ನಟಿ ಶೆಫಾಲಿ ಜರಿವಾಲಾ ಅವರ ಹಠಾತ್ ನಿಧನ ದೇಶಾದ್ಯಂತ ಆಘಾತ ತಂದಿದೆ. ಸಾವಿಗೂ ಮೊದಲು ನಟಿ ಸತ್ಯನಾರಾಯಣ ಪೂಜೆಯಲ್ಲಿ ಭಾಗಿಯಾಗಿದ್ದರು. ಇದಕ್ಕಾಗಿ ಅವರು ದಿನವಿಡೀ ಉಪವಾಸವಿದ್ದರು ಎಂಬ ವಿಚಾರ ಈಗ ಬಯಲಾಗಿದೆ.

ನವದೆಹಲಿ: ಆರೋಗ್ಯವಾಗಿಯೇ ಚಟುವಟಿಕೆಯಿಂದ ಇದ್ದ ನಟಿ ಶೆಫಾಲಿ ಜರಿವಾಲಾ ಹಠಾತ್ ಸಾವು ದೇಶದ ಸಿನಿಮಾ ರಂಗ ಮಾತ್ರವಲ್ಲ, ಜನಸಾಮಾನ್ಯರನ್ನು ಕೂಡ ಆಘಾತಕ್ಕೀಡು ಮಾಡಿದೆ. ಈಗ ಅವರ ಕೊನೆಯ ಕ್ಷಣಗಳು ಹೇಗಿದ್ದವು, ಸಾವಿಗೂ ಮೊದಲು ಅವರು ಏನು ಮಾಡುತ್ತಿದ್ದರು ಎಂಬ ವಿಚಾರಗಳು ಬಯಲಾಗಿದ್ದು, ಅನೇಕರನ್ನು ಆಘಾತಕೀಡು ಮಾಡಿದೆ.

Add Asianetnews Kannada as a Preferred SourcegooglePreferred

ಶೆಫಾಲಿ ಜರಿವಾಲ ಸಾವನ್ನಪ್ಪಿದ ದಿನವೇ ಅವರ ಮನೆಯಲ್ಲಿ ಸತ್ಯನಾರಾಯಣ ದೇವರ ಪೂಜೆಯನ್ನು ಆಯೋಜಿಸಿದ್ದರು. ಅದರಲ್ಲಿ ಭಾಗಿಯಾಗುವುದಕ್ಕಾಗಿಯೇ ಬೆಳಗಿನಿಂದ ಉಪವಾಸದಲ್ಲಿದ್ದರು. ದಿನವಿಡೀ ಚಟುವಟಿಕೆಯಿಂದ ಓಡಾಡಿದ ಅವರು ಸಂಜೆಯ ವೇಳೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಜೂನ್ 27ರಂದು ಶುಕ್ರವಾರ ರಾತ್ರಿ ಶೆಫಾಲಿ ಜರಿವಾಲಾ ಮನೆಯಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದರು.

ಅವರ ಮರಣೋತ್ತರ ಪರೀಕ್ಷೆಯ ವರದಿ ಇನ್ನೂ ಬರಬೇಕಿದೆ, ಆದರೆ ಪೊಲೀಸ್ ತನಿಖೆ ಮತ್ತು ವೈದ್ಯಕೀಯ ಪರೀಕ್ಷೆಯು ಹೃದಯಾಘಾತದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದರೂ ಬಹುಶಃ ಉಪವಾಸ ಮತ್ತು ವೈದ್ಯರ ಮೇಲ್ವಿಚಾರಣೆ ಇಲ್ಲದ ವಯಸ್ಸಾಗುವಿಕೆ ವಿರೋಧಿ ಔಷಧಿಗಳ ಸಂಯೋಜನೆಯಿಂದ ಅವರ ಸಾವು ಉಂಟಾಗಿರಬಹುದು ಎಂಬ ಚರ್ಚೆ ವ್ಯಾಪಕವಾಗಿ ಹಬ್ಬಿದೆ.

ಮುಂಬೈನಲ್ಲಿರುವ ತಮ್ಮ ಮನೆಯಲ್ಲಿ ನಡೆದ ಸತ್ಯನಾರಾಯಣ ಪೂಜೆಯ ಭಾಗವಾಗಿ ಶೆಫಾಲಿ ಜರಿವಾಲಾ ಬೆಳಗ್ಗಿನಿಂದಲೇ ಉಪವಾಸ ಆಚರಿಸಿದರು. ಉಪವಾಸದ ಹೊರತಾಗಿಯೂ, ಶೆಫಾಲಿ ತಾವು ದಿನವೂ ತೆಗೆದುಕೊಳ್ಳುತ್ತಿದ್ದ ವಯಸ್ಸಾಗುವಿಕೆಯನ್ನು ಕಡಿಮೆ ಮಾಡುವ ಔಷಧಿಯನ್ನು ಸೇವಿಸಿದ್ದರು. ಜೊತೆಗೆ ಗ್ಲುಟಾಥಿಯೋನ್ ಇಂಜೆಕ್ಷನ್‌ನ ಸಹ ಪಡೆದಿದ್ದರು. ಪೊಲೀಸರ ಪ್ರಕಾರ ಅವರು ತಮ್ಮ ಯೌವ್ವನವನ್ನು ಕಾಯುವ ಗುರಿಯನ್ನು ಹೊಂದಿರುವ ಮಲ್ಟಿವಿಟಮಿನ್‌ಗಳು ಮತ್ತು ಕಾಲಜನ್ ಪೂರಕಗಳನ್ನು ಸಹ ತೆಗೆದುಕೊಳ್ಳುತ್ತಿದ್ದರು.

ಆದರೆ ಅದೇ ದಿನ ರಾತ್ರಿ 10.30 ರ ಸುಮಾರಿಗೆ ಶೆಫಾಲಿ ತಮ್ಮ ಮನೆಯಲ್ಲಿ ಕುಸಿದು ಬಿದ್ದಿದ್ದಾರೆ. ರಾತ್ರಿ 11.15 ಕ್ಕೆ ಅವರನ್ನು ಕುಟುಂಬದವರು ಅಂಧೇರಿ ಪಶ್ಚಿಮದಲ್ಲಿರುವ ಬೆಲ್ಲೆವ್ಯೂ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಅಲ್ಲಿ ಕರ್ತವ್ಯದಲ್ಲಿದ್ದ ವೈದ್ಯರು ಆಕೆ ಬರುವಷ್ಟರಲ್ಲಿಯೇ ಮೃತಪಟ್ಟಿರುವುದಾಗಿ ಘೋಷಿಸಿದರು. ನಂತರ ಮರಣೋತ್ತರ ಪರೀಕ್ಷೆಗಾಗಿ ಆಕೆಯ ದೇಹವನ್ನು ಕೂಪರ್ ಆಸ್ಪತ್ರೆಗೆ ಸ್ಥಳಾಂತರಿಸುವಂತೆ ಕುಟುಂಬಕ್ಕೆ ಸೂಚಿಸಿದರು. ರಾತ್ರಿ 11.30 ರ ಸುಮಾರಿಗೆ ಅಂಬೋಲಿ ಪೊಲೀಸ್ ಠಾಣೆಗೆ ಘಟನೆಯ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ರಾತ್ರಿ 11.45 ರ ಹೊತ್ತಿಗೆ ಪೊಲೀಸ್ ತಂಡವೊಂದು ಶೆಫಾಲಿ ಅವರ ನಿವಾಸ ಮತ್ತು ಕೂಪರ್ ಆಸ್ಪತ್ರೆಗೆ ತಲುಪಿ ಆರಂಭಿಕ ತನಿಖೆಯನ್ನು ಪ್ರಾರಂಭಿಸಿತು.

ಹಿಂದೂ ಸಂಸ್ಕೃತಿಯಲ್ಲಿ ಗಂಡನಿರುವಾಗಲೇ ಪತ್ನಿಯೊಬ್ಬಳು ತೀರಿಕೊಂಡರೆ ಅದನ್ನು ಮುತ್ತೈದೆ ಸಾವು ಎಂದು ಹೇಳಲಾಗುತ್ತದೆ. ಇದಕ್ಕೆ ಬಹಳ ಮಹತ್ವವಿದೆ. ಹಾಗೂ ಮುತೈದೆ ಸಾವನ್ನು ಅನೇಕ ಹೆಂಗೆಳೆಯರು ಬಯಸುತ್ತಾರೆ. ಮುತ್ತೈದೆ ಸಾವು ಸಿಗಲಪ್ಪ ಎಂದು ಅನೇಕರು ಬೇಡುತ್ತಾರೆ. ಹಾಗೆ ನೋಡಿದರೆ ಬಹುತೇಕ ಹೆಂಗೆಳೆಯರು ಬಯಸುವ ಮುತ್ತೈದೆ ಸಾವು ಶೆಫಾಲಿಗೆ ಸಿಕ್ಕಿದೆ. ಗಂಡ ಹೆಂಡತಿ ಜೊತೆಗೆ ಕುಳಿತು ಮಾಡುವ ಸತ್ಯನಾರಾಯಣ ಪೂಜೆಯಲ್ಲೂ ಅವರು ಸಾವಿಗೂ ಮೊದಲು ಭಾಗಿಯಾಗಿದ್ದಾರೆ. ಹಾಗೆ ನೋಡಿದರೆ ಆಕೆಯದ್ದು ಪುಣ್ಯ ಮಾಡಿ ಸಿಕ್ಕಂತಹ ಸಾವು. ಆದರೆ ವೃದ್ಧ ತಂದೆ ತಾಯಿಗೆ ಮಾತ್ರ ಜೀವ ಇರುವಷ್ಟು ದಿನಕ್ಕೂ ಅದೊಂದು ನೋವಾಗಿ ಕಾಡುವುದಂತು ಸತ್ಯ.