ಉತ್ತರ ಪ್ರದೇಶದಲ್ಲಿ ಪತ್ತೆಯಾದ ಸುಟ್ಟ ಶವವೊಂದರ ಗುರುತು ಪತ್ತೆ ಹಚ್ಚಲು ಪೊಲೀಸರು ಪರದಾಡುತ್ತಿದ್ದರು. ಆದರೆ, ಶವದ ಬಳಿ ಸಿಕ್ಕ ಹೆಂಡದ ಬಾಟಲಿಯ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದಾಗ, 24 ಗಂಟೆಯೊಳಗೆ ಅಕ್ರಮ ಸಂಬಂಧದ ಹಿನ್ನೆಲೆಯಿದ್ದ ಈ ಕೊಲೆ ಪ್ರಕರಣವನ್ನು ಭೇದಿಸಲಾಯಿತು.

ಕೊ*ಲೆಗಾರರು ಎಷ್ಟೇ ಚಾಣಾಕ್ಷ್ಯರಾಗಿದ್ದರೂ ಒಂದಲ್ಲೊಂದು ಸಾಕ್ಷಿ ಬಿಟ್ಟಿರುತ್ತಾರೆ, ಅವರಿಗೆ ಅರಿವೇ ಇಲ್ಲದೇ ಏನೋ ಒಂದು ಸುಳಿವು ಕೊಟ್ಟೇ ಹೋಗಿರುತ್ತಾರೆ. ಆದರೆ ಅದನ್ನು ಗಮನಿಸುವ ಬುದ್ಧಿವಂತಿಕೆ ತನಿಖಾಧಿಕಾರಿಗಳಿಗೆ ಇರಬೇಕು ಅಷ್ಟೇ ಎನ್ನುವ ಮಾತಿದೆ. ಅದರಂತೆಯೇ ಒಂದು ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಗ್ರಾ ಬಳಿ ಅರ್ಧ ಬೆಂದುಹೋಗಿರುವ ಶವವನ್ನು ನೋಡಿದ್ದ ಸ್ಥಳೀಯರು ಗಾಬರಿಯಿಂದ ಈ ವಿಷಯವನ್ನು ಪೊಲೀಸರಿಗೆ ಮುಟ್ಟಿಸಿದ್ದರು. ಪೊಲೀಸರು ಬಂದು ಸಾಕಷ್ಟು ತನಿಖೆ ಮಾಡಿದರೂ, ಅಕ್ಕ ಪಕ್ಕ ವಿಚಾರಿಸಿದರೂ ಇದು ಯಾರ ಶವ ಎನ್ನುವುದು ತಿಳಿಯಲಿಲ್ಲ. ಎಲ್ಲರನ್ನೂ ವಿಚಾರಿಸಿದರೂ ಯಾವುದೇ ಉಪಯೋಗಕ್ಕೆ ಬರಲಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೆಂಡದ ಬಾಟಲ್​

ಶವದ ಪರೀಕ್ಷೆ ಮಾಡುತ್ತಿದ್ದ ಸಮಯದಲ್ಲಿ ಪಕ್ಕದಲ್ಲಿಯೇ ಒಂದು ಹೆಂಡದ ಬಾಟಲ್​ ಕಂಡಿತು. ಇಡೀ ಪ್ರಕರಣ ರೋಚಕ ತಿರುವು ಪಡೆಯಿತು. ಚಾಣಾಕ್ಷ್ಯ ಪೊಲೀಸರು ಒಂದು ನಿಮಿಷವೂ ತಡ ಮಾಡದೇ ಆ ಬಾಟಲಿಯನ್ನು ಕೈಗೆತ್ತಿಕೊಂಡರು. ಅದರ ಮೇಲೆ ಕ್ಯೂಆರ್​ ಕೋಡ್​ ಇರುವುದನ್ನು ಗಮನಿಸಿದ ಅವರು, ಅದನ್ನು ಸ್ಕ್ಯಾನ್​​ ಮಾಡಿ ಡಿಟೇಲ್ಸ್​ ಪಡೆದರು. ಅದರ ಮೂಲಕ ಆ ಹೆಂಡದ ಬಾಟಲ್​ ಯಾವ ಅಂಗಡಿಯಲ್ಲಿ ಖರೀದಿ ಮಾಡಿದ್ದು ಎಂದು ತಿಳಿಯಿತು. ಕೂಡಲೇ ಅಲ್ಲಿಗೆ ಹೋದ ಪೊಲೀಸರು ತನಿಖೆ ಆರಂಭಿಸಿದರು. ಸಿಸಿಟಿವಿಗಳನ್ನು ಪರಿಶೀಲಿಸಿದರು. ಬಳಿಕ ಅದನ್ನು ಖರೀದಿ ಮಾಡಿದವ ಸುಲಭದಲ್ಲಿ ಸಿಕ್ಕಿಬಿದ್ದ.

24 ಗಂಟೆಗಳಲ್ಲಿ ಅರೆಸ್ಟ್​

ಮುಂದಿನ ಹಂತ ಆತ ಯಾರು, ಎಲ್ಲಿಯವ ಎಂದು ಗುರುತು ಹಿಡಿಯುವುದು. ಇಷ್ಟು ಸುಳಿವು ಸಿಕ್ಕ ಪೊಲೀಸರಿಗೆ ಆತನನ್ನು ಹಿಡಿಯುವುದು ಕಷ್ಟವಾಗಲಿಲ್ಲ. ಸಿಸಿಟಿವಿ ಕ್ಯಾಮೆರಾ, ಜನರ ಜೊತೆ ಮಾಹಿತಿ ಎಲ್ಲವನ್ನೂ ಪಡೆದು ಆ ಕೊ*ಲೆಗಾರನ ಬೇಟೆಗೆ ಹೊರಟರು. ಕೊನೆಗೂ ಪಾತಕಿಗಳು ಸಿಕ್ಕೇ ಬಿಟ್ಟರು. ಇಷ್ಟೆಲ್ಲಾ ಆಗಿದ್ದು ಕೇವಲ 24 ಗಂಟೆಗಳಲ್ಲಿ! ತನಿಖೆ ಕೈಗೊಂಡು ಆ ಬಾಟಲಿ ಖರೀದಿ ಮಾಡಿದವನ ಜಾಡು ಹಿಡಿದು ಹೋದ ಪೊಲೀಸರಿಗೆ ಸಿಕ್ಕಿದ್ದು ಮಹೇಶ್ ಮತ್ತು ಧರ್ಮವೀರ್ ಎಂಬುವವರು. ಬಾಟಲಿಯನ್ನು ಖರೀದಿ ಮಾಡಲು ಬಂದಾಗ ಇಬ್ಬರು ಇದ್ದದ್ದು ಸಿಸಿಟಿವಿಯಲ್ಲಿ ದಾಖಲಾಗಿತ್ತು.

ಅಕ್ರಮ ಸಂಬಂಧ

ಕೂಡಲೇ ಪೊಲೀಸರು ಅವರನ್ನು ಬಂಧಿಸಿದರು. ತಮ್ಮದೇ ಭಾಷೆಯಲ್ಲಿ ಅವರನ್ನು ವಿಚಾರಿಸಿದಾಗ, ಕೃತ್ಯವನ್ನು ಅವರು ಒಪ್ಪಿಕೊಂಡರು. ಅಷ್ಟಕ್ಕೂ ಆಗಿದ್ದೇನೆಂದರೆ, ಮೃತಪಟ್ಟವನ ಹೆಸರು ಲೋಕೇಂದ್ರ. ಲೋಕೇಂದ್ರನ ಪತ್ನಿಗೂ ಮಹೇಶ್​ಗೂ ಅಕ್ರಮ ಸಂಬಂಧವಿತ್ತು. ಇದು ಲೋಕೇಂದ್ರನಿಗೆ ತಿಳಿದಿತ್ತು. ಇದರಿಂದ ಆತ ಮಹೇಶನ ಜೊತೆ ಜಗಳ ತೆಗೆದಿದ್ದ. ಮಾತ್ರವಲ್ಲದೇ ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಈ ವಿಷಯವನ್ನು ಎಲ್ಲರಿಗೂ ಆತ ತಿಳಿಸಿದ್ದ. ಇನ್ನು ಇವನು ಬದುಕಿದ್ದರೆ ತಮ್ಮಿಬ್ಬರ ಈ ಅಕ್ರಮ ಸಂಬಂಧ ಬಹಳ ದಿನ ಉಳಿಯುವುದಿಲ್ಲ ಎಂದು ಯೋಚಿಸಿದ ಮಹೇಶ, ಆತನನ್ನು ಮುಗಿಸುವ ಪ್ಲ್ಯಾನ್​ ರೂಪಿಸಿದ.

ಪತ್ನಿಯೇ ಹಂತಕಿ

ಈ ಕೊ*ಲೆಗೆ ಕುಮ್ಮಕ್ಕು ನೀಡಿದ್ದು, ಲೋಕೇಂದ್ರನ ಪತ್ನಿ. ಅವಳೇ ಇದರ ರೂವಾರಿ. ಇಬ್ಬರೂ ಸೇರಿ ಲೋಕೇಂದ್ರನನ್ನು ಮುಗಿಸುವ ಪ್ಲ್ಯಾನ್​ ಮಾಡಿದರು. ಕೊನೆಗೆ, ಮಹೇಶ್​ ತನ್ನ ಸ್ನೇಹಿತ ಧರ್ಮವೀರ್​ನ ನೆರವು ಪಡೆದಿದ್ದಾನೆ. ಇಬ್ಬರೂ ಲೋಕೇಂದ್ರನನ್ನು ಡ್ರಿಂಕ್ಸ್​ ಪಾರ್ಟಿಗೆ ಆಹ್ವಾನಿಸಿದ್ದಾರೆ. ಈತ ಇಂಥವ ಎಂದು ತಿಳಿದಿದ್ದರೂ ಲೋಕೇಂದ್ರ ಕುಡಿತದ ಪಾರ್ಟಿಗೆ ಯಾಕೆ ಹೋದನೋ ಗೊತ್ತಿಲ್ಲ. ಒಟ್ಟಿನಲ್ಲಿ ಅಲ್ಲಿಗೆ ಹೋಗಿದ್ದೇ ಅವನಿಗೆ ಮೃತ್ಯಪಾಶವಾಯಿತು. ಅವನಿಗೆ ಚೆನ್ನಾಗಿ ಕುಡಿಸಿ ಕತ್ತು ಹಿಸುಕಿ ಕೊ*ಲೆ ಮಾಡಲಾಯಿತು. ಹೀಗೆಯೇ ಬಿಟ್ಟರೆ ಸಾಕ್ಷ್ಯಾಧಾರ ಸಿಗಬಹುದು ಎನ್ನುವ ಕಾರಣಕ್ಕೆ ಸ್ಥಳದಿಂದ ಪರಾರಿಯಾಗುವ ಮೊದಲು ಅವರು ಶವಕ್ಕೆ ಬೆಂಕಿ ಹಚ್ಚಿದ್ದರು. ಆದರೆ ಹೋಗುವಾಗ ಬಾಟಲಿಯನ್ನು ಅಲ್ಲಿಯೇ ಬಿಟ್ಟು ಹೋಗಿ, ಈಗ ಪತ್ನಿ ಸೇರಿದಂತೆ ಮೂವರೂ ಪೊಲೀಸರ ಅತಿಥಿಯಾಗಿದ್ದಾರೆ!