Tamil Nadu CM Thalapathy Vijay: ನಟ, ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಅವರು ಮುಖ್ಯಮಂತ್ರಿ ಆಗುತ್ತಿದ್ದಂತೆ ಒಂದು ಆದೇಶ ಹೊರಡಿಸಿದ್ದಾರೆ. ಈ ಆದೇಶ ಕಂಡು ಅನೇಕರು ಖುಷಿ ವ್ಯಕ್ತಪಡಿಸಿದ್ದಾರೆ. ಹಾಗಾದರೆ ಏನದು?
ತಮಿಳುನಾಡು ರಾಜ್ಯದ ಹೊಸ ಮುಖ್ಯಮಂತ್ರಿ ನಟ ಜೋಸೆಫ್ ವಿಜಯ್ ( Thalapathy Vijay ), ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ. ರಾಜ್ಯದ ಶಾಲೆ-ಕಾಲೇಜುಗಳು, ದೇವಸ್ಥಾನಗಳು, ಬಸ್ ನಿಲ್ದಾಣಗಳ ಬಳಿ ಇರುವ 717 ಟಾಸ್ಮ್ಯಾಕ್ (TASMAC) ಮದ್ಯದಂಗಡಿಗಳನ್ನು ತಕ್ಷಣವೇ ಮುಚ್ಚುವಂತೆ ಅವರು ಹೇಳಿದ್ದಾರೆ.

ಮದ್ಯದಂಗಡಿ ಸ್ಥಳಾಂತರಕ್ಕೆ ರೆಡಿ!
ಮುಂದಿನ ಎರಡು ವಾರಗಳೊಳಗೆ ಈ ಎಲ್ಲ ಅಂಗಡಿಗಳಿಗೆ ಬೀಗ ಹಾಕುವಂತೆ ಸಿಎಂ ವಿಜಯ್ ಖಡಕ್ ಆದೇಶ ನೀಡಿದ್ದಾರೆ. ಅಂದಹಾಗೆ, ಸಿಎಂ ಆಗಿ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಜೋಸೆಫ್ ವಿಜಯ್, 200 ಯೂನಿಟ್ ಉಚಿತ ವಿದ್ಯುತ್, ಮಹಿಳಾ ಸುರಕ್ಷತೆಗಾಗಿ ವಿಶೇಷ ಪಡೆ, ಮಾದಕವಸ್ತು ನಿಯಂತ್ರಣಕ್ಕೆ ಪ್ರತ್ಯೇಕ ಸಂಸ್ಥೆ ಸ್ಥಾಪಿಸುವ ಮೂರು ಪ್ರಮುಖ ಕಡತಗಳಿಗೆ ಸಹಿ ಹಾಕಿದ್ದರು. ಇದರ ಬೆನ್ನಲ್ಲೇ ಈಗ ಮದ್ಯದಂಗಡಿಗಳ ಸ್ಥಳಾಂತರಕ್ಕೆ ಮುಂದಾಗಿದ್ದಾರೆ.
ಅಧಿಕೃತ ಪ್ರಕಟಣೆ!
ಈ ಬಗ್ಗೆ ತಮಿಳುನಾಡು ಸರ್ಕಾರ ಅಧಿಕೃತ ಪ್ರಕಟಣೆ ಹೊರಡಿಸಿದೆ. "ರಾಜ್ಯದಲ್ಲಿ ತಮಿಳುನಾಡು ರಾಜ್ಯ ಮಾರುಕಟ್ಟೆ ನಿಗಮವು (TASMAC) ಒಟ್ಟು 4,765 ಮದ್ಯದ ಮಾರಾಟ ಮಳಿಗೆಗಳನ್ನು ನಡೆಸುತ್ತಿದೆ" ಎಂದು ಸರ್ಕಾರ ತಿಳಿಸಿದೆ.
ಪ್ರಕಟಣೆಯಲ್ಲಿ ಏನಿದೆ?
"ಮುಖ್ಯಮಂತ್ರಿ ಶ್ರೀ. ಎಸ್. ಜೋಸೆಫ್ ವಿಜಯ್ ಅವರ ಆದೇಶದಂತೆ, ಪೂಜಾ ಸ್ಥಳಗಳು, ಶಿಕ್ಷಣ ಸಂಸ್ಥೆಗಳು ಮತ್ತು ಬಸ್ ನಿಲ್ದಾಣಗಳಿಂದ 500 ಮೀಟರ್ ವ್ಯಾಪ್ತಿಯಲ್ಲಿರುವ ಅಂಗಡಿಗಳನ್ನು ಗುರುತಿಸಲು ಸಮೀಕ್ಷೆ ನಡೆಸಲಾಗಿತ್ತು. ಈ ಸಮೀಕ್ಷೆಯಲ್ಲಿ ಒಟ್ಟು 717 ಮದ್ಯದಂಗಡಿಗಳು ನಿಯಮ ಉಲ್ಲಂಘಿಸಿರುವುದು ಕಂಡುಬಂದಿದೆ. ಸಾರ್ವಜನಿಕರ ಹಿತದೃಷ್ಟಿಯಿಂದ ಈ ಅಂಗಡಿಗಳನ್ನು ಮುಚ್ಚಲು ಸಿಎಂ ಆದೇಶಿಸಿದ್ದಾರೆ. ಈ 717 ಅಂಗಡಿಗಳ ಪೈಕಿ, 276 ದೇವಸ್ಥಾನಗಳ ಬಳಿ, 186 ಶಿಕ್ಷಣ ಸಂಸ್ಥೆಗಳ ಬಳಿ ಮತ್ತು 255 ಬಸ್ ನಿಲ್ದಾಣಗಳ ಬಳಿ ಇವೆ" ಎಂದು ಸರ್ಕಾರಿ ಪ್ರಕಟಣೆ ವಿವರಿಸಿದೆ.
ಟಿವಿಕೆ ಪಕ್ಷ ಕಟ್ಟಿದ ಎರಡೇ ವರ್ಷದಲ್ಲಿ ದಳಪತಿ ವಿಜಯ್ ಅವರು ಸಿಎಂ ಆಗಿದ್ದರು. ಎಲ್ಲದಕ್ಕಿಂತ ಹೆಚ್ಚು ಸೀಟ್ ಗೆದ್ದರೂ ಕೂಡ ಸರ್ಕಾರ ರಚಿಸುವಷ್ಟು ಸೀಟ್ ಇರಲಿಲ್ಲ, ಬೇರೆ ಪಕ್ಷದ ಸಹಾಯದ ಜೊತೆಗೆ ಸರ್ಕಾರ ರಚಿಸಿದ್ದಾರೆ.


