ಈ ಕಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಮಾಯಾನಗರಿ ಮುಂಬೈವರೆಗೂ ಹಬ್ಬಿದೆ. ಆದಿತ್ಯ ಧರ್ ಅವರು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ವಿರುದ್ಧ ಕೇಸ್ ಹಾಕಿದ್ದಾರೆ. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು "ಕೋರ್ಟ್ ತೀರ್ಪು ಬರುವವರೆಗೆ ಯಾವುದೇ ಅವಹೇಳನಕಾರಿ ಮಾತು ಆಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ.

ಧುರಂಧರ್‌ ಚಿತ್ರತಂಡಕ್ಕೆ ರಿಲೀಫ್

ಬಾಕ್ಸ್ ಆಫೀಸ್‌ನಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದ 'ಧುರಂಧರ್' (Dhurandhar) ಸಿನಿಮಾ ಈಗ ನ್ಯಾಯಾಲಯದ ಅಂಗಳದಲ್ಲಿ ಹೈವೋಲ್ಟೇಜ್ ಡ್ರಾಮಾ ಸೃಷ್ಟಿಸಿದೆ. ಸಿನಿಮಾ ಸ್ಕ್ರಿಪ್ಟ್ ಕದ್ದಿದ್ದಾರೆ ಎಂಬ ಗಂಭೀರ ಆರೋಪ ಎದುರಿಸುತ್ತಿದ್ದ ನಿರ್ದೇಶಕ ಆದಿತ್ಯ ಧರ್ (Aditya Dhar) ಮತ್ತು ಅವರ ತಂಡಕ್ಕೆ ಈಗ ಕರ್ನಾಟಕ ಉಚ್ಚ ನ್ಯಾಯಾಲಯವು 'ಪವರ್‌ಫುಲ್' ರಿಲೀಫ್ ನೀಡಿದೆ. ಒಂದು ಕಡೆ 1300 ಕೋಟಿ ರೂಪಾಯಿಗಳ ಕಲೆಕ್ಷನ್, ಇನ್ನೊಂದು ಕಡೆ "ನನ್ನ ಕಥೆ ಕದ್ದಿದ್ದಾರೆ" ಎಂಬ ನಿರ್ಮಾಪಕರ ಗುಡುಗು! ಈ ಎಲ್ಲಾ ಬೆಳವಣಿಗೆಗಳ ನಡುವೆ ಕೋರ್ಟ್ ನೀಡಿದ ತೀರ್ಪು ಸಿನಿಮೀಯ ತಿರುವುಗಳನ್ನೇ ಮೀರಿದಂತಿದೆ.

ಏನಿದು 'ಧುರಂಧರ್' ಕಿರಿಕ್?

ಸಿನಿಮಾದಲ್ಲಿ ಹೀರೋ ವಿಲನ್‌ಗಳನ್ನು ಚಚ್ಚುವಂತೆ, ಇಲ್ಲಿ ನಿರ್ಮಾಪಕ ಸಂತೋಷ್ ಕುಮಾರ್ ಅವರು ಚಿತ್ರತಂಡದ ವಿರುದ್ಧ ಕಾನೂನು ಸಮರ ಸಾರಿದ್ದರು. "ನಾನು ಬರೆದ 'ಡಿ-ಸಾಹೇಬ್' ಕಥೆಯನ್ನೇ ಕಾಪಿ ಮಾಡಿ ಇವರು 'ಧುರಂಧರ್' ಮಾಡಿದ್ದಾರೆ" ಎಂಬುದು ಇವರ ಆರೋಪವಾಗಿತ್ತು. ಅಷ್ಟೇ ಅಲ್ಲ, ಚಿತ್ರದ ಸೆನ್ಸಾರ್ ಪ್ರಮಾಣಪತ್ರವನ್ನೇ ರದ್ದುಗೊಳಿಸಿ ಸಿನಿಮಾ ಪ್ರದರ್ಶನಕ್ಕೆ ಬ್ರೇಕ್ ಹಾಕಬೇಕು ಎಂದು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದರು. ಆದರೆ, ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ಏಕಸದಸ್ಯ ಪೀಠವು ಈ ದೂರನ್ನು ಕೂಲಂಕಷವಾಗಿ ಪರಿಶೀಲಿಸಿ, "ಈ ದೂರಿನಲ್ಲಿ ಯಾವುದೇ ಹುರುಳಿಲ್ಲ" ಎಂದು ಅರ್ಜಿಯನ್ನು ವಜಾಗೊಳಿಸಿದೆ. ಈ ಮೂಲಕ ಚಿತ್ರತಂಡ ನಿಟ್ಟುಸಿರು ಬಿಟ್ಟಿದೆ.

'ಚೋರ್' ಎಂದಿದ್ದಕ್ಕೆ ಕ್ಷಮೆಯಿಲ್ಲ: ಮುಂಬೈ ಹೈಕೋರ್ಟ್‌ನಲ್ಲಿ ಫೈಟ್!

ಈ ಕಥೆ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ, ಮಾಯಾನಗರಿ ಮುಂಬೈವರೆಗೂ ಹಬ್ಬಿದೆ. ಆದಿತ್ಯ ಧರ್ ಅವರು ತಮ್ಮ ಮಾನಹಾನಿ ಮಾಡಿದ್ದಾರೆ ಎಂದು ಸಂತೋಷ್ ಕುಮಾರ್ ವಿರುದ್ಧ ಕೇಸ್ ಹಾಕಿದ್ದಾರೆ. ವಿಚಾರಣೆ ವೇಳೆ ಸಂತೋಷ್ ಕುಮಾರ್ ಅವರು "ಕೋರ್ಟ್ ತೀರ್ಪು ಬರುವವರೆಗೆ ಯಾವುದೇ ಅವಹೇಳನಕಾರಿ ಮಾತು ಆಡುವುದಿಲ್ಲ" ಎಂದು ಭರವಸೆ ನೀಡಿದ್ದಾರೆ. ಆದರೆ ಟ್ವಿಸ್ಟ್ ಅಂದರೆ, ಆದಿತ್ಯ ಧರ್ ಅವರನ್ನು 'ಚೋರ್' (ಕಳ್ಳ) ಎಂದು ಕರೆದಿದ್ದಕ್ಕಾಗಿ ಕ್ಷಮೆ ಕೇಳಲು ಅವರ ಕಾನೂನು ತಂಡ ಖಡಕ್ ಆಗಿ ನಿರಾಕರಿಸಿದೆ! "ನಮ್ಮ ಕಕ್ಷಿದಾರರು ಸರಿಯಾಗಿಯೇ ಇದ್ದಾರೆ, ನಾವು ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ" ಎಂಬ ಅವರ ಹಠ ಈಗ ವಿವಾದದ ಕಿಚ್ಚನ್ನು ಮತ್ತಷ್ಟು ಹಚ್ಚಿಸಿದೆ.

1300 ಕೋಟಿ ಲಾಭದ ಹಿಂದೆ ಅಸಲಿ ಸತ್ಯವೇನು?

ರಣವೀರ್ ಸಿಂಗ್ ಅಭಿನಯದ 'ಧುರಂಧರ್' ಮತ್ತು ಅದರ ಸೀಕ್ವೆಲ್ ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದಿರುವುದು ಸುಳ್ಳಲ್ಲ. ಸಂತೋಷ್ ಕುಮಾರ್ ಅವರು "ನನ್ನ ಕಥೆ ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ರಿಜಿಸ್ಟರ್ ಆಗಿದೆ" ಎಂದು ವಾದಿಸುತ್ತಿದ್ದರೆ, ಇತ್ತ ಸಿನಿಮಾ ಗೆಲುವಿನ ನಗೆ ಬೀರುತ್ತಿದೆ.

ಸದ್ಯಕ್ಕೆ ಹೈಕೋರ್ಟ್ ತೀರ್ಪಿನಿಂದ 'ಧುರಂಧರ್' ಚಿತ್ರತಂಡಕ್ಕೆ ಆನೆಬಲ ಬಂದಂತಾಗಿದೆ. ಆದರೆ, ಸ್ಕ್ರಿಪ್ಟ್ ಕಳ್ಳತನದ ಈ ಕಾನೂನು ಸಂಘರ್ಷ ಅಷ್ಟು ಸುಲಭವಾಗಿ ತಣ್ಣಗಾಗುವ ಲಕ್ಷಣ ಕಾಣುತ್ತಿಲ್ಲ. ಬೆಳ್ಳಿತೆರೆಯ ಮೇಲಿನ ಧುರಂಧರರ ಯುದ್ಧ ಈಗ ಕೋರ್ಟ್ ಕಟಕಟೆಯಲ್ಲಿ ಎಷ್ಟು ದಿನ ನಡೆಯಲಿದೆ ಎಂಬುದನ್ನು ಕಾದು ನೋಡಬೇಕು!