ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ಮೂರು ವರ್ಷಗಳ ಕಾಲ ಹನಿಟ್ರ್ಯಾಪ್‌ ಜಾಲ ನಡೆಸುತ್ತಿದ್ದ ದಂಪತಿಯನ್ನು ಬಂಧಿಸಲಾಗಿದೆ. ಮಹಿಳೆ ಸೋಶಿಯಲ್‌ ಮೀಡಿಯಾ ಮೂಲಕ 100 ಕ್ಕೂ ಹೆಚ್ಚು ಪುರುಷರಿಗೆ ಆಮಿಷವೊಡ್ಡಿದ್ದರೆ, ಆಕೆಯ ಪತಿ ಅವರ ಆತ್ಮೀಯ ಭೇಟಿಯನ್ನು ರಹಸ್ಯವಾಗಿ ಚಿತ್ರೀಕರಿಸಿದ್ದಾನೆ. 

ಹೈದರಾಬಾದ್‌ (ಜ.20): ತೆಲಂಗಾಣದ ಕರೀಂನಗರ ಜಿಲ್ಲೆಯ ಪೊಲೀಸರು ಸುಮಾರು ಮೂರು ವರ್ಷಗಳಿಂದ ವಿವಾಹಿತ ದಂಪತಿಗಳು ನಡೆಸುತ್ತಿದ್ದರು ಎನ್ನಲಾದ ಪ್ರಮುಖ ಲೈಂಗಿಕ ಕಿರುಕುಳ ಮತ್ತು ಹನಿಟ್ರ್ಯಾಪ್ ದಂಧೆಯನ್ನು ಭೇದಿಸಿದ್ದಾರೆ, ಇದು ಡಿಜಿಟಲ್ ಶೋಷಣೆ ಮತ್ತು ಬ್ಲ್ಯಾಕ್‌ಮೇಲ್‌ನ ಮಾದರಿಯನ್ನು ಬಹಿರಂಗಪಡಿಸಿದೆ. ಪೊಲೀಸರು ನೀಡಿರುವ ಮಾಹಿತಿಗಳ ಪ್ರಕಾರ ಆರೋಪಿಗಳು ಸೋಶಿಯಲ್‌ ಮೀಡಿಯಾ ಮೂಲಕ ಸಂತ್ರಸ್ಥರನ್ನು ರೀಚ್‌ ಆಗುತ್ತಿದ್ದರು. ಆ ಬಳಿಕ ಅವರ ಆತ್ಮೀಯ ಭೇಟಿಯನ್ನು ರಹಸ್ಯವಾಗಿ ರೆಕಾರ್ಡ್‌ ಮಾಡುತ್ತಿದ್ದರು. ಬಳಿಕ ಇದೇ ವಿಡಿಯೋ ಇಟ್ಟುಕೊಂಡು ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಲಾಗುತ್ತಿತ್ತು. ಸೋಶಿಯಲ್‌ ಮೀಡಿಯಾಗೆ ಈ ವಿಡಿಯೋ ಹಾಕುವುದಾಗಿ ಬೆದರಿಸಿ ಲಕ್ಷಾಂತರ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಆರೋಪಿ ಮಹಿಳೆಯನ್ನು ಲಲಿತಾ ಎಂದು ಗುರುತಿಸಲಾಗಿದೆ. ಇನ್‌ಸ್ಟಾಗ್ರಾಮ್ ಮತ್ತು ಯೂಟ್ಯೂಬ್ ಮೂಲಕ ಪುರುಷರನ್ನು ಸಂಪರ್ಕಿಸಿ, ಕ್ರಮೇಣ ಅವರ ವಿಶ್ವಾಸ ಗಳಿಸಿ, ಅವರನ್ನು ತನ್ನ ಮನೆಗೆ ಕರೆಯುತ್ತಿದ್ದಳು. ಸಂತ್ರಸ್ತರಿಗೆ ತಿಳಿಯದಂತೆ, ಆಕೆಯ ಪತಿ ಖಾಸಗಿ ಕ್ಷಣಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲು ಮನೆಯೊಳಗೆ ಕ್ಯಾಮೆರಾಗಳನ್ನು ಇರಿಸಿದ್ದ. ನಂತರ ಈ ವೀಡಿಯೊಗಳನ್ನು ಸಂತ್ರಸ್ಥರನ್ನು ಬ್ಲ್ಯಾಕ್‌ಮೇಲ್ ಮಾಡಲು ಬಳಸಲಾಗುತ್ತಿತ್ತು, ಹಣ ಪಾವತಿಸದಿದ್ದರೆ ದೃಶ್ಯಗಳನ್ನು ಸಂತ್ರಸ್ಥರ ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವ ಬೆದರಿಕೆ ಹಾಕಲಾಗಿತ್ತು.ಇಲ್ಲದೇ ಇದ್ದಲ್ಲಿ ಸೋಶಿಯಲ್‌ ಮೀಡಿಯಾದಲ್ಲಿ ಹಾಕಲಾಗುವುದು ಎಂದು ಬೆದರಿಸಲಾಗುತ್ತಿತ್ತು.

ಕೋಟ್ಯಂತರ ರೂಪಾಯಿ ಹಣ ವಸೂಲಿ

100 ಕ್ಕೂ ಹೆಚ್ಚು ಪುರುಷರನ್ನು ಗುರಿಯಾಗಿಸಿಕೊಂಡು ಈ ದಂಧೆ ನಡೆಸಲಾಗಿದ್ದು, ದಂಪತಿಗಳು ಹಲವು ವರ್ಷಗಳಿಂದ ಕೋಟ್ಯಂತರ ರೂಪಾಯಿಗಳನ್ನು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅಕ್ರಮವಾಗಿ ಸಂಪಾದಿಸಿದ ಹಣದಿಂದ ₹65 ಲಕ್ಷ ಮೌಲ್ಯದ ನಿವೇಶನ ಮತ್ತು ಸುಮಾರು ₹10 ಲಕ್ಷ ಮೌಲ್ಯದ ಕಾರು ಮತ್ತು ಇತರ ಆಸ್ತಿಗಳನ್ನು ಖರೀದಿಸಲಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿಗೆ ಈಗಾಗಲೇ ₹13 ಲಕ್ಷ ಪಾವತಿಸಿದ್ದೇನೆ, ಆದರೆ ಹೆಚ್ಚುವರಿಯಾಗಿ ₹5 ಲಕ್ಷ ನೀಡುವಂತೆ ಒತ್ತಡ ಹೇರಲಾಗುತ್ತಿದೆ ಎಂದು ಲಾರಿ ಮಾಲೀಕ ಪೊಲೀಸರನ್ನು ಸಂಪರ್ಕಿಸಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ದೂರುದಾರ ಲಾರಿ ಮಾಲೀಕನಿಗೆ ಕೊಲೆ ಬೆದರಿಕೆ ಕೂಡ ಹಾಕಲಾಗಿದೆ. ಹಣದ ಬೇಡಿಕೆ ಪೂರೈಸದಿದ್ದರೆ, ಕೊಲೆ ಮಾಡಿ, ಆತನ ವಿಡಿಯೋಗಳನ್ನು ಕುಟುಂಬಕ್ಕೆ ಕಳಿಸುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಿದ್ದಾರೆ.

ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದ ಜೋಡಿ

ದೂರಿನ ನಂತರ, ಕರೀಂನಗರ ಪೊಲೀಸರು ತನಿಖೆ ಆರಂಭಿಸಿ, ಶಂಕಿತರನ್ನು ಪತ್ತೆಹಚ್ಚಿ, ಇಬ್ಬರನ್ನೂ ಬಂಧಿಸಿದರು. ಕಾರ್ಯಾಚರಣೆಯ ಸಮಯದಲ್ಲಿ ಹಲವಾರು ಮೊಬೈಲ್ ಫೋನ್‌ಗಳು, ಸ್ಟೋರೇಜ್‌ ಡಿವೈಸ್‌, ವೀಡಿಯೊಗಳು, ನಗದು ಮತ್ತು ಚೆಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಹೆಚ್ಚುವರಿ ಸಂತ್ರಸ್ಥರನ್ನು ಗುರುತಿಸಲು ಮತ್ತು ಸಂಪೂರ್ಣ ಹಣದ ಜಾಡನ್ನು ಪತ್ತೆಹಚ್ಚಲು ಅಧಿಕಾರಿಗಳು ಈಗ ಡಿಜಿಟಲ್ ಪುರಾವೆಗಳನ್ನು ಪರಿಶೀಲಿಸುತ್ತಿದ್ದಾರೆ.

ಮೂರು ವರ್ಷಗಳ ಹಿಂದೆ ಮದುವೆಯಾಗಿ ಇಬ್ಬರು ಮಕ್ಕಳಿರುವ ಈ ದಂಪತಿಯನ್ನು ವಶಕ್ಕೆ ಪಡೆಯಲಾಗಿದೆ. ಇವರ ಸಂಚಿಗೆ ಬಲಿಯಾಗಿರುವ ಸಂತ್ರಸ್ಥರು ಇದ್ದರೆ ದೂರು ನೀಡಬೇಕು ಎಂದು ಪೊಲೀಸರು ಒತ್ತಾಯಿಸಿದ್ದು, ಅವರ ಗೌಪ್ಯತೆಯನ್ನು ಕಾಯ್ದುಕೊಳ್ಳುವುದಾಗಿ ತಿಳಿಸಿದ್ದಾರೆ.

ಗಂಡ ರಿಯಲ್‌ ಎಸ್ಟೇಟ್‌ ಉದ್ಯಮಿ

ಇನ್ನು ಲಲಿತಾಳ ಪತಿ ರಿಯಲ್ ಎಸ್ಟೇಟ್‌ ಉದ್ಯಮಿಯಾಗಿದ್ದು ಸಾಕಷ್ಟು ಸಾಲವನ್ನು ಮಾಡಿಕೊಂಡಿದ್ದ. ಸಾಲ ಹಾಗೂ ಇಎಂಐ ಅನ್ನು ಮರುಪಾವತಿ ಮಾಡುವ ಸಲುವಾಗಿ ಹನಿಟ್ರ್ಯಾಪ್‌ ದಂಧೆಗೆ ಇಳಿದಿದ್ದರು. ವಸೂಲಿ ಮಾಡಿದ ಹಣದಿಂದ ಐಷಾರಾಮಿ ಜೀವನವನ್ನು ಕಟ್ಟುಕೊಂಡಿದ್ದರು. ಲಾರಿ ಮಾಲೀಕ ನೀಡಿದ ದೂರಿನಿಂದ ದೊಡ್ಡ ಪ್ರಕರಣ ಬೆಳಕಿಗೆ ಬಂದಿದೆ.