ಎಡವಟ್ಟು ದುರ್ಗಾ ಎಂದೇ ಫೇಮಸ್​ ಆಗಿರೋ ನಾನಿನ್ನ ಬಿಡಲಾರೆ ಸೀರಿಯಲ್​ ದುರ್ಗಾ ಅರ್ಥಾತ್​ ರಿಷಿಕಾ ಅವರಿಗೆ ಇಂದು ಹುಟ್ಟುಹಬ್ಬದ ಸಂಭ್ರಮ. ನಟಿಯ ಕುರಿತು ಇಂಟರೆಸ್ಟಿಂಗ್​ ಸ್ಟೋರಿ ಇಲ್ಲಿದೆ.. 

ಎಡವಟ್ಟು ದುರ್ಗಾ ಎಂದರೆ, ಸೀರಿಯಲ್​ ಪ್ರೇಮಿಗಳಿಗೆ ಮೊದಲು ನೆನಪಾಗೋದು ನಾನಿನ್ನ ಬಿಡಲಾರೆಯ ದುರ್ಗಾ. ಹೌದು. ಈಕೆ ಮಾಡೊದೆಲ್ಲಾ ಎಡವಟ್ಟೇ. ಆದರೂ ಸೌಮ್ಯ ಸ್ವಭಾವ ಇನ್ನೂ ಚಿಕ್ಕಮಕ್ಕಳ ಮುಗ್ಧತೆ ಇರುವ ಯುವತಿ ದುರ್ಗಾ. ಸತ್ತಿರೋ ಅಂಬಿಕಾ ಜೊತೆ ಮಾತನಾಡುವ ಶಕ್ತಿ ಇರುವ ನಾಯಕಿ ಈಕೆ! ಅಂದಹಾಗೆ, ಈಕೆ ನಿಜ ಜೀವನದಲ್ಲಿ ಆತ್ಮಗಳ ಜೊತೆ ಮಾತನಾಡಲ್ಲ, ಬದಲಿಗೆ ನಾನಿನ್ನ ಬಿಡಲಾರೆ ಸೀರಿಯಲ್​ನಲ್ಲಿ ಸತ್ತುಹೋಗಿರೋ ಅಂಬಿಕಾ ಇವಳಿಗೆ ಕಾಣಿಸುತ್ತಿದ್ದಾಳೆ. ಆಕೆ ಸತ್ತು ಹೋಗಿದ್ದಾಳೆ ಎನ್ನುವುದು ದುರ್ಗಾಗೆ ಗೊತ್ತಿಲ್ಲ. ಅಷ್ಟಕ್ಕೂ ಅವಳು ಯಾರು ಎನ್ನೋದೇ ಗೊತ್ತಿಲ್ಲ. ಆದರೂ ಇಬ್ಬರೂ ಫ್ರೆಂಡ್ಸ್​ ಆಗಿದ್ದಾರೆ. ಅಂಬಿಕಾಗೋ ದುರ್ಗಾ ಮೇಲೆ ಇನ್ನಿಲ್ಲದ ಪ್ರೀತಿ. ತನ್ನ ಗಂಡನನ್ನೇ ದುರ್ಗಾಗೆ ಮದ್ವೆ ಮಾಡಿಸೋ ಪ್ಲ್ಯಾನ್​ ಈ ಅಂಬಿಕಾ ಎನ್ನೋ ಆತ್ಮದ್ದು. ಇದು ಕ್ಯೂಟ್​ ಆತ್ಮ ಎಂದೇ ಫೇಮಸ್ಸು.

Add Asianetnews Kannada as a Preferred SourcegooglePreferred

ಇಂತಿಪ್ಪ ದುರ್ಗಾಳ ನಿಜವಾದ ಹೆಸರು ರಿಷಿಕಾ. ಇಂದು ರಿಷಿಕಾ ಅವರಿಗೆ ಹುಟ್ಟುಹಬ್ಬದ ಸಂಭ್ರಮ. ಈ ಹಿನ್ನೆಲೆಯಲ್ಲಿ ಜೀ ಕನ್ನಡ ವಿಶೇಷ ವಿಡಿಯೋ ಶೇರ್​ ಮಾಡಿದೆ. ಇನ್ನು ದುರ್ಗಾ ಪಾತ್ರಧಾರಿ ರಿಷಿಕಾ ಕುರಿತು ಹೇಳುವುದಾದರೆ, ರಿಷಿಕಾಗೆ ಇದು ನಾಲ್ಕನೇ ಧಾರಾವಾಹಿ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾಕುಮಾರಿ' ಧಾರಾವಾಹಿಯಲ್ಲಿ ನಾಯಕನ ತಂಗಿ ಐಶ್ವರ್ಯಾ ಆಗಿ ಕಿರುತೆರೆಗೆ ಎಂಟ್ರಿ ಕೊಟ್ಟರು. ಮೊದಲ ಸೀರಿಯಲ್​ನಲ್ಲಿ ಸೈಡ್​ ರೋಲ್​ನಲ್ಲಿ ಕಾಣಿಸಿಕೊಂಡಿದ್ದರೂ, ನಟನೆಯ ಮೂಲಕ ಕಿರುತೆರೆ ವೀಕ್ಷಕರ ಮನ ಸೆಳೆದರು. ಬಳಿಕ ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಕನ್ಯಾದಾನ' ಧಾರಾವಾಹಿಯಲ್ಲಿ ಚಿತ್ರಾ ಆಗಿ ನಟಿಸಿದ ಈಕೆ ಅಲ್ಲೂ ತಮ್ಮ ನಟನೆಯ ಮೂಲಕ ಗುರುತಿಸಿಕೊಂಡ ಪ್ರತಿಭೆ.

ಇನ್ನು ನಾನಿನ್ನ ಬಿಡಲಾರೆ ಸೀರಿಯಲ್​ ಕುರಿತು ಹೇಳುವುದಾದರೆ, ಶರತ್ ಮತ್ತು ಅಂಬಿಕಾ ಮದುವೆಯಾಗಿ ಹಿತಾ ಎನ್ನುವ ಮಗಳು ಇರುತ್ತಾಳೆ. ಇಬ್ಬರಿಗೂ ಆಕೆಯ ಮೇಲೆ ಪಂಚಪ್ರಾಣ. ಆದರೆ ಓರ್ವ ಲೇಡಿ ವಿಲನ್​ ಸೀರಿಯಲ್​ನಲ್ಲಿ ಇರಲೇಬೇಕಲ್ವೆ? ಅವಳೇ ಮಾಯಾ. ಶರತ್‌ನನ್ನು ತನ್ನ ವಶಮಾಡಿಕೊಳ್ಳಬೇಕು ಎಂಬ ಆಸೆಯಿಂದ ಆಕೆ ಅಂಬಿಕಾಳ ಕೊಲೆ ಮಾಡ್ತಾಳೆ. ಅಮ್ಮನ ಪ್ರೀತಿಯಿಲ್ಲದೇ ಬೆಳೆಯುವ ಹಿತಾ, ಅದೊಂದು ಸಂದರ್ಭದಲ್ಲಿ ಅಪ್ಪನ ಮೇಲೂ ಕೋಪಿಸಿಕೊಳ್ಳುವ ಸನ್ನಿವೇಶ ಎದುರಾಗಿ ಮಾತನ್ನೇ ಬಿಡುತ್ತಾಳೆ. ಇತ್ತ ಮಾಯಾ ಹಿತಾಳನ್ನೂ ಕೊಲ್ಲಲು ಸಂಚು ರೂಪಿಸ್ತಾಳೆ. ಆಗ ಸತ್ತು ಹೋದ ತಾಯಿ ಅಂಬಿಕಾ ರಕ್ಷಣೆ ಬರುತ್ತಾಳೆ.

ಶರತ್​ ಕಂಪೆನಿಯಲ್ಲಿ ಕೆಲಸ ಮಾಡುವ ಎಡವಟ್ಟು ದುರ್ಗಾ ತುಂಬಾ ಒಳ್ಳೆಯ ಸ್ವಭಾವದವಳಾಗಿದ್ದು, ಆಕೆಯನ್ನು ತನ್ನ ಪತಿಯ ಜೊತೆ ಮದ್ವೆ ಮಾಡಿಸಬೇಕು ಎನ್ನುವ ಆಸೆ ಅಂಬಿಕಾಗೆ. ಅವಳು ತಾನು ಯಾರೆಂದು ಹೇಳದೇ ದುರ್ಗಾಗೆ ಮಾತ್ರ ಕಾಣಿಸಿಕೊಂಡು ಫ್ರೆಂಡ್​ ಆಗಿದ್ದಾಳೆ. ಆದರೆ ಆಕೆಯ ಎಡವಟ್ಟಿನಿಂದ ಶರತ್​ಗೆ ಆಕೆಯನ್ನು ಕಂಡ್ರೆ ಇನ್ನಿಲ್ಲದ ಕೋಪ. ಆದರೆ, ಈಗ ಶರತ್​-ಅಂಬಿಕಾ ಮಗಳು ಹಿತಾಳನ್ನು ಕಾಪಾಡಲು ತನ್ನ ಜೀವವನ್ನೇ ಪಣಕ್ಕಿಟ್ಟಿದ್ದಾಳೆ. ಆಕೆಯ ಮೇಲೆ ಹಿತಾಳಿಗೂ ಅದಮ್ಯ ಪ್ರೀತಿ. ಅದೇ ಇನ್ನೊಂದೆಡೆ, ಪರಿಸ್ಥಿತಿ ಒತ್ತಡಕ್ಕೆ ಸಿಕ್ಕು ವಿಲನ್​ ಜೊತೆ ಶರತ್​ ಎಂಗೇಜ್​ಮೆಂಟ್​ ಆಗಿದೆ. ಮುಂದೇನು ಎನ್ನುವುದು ಸದ್ಯಕ್ಕಿರುವ ಕುತೂಹಲ. ನಾಯಕ ಶರತ್​ ಪಾತ್ರದಲ್ಲಿ ಶರತ್ ಪದ್ಮನಾಭ್ ಕಾಣಿಸಿಕೊಂಡಿದ್ದರೆ, ವಿಕ್ರಾಂತ್ ರೋಣ ಚಿತ್ರದಲ್ಲಿ ನಟಿಸಿದ್ದ ನೀತಾ ಅಶೋಕ್, ಅಂಬಿಕಾ ಪಾತ್ರದಲ್ಲಿದ್ದಾರೆ. ದುರ್ಗಾಗಳಾಗಿ ರಿಷಿಕಾ ಹಾಗೂ ವಿಲನ್​ ಆಗಿ ರುಹಾನಿ ಶೆಟ್ಟಿ ನಟಿಸುತ್ತಿದ್ದಾರೆ.