ಗುಟ್ಕಾ ಜಾಹೀರಾತು ಕೊಟ್ಟ ಜನರ ಹಾದಿ ತಪ್ಪಿಸಲಾರೆ ಎಂದು ಅಕ್ಷಯ್​ ಕುಮಾರ್ ಅದರಿಂದ ಹೊರಕ್ಕೆ ಬಂದಿದ್ದು, ಅವರ ಜಾಗಕ್ಕೆ ಟೈಗರ್​ ಶ್ರಾಫ್​ ಎಂಟ್ರಿ ಆಗಿದೆ.  

ಜನರ ಹಾದಿ ತಪ್ಪಿಸುವ ಜಾಹೀರಾತುಗಳಿಗೇನೂ ಕೊರತೆ ಇಲ್ಲ. ಅದರಲ್ಲಿಯೂ ಪ್ರಾಣಕ್ಕೆ ಕುತ್ತು ತರುವ, ದೇಹದ ಅಂಗಾಂಗಳಿಗೆ ಶಾಶ್ವತ ನಷ್ಟ ಉಂಟು ಮಾಡುವ ಜಾಹೀರಾತುಗಳಿಗೆ ಕಡಿವಾಣವೂ ಬಿದ್ದಿಲ್ಲ. ಒಂದಷ್ಟು ತಿಂಗಳು ಕೋರ್ಟ್​ ಇಲ್ಲವೇ ಸರ್ಕಾರ ಇದನ್ನು ಬ್ಯಾನ್​ ಮಾಡಿದರೆ, ಮತ್ತೆ ಜಾಹೀರಾತುಗಳು ಮುಂದುವರೆಯುತ್ತವೆ. ಚಲನಚಿತ್ರಗಳಲ್ಲಿ ಕೋಟಿ ಕೋಟಿ ಸಂಭಾವನೆ ಪಡೆಯುವ ಸ್ಟಾರ್​ ನಟರು ನಿಜ ಜೀವನದಲ್ಲಿ ಇಂಥ ಪದಾರ್ಥಗಳ ಸೇವನೆ ಮಾಡದಿದ್ದರೂ ದುಡ್ಡಿನ ಆಸೆಗೆ ಬಿದ್ದು, ಜಾಹೀರಾತುಗಳ ಬ್ರಾಂಡ್​ ಅಂಬಾಸಿಡರ್​ ಆಗುತ್ತಾರೆ. ಇಂಥ ನಟರನ್ನೇ ದೇವರು ಎಂದು ನಂಬಿರುವ ಅದೆಷ್ಟೋ ಮಂದಿ ಅಂದಾಭಿಮಾನಿಗಳು ಅವರನ್ನೇ ಫಾಲೋ ಮಾಡುವುದು ಇದೆ. ಕ್ರಿಕೆಟ್​ ತಾರೆಯರೂ ಇದಕ್ಕೆ ಹೊರತಾಗಿಲ್ಲ. ತಾವು ಜೀವಕ್ಕೆ ಹಾನಿ ಮಾಡಿಕೊಳ್ಳದಿದ್ದರೂ, ತಾವು ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳುವ ಪದಾರ್ಥಗಳನ್ನು ನಿಜ ಜೀವನದಲ್ಲಿ ಒಮ್ಮೆಯೂ ಮುಟ್ಟದಿದ್ದರೂ ಕೋಟಿ ಕೋಟಿ ದುಡ್ಡಿನ ಹಿಂದೆ ಬಿದ್ದು, ಜನರ ಹಾದಿ ತಪ್ಪಿಸುವುದು ಯಥೇಚ್ಛವಾಗಿ ನಡೆಯುತ್ತಲೇ ಸಾಗಿದೆ. ದುರದೃಷ್ಟ ಎಂದರೆ ಹೀಗೆ ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಜಾಹೀರಾತುಗಳತ್ತ ಗಮನ ಹರಿಸಬೇಕಾದವರು ಹರಿಸದೇ ಇರುವುದು!

 ಕೆಲ ತಿಂಗಳಿನಿಂದ ಅಕ್ಷಯ್​ ಕುಮಾರ್​ ಅವರ ವಿಮಲ್​ ಪಾನ್​ ಮಸಾಲಾ ಜಾಹೀರಾತು ಸೋಷಿಯಲ್​ ಮೀಡಿಯಾದಲ್ಲಿ ಸಕತ್ ಸದ್ದು ಮಾಡಿತ್ತು. ಈ ಜಾಹೀರಾತಿನಲ್ಲಿ ಇದರಿಂದ ಅಕ್ಷಯ್​ ಕುಮಾರ್​ ಸಕತ್​ ಟ್ರೋಲ್​ ಕೂಡ ಆಗಿದ್ದರು. ಈ ಜಾಹೀರಾತಿನಲ್ಲಿ ಬಾಲಿವುಡ್​ ಕಿಂಗ್​ ಎಂದೇ ಖ್ಯಾತಿ ಪಡೆದಿರುವ ಶಾರುಖ್​ ಖಾನ್​ ಹಾಗೂ ಅಜಯ್ ದೇವಗನ್​ ಕೂಡ ಇದ್ದಾರೆ. ಈ ಮೂವರ ಜೋಡಿ ವಿಮಲ್ ಪಾನ್​ ಮಸಾಲಾ ಜಾಹೀರಾತು ಮಾಡುತ್ತಾ ಬಂದಿದ್ದು ಬಹಳ ವರ್ಷಗಳೇ ಕಳೆದಿವೆ. ಇವರಿಂದ ಪ್ರಭಾವಿತರಾಗಿ ಇದರ ಚಟಕ್ಕೆ ದಾಸರಾಗಿರುವವರೂ ಲೆಕ್ಕವಿಲ್ಲದಷ್ಟು. ಯಾವಾಗಲೂ ಫಿಟ್​ನೆಸ್ ಬಗ್ಗೆ ಮಾತನಾಡುವ ಅಕ್ಷಯ್ ಕುಮಾರ್ ಗುಟ್ಕಾ ಜಾಹೀರಾತಿನಲ್ಲಿ ನಟಿಸಿದ್ದು ಸರಿ ಅಲ್ಲ ಅವರ ಅಭಿಮಾನಿಗಳು ಸಾಕಷ್ಟು ಟೀಕಿಸಿದ್ದರು. ಇದಾದ ಬೆನ್ನಲ್ಲೇ ವಿಮಲ್​ ಜಾಹೀರಾತಿನಲ್ಲಿ ನಟಿಸುವುದಿಲ್ಲ ಎಂದು ಅಕ್ಷಯ್​ ಹೇಳಿದ್ದರು. 

ಐಶ್ವರ್ಯ, ಅಮಿತಾಭ್​ ನಡುವೆ ಕೊಹ್ಲಿಯನ್ನೂ ಎಳೆತಂದ ರಾಹುಲ್​ ಗಾಂಧಿ: ಅಭಿಮಾನಿಗಳಿಂದ ಭಾರಿ ಆಕ್ರೋಶ

2022ರ ಏಪ್ರಿಲ್​ನಲ್ಲಿ ಟ್ವೀಟ್ ಮಾಡಿದ್ದ ಅಕ್ಷಯ್, ‘ದಯವಿಟ್ಟು ನನ್ನ ಕ್ಷಮಿಸಿ. ಎಲ್ಲರ ಬಳಿ ನಾನು ಕ್ಷಮೆ ಕೇಳುತ್ತೇನೆ. ನೀವು ನೀಡಿರುವ ಎಲ್ಲಾ ಪ್ರತಿಕ್ರಿಯೆ ನನ್ನ ಮೇಲೆ ಪರಿಣಾಮ ಬೀರಿದೆ. ನಾನು ತಂಬಾಕು ಸೇವನೆ ಉತ್ತೇಜಿಸುವುದಿಲ್ಲ. ಮಾನವೀಯತೆಯ ಕಾರಣದಿಂದ ನಾನು ಈ ಅಡ್ವಟೈಸ್​ಮೆಂಟ್​ನಿಂದ ಹಿಂದೆ ಸರಿಯುತ್ತೇನೆ. ಇದರ ಸಂಭಾವನೆಯನ್ನು ಒಳ್ಳೆಯ ಉದ್ದೇಶಕ್ಕೆ ನೀಡಲು ಬಯಸಿದ್ದೇನೆ. ಬ್ರ್ಯಾಂಡ್​ನವರು ಒಪ್ಪಂದದ ಅವಧಿ ಮುಗಿಯುವವರೆಗೂ ಆ ಜಾಹೀರಾತನ್ನು ಟೆಲಿಕಾಸ್ಟ್ ಮಾಡಬಹುದು. ಮುಂಬರುವ ದಿನಗಳಲ್ಲಿ ನಾನು ಜಾಹೀರಾತುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆಯಿಂದ ಇರುತ್ತೇನೆ’ ಎಂದಿದ್ದರು ಅಕ್ಷಯ್ ಕುಮಾರ್. 

ಅದರಂತೆ ಈಗ ಅವರು ಈ ಜಾಹೀರಾತಿನಿಂದ ಹೊರಕ್ಕೆ ಬಂದಿದ್ದಾರೆ. ಆದರೆ ಅವರ ಜಾಗಕ್ಕೆ ಈಗ ಬಾಲಿವುಡ್​ನ ಇನ್ನೋರ್ವ ನಟ ಟೈಗರ್​ ಶ್ರಾಫ್​ ಎಂಟ್ರಿ ಆಗಿದೆ! ಈ ಮೊದಲು ಅಮಿತಾಭ್ ಬಚ್ಚನ್ ಕೂಡ ಪಾನ್ ಮಸಾಲ ಜಾಹೀರಾತಲ್ಲಿ ಕಾಣಿಸಿಕೊಂಡು ವಿರೋಧಕ್ಕೆ ಒಳಗಾಗಿದ್ದರು. ಹೀಗಾಗಿ ಅವರು ಆ ಬ್ರ್ಯಾಂಡ್​ನಿಂದ ಹಿಂದೆ ಸರಿದಿದ್ದರು. ಅದೇನೇ ಇದ್ದರೂ ಶಾರುಖ್​ ಖಾನ್​ ಮತ್ತು ಅಜಯ್​ ದೇವಗನ್​ ಗಪ್​ಚುಪ್​ ಆಗಿದ್ದು, ಜಾಹೀರಾತಿನಲ್ಲಿ ಮುಂದುವರೆದಿದ್ದಾರೆ. ಇದರಿಂದ ಇವರ ಅಭಿಮಾನಿಗಳಿಗೆ ಸಹಜವಾಗಿ ಬೇಸರ ಮೂಡಿಸಿದೆ. ಇಂಥವರನ್ನು ದೇವರು ಎಂದು ಪೂಜಿಸುತ್ತಾರೆ ಎಷ್ಟೋ ಮಂದಿ, ನಾಚಿಕೆ ಇಲ್ಲದವರು ಇವರು. ತಾವುಕೋಟಿ ಕೋಟಿ ಹಣ ಪಡೆದು ತಮ್ಮನ್ನು ನಂಬಿ ಪೂಜಿಸುವವರ ಜೀವವನ್ನೇ ಬಲಿ ತೆಗೆಯುವ ಕಟುಕರು ಎಂದೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ಹೊರಹಾಕಲಾಗಿತ್ತು. ಇದರ ಬೆನ್ನಲ್ಲೇ ಅಕ್ಷಯ್​ ಕುಮಾರ್​ ಜಾಹೀರಾತಿನಿಂದ ಹಿಂದಕ್ಕೆ ಸರಿದಿದ್ದು, ಇದೀಗ ಒಪ್ಪಂದ ಮುಗಿದಿದೆ ಎಂದು ತಿಳಿಸಿದ್ದಾರೆ. ಟೈಗರ್​ ಶ್ರಾಫ್​ ತಾವು ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಾಗಿ ಮುಂದೆ ಬಂದಿದ್ದಾರೆ.

ಮದ್ವೆ ಬೇಡ, ಇವ್ನ ಜೊತೆ ಎಂಜಾಯ್​ ಮಾಡ್ತಿದ್ದೇನೆಂದ ಶ್ರುತಿ ಹಾಸನ್ 2ನೇ ಬಾಯ್​ಫ್ರೆಂಡ್​ಗೂ ಗುಡ್​ಬೈ ಹೇಳಿದ್ರಾ?