ದಾಂಬುಲ್ಲಾದಲ್ಲಿ ನಡೆದ ಭಾರತ 'ಎ' ಮತ್ತು ಶ್ರೀಲಂಕಾ 'ಎ' ನಡುವಿನ ಕ್ರಿಕೆಟ್ ಪಂದ್ಯದ ನಂತರ ಆಟಗಾರರ ನಡುವೆ ಗಲಾಟೆ ನಡೆದಿತ್ತು. ಈ ಪ್ರಕರಣದಲ್ಲಿ, ಬಿಸಿಸಿಐ ತನ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಕ್ರಮ ಕೈಗೊಳ್ಳದಿರಲು ನಿರ್ಧರಿಸಿದೆ. ಆದರೆ, ಜಗಳಕ್ಕೆ ಕಾರಣನಾದ ಶ್ರೀಲಂಕಾ ಆಟಗಾರನ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ.

ದಾಂಬುಲ್ಲಾ: ತ್ರಿರಾಷ್ಟ್ರ ಏಕದಿನ ಸರಣಿಯ ಭಾಗವಾಗಿ ಭಾರತ 'ಎ' ಮತ್ತು ಶ್ರೀಲಂಕಾ 'ಎ' ತಂಡಗಳ ನಡುವಿನ ಪಂದ್ಯದ ನಂತರ ಮೈದಾನದಲ್ಲಿ ನಡೆದ ಗಲಾಟೆ ಪ್ರಕರಣದಲ್ಲಿ, ಬಿಸಿಸಿಐ ತನ್ನ 15 ವರ್ಷದ ಯುವ ಆಟಗಾರ ವೈಭವ್ ಸೂರ್ಯವಂಶಿ ಮೇಲೆ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ವೈಭವ್ ಅವರನ್ನು ನಿರಂತರವಾಗಿ ನಿಂದಿಸಿ ಜಗಳಕ್ಕೆ ಕಾರಣನಾದ ಶ್ರೀಲಂಕಾ ಆಟಗಾರ ವಿಶೇನ್ ಹಾಲಂಬಾಗೆ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಸೋಮವಾರ ದಾಂಬುಲ್ಲಾದಲ್ಲಿ ನಡೆದ ಪಂದ್ಯದಲ್ಲಿ ಭಾರತ 'ಎ' ತಂಡ ಸೂಪರ್ ಓವರ್‌ನಲ್ಲಿ ಸೋತ ಬೆನ್ನಲ್ಲೇ ಎರಡೂ ತಂಡಗಳ ಆಟಗಾರರ ನಡುವೆ ತೀವ್ರ ವಾಗ್ವಾದ ಮತ್ತು ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿತ್ತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪಂದ್ಯದ ನಂತರ ಎದುರಾಳಿ ಆಟಗಾರನೊಂದಿಗೆ ಗಲಾಟೆಯಲ್ಲಿ ಭಾಗಿಯಾಗಿದ್ದರಿಂದ, ಬಿಸಿಸಿಐ ಯುವ ಆಟಗಾರ ವೈಭವ್ ಸೂರ್ಯವಂಶಿಗೆ ಶೋಕಾಸ್ ನೋಟಿಸ್ ಅಥವಾ ಎಚ್ಚರಿಕೆ ನೀಡಬಹುದು ಎಂಬ ವರದಿಗಳಿದ್ದವು. ಆದರೆ, ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಈ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ. "ಆಟಗಾರರು ಆಟದ ಕಡೆ ಗಮನ ಕೊಡಲಿ. ಬೇರೆ ಬಾಹ್ಯ ವಿಷಯಗಳಿಗೆ ಅವರ ಗಮನ ಬೇರೆಡೆ ಹೋಗುವುದು ನಮಗೆ ಇಷ್ಟವಿಲ್ಲ," ಎಂದು ದೇವಜಿತ್ ಸೈಕಿಯಾ ಹೇಳುವ ಮೂಲಕ ಬಿಸಿಸಿಐ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

ಲಂಕಾ ಆಟಗಾರನಿಗೆ ಕಠಿಣ ಶಿಕ್ಷೆ, ಡಿಕ್ವೆಲ್ಲಗೂ ದಂಡ!

ಇನ್ನೊಂದೆಡೆ, ಜಗಳಕ್ಕೆ ಮೂಲ ಕಾರಣನಾದ ವಿಶೇನ್ ಹಾಲಂಬಾಗೆ ವಿರುದ್ಧ ಶ್ರೀಲಂಕಾ ಕ್ರಿಕೆಟ್ ಮಂಡಳಿ ಕಠಿಣ ಕ್ರಮ ಕೈಗೊಂಡಿದೆ ಎಂದು ಕ್ರಿಕ್‌ಬಝ್ ವರದಿ ಮಾಡಿದೆ. ಜೂನ್ 9ರಂದು ನಡೆದ ಮೊದಲ ಪಂದ್ಯದಲ್ಲೂ ಹಾಗೂ ಸೋಮವಾರದ ಪಂದ್ಯದಲ್ಲೂ ಹಾಲಂಬಾಗೆ, ವೈಭವ್ ಅವರನ್ನು ನಿರಂತರವಾಗಿ ನಿಂದಿಸಿದ್ದ. ಈ ಟೂರ್ನಿಯು ಐಸಿಸಿಯ ನೇರ ಶಿಸ್ತು ಕ್ರಮದ ವ್ಯಾಪ್ತಿಗೆ ಬರದ ಕಾರಣ, ಮ್ಯಾಚ್ ರೆಫರಿ ಪ್ರದೀಪ್ ಜಯಪ್ರಕಾಶ್ ಅವರ ವರದಿಯನ್ನು ಆಧರಿಸಿ ಶ್ರೀಲಂಕಾ ಕ್ರಿಕೆಟ್ ಮಂಡಳಿಯೇ ಆಟಗಾರರಿಗೆ ದಂಡ ಮತ್ತು ಶಿಕ್ಷೆ ವಿಧಿಸಿದೆ.

Scroll to load tweet…

ಜಗಳವನ್ನು ಸಮಾಧಾನಪಡಿಸಲು ಮಧ್ಯಪ್ರವೇಶಿಸಿದ್ದ ಶ್ರೀಲಂಕಾ 'ಎ' ತಂಡದ ಹಿರಿಯ ಆಟಗಾರ ಮತ್ತು ವಿಕೆಟ್ ಕೀಪರ್ ನಿರೋಷನ್ ಡಿಕ್‌ವೆಲ್ಲ ಅವರಿಗೂ ದಂಡ ವಿಧಿಸಲಾಗಿದೆ. ಆದರೆ, ಇದು ಈ ಗಲಾಟೆಗೆ ಸಂಬಂಧಿಸಿದ್ದಲ್ಲ, ಬದಲಾಗಿ ಪಂದ್ಯದ ವೇಳೆ ಅವರು ಮಾಡಿದ ಬೇರೊಂದು ಶಿಸ್ತು ಉಲ್ಲಂಘನೆಗಾಗಿ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಸೂರ್ಯವಂಶಿಯನ್ನು ಪದೇ ಪದೇ ಕೆಣಕ್ಕಿದ್ದ ಹಾಲಂಬಾಗೆ

ಜೂನ್ 9ರ ಪಂದ್ಯದಿಂದಲೇ ಹಾಲಂಬಾಗೆ, ವೈಭವ್ ಸೂರ್ಯವಂಶಿಯನ್ನು ಕೆಣಕಲು ಆರಂಭಿಸಿದ್ದ. ಸೋಮವಾರದ ಪಂದ್ಯದಲ್ಲಿ ಭಾರತ 'ಎ' ತಂಡ ಸೂಪರ್ ಓವರ್‌ನಲ್ಲಿ ಬ್ಯಾಟಿಂಗ್‌ಗೆ ಇಳಿದಾಗ ಈ ಸ್ಲೆಡ್ಜಿಂಗ್ ಮಿತಿ ಮೀರಿತ್ತು. "ಮನೆಗೆ ಹೋಗು, ಇದು ನಿನ್ನ ಐಪಿಎಲ್ ಅಲ್ಲ" ಎಂಬಂತಹ ಕೀಳು ಮಟ್ಟದ ಮಾತುಗಳನ್ನು ಲಂಕಾ ಆಟಗಾರ ಭಾರತೀಯ ಓಪನರ್ ವೈಭವ್ ಸೂರ್ಯವಂಶಿ ವಿರುದ್ಧ ಬಳಸಿದ್ದ ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪಂದ್ಯದ ನಂತರ ಗಲಾಟೆ ನಡೆದಿದೆ.

ರೋಚಕ ಗೆಲುವಿನ ಹೊರತಾಗಿಯೂ ಇಂತಹ ಕೆಟ್ಟ ವರ್ತನೆಯಿಂದಾಗಿ ಗೆಲುವಿಗೆ ಕಪ್ಪುಚುಕ್ಕೆ ಬಂದಂತಾಗಿದ್ದಕ್ಕೆ ಶ್ರೀಲಂಕಾ ತಂಡದ ಬಹುತೇಕ ಆಟಗಾರರು ಮತ್ತು ಮ್ಯಾನೇಜ್‌ಮೆಂಟ್‌ಗೆ ತೀವ್ರ ಅಸಮಾಧಾನವಿದೆ. ಈ ಘಟನೆಗೆ ಶ್ರೀಲಂಕಾ ತಂಡ ಅಧಿಕೃತವಾಗಿ ಭಾರತದ ಬಳಿ ಕ್ಷಮೆ ಕೇಳಿದೆಯೇ ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ, ಬಿಸಿಸಿಐ ಮಾತ್ರ ವೈಭವ್ ಅವರನ್ನು ಸಂಪೂರ್ಣವಾಗಿ ರಕ್ಷಿಸುವ ನಿಲುವು ತಾಳಿದೆ.