ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಅನೈತಿಕ ಸಂಬಂಧದ ಶಂಕೆಯಿಂದ ಪತಿಯೇ ಪತ್ನಿಯನ್ನು ಥಳಿಸಿ ಹತ್ಯೆ ಮಾಡಿದ್ದಾನೆ. ಪಕ್ಕದ ಮನೆಯಲ್ಲಿದ್ದ ಪತ್ನಿಯನ್ನು ಪ್ರಶ್ನಿಸಿದಾಗ ಉಂಟಾದ ವಾಗ್ವಾದ ಕೊಲೆಯಲ್ಲಿ ಅಂತ್ಯಗೊಂಡಿದ್ದು, ಪತಿ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ: ಅನೈತಿಕ ಸಂಬಂಧ ಸಂಶಯದಿಂದ ಪತ್ನಿಯ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ ಘಟನೆ ಜಮಖಂಡಿ ತಾಲೂಕಿನ ತೊದಲಬಾಗಿ ಗ್ರಾಮದಲ್ಲಿ ಗುರುವಾರ ನಡೆದಿದೆ.
ಸುಮನ ಸಿದರಾಯ ತೋಟದ (33) ಹತ್ಯೆಯಾದ ಮಹಿಳೆ. ಪತಿ ಮಲ್ಲಪ್ಪ ಸಿದರಾಯ ತೋಟದ ತೋಟದ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.
ಆಗಿದ್ದೇನು?
ಮೂಲತಃ ಜಮಖಂಡಿ ತಾಲೂಕಿನ ನಾಗನೂರು ಗ್ರಾಮದ ನಿವಾಸಿಗಳಾಗಿದ ಇವರು, 10 ವರ್ಷಗಳ ಹಿಂದೆ ಪ್ರೀತಿಸಿ ವಿವಾಹವಾಗಿ ತೊದಲಬಾಗಿ ಗ್ರಾಮದಲ್ಲಿ ನೆಲೆಸಿದ್ದರು. ದಂಪತಿಗೆ 9 ವರ್ಷದ ಬಾಲಕಿ, 7 ವರ್ಷದ ಬಾಲಕಿ ಇದ್ದಾಳೆ.
ಗುರುವಾರ ರಾತ್ರಿ ಸುಮನ ಪಕ್ಕದ ಪರಿಚಯಸ್ಥಳಾದ ಜಕ್ಕವ್ವ ಪಾರ್ಥನಳ್ಳಿ ಮನೆಗೆ ಮಲಗಲು ಹೋಗಿದ್ದರಿಂದ ಸಂಶಯಗೊಂಡ ಪತಿ ಮಲ್ಲಪ್ಪ ಆ ಮನೆಗೆ ಹೋಗಿದ್ದು, ಅಲ್ಲಿ ಪ್ರವೀಣ ಎಂಬ ವ್ಯಕ್ತಿ ಇದ್ದು, ಆತನೊಂದಿಗೆ ಪತ್ನಿ ಅನೈತಿಕ ಸಂಬಂಧ ಹೊಂದಿದ್ದಾಳೆ ಎಂದು ಅನುಮಾನಿಸಿ ಪತ್ನಿಯನ್ನು ಪ್ರಶ್ನಿಸಿದ್ದಾನೆ.
ಈ ವೇಳೆ ವಾಗ್ವಾದ ಉಂಟಾಗಿ ಆಕ್ರೋಶಗೊಂಡ ಪತಿ ಮಲ್ಲಪ್ಪ ಸುಮನ್ ಳನ್ನು ಕಸಬರಿಗೆಯಿಂದ ಥಳಿಸಿ, ಎದೆ ಹಾಗೂ ಹೊಟ್ಟೆ ಭಾಗಕ್ಕೆ ಒದ್ದು ಹಲ್ಲೆ ನಡೆಸಿದ್ದು, ಸುಮನ್ ಅಲ್ಲಿಯೇ ಕುಸಿದುಬಿದ್ದು ಮೃತಪಟ್ಟಿದ್ದಾಳೆ. ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿದ್ದಾರೆ. ಸಾವಳಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಕೇಳಿದ್ದೆಲ್ಲವನ್ನೂ ಕೊಡ್ತಿದ್ದ 57ರ ಸರ್ಕಾರಿ ಶಾಲಾ ಶಿಕ್ಷಕಿಯ 27ರ ಹರೆಯದ ಪ್ರೇಮಿ: ಏಕಾಏಕಿ ಸುಟ್ಟು ಹಾಕಿದ್ದೇಕೆ?
ಪತಿ ಸೇರಿದಂತೆ ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ತನಿಖೆ ನಡೆಯುತ್ತಿದೆ ಎಂದು ಎಸ್.ಪಿ.ಸಿದ್ದಾರ್ಥ ಗೋಯಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಂಡ್ಯ ಜೆಡಿಎಸ್ ಮಾಜಿ ಶಾಸಕ ಅನ್ನದಾನಿ ವಿರುದ್ಧ ಅಕ್ರಮ ಸಂಬಂಧ ಆರೋಪ; ಕುಮಾರಣ್ಣಗೆ ದೂರು ಕೊಟ್ಟ ಸಂತ್ರಸ್ತ ಗಂಡ!


