Asianet Suvarna News Asianet Suvarna News

ನಡುರಸ್ತೆಯಲ್ಲಿ ಗಾಡಿ ಕೆಟ್ಟೋದ್ರೆ ಏನ್‌ ಮಾಡ್ಬಹುದು: ನೋಡಿ ವೈರಲ್ ವಿಡಿಯೋ

ಸಾಮಾನ್ಯವಾಗಿ ವಾಹನಗಳು ನಡುರಸ್ತೆಯಲ್ಲಿ ಹಾಳಾದರೆ ಪಡಬಾರದ ಪಾಡು ಪಡುವ ಸಂದರ್ಭ ನಿರ್ಮಾಣವಾಗುತ್ತದೆ. ಮುಂದೆ ಹೋಗಲಾಗದೆ ಹಿಂದೆ ಬರಲಾಗದೆ ಅನುಭವಿಸುವ ಪಾಡು ದೇವರಿಗೆ ಪ್ರೀತಿ.

Bharuch Auto Rikshaw Driver Started Dancing After His Auto Gets Stuck In Heavy Rain akb
Author
Mumbai, First Published Jul 20, 2022, 12:51 PM IST

ಸಾಮಾನ್ಯವಾಗಿ ವಾಹನಗಳು ನಡುರಸ್ತೆಯಲ್ಲಿ ಹಾಳಾದರೆ ಪಡಬಾರದ ಪಾಡು ಪಡುವ ಸಂದರ್ಭ ನಿರ್ಮಾಣವಾಗುತ್ತದೆ. ಮುಂದೆ ಹೋಗಲಾಗದೆ ಹಿಂದೆ ಬರಲಾಗದೆ ಅನುಭವಿಸುವ ಪಾಡು ದೇವರಿಗೆ ಪ್ರೀತಿ. ಸಮೀಪದಲ್ಲೇ ಗ್ಯಾರೇಜ್‌ಗಳಿದ್ದರೆ ತೊಂದರೆ ಇಲ್ಲ. ದೂರವೆಲ್ಲೋ ಇದ್ದರೆ ವಾಹನವನ್ನು ತಳ್ಳಿಕೊಂಡು ಸಾಗಿಸುವ ಕಷ್ಟ ದೇವರೇ ಬಲ್ಲ. ನಡುರಸ್ತೆಯಲ್ಲಿ ವಾಹನ ಕೈಕೊಟ್ಟಿದ್ದಲ್ಲಿ ಈ ರೀತಿಯ ಅನುಭವ ಅನೇಕರಿಗೆ ಆಗಿರಬಹುದು. ಆದರೆ ಇಲ್ಲೊಬ್ಬ ಆಟೋ ಚಾಲಕ ನಡುರಸ್ತೆಯಲ್ಲಿ ತನ್ನ ಆಟೋ ಹಾಳಾಗಿದ್ದರೂ ಸ್ವಲ್ಪವೂ ತಲೆಕೆಡಿಸಿಕೊಳ್ಳದೇ ಹಾಯಾಗಿ ಡಾನ್ಸ್ ಮಾಡುತ್ತಿದ್ದಾನೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಮಳೆಯಿಂದಾಗಿ ನಡುರಸ್ತೆಯಲ್ಲಿ ನೀರು ಉಕ್ಕಿ ಹರಿಯುತ್ತಿದ್ದು, ರಸ್ತೆಯೇ ನದಿಯಂತಾಗಿದೆ. ಇಂತಹ ನೀರು ತುಂಬಿದ ರಸ್ತೆಯಲ್ಲಿ ಆಟೋ ಚಲಾಯಿಸಿಕೊಂಡು ಚಾಲಕ ಬಂದಿದ್ದು, ಸ್ವಲ್ಪ ದೂರ ಸಾಗಬೇಕಾದರೆ ಆಟೋ ದಾರಿಮಧ್ಯೆ ಕೈ ಕೊಟ್ಟಿದೆ. ಆದರೆ ಚಾಲಕ ಈ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆಟೋದಿಂದ ಇಳಿದವನೇ ಮೊಣಕಾಲೆತ್ತರದ ನೀರಿನಲ್ಲಿ ಸಖತ್ ಆಗಿ ಹೆಜ್ಜೆ ಹಾಕಿದ್ದಾನೆ. ಸಂಕಟದ ಕ್ಷಣದಲ್ಲೂ ಈತ ಕೂಲಾಗಿ ಡಾನ್ಸ್‌ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಮಳೆ ನೀರಲ್ಲಿ ಮುಳುಗಿದ ಕರ್ನಾಟಕದ ಕರುಣಾಜನಕ ಚಿತ್ರಗಳು!

ಹೀಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಆಟೋ ಚಾಲಕನ ಹೆಸರು ನರೇಶ್ ಸಂದರ್ವಾ. ಈತ ಗುಜರಾತ್‌ನ ಭರೂಚ್ ಜಿಲ್ಲೆಯ ನಿವಾಸಿ. ಪ್ರತಿಯೊಬ್ಬರೂ ವಿಭಿನ್ನ ವ್ಯವಸ್ಥೆಗೆ ತಮ್ಮನ್ನು ತಾವು ಹೊಂದಿಸಿಕೊಳ್ಳುತ್ತಾರೆ ಎಂದು ಆಟೋ ಚಾಲಕ ಈ ನೃತ್ಯದ ಬಗ್ಗೆ ಪ್ರತಿಕ್ರಿಯಿಸಿದ್ದಾನೆ. ದೇಶಾದ್ಯಂತ ಈ ಬಾರಿ ಮುಂಗಾರು ಮಳೆ ಭಾರಿ ಅವಾಂತರವನ್ನು ಸೃಷ್ಟಿಸಿದೆ. ಮಳೆಯ ರೌದ್ರ ನರ್ತನಕ್ಕೆ ದೇಶದ ಹಲವೆಡೆ ಅನೇಕ ರಸ್ತೆಗಳು, ಸೇತುವೆಗಳು ಕೊಚ್ಚಿ ಹೋಗಿವೆ. ಹಲವೆಡೆ ರಸ್ತೆಗಳು ನದಿಗಳ ರೂಪ ತಾಳಿದ್ದವು. ಹಲವು ಕಡೆಗಳಲ್ಲಿ ಭೂ ಕುಸಿತದಿಂದಾಗಿ ರಸ್ತೆಗಳೇ ಕೊಚ್ಚಿ ಹೋಗಿದ್ದು ಸಂಪರ್ಕ ಕಡಿತಗೊಂಡಿವೆ. ಮಹಾರಾಷ್ಟ್ರದಲ್ಲಿ ಮಳೆಯಿಂದಾಗಿ ತುಂಬಿ ಹರಿಯುತ್ತಿದ್ದ ಸೇತುವೆ ದಾಟಲು ಹೋದ ಪರಿಣಾಮ ಕಾರೊಂದು ನೀರಿನಲ್ಲಿ ಕೊಚ್ಚಿ ಹೋಗಿ ಒಂದೇ ಕುಟುಂಬದ ಆರು ಜನ ಸಾವಿಗೀಡಾಗಿದ್ದರು.

 

ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಕೆಲ್ವಾಡ್‌ನ ನಂದಗೌಮುಖ ಎಂಬಲ್ಲಿ ಈ ದುರಂತ ಸಂಭವಿಸಿತ್ತು. ಉಕ್ಕಿ ಹರಿಯುತ್ತಿದ್ದ ಸಣ್ಣ ಹೊಳೆಯೊಂದನ್ನು ದಾಟುತ್ತಿದ್ದಾಗ ನೀರಿನ ರಭಸಕ್ಕೆ ಸಿಲುಕಿ ಕಾರು ಕೊಚ್ಚಿ ಹೋಗಿತ್ತು. ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ವೀಡಿಯೋದಲ್ಲಿ, ವಾಹನವು ಪ್ರವಾಹದ ನಡುವೆ ಸಿಲುಕಿಕೊಂಡಿದ್ದು,  ಜನಸಮೂಹವು ಏನೂ ಮಾಡಲಾಗದೇ ಅಸಹಾಯಕರಾಗಿ ಹೊಳೆಯ ಬದಿಯಲ್ಲಿ ನಿಂತಿರುವುದನ್ನು ಕಾಣಬಹುದು. ಈ ವೇಳೆ ಕೆಲವರು ತಮ್ಮ ಮೊಬೈಲ್ ಕ್ಯಾಮೆರಾಗಳಲ್ಲಿ ದುರಂತವನ್ನು ರೆಕಾರ್ಡ್‌ ಮಾಡುತ್ತಿದ್ದರು. 

ಕೊಡುಗು ಜಿಲ್ಲಾಧಿಕಾರಿಗೆ ತಟ್ಟಿದ ಮಳೆ ಅವಾಂತರದ ಬಿಸಿ

ಇತ್ತ  ರಾಜ್ಯದ ಕೊಡಗು ಮತ್ತು ಚಿಕ್ಕಮಗಳೂರು ಜಿಲ್ಲೆಗಳ ಮಲೆನಾಡು ಭಾಗದಲ್ಲಿ ನಿರಂತವಾಗಿ ಸುರಿಯುತ್ತಿರುವ ಭಾರಿ ಮಳೆಗೆ ಅನೇಕ ಕಡೆ ಭೂಕುಸಿತ, ರಸ್ತೆಕುಸಿತಗಳಾಗುವುದರೊಂದಿಗೆ ಮನೆ, ಸಾರ್ವಜನಿಕ ಕಟ್ಟಡಗಳೂ ಕುಸಿಯುತ್ತಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಕಾಫಿತೋಟಗಳಲ್ಲಿ ಮಣ್ಣು ಕುಸಿದು ಅಪಾರ ಹಾನಿಯಾಗಿದೆ. ಮಹಾರಾಷ್ಟ್ರದ ಘಟ್ಟಪ್ರದೇಶ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತದರ ಉಪನದಿಗಳ ಮಟ್ಟಹೆಚ್ಚಳಗೊಂಡಿದ್ದು ನದಿತೀರ ಪ್ರದೇಶಗಳು ಪ್ರವಾಹ ಭೀತಿಯನ್ನು ಎದುರಿಸುತ್ತಿವೆ. 
 

Follow Us:
Download App:
  • android
  • ios