ಭಾಗ್ಯಲಕ್ಷ್ಮಿ ಪೂಜಾಳ ಮದುವೆಯನ್ನು ನಿಲ್ಲಿಸಲು ಹೊರಟಿದ್ದರೆ, ಆಕೆಯ ಒಳ್ಳೆಯತನದ ಬಗ್ಗೆ ನೋಡಿ ಆದಿ ಮದುವೆಯನ್ನು ಮಾಡಿಸಲು ಮುಂದಾಗಿದ್ದಾನೆ. ನೆಟ್ಟಿಗರು ಏನ್​ ಹೇಳ್ತಿದ್ದಾರೆ ನೋಡಿ... 

ಭಾಗ್ಯಲಕ್ಷ್ಮಿ ಸೀರಿಯಲ್​ ಸದ್ಯ ಚಿತ್ರ-ವಿಚಿತ್ರ ತಿರುವುಗಳನ್ನು ಪಡೆದುಕೊಳ್ಳುತ್ತಲೇ ಸಾಗಿದೆ. ಒಬ್ಬ ಹೆಣ್ಣಿಗೆ ಅದೆಷ್ಟು ಹಿಂಸೆ ಕೊಡಬಹುದೋ ಅವೆಲ್ಲವನ್ನೂ ನಾಯಕಿ ಭಾಗ್ಯಳಿಗೆ ನೀಡಲಾಗುತ್ತಿದೆ. ಆದರೆ ವಿಚಿತ್ರ ಎಂದರೆ, ಪತಿಯೇ ಪರದೈವ ಎಂದುಕೊಂಡಿರೋ ಭಾಗ್ಯ, ಪತಿ ಬೇರೆ ಮದುವೆಯಾದರೂ ಆತನಿಗಾಗಿ ಎಲ್ಲಾ ಸಹಾಯವನ್ನೂ ಮಾಡುತ್ತಿದ್ದಾಳೆ. ಅದು ಎಷ್ಟರಮಟ್ಟಿಗೆ ಎಂದರೆ ಪೂಜಾಳ ಮದುವೆ ನಿಲ್ಲಿಸಲು ಬಂದ ತಾಂಡವ್​ನನ್ನು ಅವನ ಅಮ್ಮನೇ ಕಷ್ಟಪಟ್ಟು ಹಿಡಿದು ಕಟ್ಟಿ ಹಾಕಿದರೆ, ಪತಿವ್ರತೆಯಾಗಿರೋ ಭಾಗ್ಯ ಹೋಗಿ ಬಿಡಿಸಿಕೊಂಡು ಬಂದಿದ್ದಾಳೆ. ಅತ್ತ ತಾಂಡವ್​ ಮದುವೆ ನಿಲ್ಲಿಸಲು ಮುಂದಾಗಿದ್ದರೆ, ಇತ್ತ ಕನ್ನಿಕಾ, ಅವಳ ಅತ್ತೆ, ಆದಿ... ಅಬ್ಬಬ್ಬಾ ಒಬ್ರಾ... ಇಬ್ರಾ...

ಇವೆಲ್ಲಾ ನೋಡಿ ಹುಚ್ಚು ಹಿಡಿಯುತ್ತಿದೆ ಎಂತಿರೋ ನೆಟ್ಟಿಗರು ಇದೀಗ ಹೊಸ ಪ್ರೊಮೋ ನೋಡಿ ನಿಜವಾಗ್ಲೂ ಹುಚ್ಚಾಸ್ಪತ್ರೆಗೆ ಸೇರ್ತೇನೆ ಎನ್ನುತ್ತಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಪೂಜಾ ಮದುವೆಯಾದರೂ ಆಕೆಯನ್ನು ನೆಮ್ಮದಿಯಿಂದ ಇರಲು ಕೊಡುವುದಿಲ್ಲ ಎಂದು ಅತ್ತೆ ಹೇಳಿದ ಮಾತನ್ನು ಭಾಗ್ಯ ಕೇಳಿಸಿಕೊಂಡಿದ್ದಾಳೆ. ಅದೇ ಇನ್ನೊಂದೆಡೆ ಆಸ್ತಿಗಾಗಿ ಈ ಮದುವೆ ಮಾಡುತ್ತಿದ್ದೀರಿ ಎಂದು ಭಾಗ್ಯಳನ್ನು ಆದಿ ಚುಚ್ಚಿದ ಕಾರಣದಿಂದ ಮದುವೆಯನ್ನು ಭಾಗ್ಯ ನಿಲ್ಲಿಸಿದ್ದಾಳೆ. ಯಾವುದೇ ಕಾರಣಕ್ಕೂ ಮದುವೆ ಆಗಬಾರದು ಎಂದಿದ್ದಾಳೆ. ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ನೆಟ್ಟಿಗರು ಇನ್ನಿಲ್ಲದಂತೆ ಬೈಗುಳಗಳ ಸುರಿಮಳೆಯನ್ನೇಗೈದಿದ್ದರು.

ಆದರೆ ಇದೀಗ ಮತ್ತೊಂದು ಪ್ರೊಮೊ ಹೊರಬಂದಿದೆ. ಅದರಲ್ಲಿ ಆದಿಗೆ ತಾನು ಮಾಡಿದ ತಪ್ಪಿನ ಅರಿವಾಗಿದೆ. ಭಾಗ್ಯಳ ಸ್ವಾಭಿಮಾನ ಆತನಿಗೆ ತಿಳಿದಿದೆ. ಒಂದು ವೇಳೆ ಆಸ್ತಿಗಾಗಿ ಪೂಜಾಳ ಮದುವೆಯನ್ನು ಭಾಗ್ಯ ಮಾಡಿಸುತ್ತಿದ್ದರೆ, ಅವಳು ಈ ಮದುವೆಯನ್ನು ನಿಲ್ಲಿಸುತ್ತಿರಲಿಲ್ಲ. ನಾನು ತಪ್ಪು ಮಾಡುತ್ತಿದ್ದೇನೆ. ಈ ಮದುವೆ ನಿಲ್ಲಬಾರದು ಎಂದು ಆದಿ ಹೇಳುತ್ತಿದ್ದು, ಅದರ ಪ್ರೊಮೋ ಬಿಡುಗಡೆ ಮಾಡಲಾಗಿದೆ. ಇದನ್ನು ನೋಡಿ ನೆಟ್ಟಿಗರು ತಲೆ ಚಚ್ಚಿಕೊಳ್ಳುತ್ತಿದ್ದಾರೆ. ಅಯಯ್ಯೋ ಹುಚ್ಚು ಹಿಡೀತಿದೆ ಎಂದು ಶಪಿಸುತ್ತಿದ್ದಾರೆ. ಮತ್ತೆ ಕೆಲವರು ಕಣ್ಣನ್ನು ಕಿತ್ಕೊಂಡ್​ ಬಿಡು ದೇವ್ರೇ ಎನ್ನುತ್ತಿದ್ದಾರೆ.

ಹಾಗೆಂದು, ಸೀರಿಯಲ್​ ಪ್ರೇಮಿಗಳು ಧಾರಾವಾಹಿ ನೋಡುವುದನ್ನು ಬಿಡುತ್ತಾರೆ ಅಂತೇನಲ್ಲ. ಬೈಯುತ್ತಲೇ, ಟ್ರೋಲ್​ ಮಾಡುತ್ತಲೇ ಪ್ರತಿಯೊಂದು ಎಪಿಸೋಡ್​ಗಳನ್ನೂ ಚಾಚೂತಪ್ಪದೆ ನೋಡುತ್ತಾರೆ. ಅದು ಸೀರಿಯಲ್​ ನಿರ್ದೇಶಕರಿಗೂ ಗೊತ್ತು. ಅದಕ್ಕಾಗಿಯೇ ಟಿಆರ್​ಪಿ ಇರುವಷ್ಟು ದಿನ ಎಷ್ಟು ಸಾಧ್ಯನೋ ಅಷ್ಟು ಸೀರಿಯಲ್​ಗಳನ್ನು ಎಳೆಯುತ್ತಲೇ ಸಾಗುತ್ತಾರೆ. ಸದ್ಯದ ಸ್ಥಿತಿ ನೋಡಿದರೆ ಭಾಗ್ಯಲಕ್ಷ್ಮಿ ಇನ್ನೂ ನಾಲ್ಕೈದು ವರ್ಷ ಎಳೆದರೂ ಅಚ್ಚರಿಯೇನಿಲ್ಲ.

View post on Instagram