2002ರಲ್ಲಿ ಅಮಿತಾಭ್ ಬಚ್ಚನ್ 60ನೇ ಹುಟ್ಟುಹಬ್ಬದಲ್ಲಿ ಅಭಿಷೇಕ್ ಮತ್ತು ಕರೀಷ್ಮಾ ನಿಶ್ಚಿತಾರ್ಥವನ್ನು ಘೋಷಿಸಲಾಗಿತ್ತು. ಆದರೆ, ಕೆಲವೇ ತಿಂಗಳುಗಳಲ್ಲಿ ಈ ನಿಶ್ಚಿತಾರ್ಥ ಮುರಿದುಬಿದ್ದಿತ್ತು! ಇಂದಿನವರೆಗೂ ಈ ಬ್ರೇಕಪ್‌ಗೆ ನಿಖರ ಕಾರಣ ಏನೆಂಬುದು ತಿಳಿದಿರಲಿಲ್ಲ. ಈಗ ಸೀಕ್ರೆಟ್ ರಿವೀಲ್ ಆಯ್ತು!

ಮುಂಬೈ: ಬಾಲಿವುಡ್‌ನ ಇತಿಹಾಸದಲ್ಲಿ ಕೆಲವು ಪ್ರೇಮಕಥೆಗಳು ಮತ್ತು ಮುರಿದುಬಿದ್ದ ಸಂಬಂಧಗಳು ದಶಕಗಳು ಕಳೆದರೂ ಚರ್ಚೆಯಲ್ಲೇ ಇರುತ್ತವೆ. ಅಂತಹ ಒಂದು ಸಂಬಂಧವೆಂದರೆ ನಟ ಅಭಿಷೇಕ್ ಬಚ್ಚನ್ (Abhishek Bachchan) ಮತ್ತು ನಟಿ ಕರೀಷ್ಮಾ ಕಪೂರ್ (Karishma Kapoor) ಅವರದ್ದು. ನಿಶ್ಚಿತಾರ್ಥದವರೆಗೂ ತಲುಪಿ, ಮದುವೆಯ ಹೊಸ್ತಿಲಲ್ಲಿದ್ದ ಈ ಜೋಡಿ ಇದ್ದಕ್ಕಿದ್ದಂತೆ ಬೇರೆಯಾಗಿದ್ದು ಇಂದಿಗೂ ಹಲವರಿಗೆ ಒಂದು ನಿಗೂಢ. ಇದೀಗ, ಈ ಜೋಡಿಯನ್ನು ಹಾಕಿಕೊಂಡು 'ಹಾಂ ಮೈನೆ ಭಿ ಪ್ಯಾರ್ ಕಿಯಾ' ಚಿತ್ರವನ್ನು ನಿರ್ದೇಶಿಸಿದ್ದ ಖ್ಯಾತ ನಿರ್ದೇಶಕ ಸುನೀಲ್ ದರ್ಶನ್, ಈ ಸಂಬಂಧ ಮುರಿದುಬೀಳಲು ಕಾರಣವಾಗಿರಬಹುದಾದ ಅಂಶಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ಇತ್ತೀಚಿನ ಸಂದರ್ಶನವೊಂದರಲ್ಲಿ ಮಾತನಾಡಿದ ಸುನೀಲ್ ದರ್ಶನ್, ಕರೀಷ್ಮಾ ಕಪೂರ್ ಅವರ ತಾಯಿ ಮತ್ತು ಹಿರಿಯ ನಟಿ ಬಬಿತಾ ಅವರ ಪಾತ್ರದ ಬಗ್ಗೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದಾರೆ. ಕರೀಷ್ಮಾ ಮತ್ತು ಅಭಿಷೇಕ್ ಬೇರೆಯಾಗಲು ಬಬಿತಾ ಅವರೇ ಕಾರಣವೇ ಎಂಬ ಪ್ರಶ್ನೆಗೆ, ಅವರು ಅತ್ಯಂತ ಜಾಣ್ಮೆಯಿಂದ ಉತ್ತರಿಸಿದ್ದಾರೆ.

"ಬಬಿತಾ ದೇವರಲ್ಲ, ತಾಯಿಯಾಗಿ ತಪ್ಪು ಮಾಡಿರಬಹುದು"!

ಸುನೀಲ್ ದರ್ಶನ್ ಹೇಳುವಂತೆ, "ಬಬಿತಾ ಅವರೊಬ್ಬರು ದೇವರು ಎಂದು ನಾನು ಹೇಳುವುದಿಲ್ಲ. ಅವರಿಂದಲೂ ತಪ್ಪುಗಳಾಗಿರಬಹುದು. ಪ್ರತಿಯೊಬ್ಬ ತಾಯಿಯೂ ತನ್ನ ಮಗಳ ಭವಿಷ್ಯದ ಬಗ್ಗೆ ಯೋಚಿಸುತ್ತಾರೆ. ತನ್ನ ಮಗಳಿಗೆ ಅತ್ಯುತ್ತಮವಾದದ್ದೇ ಸಿಗಬೇಕು ಎಂದು ಬಯಸುತ್ತಾರೆ. ಈ ಪ್ರಕ್ರಿಯೆಯಲ್ಲಿ, ತನ್ನ ಮಗಳ ಭವಿಷ್ಯದ ಬಗ್ಗೆ ಅತಿಯಾದ ರಕ್ಷಣಾತ್ಮಕ ಮನೋಭಾವವನ್ನು ಅವರು ಹೊಂದಿದ್ದರು.

ಬಹುಶಃ, ಆ ರಕ್ಷಣಾತ್ಮಕ ಧೋರಣೆಯೇ ಎಲ್ಲೋ ಒಂದು ಕಡೆ ತಪ್ಪಾಗಿರಬಹುದು," ಎಂದು ಅವರು ವಿಶ್ಲೇಷಿಸಿದ್ದಾರೆ. ಅವರ ಪ್ರಕಾರ, ಬಬಿತಾ ಅವರು ತಮ್ಮ ಮಗಳ ಜೀವನವನ್ನು ಸುರಕ್ಷಿತವಾಗಿರಿಸುವ ಪ್ರಯತ್ನದಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿರಬಹುದು. ಅದು ಪರೋಕ್ಷವಾಗಿ ಈ ಸಂಬಂಧದ ಮೇಲೆ ಪರಿಣಾಮ ಬೀರಿರಬಹುದು ಎಂಬ ಸೂಚನೆಯನ್ನು ಅವರು ನೀಡಿದ್ದಾರೆ.

"ಅವರಿಬ್ಬರು ಒಬ್ಬರಿಗೊಬ್ಬರು ಸೃಷ್ಟಿಯಾಗಿರಲಿಲ್ಲ"!

ಕೇವಲ ಬಬಿತಾ ಅವರ ಪಾತ್ರದ ಬಗ್ಗೆ ಮಾತ್ರವಲ್ಲದೆ, ಅಭಿಷೇಕ್ ಮತ್ತು ಕರೀಷ್ಮಾ ನಡುವಿನ ಹೊಂದಾಣಿಕೆಯ ಬಗ್ಗೆಯೂ ಸುನೀಲ್ ದರ್ಶನ್ ಮಾತನಾಡಿದ್ದಾರೆ. "ನನಗೆ ಅನಿಸಿದ ಮಟ್ಟಿಗೆ, ಅವರಿಬ್ಬರೂ ಒಬ್ಬರಿಗೊಬ್ಬರು ಸೃಷ್ಟಿಯಾಗಿರಲಿಲ್ಲ (not made for each other). ಅವರಿಬ್ಬರ ನಡುವೆ ಹೊಂದಾಣಿಕೆಯ ಕೊರತೆ ಇತ್ತು. ನಾನು ಅವರೊಂದಿಗೆ ಕೆಲಸ ಮಾಡುವಾಗ ಇದನ್ನು ಹತ್ತಿರದಿಂದ ಗಮನಿಸಿದ್ದೇನೆ. ಒಂದು ವೇಳೆ ಅವರ ಮದುವೆ ಆಗಿದ್ದರೂ, ಆ ಸಂಬಂಧ ಎಷ್ಟು ದಿನ ಉಳಿಯುತ್ತಿತ್ತೋ ಹೇಳಲು ಸಾಧ್ಯವಿಲ್ಲ," ಎಂದು ಅವರು ತಮ್ಮ ವೈಯಕ್ತಿಕ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

2002ರಲ್ಲಿ ಅಮಿತಾಭ್ ಬಚ್ಚನ್ ಅವರ 60ನೇ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಅಭಿಷೇಕ್ ಮತ್ತು ಕರೀಷ್ಮಾ ಅವರ ನಿಶ್ಚಿತಾರ್ಥವನ್ನು ಘೋಷಿಸಲಾಗಿತ್ತು. ಆದರೆ, ಕೆಲವೇ ತಿಂಗಳುಗಳಲ್ಲಿ ಈ ನಿಶ್ಚಿತಾರ್ಥ ಮುರಿದುಬಿದ್ದಿದ್ದು ಇಡೀ ಚಿತ್ರರಂಗಕ್ಕೆ ಆಘಾತ ನೀಡಿತ್ತು. ಅಂದಿನಿಂದ ಇಂದಿನವರೆಗೂ ಈ ಬ್ರೇಕಪ್‌ಗೆ ನಿಖರ ಕಾರಣ ಏನೆಂಬುದು ಅಧಿಕೃತವಾಗಿ ತಿಳಿದುಬಂದಿಲ್ಲ. ಇದೀಗ ಸುನೀಲ್ ದರ್ಶನ್ ಅವರ ಈ ಹೇಳಿಕೆಯು, ಎರಡು ದಶಕಗಳ ಹಿಂದಿನ ಈ ಹೈ-ಪ್ರೊಫೈಲ್ ಬ್ರೇಕಪ್ ಕುರಿತ ಚರ್ಚೆಯನ್ನು ಮತ್ತೆ ಮುನ್ನೆಲೆಗೆ ತಂದಿದೆ.