ಅಫ್ಘಾನಿಸ್ತಾನ ವಿರುದ್ಧದ 2ನೇ ಟಿ20 ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಭಾರತ 7 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಭಾರತ ಕೈವಶಪಡಿಸಿಕೊಂಡಿದೆ. ಆಫ್ಘನ್ ನೀಡಿದ್ದ 159 ರನ್‌ಗಳ ಗುರಿಯನ್ನು ಭಾರತ ಕೇವಲ 14.5 ಓವರ್‌ಗಳಲ್ಲಿ ತಲುಪಿತು.

ನವದೆಹಲಿ: ಬೌಲರ್‌ಗಳ ಬಿಗು ದಾಳಿ ಬಳಿಕ ಸಂಜು ಸ್ಯಾಮ್ಸನ್‌ ಸ್ಫೋಟಕ ಆಟಕ ನೆರವಿನಿಂದ ಭಾರತ ತಂಡ ಆತಿಥೇಯ ಅಫ್ಘಾನಿಸ್ತಾನ ವಿರುದ್ಧ 2ನೇ ಟಿ20 ಪಂದ್ಯದಲ್ಲಿ 7 ವಿಕೆಟ್‌ ಭರ್ಜರಿ ಗೆಲುವು ಸಾಧಿಸಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ಕೈವಶಪಡಿಸಿಕೊಂಡಿದೆ.

ಮೊದಲು ಬ್ಯಾಟ್‌ ಮಾಡಿದ ಆಫ್ಘನ್‌ 8 ಓವರ್‌ಗಳಲ್ಲಿ 159 ರನ್‌ ಗಳಿಸಿತು. ನಾಯಕ ಇಬ್ರಾಹಿಂ ಜದ್ರಾನ್‌ 37, ದರ್ವಿಶ್‌ ರಸೂಲಿ 26, ರಶೀದ್‌ ಖಾ್‌ 16 ಎಸೆತಕ್ಕೆ 28, ನಬಿ 20 ರನ್‌ ಬಾರಿಸಿದರು. ನಿತೀಶ್‌ ಕುಮಾರ್‌ 3, ಅರ್ಶ್‌ದೀಪ್‌ ಸಿಂಗ್‌ 2 ವಿಕೆಟ್‌ ಪಡೆದರು.

ಸ್ಪೋಟಕ ಅರ್ಧಶತಕ ಚಚ್ಚಿದ ಸಂಜು ಸ್ಯಾಮ್ಸನ್

ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಭಾರತಕ್ಕೆ ಅಭಿಷೇಕ್‌ ಶರ್ಮಾ-ಸಂಜು ಸ್ಯಾಮ್ಸನ್‌ ಆಸರೆಯಾದರು. ಈ ಜೋಡಿ ಮೊದಲ ವಿಕೆಟ್‌ಗೆ 6.2 ಓವರ್‌ಗಳಲ್ಲೇ 88 ರನ್‌ ಸೇರಿಸಿತು. ಅಭಿಷೇಕ್‌ 19 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್‌ನೊಂದಿಗೆ 39 ರನ್‌ ಗಳಿಸಿ ಔಟಾದರೆ, ಸಂಜು 22 ಎಸೆತಗಳಲ್ಲಿ 7 ಬೌಂಡರಿ, 4 ಸಿಕ್ಸರ್‌ನೊಂದಿಗೆ 57 ರನ್‌ ಚಚ್ಚಿದರು. ಇಶಾನ್‌ ಕಿಶನ್‌ 23 ಎಸೆತಕ್ಕೆ 38 ರನ್‌ ಕೊಡುಗೆ ನೀಡಿದರು. ತಂಡ 14.5 ಓವರ್‌ಗಳಲ್ಲೇ ಗೆಲುವಿನ ದಡ ಸೇರಿತು. ರಶೀದ್‌ 3 ವಿಕೆಟ್‌ ಕಿತ್ತರು.

ಸ್ಕೋರ್‌: ಅಫ್ಘಾನಿಸ್ತಾನ 20 ಓವರಲ್ಲಿ 159/8 (ಜದ್ರಾನ್‌ 37, ರಶೀದ್‌ 28, ನಿತೀಶ್‌ 3-24, ಅರ್ಶ್‌ದೀಪ್‌ 2-35), ಭಾರತ 14.5 ಓವರಲ್ಲಿ 163/3 (ಸಂಜು 57, ಅಭಿಷೇಕ್‌ 39, ಇಶಾನ್‌ ಔಟಾಗದೆ 38, ರಶೀದ್‌ 3-36)

10ನೇ ಸೋಲು: ಆಫ್ಘನ್‌ಗೆ ಇದು ಭಾರತ ವಿರುದ್ಧ ಸತತ 10ನೇ ಟಿ20 ಸೋಲು. ಇದು ಭಾರತ ವಿರುದ್ಧ ಯಾವುದೇ ತಂಡಗಳ ಪೈಕಿ ಗರಿಷ್ಠ.

09ನೇ ಬಾರಿ: 2024ರ ಟಿ20 ವಿಶ್ವಕಪ್‌ ಬಳಿಕ ಭಾರತ ಟಿ20 ಪಂದ್ಯದ ಪವರ್‌ಪ್ಲೇನಲ್ಲಿ 9 ಬಾರಿ 75ಕ್ಕೂ ಹೆಚ್ಚು ರನ್‌ ಗಳಿಸಿದೆ. ಇದು ದಾಖಲೆ.

ಗಾಯ: ವರುಣ್‌ ಆಫ್ಘನ್ ಸರಣಿಯಿಂದಲೇ ಹೊರಕ್ಕೆ, ಏಷ್ಯಾಡ್‌ಗೂ ಅನುಮಾನ

ನವದೆಹಲಿ: ಭಾರತದ ತಾರಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಮತ್ತೊಮ್ಮೆ ಗಾಯಗೊಂಡಿದ್ದು, ಸದ್ಯ ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಿಂದ ಹೊರಬಿದ್ದಿದ್ದಾರೆ. ಅವರು ಮುಂಬರುವ ಏಷ್ಯನ್‌ ಗೇಮ್ಸ್‌ನಲ್ಲೂ ಆಡುವುದು ಅನುಮಾನವೆನಿಸಿದೆ. ಇಂಗ್ಲೆಂಡ್‌ ಸರಣಿಯಲ್ಲಿ ಗಾಯಗೊಂಡಿದ್ದ ವರುಣ್‌ ಇತ್ತೀಚೆಗಷ್ಟೇ ಚೇತರಿಸಿಕೊಂಡಿದ್ದರು. ಅಫ್ಘಾನಿಸ್ತಾನ ವಿರುದ್ಧ ಪಂದ್ಯದಲ್ಲಿ 4 ಓವರ್‌ನಲ್ಲಿ 16 ರನ್‌ ನೀಡಿ 1 ವಿಕೆಟ್‌ ಪಡೆದಿದ್ದರು. ಆದರೆ ಪಂದ್ಯದಲ್ಲಿ ಸ್ನಾಯುಸೆಳೆತಕ್ಕೆ ಒಳಗಾದ ಅವರು ಸರಣಿಯಿಂದಲೇ ಹೊರಬಿದ್ದಿದ್ದಾರೆ. ಸೆ.19ರಿಂದ ಏಷ್ಯನ್‌ ಗೇಮ್ಸ್‌ ಆರಂಭಗೊಳ್ಳಲಿದ್ದು, ಅದಕ್ಕೂ ಮುನ್ನ ವರುಣ್‌ ಚೇತರಿಸಿಕೊಳ್ಳುವುದು ಅನುಮಾನ. ಹೀಗಾಗಿ ಕೂಟದ ಕ್ರಿಕೆಟ್‌ಗೂ ಅವರು ಗೈರಾಗುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.