ಗುಜರಾತ್‌ನಲ್ಲಿ 'ದೃಶ್ಯಂ' ಸಿನಿಮಾ ಮಾದರಿಯ ಘಟನೆ ನಡೆದಿದೆ. ಪತಿಯನ್ನು ಕೊಲೆ ಮಾಡಿದ ಪತ್ನಿ, ಆತ ಆಸ್ಟ್ರೇಲಿಯಾಕ್ಕೆ ಹೋಗಿದ್ದಾನೆಂದು ಎರಡು ವರ್ಷಗಳ ಕಾಲ ಎಲ್ಲರನ್ನೂ ನಂಬಿಸಿದ್ದಳು. ಆದರೆ, ಮನೆಯ ಕಾಂಕ್ರೀಟ್ ನೆಲದಡಿಯಲ್ಲೇ ಆತನ ಶವ ಪತ್ತೆಯಾಗಿದೆ.

'ದೃಶ್ಯಂ' ಸಿನಿಮಾ ನೋಡಿದವರಿಗೆ ಈ ಥ್ರಿಲ್ಲರ್​ ಸ್ಟೋರಿ ರೋಮಾಂಚನ ಸೃಷ್ಟಿಸಿತ್ತು. ನಾಯಕ ವಿಜಯ್ ಮಗಳನ್ನು ಪೊಲೀಸ್ ಅಧಿಕಾರಿಯ ಮಗ ಬ್ಲಾಕ್‌ಮೈಲ್ ಮಾಡುತ್ತಿರುತ್ತಾನೆ. ಆತನನ್ನು ತಡೆಯಲು ಹೋದಾಗ ಆಕಸ್ಮಿಕವಾಗಿ ಆ ಯುವಕ ಸತ್ತುಹೋಗುತ್ತಾನೆ. ಕೊನೆಗೆ ವಿಜಯ್​ ಅವನು ಬದುಕಿದ್ದಾನೆ ಎಂದು ತೋರಿಸಲು ಸುಳ್ಳು ಆಲ್ಬಂ ಸೃಷ್ಟಿಸಿತ್ತಾನೆ. ಕೊನೆಗೆ ವಿಜಯ್ ಆ ಶವವನ್ನು ಹೊಸದಾಗಿ ನಿರ್ಮಾಣವಾಗುತ್ತಿದ್ದ ಪೊಲೀಸ್ ಠಾಣೆಯ ಕಟ್ಟಡದ ಕೆಳಗೆ ಹೂತಿರುತ್ತಾನೆ ಎಂಬ ಸತ್ಯ ಬಹಿರಂಗಗೊಳ್ಳುತ್ತದೆ. ಇದು ದೃಶ್ಯಂ ಸಿನಿಮಾದ ಸ್ಟೋರಿ. ಆದರೆ ಇದೇ ರೀತಿ ಆದ್ರೆ ಸ್ವಲ್ಪ ಬದಲಾಗಿರುವ ರೀತಿಯಲ್ಲಿ, ಒಂದು ಭಯಾನಕ ಘಟನೆ ಗುಜರಾತ್​ನಲ್ಲಿ ನಡೆದಿದೆ. ಆಸ್ಟ್ರೇಲಿಯಾಕ್ಕೆ ಗಂಡ ಹೋಗಿದ್ದಾನೆ ಎನ್ನಲಾಗಿತ್ತು. ಆದರೆ ಆತನ ಶವ ಮನೆಯಲ್ಲಿಯೇ ಕಾಂಕ್ರೀಟ್ ನೆಲದಡಿಯಲ್ಲಿ ಹೂಳಲ್ಪಟ್ಟ ಸ್ಟೋರಿ ಇದಾಗಿದೆ.

ದೃಶ್ಯಂ ಚಿತ್ರ ಹೋಲುವ ಭಯಾನಕ ಘಟನೆ

ಗುಜರಾತ್‌ನ ಜಾಮ್‌ನಗರದ ಪೊಲೀಸರು ಬಾಲಿವುಡ್ ಥ್ರಿಲ್ಲರ್ "ದೃಶ್ಯಂ" ಚಿತ್ರವನ್ನು ಹೋಲುವ ಪ್ರಕರಣವನ್ನು ಭೇದಿಸಿದ್ದಾರೆ. ಪತ್ನಿ, ಆಕೆಯ ಪ್ರಿಯಕರ ಮತ್ತು ಸಹಚರರಿಂದ ಕೊಲೆಯಾಗಿ 12 ಅಡಿ ಕಾಂಕ್ರೀಟ್ ನೆಲದಡಿಯಲ್ಲಿ ಹೂಳಲ್ಪಟ್ಟ ವ್ಯಕ್ತಿಯ ಶವವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪೊಲೀಸರ ಪ್ರಕಾರ, ಸುಮಾರು ಎರಡು ವರ್ಷಗಳಿಂದ, ತನ್ನ ಗಂಡ ಜಿಗ್ನೇಶ್​ ಮಾವಾಡಿಯಾ ಕೆಲಸಕ್ಕಾಗಿ ಆಸ್ಟ್ರೇಲಿಯಾಕ್ಕೆ ಹೋಗಿದ್ದಾರೆ ಎಂದು ಪತ್ನಿ ಭೂಮಿಬೆನ್ ಎಂದೂ ಕರೆಯಲ್ಪಡುವ ಪೃಥ್ವಿ ಎಲ್ಲರಿಗೂ ಸುಳ್ಳು ಹೇಳುತ್ತಲೇ ಬಂದಳು. ಫೋನ್​ ಮಾಡಿ ಕೊಡು ಎಂದು ಪತಿಯ ಮನೆಯವರು ಹಾಗೂ ಸ್ನೇಹಿತರು ಹೇಳಿದಾಗ, ಪತಿಯ ಕಚೇರಿಯಲ್ಲಿ ಸ್ಟ್ರಿಕ್ಟ್​ ರೂಲ್ಸ್​ ಇದೆ. ಕರೆ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಿದ್ದಾರೆ ಎಂದೆಲ್ಲಾ ಸಬೂಬು ಹೇಳುತ್ತಾ ಬಂದಳು.

ಎರಡು ವರ್ಷ ಹೀಗೆಯೇ ಮುಂದುವರೆಯಿತು. ಕೊನೆಗೂ ತಾನು ಗೆದ್ದೆ ಎಂದು ಪತ್ನಿ ಬೀಗಿದ್ದಳು. ಆದರೆ ಎರಡು ವರ್ಷಗಳ ಬಳಿಕ, ಆಸ್ಟ್ರೇಲಿಯಾಕ್ಕೆ ಪ್ರವಾಸ ಕೈಗೊಳ್ಳಲು ಯೋಜಿಸುತ್ತಿದ್ದ ಸೋದರಸಂಬಂಧಿಯೊಬ್ಬರು ಜಿಗ್ನೇಶ್ ಅವರ ವಿಳಾಸ ಮತ್ತು ಸಂಪರ್ಕ ವಿವರಗಳನ್ನು ಕೇಳಿದಾಗ, ಆದರೆ ಪತ್ನಿ ಅದನ್ನು ನೀಡಲು ನಿರಾಕರಿಸಿದಾಗ, ಅನುಮಾನ ಹುಟ್ಟಿತು. ಮೊದಲಿನಿಂದಲೂ ಒಂದು ರೀತಿಯ ಅನುಮಾನ ಇದ್ದರೂ, ಇದು ಇನ್ನಷ್ಟು ಹೆಚ್ಚಿಸಿರು. ಕೊನೆಗೆ, ಜಿಗ್ನೇಶ್ ಅವರ ಸಹೋದರ ಅಂತಿಮವಾಗಿ ಈ ವರ್ಷದ ಜುಲೈ 26 ರಂದು ಪೊಲೀಸ್ ದೂರು ದಾಖಲಿಸಿದರು.

ವಿವಾಹೇತರ ಸಂಬಂಧ

ನಂತರದ ತನಿಖೆಯ ಪರಿಣಾಮವಾಗಿ ಜುಲೈ 30, ಗುರುವಾರ ಜಾಮ್‌ನಗರದ ಕಾರ್ಖಾನೆ ಆವರಣದ ಕೆಳಗೆ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಮೂವರು ಆರೋಪಿಗಳಾದ ಪೃಥ್ವಿ, ಆಕೆಯ ಮಾಜಿ ಪ್ರಿಯಕರ ನೀಲೇಶ್ ಕಚಟಿಯಾ ಮತ್ತು ಆತನ ಸ್ನೇಹಿತ ಬಲ್ವೀರ್ ವರ್ಮಾ ಅವರನ್ನು ಬಂಧಿಸಲಾಗಿದೆ. "ಮೃತ ವ್ಯಕ್ತಿಯ ಗುರುತು ಪತ್ತೆಹಚ್ಚಲು ಶವವನ್ನು ವಿಧಿವಿಜ್ಞಾನ ತಜ್ಞರಿಗೆ ಹಸ್ತಾಂತರಿಸಲಾಗಿದೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪೊಲೀಸರ ಪ್ರಕಾರ, ಪೃಥ್ವಿ ಜಿಗ್ನೇಶ್‌ಗೆ ನಿಲೇಶ್ ಜೊತೆ ವಿವಾಹೇತರ ಸಂಬಂಧ ಹೊಂದಿದ್ದಳು ಎಂದು ಹೇಳಲಾದ ಕಾರಣ ಆತನನ್ನು ವಿಷಪ್ರಾಶನ ಮಾಡಿ ಕೊಂದಿದ್ದಾನೆ. 2024 ರ ಮೇ 31 ರ ರಾತ್ರಿ, ಮದ್ಯದ ಪಾರ್ಟಿಯ ನೆಪದಲ್ಲಿ ಆರೋಪಿ ಜಿಗ್ನೇಶ್‌ನನ್ನು ಕೈಗಾರಿಕಾ ಶೆಡ್‌ಗೆ ಆಮಿಷವೊಡ್ಡಿದ್ದಾನೆ. ಕೊನೆಗೆ ವಿಷ ಕುಡಿಸಿ ಸಾಯಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಪ್ರತಿಭಾ, "ಸೈನೈಡ್ ಬೆರೆಸಿದ ಪಾನೀಯ ಸೇವಿಸಿ ಅವರು ಸಾವನ್ನಪ್ಪಿದ ನಂತರ, ಅವರು ಸುಮಾರು 12 ಅಡಿ ಆಳದ ಗುಂಡಿಯನ್ನು ಅಗೆದು, ಅದರಲ್ಲಿ ಶವವನ್ನು ಹೂತು, ಮಣ್ಣಿನಿಂದ ಮುಚ್ಚಿ, ನಂತರ ಸುಮಾರು ಒಂದು ಅಡಿ ದಪ್ಪದ ಕಾಂಕ್ರೀಟ್ ಪದರದಿಂದ ಪ್ರದೇಶವನ್ನು ಮುಚ್ಚಿದ್ದಾರೆ ಎನ್ನಲಾಗಿದೆ. ಉತ್ಖನನದ ಮೊದಲು, ಆರೋಪಿಗಳ ಸಮ್ಮುಖದಲ್ಲಿ ದೃಶ್ಯವನ್ನು ಪುನರ್ನಿರ್ಮಿಸಲಾಯಿತು, ಇದು ಜಿಗ್ನೇಶ್ ಅವರದೇ ಎಂದು ಶಂಕಿಸಲಾದ ಅಸ್ಥಿಪಂಜರದ ಅವಶೇಷಗಳನ್ನು ಬಹಿರಂಗಪಡಿಸಿತು."