ರಿಷಭ್ ಪಂತ್ ಟೀಂ ಇಂಡಿಯಾ ಟಿ20 ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಕಷ್ಟಪಡಬೇಕೆಂದ ಮಾಜಿ ಕ್ರಿಕೆಟಿಗ..!
* ಭಾರತ-ದಕ್ಷಿಣ ಆಫ್ರಿಕಾ ನಡುವಿನ 5ನೇ ಟಿ20 ಪಂದ್ಯಕ್ಕೆ ಕ್ಷಣಗಣನೆ
* ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ ರಿಷಭ್ ಪಂತ್
* ರಿಷಭ್ ಪಂತ್ಗಿಂತ ದಿನೇಶ್ ಪಂತ್ ಆಯ್ಕೆ ಉತ್ತಮ ಎಂದ ಮಾಜಿ ಕ್ರಿಕೆಟಿಗ
ಮುಂಬೈ(ಜೂ.19): ಅನುಭವಿ ವಿಕೆಟ್ ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik), ಟಿಂ ಇಂಡಿಯಾಗೆ ಕಮ್ಬ್ಯಾಕ್ ಮಾಡಿದ ಬಳಿಕ ಭಾರತ ಕ್ರಿಕೆಟ್ ತಂಡವು ಮತ್ತಷ್ಟು ಬಲಿಷ್ಠವಾಗಿ ಕಾಣಿಸಿಕೊಳ್ಳಲಾರಂಭಿಸಿದೆ. ಇದೇ ವೇಳೆ ಪ್ರತಿಭಾನ್ವಿತ ವಿಕೆಟ್ ಕೀಪರ್ ರಿಷಭ್ ಪಂತ್ ಬ್ಯಾಟಿಂಗ್ ಫಾರ್ಮ್ ಸಮಸ್ಯೆ ಭಾರತ ಕ್ರಿಕೆಟ್ ತಂಡದ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಕಾಡಲಾರಂಭಿಸಿದೆ. ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಲ್ಲಿ ಹಂಗಾಮಿ ನಾಯಕರಾಗಿ ಭಾರತ ತಂಡವನ್ನು ಮುನ್ನಡೆಸುತ್ತಿರುವ ರಿಷಭ್ ಪಂತ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ತೋರಲು ವಿಫಲವಾಗುತ್ತಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಸರಣಿಗೆ ಅನುಭವಿ ಆಟಗಾರರಾದ ರೋಹಿತ್ ಶರ್ಮಾ (Rohit Sharma), ವಿರಾಟ್ ಕೊಹ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಗಾಯದ ಸಮಸ್ಯೆಯಿಂದಾಗಿ ಕೆ ಎಲ್ ರಾಹುಲ್, ಸೂರ್ಯಕುಮಾರ್ ಯಾದವ್ ಕೂಡಾ ತಂಡದಿಂದ ಹೊರಬಿದ್ದಿದ್ದಾರೆ. ಬಹುತೇಕ ಈ ನಾಲ್ವರು ಆಟಗಾರರು ಆಸ್ಟ್ರೇಲಿಯಾದಲ್ಲಿ ಮುಂಬರುವ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಿನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ. ಇನ್ನು ಇತ್ತೀಚಿಗಿನ ಪ್ರದರ್ಶನವನ್ನು ಗಮನಿಸಿದರೇ ಹಾರ್ದಿಕ್ ಪಾಂಡ್ಯ (Hardik Pandya) ಹಾಗೂ ದಿನೇಶ್ ಕಾರ್ತಿಕ್ ಕೂಡಾ ಟಿ20 ವಿಶ್ವಕಪ್ ಟೂರ್ನಿಗೆ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆಯಿಡಲಾರಂಭಿಸಿದ್ದಾರೆ.
ಒಂದು ವೇಳೆ ಈ ಎಲ್ಲಾ ಆಟಗಾರರು ಆಯ್ಕೆಗೆ ಲಭ್ಯವಾದರೇ ವಿಕೆಟ್ ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant), ಟೀಂ ಇಂಡಿಯಾ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಬಹುದು ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸೀಂ ಜಾಫರ್ ಅಭಿಪ್ರಾಯಪಟ್ಟಿದ್ದಾರೆ. 'ಮುಂದಿನ ಟಿ20 ಪಂದ್ಯಕ್ಕೆ ಭಾರತ ತಂಡವನ್ನು ಆಯ್ಕೆ ಮಾಡಿದರೇ ದಿನೇಶ್ ಕಾರ್ತಿಕ್ ಸಹಜವಾಗಿಯೇ ಆಡುವ ಹನ್ನೊಂದರ ಬಳಗದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೆ ಎಲ್ ರಾಹುಲ್, ಸಂಪೂರ್ಣ ಫಿಟ್ ಆದರೆ ಅವರೂ ತಂಡ ಕೂಡಿಕೊಳ್ಳುತ್ತಾರೆ. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಕೂಡಾ ತಂಡದೊಳಗಿರಲಿದ್ದಾರೆ. ಹೀಗಾಗಿ ರಿಷಭ್ ಪಂತ್ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯುವುದು ಕಷ್ಟವಾಗಬಹುದು ಎಂದು ESPNcricinfo ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ಮೊಹಮ್ಮದ್ ಶಮಿಗೆ ಟೀಂ ಇಂಡಿಯಾ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗೋದು ಡೌಟ್ ಎಂದ ಮಾಜಿ ವೇಗಿ..!
ಸದ್ಯದ ಮಟ್ಟಿಗಂತೂ ದಿನೇಶ್ ಕಾರ್ತಿಕ್, ರಿಷಭ್ ಪಂತ್ ಎದುರು ಮೇಲುಗೈ ಸಾಧಿಸಿದ್ದಾರೆ. ದಿನೇಶ್ ಕಾರ್ತಿಕ್ ಭವಿಷ್ಯದ ಬಗ್ಗೆ ನಾನೇನು ಹೇಳಲಾರೆ. ಆದರೆ ಸದ್ಯದ ಫಾರ್ಮ್ ಗಮನಿಸಿದರೇ ರಿಷಭ್ ಪಂತ್ಗಿಂತ ದಿನೇಶ್ ಕಾರ್ತಿಕ್ ಅವರನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ ನಿರ್ಧಾರವಾಗಬಲ್ಲದು ಎಂದು ವಾಸೀಂ ಜಾಫರ್ (Wasim Jaffer) ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಎದುರಿನ ಮೊದಲ ಟಿ20 ಪಂದ್ಯದಲ್ಲಿ ರಿಷಭ್ ಪಂತ್ ಕೇವಲ 16 ಎಸೆತಗಳಲ್ಲಿ 29 ರನ್ ಚಚ್ಚಿದ್ದರು. ಇದಾದ ಬಳಿಕ ನಡೆದ ಮೂರು ಟಿ20 ಪಂದ್ಯಗಳಲ್ಲಿ ಪಂತ್ ಕೇವಲ 5, 6 ಹಾಗೂ 17 ರನ್ಗಳನ್ನಷ್ಟೇ ಗಳಿಸಲು ಯಶಸ್ವಿಯಾಗಿದ್ದರು. ನಾಯಕತ್ವ ಹಾಗೂ ಕೀಪಿಂಗ್ ಜತೆಗೆ ಬ್ಯಾಟಿಂಗ್ನತ್ತ ಗಮನಕೊಡಲು ಪಂತ್ಗೆ ಹೊರೆಯಾದಂತೆ ಕಂಡುಬರುತ್ತಿದೆ.
ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ 5 ಪಂದ್ಯಗಳ ಟಿ20 ಸರಣಿಯಲ್ಲಿ ಉಭಯ ತಂಡಗಳು 2-2ರ ಸಮಬಲ ಸಾಧಿಸಿದ್ದು, ಕೊನೆಯ ಹಾಗೂ ನಿರ್ಣಾಯಕ ಪಂದ್ಯಕ್ಕಿಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಸಾಕ್ಷಿಯಾಗಲಿದೆ. ಸತತ ಎರಡು ಸೋಲಿನ ಬಳಿಕ 2 ಗೆಲುವು ದಾಖಲಿಸಿರುವ ಟೀಂ ಇಂಡಿಯಾ, ಹ್ಯಾಟ್ರಿಕ್ ಜಯದ ಮೂಲಕ ಸರಣಿ ಕೈವಶ ಮಾಡಿಕೊಳ್ಳುವ ಕನಸು ಕಾಣುತ್ತಿದೆ.