Asianet Suvarna News Asianet Suvarna News

10 ಸೈಮಾ ಪ್ರಶಸ್ತಿ ಬಾಚಿಕೊಂಡ ಕಾಂತಾರ: ಜಾಲತಾಣದಲ್ಲಿ ನಟ ರಿಷಬ್​ ಶೆಟ್ಟಿ ಪೋಸ್ಟ್​

ದುಬೈನಲ್ಲಿ ನಡೆದ  ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ನಟ ರಿಷಬ್​ ಶೆಟ್ಟಿ ನಿರ್ದೇಶನದ ಕಾಂತಾರ 10 ಪ್ರಶಸ್ತಿ ಬಾಚಿಕೊಂಡಿದೆ. ಇದರ ಡಿಟೇಲ್ಸ್​ ಇಲ್ಲಿದೆ.
 

Kantara film won 10  SIIMA award ceremony held in Dubai suc
Author
First Published Sep 19, 2023, 5:42 PM IST

2023ನೇ ಸಾಲಿನ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭ (SIIMA- South Indian International Movie Awards-2023) ದುಬೈನ ವರ್ಲ್ಡ್​ ಟ್ರೇಡ್​ ಸೆಂಟರ್​ನಲ್ಲಿ ಮೊನ್ನೆ ನಡೆಯಿತು. ಈ ಸೈಮಾ (ದಕ್ಷಿಣ ಭಾರತ ಅಂತರರಾಷ್ಟ್ರೀಯ ಸಿನಿಮಾ ಪ್ರಶಸ್ತಿ) ಪ್ರದಾನ ಸಮಾರಂಭದಲ್ಲಿ  ಕನ್ನಡ ಚಿತ್ರರಂಗದ ಹಲವು ನಟ-ನಟಿಯರು, ತಂತ್ರಜ್ಞರು ಸೈಮಾ ಪ್ರಶಸ್ತಿ ಮುಡಿಲಿಗೇರಿಸಿಕೊಂಡಿದ್ದಾರೆ.  ರಕ್ಷಿತ್​ ಶೆಟ್ಟಿ ನಟನೆಯ ‘777 ಚಾರ್ಲಿ’ ಸಿನಿಮಾಗೆ ‘ಅತ್ತುತ್ತಮ ಚಿತ್ರ’ ಪ್ರಶಸ್ತಿ ಸಿಕ್ಕಿದೆ.  ‘ಕೆಜಿಎಫ್​: ಚಾಪ್ಟರ್​ 2’ ಸಿನಿಮಾದಲ್ಲಿನ ಅಭಿನಯಕ್ಕೆ ಯಶ್​ (Yash) ‘ಅತ್ಯುತ್ತಮ ನಟ’ ಹಾಗೂ ಶ್ರೀನಿಧಿ ಶೆಟ್ಟಿ ಅವರಿಗೆ ‘ಅತ್ಯುತ್ತಮ ನಟಿ’ ಪ್ರಶಸ್ತಿ ಸಿಕ್ಕಿದೆ. ಆದರೆ ಎಲ್ಲದರಲ್ಲಿಯೂ ಹೈಲೈಟ್​ ಆಗಿರುವುದು ಕಾಂತಾರ ಚಿತ್ರ!

ಹೌದು. ಅತ್ಯಂತ ಕಡಿಮೆ ಬಜೆಟ್​ನಲ್ಲಿಯೂ ಬ್ಲಾಕ್​ಬಸ್ಟರ್​ ಚಿತ್ರ ರೆಡಿ ಮಾಡಿ ಜಗತ್ತಿನಾದ್ಯಂತ ಕನ್ನಡದ ಕಂಪನ್ನು ಹರಿಸಲು ಸಾಧ್ಯ ಎನ್ನುವುದನ್ನು ತೋರಿಸಿಕೊಟ್ಟ ಚಿತ್ರ ಕಾಂತಾರ. ಕೊಲೆ, ಸುಲಿಗೆ, ರಕ್ತಪಾತ, ಲಾಂಗು-ಮಚ್ಚು ಹಿಡಿದು ಹೊಡಿ-ಬಡಿ ಎನ್ನುವ ಅತಿ ಹೆಚ್ಚು ಬಜೆಟ್​ನ ಸಿನಿಮಾಗಳ ನಡುವೆ ಕಾಂತಾರ ನಮ್ಮ ಸಂಸ್ಕೃತಿಯನ್ನು ಬಿಂಬಿಸಿ ಭೇಷ್​ ಎನಿಸಿಕೊಂಡಿದೆ. ದುಬಾರಿ ಬಜೆಟ್​ ಸಿನಿಮಾಗಳೂ ತೋಪೆದ್ದು ಹೋಗುತ್ತಿರುವ ಈ ಸಂದರ್ಭದಲ್ಲಿ ಕಾಂತಾರ ಸ್ಯಾಂಡಲ್​ವುಡ್​ ಮಟ್ಟಿಗೆ ಹೊಸ ಅಧ್ಯಾಯವನ್ನೇ ಬರೆದಿದೆ. 2022ರ ಸೆಪ್ಟೆಂಬರ್​ 30ರಂದು ಬಿಡುಗಡೆ ಆದ ಕಾಂತಾರ, ತುಳುನಾಡಿನ ಸಂಸ್ಕೃತಿ ಮತ್ತು ಆಚರಣೆಗಳ ಬಗ್ಗೆ ಹೈಲೈಟ್​ ಆಗಿದೆ.  ಬೇರೆ ಭಾಷೆಗಳಿಗೆ ಡಬ್​ ಆಗಿ ತೆರೆಕಂಡು ಹಲವು ರಾಜ್ಯಗಳಲ್ಲಿ ಈ ಸಿನಿಮಾ ಹೌಸ್​ಫುಲ್​ ಪ್ರದರ್ಶನ ಕಂಡಿತ್ತು. ಬಾಲಿವುಡ್​ ಮಟ್ಟದಲ್ಲಿ ರಿಷಬ್​ ಶೆಟ್ಟಿ ಅವರಿಗೆ ಜನಪ್ರಿಯತೆ ಸಿಕ್ಕಿತು. ‘ಹೊಂಬಾಳೆ ಫಿಲ್ಮ್ಸ್​’ ಸಂಸ್ಥೆಗೆ ಭರ್ಜರಿ ಲಾಭ ಆಯಿತು. ಈಗ ‘ಕಾಂತಾರ 2’ ಸಿನಿಮಾಗೆ ಸಿದ್ಧತೆಗಳು ನಡೆಯುತ್ತಿವೆ. 

'ನೀವು ಒಂಥರಾ ನಮ್ಮ ಕುಂದಾಪ್ರದವ್ರು.' ಕನ್ನಡದಲ್ಲಿ ಮಾತನಾಡಿದ ಜೂನಿಯರ್‌ NTR ಹಾಗೂ ರಿಷಬ್‌ ಶೆಟ್ಟಿ!

ಇದರ ನಡುವೆಯೇ,  ಕಾಂತಾರ ಚಿತ್ರ ಸೈಮಾ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹೈಲೈಟ್​ ಆಗಿದೆ. ಇದಕ್ಕೆ ಕಾರಣ, ಈ ಚಿತ್ರ ಬರೋಬ್ಬರಿ 10 ಪ್ರಶಸ್ತಿಗಳನ್ನು ಪಡೆದುಕೊಂಡಿದೆ. ಈ ಕುರಿತು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಮಾಹಿತಿ ಶೇರ್​  ಮಾಡಿಕೊಂಡಿರುವ ನಟ ರಿಷಬ್​ ಶೆಟ್ಟಿಯವರು, ಜನರ ಮನ್ನಣೆಯಿಂದ ಸಿಕ್ಕ ಪ್ರೀತಿಯೇ, ಕಾಂತಾರದ ಯಶಸ್ಸಿಗೆ ಕಾರಣ, ಸೈಮ ಅವಾರ್ಡ್ಸ್ ನಲ್ಲಿ ಅತ್ಯುತ್ತಮ ನಿರ್ದೇಶನ, ಪಾಥ್ ಬ್ರೇಕಿಂಗ್ ಸ್ಟೋರಿ  ಹಾಗು ಅತ್ಯುತ್ತಮ ನಟ,ನಟಿ, ಖಳನಟ, ಹಾಸ್ಯನಟ, ಸಂಗೀತ ನಿರ್ದೇಶಕ, ಗಾಯಕ, ಸಾಹಿತಿ ಪ್ರಶಸ್ತಿ ಗಳನ್ನು ಪಡೆದಿದೆ. ಮನ ತುಂಬಿ ಬಂದಿದೆ, ಜವಾಬ್ದಾರಿ ಹೆಚ್ಚಿಸಿದೆ. ನಿಮ್ಮ ಪ್ರೀತಿ, ಆಶೀರ್ವಾದ ಹೀಗೇ ಇರಲಿ. ಈ ಎಲ್ಲಾ ಯಶಸ್ಸನ್ನು ದೈವ ನರ್ತಕರು, ಅಪ್ಪು ಸರ್ ಹಾಗೂ ಕನ್ನಡಿಗರಿಗೆ  ಸಮರ್ಪಣೆ ಎಂದಿದ್ದಾರೆ. 

  ಅಂದಹಾಗೆ ಕಾಂತಾರಕ್ಕೆ ಸಿಕ್ಕಿರುವ ಪ್ರಶಸ್ತಿಗಳತ್ತ ದೃಷ್ಟಿ ಬೀರುವುದಾದರೆ, ರಿಷಬ್​ ಶೆಟ್ಟಿ ಅವರಿಗೆ ಅತ್ಯುತ್ತಮ ನಿರ್ದೇಶಕ,  ಅತ್ಯುತ್ತಮ ನಟ (ಕ್ರಿಟಿಕ್ಸ್​) ಹಾಗೂ ಪಾತ್​ ಬ್ರೇಕಿಂಗ್​ ಸ್ಟೋರಿ ಪ್ರಶಸ್ತಿ ಸಿಕ್ಕಿದೆ. ಇನ್ನುಳಿದಂತೆ, ಅತ್ಯುತ್ತಮ ನಟಿ (ಕ್ರಿಟಿಕ್ಸ್​): ಸಪ್ತಮಿ ಗೌಡ, ಅತ್ಯುತ್ತಮ ಖಳನಟ: ಅಚ್ಯುತ್​ ಕುಮಾರ್​, ಅತ್ಯುತ್ತಮ ಸಂಗೀತ ನಿರ್ದೇಶನ: ಅಜನೀಶ್​ ಬಿ. ಲೋಕನಾಥ್​, ಅತ್ಯುತ್ತಮ ಗಾಯಕ: ವಿಜಯ್​ ಪ್ರಕಾಶ್​, ಅತ್ಯುತ್ತಮ ಹಾಸ್ಯ ನಟ: ಪ್ರಕಾಶ್​ ತುಮ್ಮಿನಾಡು, ಅತ್ಯುತ್ತಮ ಸಾಹಿತ್ಯ: ಪ್ರಮೋದ್​ ಮರವಂತೆ ಹಾಗೂ ವಿಶೇಷ ಮೆಚ್ಚುಗೆ ಪ್ರಶಸ್ತಿ: ಮುಕೇಶ್​ ಲಕ್ಷ್ಮಣ್ ಅವರಿಗೆ ಸಂದಿದ್ದು ಒಟ್ಟು 10 ಪ್ರಶಸ್ತಿ ಬಾಚಿಕೊಂಡಿದೆ. ​


Follow Us:
Download App:
  • android
  • ios