9 ಕೋಟಿ ರೂ. ಮಾನನಷ್ಟ ಮೊಕದ್ದಮೆ ಕೇಸ್: ಕೋರ್ಟ್ಗೆ ಹಾಜರಾಗದ ನಟ ಸುದೀಪ್- ಏನಿದು ಪ್ರಕರಣ
ನಟ ಕಿಚ್ಚ ಸುದೀಪ್ ಅವರು ನಿರ್ಮಾಪಕರಾದ ಕುಮಾರ್ ಮತ್ತು ಎಂ.ಎನ್. ಸುರೇಶ್ ವಿರುದ್ಧ ದಾಖಲಿಸಿರುವ 9 ಕೋಟಿ ರೂ. ಮಾನನಷ್ಟ ಮೊಕದ್ದಮೆ ವಿಚಾರಣೆ ಮುಂದುವರೆದಿದೆ. ಸಿನಿಮಾ ಪ್ರಮೋಷನ್ನಲ್ಲಿ ನಿರತರಾಗಿದ್ದರಿಂದ ಸುದೀಪ್ ಅವರು ವಿಚಾರಣೆಗೆ ಗೈರುಹಾಜರಾಗಿದ್ದು, ಪ್ರಕರಣವನ್ನು ಜುಲೈ 18ಕ್ಕೆ ಮುಂದೂಡಲಾಗಿದೆ.

ಸಿನಿಮಾ ಪ್ರಮೋಷನ್
ಕಿಚ್ಚ ಸುದೀಪ್ ಅವರು ಸದ್ಯ ಅಕ್ಕನ ಮಗ ಸಂಚಿತ್ ಸಂಜೀವ್ ನಾಯಕ ನಟನಾಗಿ ನಟಿಸಿರುವ ಮ್ಯಾಂಗೋ ಪಚ್ಚ ಸಿನಿಮಾ ಪ್ರಮೋಷನ್ನಲ್ಲಿ ಬಿಜಿಯಾಗಿದ್ದಾರೆ. ಇದರ ನಡುವೆಯೇ, 9 ಕೋಟಿಯ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ಅವರು ನಿನ್ನೆ ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ ಸುದೀಪ್ ಅವರು ಬಿಜಿ ಇದ್ದುದರಿಂದ ಕೋರ್ಟ್ಗೆ ಹಾಜರು ಆಗಲಿಲ್ಲ. ಅದಕ್ಕಾಗಿ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಏನಿದು ಕೇಸ್?
ಕಿಚ್ಚ ಸುದೀಪ್ ಅವರು ನಿರ್ಮಾಪಕರಾದ ಕುಮಾರ್ ಹಾಗೂ ಎಂ.ಎನ್. ಸುರೇಶ್ ವಿರುದ್ಧ ಹಾಕಿರುವ 9 ಕೋಟಿ ರೂಪಾಯಿಗಳ ಮಾನನಷ್ಟ ಮೊಕದ್ದಮೆ ಕೇಸ್ ಆಗಿದೆ. ನಿರ್ಮಾಪಕರಾದ ಕುಮಾರ್ ಹಾಗೂ ಎಂ.ಎನ್. ಸುರೇಶ್ ಅವರು, ಸಿನಿಮಾ ಕಾಲ್ಶೀಟ್ ನೀಡುವುದಾಗಿ ಹೇಳಿ ಸುದೀಪ್ 9 ಕೋಟಿ ರೂಪಾಯಿ ಪಡೆದಿದ್ದಾರೆ ಎಂದು ಆರೋಪಿಸಿದ್ದರು. ಈ ಆರೋಪಗಳು ತಮ್ಮ ವೈಯಕ್ತಿಕ ಹಾಗೂ ವೃತ್ತಿಪರ ಘನತೆಗೆ ಧಕ್ಕೆ ತಂದಿವೆ ಎಂದು ಆರೋಪಿಸಿ ಸುದೀಪ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಅದರ ವಿಚಾರಣೆ 7ನೇ ಎಸಿಜೆಎಂನಲ್ಲಿ ನಡೆಯುತ್ತಿದೆ.
2023ರ ಕೇಸ್
ಅಂದಹಾಗೆ ಈ ಕೇಸ್ ಇಂದು ನಿನ್ನೆಯದ್ದಲ್ಲ, ಬದಲಿಗೆ 2023ಕ್ಕೆ ಸಂಬಂಧಿಸಿದ್ದು. ಆ ಸಾಲಿನಲ್ಲಿ ದಾಖಲಾಗಿದ್ದ ಕೇಸ್ ವಿಚಾರಣೆ ಇದಾಗಲೇ ಹಲವು ಬಾರಿ ಕೋರ್ಟ್ನಲ್ಲಿ ನಡೆದಿದ್ದು, ಸದ್ಯ ಸಾಕ್ಷ್ಯಗಳ ಪರಿಶೀಲನೆಯ ಹಂತದಲ್ಲಿದೆ. ಇದಕ್ಕಾಗಿ ಕೋರ್ಟ್ ಆದೇಶದ ಮೇರೆಗೆ ಸುದೀಪ್ ಅವರು ಕೋರ್ಟ್ಗೆ ಖುದ್ದು ಹಾಜರು ಆಗಬೇಕಿತ್ತು.
ಹಾಜರಿಯಿಂದ ವಿನಾಯಿತಿ
ನಿನ್ನೆ (ಜೂನ್ 6) ಪ್ರಕರಣದ ಕ್ರಾಸ್ ಎಕ್ಸಾಮಿನೇಷನ್ ಇದ್ದ ಹಿನ್ನೆಲೆಯಲ್ಲಿ ನಟ ಸುದೀಪ್ 7ನೇ ಎಸಿಜೆಎಂ ಕೋರ್ಟ್ಗೆ ಹಾಜರಾಗಬೇಕಿತ್ತು. ಆದರೆ, ಕೆಲಸದ ನಿಮಿತ್ತ ಸುದೀಪ್ ಪರ ವಕೀಲರು ಇಂದಿನ ವಿಚಾರಣೆಗೆ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಮಾನ್ಯ ಮಾಡಿದ ಕೋರ್ಟ್, ಜುಲೈ 18ಕ್ಕೆ ವಿಚಾರಣೆ ಮುಂದೂಡಿತು.
ಕ್ರಾಸ್ ಎಕ್ಸಾಮಿನೇಷನ್
ಸದ್ಯ ಕೋರ್ಟ್ನಲ್ಲಿ ನಿರ್ಮಾಪಕರ ಪರ ವಕೀಲರು ಸುದೀಪ್ ಅವರನ್ನು ಕ್ರಾಸ್ ಎಕ್ಸಾಮಿನೇಷನ್ಗೆ ಒಳಪಡಿಸಲಿದ್ದಾರೆ. ಈಗ ವಿಚಾರಣೆ ಜುಲೈ 18ಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ಎಲ್ಲರ ಕಣ್ಣು ಆ ದಿನದಂದು ನೆಟ್ಟಿದೆ.
ಪ್ರಕರಣದ ಹಿನ್ನೆಲೆ
ನಟ ಸಂಭಾವನೆ ಹಣ ಪಡೆದಿದ್ದರೂ ತಮ್ಮ ಕಮಿಟ್ಮೆಂಟ್ ಮರೆತಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು. 9 ಕೋಟಿ ರೂಪಾಯಿ ಅಡ್ವಾನ್ಸ್ ಪಡೆದುಕೊಂಡು ಸಿನಿಮಾಗೆ ಡೇಟ್ಸ್ ಕೊಡದೆ ಇದ್ದ ಕಾರಣ ನಿರ್ಮಾಪಕರು ವಂಚನೆ ಆರೋಪ ಮಾಡಿದ್ದರು. ಕಿಚ್ಚ ಸುದೀಪ್ ಅವರು ಅಗ್ರಿಮೆಂಟ್ ಸೈನ್ ಮಾಡಿ ಸುಮಾರು 9 ಕೋಟಿಯನ್ನು ಪಡೆದಿದ್ದಾರೆ. ಈ ಅಗ್ರಿಮೆಂಟ್ ಸುಮಾರು 8 ವರ್ಷ ಹಿಂದಿನದ್ದು. ಒಪ್ಪಂದಕ್ಕೆ ಸಹಿ ಮಾಡಿದ್ದರೂ ಕಿಚ್ಚ ಇದುವರೆಗೂ ನಿರ್ಮಾಪಕರಿಗೆ ಡೇಟ್ಸ್ ಕೊಟ್ಟಿರಲಿಲ್ಲ ಎಂದು ಆರೋಪಿಸಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

