಾಜ್‌ ಮಾಡಿದ್ದಾರೆ. ರಾಜಕೀಯ, ಹಸಿವು, ಬಂಡಾಯ, ಬೆಂಕಿ, ರಕ್ತಸಿಕ್ತ ಕಥೆ 'ಕೊತ್ತಲವಾಡಿ' ಚಿತ್ರದಲ್ಲಿದೆ. ಟ್ರೈಲರ್‌ನಲ್ಲೇ ನಿಡುವಳ್ಳಿ ಸಂಭಾಷಣೆ ಹೈಲೆಟ್ ಆಗಿದೆ. ಪುಷ್ಪ ಅರುಣ್‌ ಕುಮಾರ್‌ ತಮ್ಮದೇ 'PA' ಪ್ರೊಡಕ್ಷನ್‌ ಅಡಿಯಲ್ಲಿ ಕೊತ್ತಲವಾಡಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

ಸಿನಿಮಾದ ಹಾಡುಗಳಿಗೆ ವಿಕಾಸ್ ವಸಿಷ್ಠ ಮತ್ತು ಹೀರೋ ಇಂಟ್ರೊಡಕ್ಷನ್ ಹಾಡು ಹಾಗೂ ಹಿನ್ನಲೆ ಸಂಗೀತವನ್ನು ಅಭಿನಂದನ್ ಕಶ್ಯಪ್ ಸಂಯೋಜಿಸಿದ್ದಾರೆ. ಕಾರ್ತಿಕ್ ಎಸ್. ಛಾಯಾಗ್ರಹಣ ಮಾಡಿದ್ದಾರೆ. ರಾಮಿಸೆಟ್ಟಿ ಪವನ್ ಸಂಕಲನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ವಿ. ನಾಗೇಂದ್ರ ಪ್ರಸಾದ್, ಕಿನ್ನಾಳ್ ರಾಜ್, ಪ್ರಮೋದ್ ಮರವಂತೆ, ಗೌಸ್ ಪಿರ್ ಸಾಹಿತ್ಯ ಬರೆದಿದ್ದಾರೆ. ಅಭಿನಂದನ್‌ ಕಶ್ಯಪ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ.