ಪೊಲೀಸ್ ಅಧಿಕಾರಿಗಳಂತೆ ನಟಿಸಿ ವೃದ್ಧೆಯ ಗಮನ ಬೇರೆಡೆ ಸೆಳೆದು ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬಿಲ್ಲಾಪುರದಲ್ಲಿ ನಡೆದಿದೆ.

ಆನೇಕಲ್ (ಜೂ.07): ಪೊಲೀಸ್ ಅಧಿಕಾರಿಗಳಂತೆ ನಟಿಸಿ ವೃದ್ಧೆಯ ಗಮನ ಬೇರೆಡೆ ಸೆಳೆದು ಸುಮಾರು ₹10 ಲಕ್ಷ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಬೆಂಗಳೂರು ಹೊರವಲಯದ ಆನೇಕಲ್ ತಾಲ್ಲೂಕಿನ ಬಿಲ್ಲಾಪುರದಲ್ಲಿ ನಡೆದಿದೆ. ಈ ಸಂಪೂರ್ಣ ಕೃತ್ಯ ಸಮೀಪದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಆರೋಪಿಗಳ ಚಲನವಲನ ಇದೀಗ ಪೊಲೀಸರಿಗೆ ಪ್ರಮುಖ ಸುಳಿವಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬೆಂಗಳೂರು ನಿವಾಸಿ ಗಾಯತ್ರಿ ಎಂಬ ವೃದ್ಧೆ ಚಿನ್ನಾಭರಣ ಕಳೆದುಕೊಂಡವರು. ಮಾಂಗಲ್ಯ ಸರ ಹಾಗೂ ಎರಡು ಚಿನ್ನದ ಉಂಗುರ ಸೇರಿದಂತೆ ಒಟ್ಟು 42 ಗ್ರಾಂ ಚಿನ್ನಾಭರಣವನ್ನು ಕಳ್ಳರು ವಂಚನೆಯ ಮೂಲಕ ಕಸಿದುಕೊಂಡಿದ್ದಾರೆ.

ಮೆಡಿಕಲ್ ಅಂಗಡಿಯಿಂದ ಔಷಧಿ ಪಡೆದು ಮನೆಗೆ ಮರಳುತ್ತಿದ್ದ ವೇಳೆ, ಎರಡು ಬೈಕ್‌ಗಳಲ್ಲಿ ಬಂದ ನಾಲ್ವರು ಆರೋಪಿಗಳು ವೃದ್ಧೆಯನ್ನು ಹಿಂಬಾಲಿಸಿದ್ದಾರೆ. ಬಳಿಕ ತಮ್ಮನ್ನು ಪೊಲೀಸ್ ಅಧಿಕಾರಿಗಳೆಂದು ಪರಿಚಯಿಸಿಕೊಂಡ ಅವರು, ‘ಇತ್ತೀಚೆಗೆ ಈ ಭಾಗದಲ್ಲಿ ಕಳ್ಳತನಗಳು ಹೆಚ್ಚಾಗಿವೆ. ಇಷ್ಟು ಚಿನ್ನ ಧರಿಸಿ ಓಡಾಡುವುದು ಅಪಾಯಕಾರಿ’ ಎಂದು ನಂಬಿಸಿದ್ದಾರೆ.

ಆರೋಪಿಗಳ ಮಾತಿಗೆ ನಂಬಿದ ವೃದ್ಧೆ, ತನ್ನ ಚಿನ್ನಾಭರಣಗಳನ್ನು ಬಿಚ್ಚಿ ನೀಡಿದ್ದು, ಆರೋಪಿಗಳು ಅದನ್ನು ಕಾಗದದಲ್ಲಿ ಸುತ್ತಿ ಸೀರೆ ಸೆರಗಿನಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ವೇಳೆ ಉಳಿದ ಇಬ್ಬರು ಆರೋಪಿಗಳು ಸುತ್ತಮುತ್ತ ಕಣ್ಗಾವಲು ನಡೆಸಿದ್ದಾರೆ. ‘ಮನೆಗೆ ಹೋಗಿ ಸುರಕ್ಷಿತವಾಗಿ ಧರಿಸಿಕೊಳ್ಳಿ’ ಎಂದು ಹೇಳಿ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಮನೆಗೆ ತೆರಳಿ ಗಂಟು ಬಿಚ್ಚಿ ನೋಡಿದಾಗ ಚಿನ್ನಾಭರಣಗಳ ಬದಲು ಕಲ್ಲುಗಳಿರುವುದು ಬೆಳಕಿಗೆ ಬಂದಿದೆ.

ಪ್ರಕರಣ ದಾಖಲು

ಘಟನೆಯಿಂದ ಬೆಚ್ಚಿಬಿದ್ದ ಗಾಯತ್ರಿ ತಕ್ಷಣ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಬಳಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ನಾಲ್ವರು ಆರೋಪಿಗಳ ಕೃತ್ಯ ಬಹಿರಂಗವಾಗಿದೆ. ಈ ಸಂಬಂಧ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಗಳ ಆಧಾರದ ಮೇಲೆ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.