ಡ್ರಗ್ಸ್ ಪ್ರಕರಣ ಸಂಬಂಧ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬರೋಬ್ಬರಿ 28 ದಿನ ಬಂಧನದಲ್ಲಿದ್ದರು. ಆಗ ಎನ್ ಸಿ ಬಿ ಅಧಿಕಾರಿ ಜೊತೆ ಅಳಲು ತೋಡಿಕೊಂಡಿದ್ದನ್ನು ಹಿರಿಯ ಅಧಿಕಾರಿ ಬಹಿರಂಗ ಪಡಿಸಿದ್ದಾರೆ. ಈ ವಿಚಾರಣೆಗೆ ತಾನು ಅರ್ಹನಾ ಎಂದು ಆರ್ಯನ್ ಕೇಳಿದ್ದರು ಎಂದು ಬಹಿರಂಗ ಪಡಿಸಿದ್ದಾರೆ. 

ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದ ಬಾಲಿವುಡ್ ಖ್ಯಾತ ನಟ ಶಾರುಖ್ ಖಾನ್(Shah Rukh Khan) ಪುತ್ರ ಆರ್ಯನ್ ಖಾನ್(Aryan Khan) ಈ ಬಗ್ಗೆ ಎಲ್ಲಿಯೂ ಮಾತನಾಡಿಲ್ಲ. ಜೈನಿಂದ ಹೊರಬಂದ ಬಳಿಕವೂ ಆರ್ಯನ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಇತ್ತೀಚಿಗಷ್ಟೆ ಈ ಪ್ರಕರಣದಿಂದ ಆರ್ಯನ್ ಖಾನ್‌ಗೆ ಎನ್ ಸಿ ಬಿ ಕ್ಲೀನ್ ಚಿಟ್ ಸಹ ನೀಡಿದೆ. 

Add Asianetnews Kannada as a Preferred SourcegooglePreferred

ಮುಂಬೈ ಕ್ರೂಸ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರನ್ನು ಅಕ್ಟೋಬರ್ ಆರಂಭದಲ್ಲಿ ಬಂಧಿಸಲಾಗಿತ್ತು. ಹಲವಾರು ನ್ಯಾಯಾಲಯದ ವಿಚಾರಣೆಗಳು, ಸುದೀರ್ಘ ನಾಟಕೀಯ ಬೆಳವಣಿಗೆಗಳ ಬಳಿಕ ಅಕ್ಟೋಬರ್ 28 ರಂದು ಅವರಿಗೆ ಕೋರ್ಟ್ ಜಾಮೀನು ನೀಡಿತ್ತು. ಆರ್ಯನ್ ಖಾನ್ ಬರೋಬ್ಬರಿ 28 ದಿನ ಬಂಧನದಲ್ಲಿದ್ದರು. ಈ ಬಗ್ಗೆ ಆರ್ಯನ್ ಮೌನ ವಹಿಸಿದ್ದಾರೆ. ಆದರೆ ಆರ್ಯನ್ ಖಾನ್ ಬಂಧಿನದಲ್ಲಿದ್ದಾಗ ಹಿರಿಯ ಎನ್ ಸಿ ಬಿ ಅಧಿಕಾರಿ ಜೊತೆ ಅಳಲು ತೋಡಿಕೊಂಡಿದ್ದನ್ನು ಅಧಿಕಾರಿ ಬಹಿರಂಗ ಪಡಿಸಿದ್ದಾರೆ. 

ಎನ್ ಸಿ ಬಿಯ ಡೆಪ್ಯುಟಿ ಡೈರೆಕ್ಟರ್ ಸಂಜಯ್ ಸಿಂಗ್ ವಿಶೇಷ ತನಿಖಾ ತಂಡದ(SIT) ನೇತೃತ್ವ ವಹಿಸಿದ್ದರು. ತನಿಖೆ ಸಮಯದಲ್ಲಿ ಸಂಜಯ್ ಸಿಂಗ್, ಆರ್ಯನ್ ಖಾನ್ ಜೊತೆ ಮಾತನಾಡಿದ್ದೇನೆ, ಈ ವಿಚಾರಣೆಗೆ ತಾನು ಅರ್ಹನಾ ಎಂದು ಪ್ರಶ್ನೆ ಮಾಡಿದ್ದರು ಎಂದು ಹೇಳಿದ್ದಾರೆ. 

ಇಂಡಿಯಾ ಟುಡೇ ಜೊತೆ ಮಾತನಾಡಿದ ಸಂಜಯ್ ಸಿಂಗ್, 'ಆರ್ಯನ್ ಖಾನ್ ನನ್ನ ಬಳಿ, ಏಜನ್ಸಿ ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಹಾಗೆ ನಡೆಸಿಕೊಳ್ಳುತ್ತಿದೆ ಎಂದು ಆರ್ಯನ್ ಕೇಳಿದ್ದರು' ಎಂದು ಬಹಿರಂಗ ಪಡಿಸಿದರು. 'ಸರ್, ನೀವು ನನ್ನನ್ನು ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಹಾಗೆ ನಡೆಸಿಕೊಳ್ಳುತ್ತಿದ್ದೀರಾ, ಡ್ರಗ್ ಡೀಲ್‌ಗೆ ನಾನು ಹಣಕಾಸು ಒದಗಿಸುತ್ತೇನೆ ಎಂದು ಹೇಳುತ್ತಿದ್ದೀರಿ. ಈ ಎಲ್ಲಾ ಆರೋಪ ಅಸಂಬದ್ಧ ಅಲ್ಲವೇ?, ನನ್ನನ್ನು ಬಂಧಿಸಿದ ಆ ದಿನ ನನ್ನ ಬಳಿ ಯಾವುದೇ ಡ್ರಗ್ಸ್ ಇರಲಿಲ್ಲ' ಎಂದು ಆರ್ಯನ್ ಹೇಳಿದ್ದರು ಎಂದು ಸಂಜಯ್ ಸಿಂಗ್ ವಿವರಿಸಿದ್ದಾರೆ.

ನಿದ್ರಾಹೀನತೆಯಿಂದ ಹೊರಬರಲು ಗಾಂಜಾ ಸೇವನೆ ಕಲಿತಿದ್ದೆ: ಆರ್ಯನ್‌

'ಸರ್ ನೀವು ದೊಡ್ಡ ತಪ್ಪು ಮಾಡಿದ್ದೀರಿ. ನನ್ನ ಖ್ಯಾತಿಯನ್ನು ಹಾಲು ಮಾಡಿದ್ದೀರಿ. ನಾನು ಇಷ್ಟು ವಾರಗಳು ಜೈಲಿನಲ್ಲಿ ಯಾಕೆ ಕಳೆಯಬೇಕು. ನಾನು ನಿಜವಾಗಿಯೂ ಇದಕ್ಕೆ ಅರ್ಹನಾ' ಎಂದು ಆರ್ಯನ್ ಖಾನ್ ಕೇಳಿದ್ದರು ಎಂದು ಸಂಜಯ್ ಸಿಂಗ್ ವಿವರಿಸಿದ್ದಾರೆ. 

ಯಾರ್ಯಾರಿಗೆ ಕ್ಲೀನ್ ಚಿಟ್ ಸಿಕ್ಕಿದೆ

'ಆರ್ಯನ್ ಮತ್ತು ಮೋಹಕ್ ಹೊರತುಪಡಿಸಿ ಎಲ್ಲಾ ಆರೋಪಿಗಳು ಮಾದಕ ದ್ರವ್ಯಗಳನ್ನು ಹೊಂದಿದ್ದರು' ಎಂದು ಹಿರಿಯ ಎನ್‌ಸಿಬಿ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ಚಾರ್ಜ್ ಶೀಟ್ ನಲ್ಲಿರುವ ಹೇಳಿಕೆಯನ್ನು ತಿಳಿಸಿದ್ದರು. ಆರ್ಯನ್ ಖಾನ್ ಮತ್ತು ಇತರ ಐವರ ವಿರುದ್ಧ ಸಂಸ್ಥೆಗೆ ಸಾಕಷ್ಟು ಪುರಾವೆಗಳು ಸಿಗಲಿಲ್ಲ ಎಂದು ಅವರು ಹೇಳಿದರು.

ಕ್ರೂಸ್ ಡ್ರಗ್ಸ್ ಪ್ರಕರಣದ ಚಾರ್ಟ್‌ಶೀಟ್‌ನಲ್ಲಿ ಮುನ್ಮುನ್ ಧಮೇಚಾ ಮತ್ತು ಅರ್ಬಾಜ್ ಮರ್ಚೆಂಟ್ ಕ್ಲೀನ್ ಚಿಟ್ ಪಡೆದಿಲ್ಲ. ಅರ್ಬಾಜ್ ಮರ್ಚೆಂಟ್, ಆರ್ಯನ್ ಖಾನ್ ಅವರ ಸ್ನೇಹಿತ. ಚಾರ್ಟ್ ಶೀಟ್‌ನಲ್ಲಿ 6 ಜನರ ವಿರುದ್ಧ ಯಾವುದೇ ಸಾಕ್ಷ್ಯಾಧಾರಗಳಿಲ್ಲ ಎಂದು ಬರೆಯಲಾಗಿದೆ. ಸಾಕ್ಷ್ಯಾಧಾರಗಳು ಪತ್ತೆಯಾಗದವರಲ್ಲಿ ಆರ್ಯನ್ ಖಾನ್, ಸಾಹು, ಆನಂದ್, ಸುನೀಲ್ ಸೆಹ್, ಅರೋರಾ ಸೇರಿದ್ದಾರೆ. ಉಳಿದ 14 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ಈ 14 ಜನರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದು ಎನ್ ಸಿಬಿ ಹೇಳಿದೆ.

Drug Case ಶಾರುಖ್ ಪುತ್ರ ಆರ್ಯನ್ ಖಾನ್ ಗೆ ಕ್ಲೀನ್ ಚಿಟ್

ಏನಿದು ಪ್ರಕರಣ

ಅಕ್ಟೋಬರ್ 2 ರಂದು, ಕ್ರೂಸ್ ಶಿಪ್ ಮೇಲೆ ಎನ್ ಸಿಬಿ ದಾಳಿ ನಡೆಸಿತ್ತು. ಇದರಲ್ಲಿ ಆರ್ಯನ್ ಖಾನ್ ಸೇರಿದಂತೆ ಒಟ್ಟು 19 ಮಂದಿಯನ್ನು ಬಂಧಿಸಲಾಗಿತ್ತು. ನಂತರ ಎಲ್ಲಾ ಆರೋಪಿಗಳು ವಿವಿಧ ಸಮಯಗಳಲ್ಲಿ ಜಾಮೀನಿನ ಮೇಲೆ ಹೊರಬಂದರು. ಒಬ್ಬ ಆರೋಪಿ ಸದ್ಯ ಜೈಲಿನಲ್ಲಿದ್ದಾನೆ. ಈ ಪ್ರಕರಣದಲ್ಲಿ ಆರ್ಯನ್ ಖಾನ್ ಮೂರು ವಾರಗಳಿಗೂ ಹೆಚ್ಚು ಕಾಲ ಜೈಲಿನಲ್ಲೇ ಇರಬೇಕಾಯಿತು.