ಊರ್ಮಿಳಾ ಮತ್ತು ವರ್ಮಾ ಜೋಡಿ 'ಸತ್ಯ', 'ರಂಗೀಲಾ', 'ಭೂತ್' ಮತ್ತು 'ಏಕ್ ಹಸೀನಾ ಥಿ'ಯಂತಹ ವಿಭಿನ್ನ ಶೈಲಿಯ ಸಿನಿಮಾಗಳನ್ನು ನೀಡಿದೆ. ಆದರೆ ಸದ್ಯಕ್ಕೆ ಅವರ ಜೊತೆ ಮತ್ತೆ ಕೆಲಸ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ವರ್ಮಾ ಹೇಳಿದ್ದಾರೆ. ಈ ಹೇಳಿಕೆಗೆ ಏನರ್ಥ? ನೋಡಿ..

ರಾಮ್‌ ಗೋಪಾಲ್ ವರ್ಮಾ ಹೇಳಿದ ರಹಸ್ಯ!

Add Asianetnews Kannada as a Preferred SourcegooglePreferred

ಮುಂಬೈ: ಬಾಲಿವುಡ್‌ನ ವಿಭಿನ್ನ ಹಾಗೂ ವಿವಾದಾತ್ಮಕ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಸದಾ ತಮ್ಮ ವಿಚಿತ್ರ ಹೇಳಿಕೆಗಳಿಂದಲೇ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗೆ ಅವರು ತಮ್ಮ ಕ್ಲಾಸಿಕ್ ಹಾರರ್ ಸಿನಿಮಾ 'ಭೂತ್' (Bhoot) ಬಗ್ಗೆ ಒಂದು ಸ್ವಾರಸ್ಯಕರ ಮತ್ತು ಅಚ್ಚರಿಯ ವಿಷಯವನ್ನು ಹಂಚಿಕೊಂಡಿದ್ದಾರೆ. 2003ರಲ್ಲಿ ತೆರೆಕಂಡ ಈ ಚಿತ್ರ ಹಾರರ್ ಜಗತ್ತಿನಲ್ಲಿ ಹೊಸ ಸಂಚಲನ ಮೂಡಿಸಿತ್ತು. ಆದರೆ, ಈ ಚಿತ್ರಕ್ಕೆ ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಅವರನ್ನು ಆಯ್ಕೆ ಮಾಡಿದ್ದು ಹೇಗೆ ಎಂಬ ರಹಸ್ಯವನ್ನು ವರ್ಮಾ ಈಗ ಬಹಿರಂಗಪಡಿಸಿದ್ದಾರೆ.

ಆ ಒಂದು ಕ್ಲೋಸಪ್ ಶಾಟ್ ತಂದ ಅದೃಷ್ಟ!

ವರ್ಮಾ ಹೇಳುವಂತೆ, ಊರ್ಮಿಳಾ ಅವರನ್ನು 'ಭೂತ್' ಚಿತ್ರದ ಪ್ರೇತ ಬಾಧಿತ ಮಹಿಳೆಯ ಪಾತ್ರಕ್ಕೆ ಆಯ್ಕೆ ಮಾಡಲು ಕಾರಣವಾಗಿದ್ದು 'ರಂಗೀಲಾ' ಚಿತ್ರದ ಒಂದು ರೋಮ್ಯಾಂಟಿಕ್ ಹಾಡು! ಹೌದು, 'ರಂಗೀಲಾ' ಚಿತ್ರದ 'ಹೈ ರಾಮಾ' (Hai Rama) ಹಾಡಿನಲ್ಲಿ ಊರ್ಮಿಳಾ ನೀಡಿದ ಒಂದು ತೀವ್ರವಾದ ಎಕ್ಸ್‌ಪ್ರೆಶನ್ ವರ್ಮಾ ಅವರ ಮನಸ್ಸಿನಲ್ಲಿ ಅಚ್ಚೊತ್ತಿತ್ತಂತೆ. ಆ ಹಾಡಿನಲ್ಲಿ ಕೆಂಪು ಬಣ್ಣದ ಡ್ರೆಸ್ ತೊಟ್ಟು ಜಾಕಿ ಶ್ರಾಫ್ ಕಡೆಗೆ ಅವರು ತೀಕ್ಷ್ಣವಾಗಿ ನೋಡುವ ಒಂದು ಕ್ಲೋಸಪ್ ದೃಶ್ಯವಿದೆ. ಆ ನೋಟದಲ್ಲಿ ಅಡಗಿದ್ದ ತೀವ್ರತೆ (Intensity) ವರ್ಮಾ ಅವರಿಗೆ ಎಷ್ಟು ಇಷ್ಟವಾಯಿತೆಂದರೆ, ಅಂತಹ ಗಂಭೀರ ಮತ್ತು ಭಯಾನಕ ಪಾತ್ರವನ್ನು ಊರ್ಮಿಳಾ ಅದ್ಭುತವಾಗಿ ನಿಭಾಯಿಸಬಲ್ಲರು ಎಂಬ ನಂಬಿಕೆ ಅವರಿಗೆ ಬಂದಿತ್ತು. "ಆ ಒಂದು ಕ್ಲೋಸಪ್ ಶಾಟ್ ನೋಡಿಯೇ ನಾನು ಅವರನ್ನು 'ಭೂತ್'ಗೆ ಆಯ್ಕೆ ಮಾಡಲು ನಿರ್ಧರಿಸಿದೆ" ಎಂದು ಅವರು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಹಾರರ್ ಸಿನಿಮಾದಲ್ಲಿ ನಟರ ಪಾತ್ರವೇ ಶೇ. 80!

ಹಾರರ್ ಸಿನಿಮಾಗಳಲ್ಲಿ ನಟ-ನಟಿಯರ ಭಾವಾಭಿನಯ ಬಹಳ ಮುಖ್ಯ ಎಂದು ವರ್ಮಾ ನಂಬುತ್ತಾರೆ. "ಒಂದು ಹಾರರ್ ಚಿತ್ರದ ಯಶಸ್ಸಿನಲ್ಲಿ ಶೇ. 80ರಷ್ಟು ಪಾತ್ರ ನಟರ ಮುಖಭಾವದ್ದು (Expressions). ಉಳಿದ ಶೇ. 20ರಷ್ಟು ಮಾತ್ರ ಸೌಂಡ್ ಮತ್ತು ಮ್ಯೂಸಿಕ್ ಪ್ರಭಾವ ಬೀರುತ್ತದೆ. ಪರದೆಯ ಮೇಲೆ ನಟರು ಏನನ್ನು ಅನುಭವಿಸುತ್ತಾರೋ, ಅದೇ ಭಯ ಪ್ರೇಕ್ಷಕರಿಗೂ ತಲುಪುತ್ತದೆ" ಎಂಬುದು ಅವರ ಅಭಿಪ್ರಾಯ. ಊರ್ಮಿಳಾ ಅವರು 'ಭೂತ್' ಚಿತ್ರದಲ್ಲಿ ನೀಡಿದ ಪರ್ಫಾರ್ಮೆನ್ಸ್ ಇಂದಿಗೂ ಬಾಲಿವುಡ್‌ನ ಬೆಸ್ಟ್ ಹಾರರ್ ನಟನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ.

'ದಿ ಎಕ್ಸಾರ್ಸಿಸ್ಟ್' ಪ್ರಭಾವ ಮತ್ತು ಲೋಖಂಡ್‌ವಾಲಾ ಅಪಾರ್ಟ್‌ಮೆಂಟ್:

'ಭೂತ್' ಚಿತ್ರಕ್ಕೆ ವಿಶ್ವಪ್ರಸಿದ್ಧ ಹಾರರ್ ಸಿನಿಮಾ 'ದಿ ಎಕ್ಸಾರ್ಸಿಸ್ಟ್' (The Exorcist) ಪ್ರೇರಣೆಯಂತೆ. ಮೊದಲು ವರ್ಮಾ ಅವರು ಈ ಕಥೆಯನ್ನು ಯಾವುದಾದರೂ ಹಳೆಯ ಹವೇಲಿಯಲ್ಲಿ ಚಿತ್ರೀಕರಿಸಬೇಕೆಂದು ಅಂದುಕೊಂಡಿದ್ದರು. ಆದರೆ, ನಂತರ ಅವರಿಗೆ ಹೊಳೆದಿದ್ದು ಮುಂಬೈನ ಲೋಖಂಡ್‌ವಾಲಾದಂತಹ ಆಧುನಿಕ ಅಪಾರ್ಟ್‌ಮೆಂಟ್‌ನಲ್ಲಿ ಸಿನಿಮಾ ಮಾಡುವುದು. "ಯಾವುದೋ ಪಾಳುಬಿದ್ದ ಮನೆಯಲ್ಲಿ ದೆವ್ವ ಇದೆ ಎನ್ನುವುದಕ್ಕಿಂತ, ನಾವು ವಾಸಿಸುವ ಅಪಾರ್ಟ್‌ಮೆಂಟ್‌ನಲ್ಲೇ ದೆವ್ವ ಇದೆ ಎಂದು ತೋರಿಸಿದರೆ ಜನರು ಹೆಚ್ಚು ಭಯಪಡುತ್ತಾರೆ. ಅದು ತಮಗೂ ಆಗಬಹುದು ಎಂಬ ಭಾವನೆ ಮೂಡಿಸುತ್ತದೆ" ಎಂದು ವರ್ಮಾ ವಿವರಿಸಿದ್ದಾರೆ.

ಮುಂದಿನ ಪ್ಲಾನ್ ಏನು?

ಊರ್ಮಿಳಾ ಮತ್ತು ವರ್ಮಾ ಜೋಡಿ 'ಸತ್ಯ', 'ರಂಗೀಲಾ', 'ಭೂತ್' ಮತ್ತು 'ಏಕ್ ಹಸೀನಾ ಥಿ'ಯಂತಹ ವಿಭಿನ್ನ ಶೈಲಿಯ ಸಿನಿಮಾಗಳನ್ನು ನೀಡಿದೆ. ಆದರೆ ಸದ್ಯಕ್ಕೆ ಅವರ ಜೊತೆ ಮತ್ತೆ ಕೆಲಸ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ವರ್ಮಾ ಹೇಳಿದ್ದಾರೆ. ಅಂದಹಾಗೆ, ವರ್ಮಾ ಸದ್ಯಕ್ಕೆ ನಟ ಮನೋಜ್ ಬಾಜಪೇಯಿ ಜೊತೆ 'ಪೊಲೀಸ್ ಸ್ಟೇಷನ್ ಮೇ ಭೂತ್' ಎಂಬ ಹಾರರ್-ಕಾಮಿಡಿ ಚಿತ್ರವನ್ನು ಮಾಡುತ್ತಿದ್ದಾರೆ. ಈ ಸಿನಿಮಾ ಮೇ ತಿಂಗಳಿನಲ್ಲಿ ತೆರೆಗೆ ಬರುವ ಸಾಧ್ಯತೆಯಿದೆ. ಒಟ್ಟಿನಲ್ಲಿ, 20 ವರ್ಷಗಳ ನಂತರವೂ 'ಭೂತ್' ಚಿತ್ರದ ಹಿಂದಿನ ಈ ರೋಚಕ ಕಥೆ ಕೇಳಿ ಸಿನಿಪ್ರಿಯರು ಅಚ್ಚರಿಗೊಂಡಿದ್ದಾರೆ.