ಮಹೇಶ್ ಬಾಬು ಪಾಲಿಗೆ ಇದು ಕೇವಲ ಸಿನಿಮಾವಲ್ಲ, ಬದಲಿಗೆ ಅವರ ಕೆರಿಯರ್‌ನ 'ಒನ್ಸ್ ಇನ್ ಎ ಲೈಫ್ ಟೈಮ್' ಪ್ರಾಜೆಕ್ಟ್. "ನನ್ನ ನಿರ್ದೇಶಕರು ಹೆಮ್ಮೆ ಪಡುವಂತೆ ನಾನು ಕೆಲಸ ಮಾಡುತ್ತೇನೆ. 'ವಾರಣಾಸಿ' ಸಿನಿಮಾ ತೆರೆಕಂಡಾಗ ಇಡೀ ದೇಶವೇ ನಮ್ಮ ಬಗ್ಗೆ ಹೆಮ್ಮೆ ಪಡಲಿದೆ," ಎಂದಿದ್ದಾರೆ.

ಆಫ್ರಿಕಾ ಕಾಡಿನಲ್ಲಿ ನಡುಗಿದ್ದರಾ ಮಹೇಶ್ ಬಾಬು?

ಹೈದರಾಬಾದ್/ಮುಂಬೈ: ಟಾಲಿವುಡ್ ಪ್ರಿನ್ಸ್ ಮಹೇಶ್ ಬಾಬು (Mahesh Babu) ಮತ್ತು ದಕ್ಷಿಣ ಭಾರತದ ಹೆಮ್ಮೆಯ ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರ ಕಾಂಬಿನೇಷನ್‌ನ 'ವಾರಣಾಸಿ' (SSMB29) ಸಿನಿಮಾ ಇಡೀ ಭಾರತೀಯ ಚಿತ್ರರಂಗದಲ್ಲೇ ಸದ್ಯದ ಅತೀ ದೊಡ್ಡ ಸುದ್ದಿಯಾಗಿದೆ. ಈ ಚಿತ್ರದ ಪ್ರತಿ ಅಪ್‌ಡೇಟ್ ಕೂಡ ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡುತ್ತಿದೆ. ಈಗ ಸ್ವತಃ ಮಹೇಶ್ ಬಾಬು ಅವರೇ ಆಫ್ರಿಕಾದ ದಟ್ಟ ಅರಣ್ಯದಲ್ಲಿ ನಡೆದ ಚಿತ್ರೀಕರಣದ ವೇಳೆ ತಮಗಾದ ಎದೆಗುಂದಿಸುವ ಅನುಭವವನ್ನು ಹಂಚಿಕೊಂಡಿದ್ದಾರೆ.

ಕ್ರೂರ ಪ್ರಾಣಿಗಳ ಮಧ್ಯೆ ಶೂಟಿಂಗ್: ರಾಜಮೌಳಿ ಅವರ 'ವಾರಣಾಸಿ' ಚಿತ್ರದ ರೋಚಕ ಶೂಟಿಂಗ್ ಅನುಭವ ಬಿಚ್ಚಿಟ್ಟ ಸೂಪರ್ ಸ್ಟಾರ್!

ಈ ಸಿನಿಮಾವು ಅಂತರಾಷ್ಟ್ರೀಯ ಮಟ್ಟದ ಜಂಗಲ್ ಅಡ್ವೆಂಚರ್ ಥ್ರಿಲ್ಲರ್ ಆಗಿದ್ದು, ಇದಕ್ಕಾಗಿ ರಾಜಮೌಳಿ ಆಫ್ರಿಕಾದ ಅಪಾಯಕಾರಿ ಕಾಡುಗಳನ್ನು ಆಯ್ಕೆ ಮಾಡಿಕೊಂಡಿದ್ದರು. ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಮಹೇಶ್ ಬಾಬು, "ಆಫ್ರಿಕಾದ ಕಾಡಿನ ಮಧ್ಯೆ ವನ್ಯಮೃಗಗಳ ನಡುವೆ ಶೂಟಿಂಗ್ ಮಾಡುವುದು ನಮಗೆ ಮರೆಯಲಾಗದ ಅನುಭವ. ಮೊದಲ ದಿನ ನಾವೆಲ್ಲರೂ ವಾಹನಗಳಿಂದ ಕೆಳಗಿಳಿದು ಕಾಲ್ನಡಿಗೆಯಲ್ಲಿ ಕಾಡಿನೊಳಗೆ ಸಾಗಬೇಕಿತ್ತು. ಸಾಮಾನ್ಯವಾಗಿ ನಾನು ಶೂಟಿಂಗ್‌ನಲ್ಲಿ ಮುಂಚೂಣಿಯಲ್ಲಿ ಇರುತ್ತೇನೆ, ಆದರೆ ಆ ದಿನ ಮಾತ್ರ ಭಯದಿಂದ ಸ್ವಲ್ಪ ಹಿಂಜರಿದ್ದೆ," ಎಂದು ಹೇಳಿಕೊಂಡಿದ್ದಾರೆ.

ಪ್ರಿಯಾಂಕಾ ಚೋಪ್ರಾ ಲೀಡಿಂಗ್, ಮಹೇಶ್ ಫುಲ್ ನಿರಾಳ!

ಅಪಾಯಕಾರಿ ಪ್ರಾಣಿಗಳ ಸದ್ದು ಕೇಳುತ್ತಿರುವಾಗ ಯಾರು ಮುಂದೆ ಹೋಗಬೇಕೆಂಬ ಗೊಂದಲವಿತ್ತು. ಆಗ ರಾಜಮೌಳಿ ಅವರು ವಾಕಿ-ಟಾಕಿಯಲ್ಲಿ "ಪ್ರಿಯಾಂಕಾ (ಪ್ರಿಯಾಂಕಾ ಚೋಪ್ರಾ), ನೀನು ಎಲ್ಲರಿಗಿಂತ ಮುಂದೆ ನಡಿ" ಎಂದು ಸೂಚನೆ ನೀಡಿದಾಗ ಮಹೇಶ್ ಬಾಬು ದೀರ್ಘವಾಗಿ ನಿಟ್ಟುಸಿರು ಬಿಟ್ಟರಂತೆ! ಪ್ರಿಯಾಂಕಾ ಚೋಪ್ರಾ (Priyanka Chopra) ಮುಂದೆ ಸಾಗುತ್ತಿದ್ದಂತೆ ಇಡೀ ತಂಡ ಅವರನ್ನು ಅನುಸರಿಸಿದೆ. "ಆ 5-10 ನಿಮಿಷಗಳು ನಿಜಕ್ಕೂ ಭಯಾನಕವಾಗಿದ್ದವು. ಆಮೇಲೆ ನಮಗೆ ಕ್ಯಾಮೆರಾ ಕಾಣುತ್ತಿರಲಿಲ್ಲ, ಲೈಟ್ಸ್ ಕಾಣುತ್ತಿರಲಿಲ್ಲ, ಕೇವಲ ನಾವು ಮತ್ತು ದಟ್ಟವಾದ ಕಾಡು ಮಾತ್ರ ಇತ್ತು" ಎಂದು ಆ ಸಂದರ್ಭವನ್ನು ಮಹೇಶ್ ಸ್ಮರಿಸಿದ್ದಾರೆ.

ಇಡೀ ದೇಶವೇ ಹೆಮ್ಮೆ ಪಡುವ ಸಿನಿಮಾ:

ಮಹೇಶ್ ಬಾಬು ಪಾಲಿಗೆ ಇದು ಕೇವಲ ಸಿನಿಮಾವಲ್ಲ, ಬದಲಿಗೆ ಅವರ ಕೆರಿಯರ್‌ನ 'ಒನ್ಸ್ ಇನ್ ಎ ಲೈಫ್ ಟೈಮ್' ಪ್ರಾಜೆಕ್ಟ್. "ನನ್ನ ನಿರ್ದೇಶಕರು ಹೆಮ್ಮೆ ಪಡುವಂತೆ ನಾನು ಕೆಲಸ ಮಾಡುತ್ತೇನೆ. 'ವಾರಣಾಸಿ' ಸಿನಿಮಾ ತೆರೆಕಂಡಾಗ ಇಡೀ ದೇಶವೇ ನಮ್ಮ ಬಗ್ಗೆ ಹೆಮ್ಮೆ ಪಡಲಿದೆ," ಎಂದು ಅವರು ಆತ್ಮವಿಶ್ವಾಸದಿಂದ ನುಡಿದಿದ್ದಾರೆ. ಈ ಚಿತ್ರಕ್ಕಾಗಿ ಮಹೇಶ್ ಬಾಬು ತಮ್ಮ ಲುಕ್ ಬದಲಿಸಿಕೊಂಡಿದ್ದು, ಬಹಳ ದಿನಗಳಿಂದ ಕಠಿಣ ತಯಾರಿ ನಡೆಸುತ್ತಿದ್ದಾರೆ.

ಚಿತ್ರದ ತಾರಾಗಣ ಮತ್ತು ಪಾತ್ರಗಳು:

ವರದಿಗಳ ಪ್ರಕಾರ, ಈ ಚಿತ್ರದಲ್ಲಿ ಮಹೇಶ್ ಬಾಬು 'ರುದ್ರ' ಎಂಬ ಪವರ್‌ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಜಾಗತಿಕ ಸುಂದರಿ ಪ್ರಿಯಾಂಕಾ ಚೋಪ್ರಾ 'ಮಂದಾಕಿನಿ' ಹೆಸರಿನ ನಾಯಕಿಯಾಗಿ ಮಿಂಚುತ್ತಿದ್ದಾರೆ. ಇನ್ನು ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ 'ಕುಂಭ' ಎಂಬ ವಿಲನ್ ಪಾತ್ರದಲ್ಲಿ ಅಬ್ಬರಿಸಲಿದ್ದಾರೆ. ಆಕ್ಷನ್ ಮತ್ತು ಸಾಹಸಗಳಿಂದ ತುಂಬಿರುವ ಈ ಬೃಹತ್ ಚಿತ್ರವು ಏಪ್ರಿಲ್ 7, 2027 ರಂದು ವಿಶ್ವದಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಒಟ್ಟಿನಲ್ಲಿ, ರಾಜಮೌಳಿ ಅವರ ಈ 'ಜಂಗಲ್ ಮ್ಯಾಜಿಕ್' ನೋಡಲು ಇಡೀ ಜಗತ್ತು ಕಾತರದಿಂದ ಕಾಯುತ್ತಿದೆ.