ರಾಮ್ ಗೋಪಾಲ್ ವರ್ಮಾ ನಿರ್ದೇಶನದ 'ಭೂತ್' ಚಿತ್ರೀಕರಣಗೊಂಡ ಮುಂಬೈನ ಅಪಾರ್ಟ್‌ಮೆಂಟ್, ಇಪ್ಪತ್ತಮೂರು ವರ್ಷಗಳಿಂದ ಖಾಲಿಯಾಗಿಯೇ ಉಳಿದಿದೆಯಂತೆ. ಯಾರೂ ಅಲ್ಲಿ ವಾಸಿಸಲು ಮುಂದೆ ಬರುತ್ತಿಲ್ಲವಂತೆ! 

ರಾಮ್‌ ಗೋಪಾಲ್‌ ವರ್ಮಾ ಎಂಬ ನಿರ್ದೇಶಕನ ಹೆಸರನ್ನು ಕೇಳಿದರೆ, ಗ್ಯಾಂಗ್‌ಸ್ಟರ್ ಮತ್ತು ಕ್ರೈಂ ಸಿನಿಮಾಗಳು ನೆನಪಿಗೆ ಬರುತ್ತವೆ. ಜೊತೆಗೆ, ʼರಂಗೀಲಾʼದಂಥ ಶೃಂಗಾರಮಯ ಸಿನಿಮಾಗಳೂ ನೆನಪಾಗಬಹುದು. ಆದರೆ, ಭಾರತೀಯ ಹಾರರ್ ಸಿನಿಮಾಗಳಿಗೆ ಹೊಸ ರೂಪ ಕೊಟ್ಟವರಲ್ಲಿ ಅವರ ಪಾತ್ರ ಬಹಳ ದೊಡ್ಡದು. ಅವರು ಮಾಡಿರುವ ಭೂತ್‌, ರಾತ್‌, ಕೌನ್‌, ಫೂಂಕ್‌ ಮುಂತಾದ ಚಿತ್ರಗಳು ಇಂದು ಕೂಡ ಜನಮನದಲ್ಲಿ ಉಳಿದಿವೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

2003ರಲ್ಲಿ ಬಿಡುಗಡೆಯಾದ “ಭೂತ್” ಸಿನಿಮಾ ಸಾಮಾನ್ಯ ಹಾರರ್ ಸಿನಿಮಾಗಳಿಗಿಂತ ಭಿನ್ನವಾಗಿತ್ತು. ಅಜಯ್‌ ದೇವಗನ್‌, ಊರ್ಮಿಳಾ ಮಾತೋಂಡ್ಕರ್‌, ನಾನಾ ಪಾಟೇಕರ್‌, ರೇಖಾ ಮೊದಲಾದವರು ಇದರಲ್ಲಿ ನಟಿಸಿದ್ದವರು. ಈ ಸಿನಿಮಾ ಮುಂಬೈ ನಗರದ ಬ್ಯುಸಿ ಜೀವನದ ಮಧ್ಯೆ ನಡೆಯುತ್ತದೆ. ಕಥೆ ಏನೆಂದರೆ - ಒಬ್ಬ ದಂಪತಿಗಳು ಹೊಸ ಫ್ಲಾಟ್‌ಗೆ ವಾಸಕ್ಕೆ ಬರುತ್ತಾರೆ. ಆದರೆ ಆ ಫ್ಲಾಟ್‌ನಲ್ಲಿ ಒಂದು ಆತ್ಮ ಇದೆ… ನಂತರ ನಡೆಯುವ ಘಟನೆಗಳೇ ಸಿನಿಮಾದ ಭಯಾನಕ ಭಾಗ.

23 ವರ್ಷಗಳಿಂದ ಖಾಲಿ ಇರುವ ಫ್ಲಾಟ್!

ಇತ್ತೀಚೆಗೆ ಮಾತನಾಡಿದ Ram Gopal Varma ಒಂದು ಶಾಕ್ ಕೊಡುವ ವಿಷಯವನ್ನು ಹೇಳಿದರು. “ಈ ಸಿನಿಮಾವನ್ನು ನಾನು ಕೇವಲ 30 ದಿನಗಳಲ್ಲಿ ಶೂಟ್ ಮಾಡಿದ್ದೆ. ಬಹುತೇಕ ಭಾಗವನ್ನು ಒಂದೇ ಅಪಾರ್ಟ್‌ಮೆಂಟ್‌ನಲ್ಲಿ ಚಿತ್ರಿಸಿದ್ದೆ” ಅಂದರು. ಆಸಕ್ತಿದಾಯಕ ಸಂಗತಿ ಏನೆಂದರೆ, “2002ರಲ್ಲಿ ಶೂಟಿಂಗ್ ನಡೆದ ಆ ಫ್ಲಾಟ್… ಇಂದಿಗೂ ಖಾಲಿಯೇ ಇದೆ!” ಹೌದು, 20 ವರ್ಷಗಳಾದರೂ, ಆ ಫ್ಲಾಟ್‌ಗೆ ಯಾರೂ ವಾಸಕ್ಕೆ ಬರಲು ಮುಂದೆ ಬರುತ್ತಿಲ್ಲ.

ಈ ಫ್ಲಾಟ್ ಮುಂಬೈನ ಲೋಖಂಡವಾಲಾ ಕಾಂಪ್ಲೆಕ್ಸ್‌ನಲ್ಲಿ ಇದೆ. ಚಿತ್ರ ಬಿಡುಗಡೆಯಾದ ನಂತರ, ಆ ಮನೆ ʼಭೂತಚೇಷ್ಟೆʼಯ ಮನೆ ಎಂಬ ಹೆಸರು ಪಡೆಯಿತು. ಜನ ಆ ಮನೆ ಬಗ್ಗೆ ಭಯಭೀತರಾದರು. ಯಾರೂ ಅಲ್ಲಿ ವಾಸ ಮಾಡಲು ಇಷ್ಟಪಡಲಿಲ್ಲ. ಇಂದಿಗೂ ಅದು ಪಾಳುಬಿದ್ದಿದೆ.

ಊರ್ಮಿಳಾ ಆಯ್ಕೆ ಮಾಡಿದ ಕಾರಣ

ರಾಮ್‌ ಗೋಪಾಲ್‌ ವರ್ಮಾ ಇನ್ನೊಂದು ಆಸಕ್ತಿದಾಯಕ ವಿಷಯ ಹಂಚಿಕೊಂಡಿದ್ದಾರೆ. ಅವರು ಊರ್ಮಿಳಾ ಮಾತೋಡ್ಕರ್‌ ಅವರನ್ನು ಈ ಪಾತ್ರಕ್ಕೆ ಆಯ್ಕೆ ಮಾಡಿದ್ದು, ಅವರ ಹಿಂದಿನ ರಂಗೀಲಾ ಸಿನಿಮಾದ “ಹಾಯ್‌ ರಾಮಾ” ಹಾಡಿನ ಒಂದು ಎಕ್ಸ್‌ಪ್ರೆಶನ್‌ನಿಂದ! ಕೆಂಪು ಡ್ರೆಸ್ ಧರಿಸಿ, ಗಂಭೀರವಾಗಿ ನೋಡುವ ಆ ಕ್ಲೋಸ್‌ಅಪ್ ಶಾಟ್ ಆರ್‌ಜಿವಿ ಅವರನ್ನು ತುಂಬಾ ಪ್ರಭಾವಿತಗೊಳಿಸಿತು. ಅದೇ ಕಾರಣದಿಂದ “ಭೂತ್” ಸಿನಿಮಾದ ಭಯಭೀತ ಪಾತ್ರಕ್ಕೆ ಅವರು ಸೂಕ್ತ ಎಂದು ನಿರ್ಧರಿಸಿದರು.

ಆಶ್ಚರ್ಯ ಅಂದರೆ ಒಂದು ಸಿನಿಮಾ ಇಷ್ಟು ಪ್ರಭಾವ ಬೀರಬಹುದು ಎಂಬುದು. ಅಂದರೆ ಒಂದು ಫ್ಲಾಟ್‌ನ್ನೇ 23 ವರ್ಷಗಳ ಕಾಲ ಖಾಲಿ ಬೀಳಿಸುವಷ್ಟು! ಇದು ಸಿನಿಮಾದ ಶಕ್ತಿ. ಮತ್ತು ಜನರ ಮನಸ್ಸಿನ ಭಯದ ಪ್ರತಿಬಿಂಬವೂ ಹೌದು.

ಆರ್‌ಜಿವಿ ಬಗ್ಗೆ ಲೇಟೆಸ್ಟ್‌ ಸುದ್ದಿ ಅಂದರೆ, “ಸರ್ಕಾರ್” ಚಿತ್ರಸರಣಿಯ ಮುಂದಿನ ಭಾಗ ತರಲಿದ್ದಾರೆ ಎಂಬುದು. ಸರ್ಕಾರ್‌ ಮೊದಲ ಫಿಲಂ ಹೊರತುಪಡಿಸಿ ಇನ್ಯಾವುದೂ ಪ್ರೇಕ್ಷಕರ ಮೆಚ್ಚುಗೆ ಪಡೆದಿಲ್ಲ. ಆದರೂ ವರ್ಮಾ ಈ ಫ್ರಾಂಚೈಸಿಯನ್ನು ಮತ್ತೆ ಜೀವಂತಗೊಳಿಸುವ ಬಗ್ಗೆ ಇನ್ನೂ ಆಶಾವಾದಿ. ಹಿಂದಿನ ಪ್ರಮುಖ ನಟರನ್ನೇ ಉಳಿಸಿಕೊಂಡು, ಹೊಸ ಕಥೆಯೊಂದಿಗೆ ಮತ್ತೊಂದು ಭಾಗವನ್ನು ತಯಾರಿಸಲು ಯೋಚಿಸುತ್ತಿದ್ದಾರೆ. ಇತ್ತೀಚಿನ ವರದಿಗಳ ಪ್ರಕಾರ, Sarkar 4 ಚಿತ್ರದ ಶೂಟಿಂಗ್ ಏಪ್ರಿಲ್ 25ರಿಂದ ಆರಂಭವಾಗಲಿದೆ. ಈ ನಾಲ್ಕನೇ ಭಾಗದಲ್ಲಿ ತಂದೆ-ಮಗ ಜೋಡಿ ಅಮಿತಾಭ್‌ ಮತ್ತು ಅಭಿಷೇಕ್‌ ಬಚ್ಚನ್‌ ಮತ್ತೊಮ್ಮೆ ಕಾಣಿಸಿಕೊಳ್ಳಲಿದ್ದಾರೆ. ಈ ರಾಜಕೀಯ ಥ್ರಿಲ್ಲರ್ ಸರಣಿಯ ಮೂರನೇ ಭಾಗ Sarkar 3, 2017ರಲ್ಲಿ ಬಿಡುಗಡೆಯಾಗಿತ್ತು. ಗೆದ್ದಿರಲಿಲ್ಲ.