ಕಾಕ್ರೋಚ್ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಅವರ ವಿದೇಶಿ ಫಂಡಿಂಗ್ ಆರೋಪದ ಮೇಲೆ ತನಿಖೆ ತೀವ್ರಗೊಂಡಿದೆ. ಆರ್ಟಿಐ ಕಾರ್ಯಕರ್ತರೊಬ್ಬರು ದೀಪ್ಕೆ ಕುಟುಂಬದ ಆರ್ಥಿಕ ಹಿನ್ನೆಲೆ ಮತ್ತು ಪಕ್ಷದ ಕಾನೂನು ನಿಧಿಯ ಬಗ್ಗೆ ತನಿಖೆಗೆ ಆಗ್ರಹಿಸಿದ್ದು, ನೀಟ್ ಪ್ರತಿಭಟನೆಯ ಹಿಂದಿನ ಉದ್ದೇಶಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ಅಮೆರಿಕದಿಂದ ಭಾರತವನ್ನು ಉದ್ಧಾರ ಮಾಡಲು ಬಂದಿರೋ ಕಾಕ್ರೋಚ್ ಜನತಾ ಪಕ್ಷದ (CJP) ಸಂಸ್ಥಾಪಕ ಅಭಿಜೀತ್ ದೀಪ್ಕೆ ಕುರಿತು ಇದಾಗಲೇ ಸಾಕಷ್ಟು ತನಿಖೆಗಳು ನಡೆಯುತ್ತಲೇ ಇವೆ. ಇವರ ನೇತೃತ್ವದ ಪ್ರತಿಭಟನೆಯ ಸಮಯದಲ್ಲಿ ಪಾಕಿಸ್ತಾನದ ಸೋಷಿಯಲ್ ಮೀಡಿಯಾ ಹ್ಯಾಂಡ್ಲರ್ಗಳು ಆ್ಯಕ್ಟೀವ್ ಆಗಿದ್ದು, ಖಲಿಸ್ತಾನಿಗಳು ಸಪೋರ್ಟ್ ಕೊಟ್ಟಿದ್ದು, ಪ್ರತಿಭಟನೆಯ ಸಮಯದಲ್ಲಿ ವಿದೇಶಿ ಬಾವುಗಳ ಹಾರಾಟ, ಪ್ರತಿಭಟನೆ ವೇಳೆ ಮೊದಲೇ ಕಲ್ಲು ತಂದಿಟ್ಟುಕೊಂಡಿದ್ದು... ಹೀಗೆ ಹತ್ತು ಹಲವು ನಿದರ್ಶನಗಳು ಈ ಪ್ರತಿಭಟನೆಯ ಹಿಂದಿನ ಉದ್ದೇಶದ ಬಗ್ಗೆ ಸಾರಿಸಾರಿ ಹೇಳುತ್ತಿವೆ ಎಂಬ ಗಂಭೀರ ಆರೋಪಗಳೂ ಕೇಳಿಬಂದಿವೆ. ಇದು ವಿದ್ಯಾರ್ಥಿಗಳ ಮೇಲಿನ ಪ್ರೀತಿಯಲ್ಲ, ಬದಲಿಗೆ ಇದರ ಹಿಂದಿರುವ ಪಿತೂರಿ ದೊಡ್ಡದೇ ಇದೆ ಎನ್ನುವ ಬಗ್ಗೆ ತಜ್ಞರೂ ಹೇಳಿಕೆ ಕೊಟ್ಟಾಗಿದೆ. ವಿದ್ಯಾರ್ಥಿಗಳ ಮೇಲೆ ಪ್ರೀತಿ ಇದ್ದದ್ದೇ ಹೌದಾದರೆ, ಪಂಜಾಬ್ನ ಪೇಪರ್ಲೀಕ್ ಹಗರಣದ ಬಗ್ಗೆ ಕೇಳಿದಾಗ, ಕಣ್ಕಣ್ ಬಿಟ್ಟದ್ದು ಏಕೆ ಎನ್ನುವ ಪ್ರಶ್ನೆ ಈಗ ಇದರ ಹಿಂದಿನ ಉದ್ದೇಶವನ್ನು ಹೇಳುತ್ತಿದೆ.
ಬುಡಕ್ಕೆ ಬಿತ್ತು ಬೆಂಕಿ
ಈ ಪ್ರತಿಭಟನೆಗೆ ವಿದೇಶಿ ಫಂಡ್ಗಳು ಬರುತ್ತಿವೆ ಎನ್ನುವ ಗಂಭೀರ ಆರೋಪ ಇದ್ದ ಹಿನ್ನೆಲೆಯಲ್ಲಿ, ಅಭಿಜೀತ್ ದೀಪ್ಕೆ, ಹೌದು ನನಗೆ ವಿದೇಶಿ ಫಂಡ್ ಬರ್ತಿರೋದು ನಿಜ. ಹಾಗಿದ್ರೆ ಪ್ರೂವ್ ಮಾಡಿ. ಒಂದು ವೇಳೆ ಫಂಡಿಂಗ್ ತೆಗೆದುಕೊಳ್ತಾ ಇದ್ದರೂ ಅದು ಕೇಂದ್ರ ಸರ್ಕಾರಕ್ಕೆ ಗೊತ್ತಾಗಲಿಲ್ಲ ಎಂದರೆ, ಅದು ಅವರ ಲೋಪ ಆದಂತೆ ಎಂದು ಹೇಳುವ ಮೂಲಕ, ತಾವು ಯಾವ ವಿದೇಶಿ ಫಂಡಿಂಗ್ ಕೂಡ ತೆಗೆದುಕೊಳ್ತಿಲ್ಲ ಎಂದು ಸಾಬೀತು ಮಾಡಲು ಹೋಗಿದ್ದರು. ಆದರೆ ಅದರ ಬೆನ್ನಲ್ಲೇ ಈಗ ಅವರ ಮಾತೇ ಅವರ ಬುಡಕ್ಕೆ ಬೆಂಕಿ ಬೀಳುವ ಹಾಗೆ ಮಾಡಿದೆ.
ಇದೀಗ ಇವರ ಇಡೀ ಕುಟುಂಬದ ತನಿಖೆ ಆಗಬೇಕು, ನಿವೃತ್ತ ಸರ್ಕಾರಿ ನೌಕರ ಒಬ್ಬರು ಅಭಿಜೀತ್ ದೀಪ್ಕೆಯ ವಿದೇಶಿ ಶಿಕ್ಷಣಕ್ಕೆ ಆ ಪರಿಯಲ್ಲಿ ಹಣ ಖರ್ಚು ಮಾಡಿದ್ದು ಹೇಗೆ ಎನ್ನುವ ಸಂಪೂರ್ಣ ಮಾಹಿತಿ ಬೇಕು ಎಂದು ಸೂರತ್ ಮೂಲದ ಆರ್ಟಿಐ ಕಾರ್ಯಕರ್ತ ಅಮಿತ್ ತಿವಾರಿ , ಅರ್ಜಿ ಸಲ್ಲಿಸಿದ್ದಾರೆ. ಮಹಾರಾಷ್ಟ್ರದ ನಿವೃತ್ತ ಸರ್ಕಾರಿ ಉದ್ಯೋಗಿಯಾಗಿರುವ ಅಭಿಜೀತ್ ಅವರ ತಂದೆ ಭಗವಾನ್ರಾವ್ ಹಣಕಾಸಿನ ಬಗ್ಗೆ ತನಿಖೆ ನಡೆಸಬೇಕೆಂದು ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಇವರ ಆರ್ಥಿಕ ಹಿನ್ನೆಲೆಯ ಬಗ್ಗೆ ತನಿಖೆಯ ಅಗತ್ಯವಿದೆ ಎಂದಿದ್ದಾರೆ.
ಕಾನೂನುಬದ್ಧ ರಕ್ಷಣಾ ನಿಧಿ ಕುರಿತು ಪ್ರಶ್ನೆ
ಇಷ್ಟೇ ಅಲ್ಲದೇ, ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪದ ಕುರಿತು ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಪೊಲೀಸ್ ಪ್ರಕರಣಗಳನ್ನು ಎದುರಿಸುತ್ತಿರುವ ಸಿಜೆಪಿ ಪ್ರತಿಭಟನಾಕಾರರಿಗೆ ಘೋಷಿಸಲಾದ ಕಾನೂನು ರಕ್ಷಣಾ ನಿಧಿಯ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಅವರು, CJP ಕಾನೂನುಬದ್ಧ ರಕ್ಷಣಾ ನಿಧಿಯನ್ನು ಘೋಷಿಸಿರುವುದರಿಂದ, ಅದು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29A ಅಡಿಯಲ್ಲಿ ನೋಂದಾಯಿಸಲ್ಪಟ್ಟಿದೆಯೇ ಎಂದು ಪರಿಶೀಲಿಸುವಂತೆ ಚುನಾವಣಾ ಆಯೋಗವನ್ನು ಕೋರಿದ್ದಾರೆ. ಈ ಪಕ್ಷವು ನೋಂದಾಯಿಸಿಲ್ಲ. ಆದರೆ ರಾಜಕೀಯ ಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ, ಅದಕ್ಕೆ ಕಾನೂನು ರಕ್ಷಣಾ ನಿಧಿಯಾಗಿ 1 ಕೋಟಿ ರೂ.ಗಳನ್ನು ನೀಡಿದ್ದರೆ, ಚುನಾವಣಾ ಆಯೋಗವು ಸಿಜೆಪಿಯನ್ನು 1951 ರ ಜನತಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 29 ಎ ಅಡಿಯಲ್ಲಿ ನೋಂದಾಯಿಸಲಾಗಿದೆಯೇ ಎಂದು ಪರಿಶೀಲಿಸಬೇಕು ಎಂದಿದ್ದಾರೆ.
ಈ ಸಂಪೂರ್ಣ ಮಾಹಿತಿ ಹೊರಬಂದರೆ, ಇನ್ನಷ್ಟು ಹಿನ್ನೆಲೆ ಬೆಳಕಿಗೆ ಬರುವ ಸಾಧ್ಯತೆ ಇದೆ. ನೀಟ್ ಪರೀಕ್ಷೆಯಿಂದಾಗಿ ಅನ್ಯಾಯಕ್ಕೆ ಒಳಗಾಗಿರುವ ವಿದ್ಯಾರ್ಥಿಗಳನ್ನೇ ನೆಪ ಮಾಡಿಕೊಂಡು ನಿಜಕ್ಕೂ ನಡೆಯುತ್ತಿರುವುದು ಏನು ಎನ್ನುವುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ. ಏಕೆಂದರೆ ಪ್ರಶ್ನೆ ಪತ್ರಿಕೆ ಸೋರಿಕೆಯ ಕುರಿತು ಬೇರೆ ರಾಜ್ಯಗಳಿಗೆ ಹೋಗದ ದೀಪ್ಕೆ, ಕೇಂದ್ರ ಸಚಿವರ ರಾಜೀನಾಮೆಗೆ ಪದೇ ಪದೇ ಒತ್ತಾಯಿಸುತ್ತಿರುವುದು ಇದರ ಹಿಂದಿನ ಉದ್ದೇಶವನ್ನು ಹೇಳುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ.


