ಹಿರಿಯ ನಟ ದ್ವಾರಕೀಶ್ ಅವರ ಸೊಸೆ ವರ್ಷಾ ರೈ ವಿರುದ್ಧ ಹಣಕಾಸು ವಂಚನೆಯ ಗಂಭೀರ ಆರೋಪ ಕೇಳಿಬಂದಿದೆ. ಚೀಟಿ ವ್ಯವಹಾರ, ಚಿನ್ನ ಹಾಗೂ ಹಣ ಪಡೆದು ಮೋಸ ಮಾಡಿರುವ ಬಗ್ಗೆ ಹತ್ತಕ್ಕೂ ಹೆಚ್ಚು ಜನರು ದೂರು ನೀಡಿದ್ದಾರೆ.

ಬೆಂಗಳೂರು (ಮಾ.9): ಹಿರಿಯ ನಟ ದ್ವಾರಕೀಶ್ ಅವರ ಕುಟುಂಬದ ಸದಸ್ಯೆಯೊಬ್ಬರು ಈಗ ಬೀದಿ ರಂಪಾಟ ಹಾಗೂ ವಂಚನೆ ಪ್ರಕರಣದಲ್ಲಿ ಸಿಲುಕಿಕೊಂಡಿದ್ದಾರೆ. ದ್ವಾರಕೀಶ್ ಅವರ ಎರಡನೇ ಪತ್ನಿ ಶೈಲಜಾ ಕುಮಾರಿ ಅವರ ಪುತ್ರ ಸಮರ್ಥ್ ಅವರ ಪತ್ನಿ ವರ್ಷಾ ರೈ ವಿರುದ್ಧ ಹತ್ತಕ್ಕೂ ಹೆಚ್ಚು ಜನರು ವಂಚನೆಯ ದೂರು ನೀಡಿದ್ದಾರೆ. ವರ್ಷಾ ರೈ ಅವರ ಬಳಿ ಹಣಕಾಸಿನ ವ್ಯವಹಾರ ನಡೆಸಿದ್ದ ರಮಣ ರೆಡ್ಡಿ ಎಂಬುವವರು ತಾವು ನೀಡಿದ್ದ 6 ಲಕ್ಷ ರೂಪಾಯಿಗಳನ್ನು ವಾಪಸ್ ಕೇಳಲು ಹೋಗಿದ್ದರು. ಈ ವೇಳೆ ವರ್ಷಾ ರೈ ಅವರು ರಮಣ ರೆಡ್ಡಿ ಅವರ ಮೇಲೆ ಬೀದಿಯಲ್ಲೇ ಪೊರಕೆಯಿಂದ ಹಲ್ಲೆ ನಡೆಸಿದ್ದಾರೆ. ಈ ಇಡೀ ಗಲಾಟೆಯ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

Add Asianetnews Kannada as a Preferred SourcegooglePreferred

ವಂಚನೆಯ ಜಾಲ ಹೇಗಿತ್ತು?

ವರ್ಷಾ ರೈ ಕಳೆದ ಮೂರು ವರ್ಷಗಳಿಂದ ವಿವಿಧ ರೀತಿಯಲ್ಲಿ ಜನರಿಗೆ ಮೋಸ ಮಾಡುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಚೀಟಿ ಹಾಕುವುದಾಗಿ ನಂಬಿಸಿ ಹಣ ಪಡೆದು ವಂಚನೆ ಮಾಡಿದ್ದಾರೆ ಎಂದು ಹಲವರು ಆರೋಪಿಸಿದ್ದಾರೆ. ದಿನಸಿ ಅಂಗಡಿಗೆ ಬರುವವರೊಂದಿಗೆ ಆತ್ಮೀಯತೆ ಬೆಳೆಸಿ, ಹಣ ಹೂಡಿಕೆ ಮಾಡುವಂತೆ ಆಸೆ ತೋರಿಸಿ ಪಂಗನಾಮ ಹಾಕಿದ್ದಾರೆ ಎನ್ನಲಾಗಿದೆ. ಸುಮಾರು 110 ಗ್ರಾಂ ಚಿನ್ನದ ಆಭರಣಗಳನ್ನು ಪಡೆದು ವಾಪಸ್ ನೀಡದೆ ವಂಚಿಸಿರುವ ಆರೋಪವನ್ನೂ ಹೊರಿಸಲಾಗಿದೆ. ಸುಕನ್ಯಾ ಎಂಬುವವರಿಂದ 35 ಸಾವಿರ ರೂಪಾಯಿ ಪಡೆದು ವಂಚಿಸಿರುವುದು ಸೇರಿದಂತೆ ಹತ್ತಕ್ಕೂ ಹೆಚ್ಚು ಜನರಿಂದ ದೂರು ದಾಖಲಾಗಿದೆ.

ಠಾಣೆಯಲ್ಲೇ ಬೆದರಿಕೆ!

ತಮ್ಮ ಹಣ ವಾಪಸ್ ಕೇಳಲು ಹೋದವರ ಮೇಲೆ ವರ್ಷಾ ರೈ ರೌಡಿಸಂ ಮಾಡುತ್ತಾರೆ ಹಾಗೂ ಪೊಲೀಸರಿಗೆ ಸುಳ್ಳು ದೂರು ನೀಡುವುದಾಗಿ ಬೆದರಿಕೆ ಹಾಕುತ್ತಾರೆ ಎಂದು ಸಂತ್ರಸ್ತರು ಆರೋಪಿಸಿದ್ದಾರೆ. ಈಗಾಗಲೇ ಆರ್.ಆರ್. ನಗರ ಹಾಗೂ ಕೆಂಗೇರಿ ಪೊಲೀಸ್ ಠಾಣೆಗಳಲ್ಲಿ ವರ್ಷಾ ರೈ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿದ್ದು, ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಮಹಾನ್ ನಟನ ಹೆಸರಿಗೆ ಕಳಂಕ ತರುತ್ತಿರುವ ಇಂತಹ ಕೃತ್ಯಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.