Asianet Suvarna News Asianet Suvarna News

ಮಾಳವಿಕಾಗೆ ಪ್ರಶಾಂತ್ ನೀಲ್ ಮೇಲೆ ಕೋಪ ಬಂದಿತ್ತಂತೆ!

ಕನ್ನಡದ ಕಿರುತೆರೆ, ಸಿನಿಮಾ ಮತ್ತು ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಮಾಳವಿಕಾ. ಪ್ರಸ್ತುತ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಅವರು ಕೊರೋನ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ತಮ್ಮ ವೃತ್ತಿ ಬದುಕು , ಟಿ.ಎನ್ ಸೀತಾರಾಮ್ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಎಲ್ಲ ಅಂಶಗಳ ಜತೆಗೆ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಕೋಪ ಮಾಡಿಕೊಂಡಿದ್ದೇಕೆ ಎನ್ನುವ ಎಲ್ಲ ಮಾಹಿತಿಯನ್ನು ಸುವರ್ಣ.ಕಾಮ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

Kannada Actress Malavika's interview
Author
Bangalore, First Published Apr 30, 2020, 6:53 PM IST

ಕನ್ನಡದ ಕಿರುತೆರೆ, ಸಿನಿಮಾ ಮತ್ತು ರಾಜಕೀಯ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಹೆಸರು ಮಾಡಿರುವವರು ಮಾಳವಿಕಾ. ಪ್ರಸ್ತುತ ಲಾಕ್ಡೌನ್ ಸಂದರ್ಭದಲ್ಲಿ ಕೂಡ ಅವರು ಕೊರೋನ ವಿರುದ್ಧದ ಹೋರಾಟದಲ್ಲಿ ಸಕ್ರಿಯವಾಗಿದ್ದಾರೆ. ಇದರ ನಡುವೆ ಬಿಡುವು ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಭಿಮಾನಿಗಳಿಗಾಗಿ ಒಂದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅವುಗಳಲ್ಲಿ ತಮ್ಮ ವೃತ್ತಿ ಬದುಕು , ಟಿ.ಎನ್ ಸೀತಾರಾಮ್ ಬಗ್ಗೆ ಕೂಡ ಮಾತನಾಡಿದ್ದಾರೆ. ಆ ಎಲ್ಲ ಅಂಶಗಳ ಜತೆಗೆ ಅವರು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರ ಬಗ್ಗೆ ಕೋಪ ಮಾಡಿಕೊಂಡಿದ್ದೇಕೆ ಎನ್ನುವ ಎಲ್ಲ ಮಾಹಿತಿಯನ್ನು ಸುವರ್ಣ.ಕಾಮ್ ಓದುಗರಿಗಾಗಿ ಇಲ್ಲಿ ನೀಡಲಾಗಿದೆ.

- ಶಶಿಕರ ಪಾತೂರು

ಲಾಕ್ಡೌನ್ ಸಂದರ್ಭದಲ್ಲಿ ಗಂಡಹೆಂಡತಿ ಜಗಳ ಹೆಚ್ಚುತ್ತಿರುವ ಬಗ್ಗೆ ಏನಂತೀರಿ?
ನಿಜ ಹೇಳಬೇಕು ಎಂದರೆ ಇದು ಗಂಡ ಹೆಂಡತಿಯರಿಗೆ ಪರಸ್ಪರ ಹೆಚ್ಚು ಅರ್ಥಮಾಡಿಕೊಳ್ಳಲು ಸಿಕ್ಕಂಥ ಅವಕಾಶ. ಇಷ್ಟು ಹೊತ್ತಿಗಾಗಲೇ  ಜಗಳವನ್ನು ಮಾತನಾಡಿ ಸರಿ ಮಾಡಿಕೊಳ್ಳುವಷ್ಟು ಸಂದರ್ಭ ಸಿಕ್ಕಿರುತ್ತದೆ. ಇಲ್ಲಿ ನೀವು ನಂಬಬೇಕಾದ ಒಂದು ವಿಚಾರ ಏನೆಂದರೆ `ಬದುಕು ಜಟಕಾ ಬಂಡಿ' ಕಾರ್ಯಕ್ರಮದಲ್ಲಿ ನಾನು ಯಾರದೇ ಸಮಸ್ಯೆ ಪರಿಹರಿಸಿಲ್ಲ. ವರ್ಷಗಳಿಂದ ಜಗಳವಾಡಿ ದೂರಾದವರು, ಅವರವರೇ ಎದುರು ಬದುರು ಕುಳಿತು ಮಾತನಾಡುತ್ತಿದ್ದ ಹಾಗೆ ಸಮಸ್ಯೆಗಳು ಪರಿಹಾರವಾಗಿವೆ! ಅಂದರೆ ಒಬ್ಬರ ಸಮಸ್ಯೆಯನ್ನು ಮತ್ತೊಬ್ಬರು ಎದುರು ನಿಂತು ಕೇಳುವಷ್ಟು ತಾಳ್ಮೆಯನ್ನು ಪರಸ್ಪರ ತೋರಿಸಿಕೊಂಡರೆ ಸಾಕು. ಆಗ ನಿಜವಾದ ಸಮಸ್ಯೆ ಏನು ಎಂದು ಅರ್ಥವಾಗುತ್ತದೆ. ಈ ಲಾಕ್ಡೌನ್‌ ಸಂದರ್ಭವನ್ನು ಕೂಡ ಮನೆಯೊಳಗಿರುವವರು ಸಮಸ್ಯೆಗಳ ಪರಿಹಾರಕ್ಕಾಗಿ ಬಳಸಬೇಕು. ಮನೆಯೊಳಗೆ ಪತ್ನಿ ಎಷ್ಟು ಕೆಲಸ ಮಾಡುತ್ತಿದ್ದಾಳೆ ಎಂದು ಗಮನಿಸಿ ಸಹಾಯ ಮಾಡುವುದಕ್ಕೆ ಪತಿಗೆ ಸಾಧ್ಯವಾಗಬೇಕು. ಹಾಗೆಯೇ ಕೆಲಸಕ್ಕೆ ಹೋಗದೆ ತನ್ನೊಂದಿಗೆ ಇರಲು ಸಾಧ್ಯವಾದ ಪತಿಗೆ ಆತ್ಮೀಯವಾಗಲು ಪತ್ನಿಗೂ ಸಾಧ್ಯವಾಗಬೇಕು. ತಾವಿಬ್ಬರೂ ಗಮನ ನೀಡಲು ಸಾಧ್ಯವಾಗದ ಮಕ್ಕಳ ಜತೆಗಿದ್ದು ಅವರೆಡೆಗೂ ಕಾಳಜಿ ನೀಡಲು ಈ ಸಮಯವನ್ನು ಬಳಸಿಕೊಳ್ಳಬೇಕಾಗಿದೆ.

ಟಿವಿ ಡಿಬೇಟ್‌ನಲ್ಲಿ ಪ್ರಖರ ನಿಲವು ಪ್ರಕಟಿಸುವ ದಿಟ್ಟೆ ಮಾಳಕವಿಕಾ

ನಿಮ್ಮ ಮತ್ತು ಅವಿನಾಶ್ ನಡುವೆ ಜಗಳಗಳಾಗಿಲ್ಲವೇ?
ನಮ್ಮ ಮದುವೆಯಾಗಿ 19 ವರ್ಷಗಳಾಗಿವೆ. ಕೆಲವರು ನನ್ನಲ್ಲಿ ಕೇಳುತ್ತಾರೆ, ಮದುವೆಯ ಬಳಿಕ ನಟಿಸುವ ಬಗ್ಗೆ ಮೊದಲೇ ಚರ್ಚೆ ಮಾಡಿಕೊಂಡಿದ್ದಿರಾ ಎಂದು. ವಾಸ್ತವದಲ್ಲಿ ನಾವು ಆ ಬಗ್ಗೆ ಮದುವೆಯ ಬಳಿಕ ಕೂಡ ಮಾತನಾಡಿರಲಿಲ್ಲ!  ಮದುವೆಯ ಎರಡು ದಿನ ಬಿಟ್ಟು ಅವರು ಶೂಟಿಂಗ್‌ಗೆ ಹೋದರು, ನಾನೂ ನನ್ನ ಶೂಟಿಂಗ್‌ ಸೆಟ್‌ಗೆ ಹೋದೆ. ಹಾಗಂತ ನಮ್ಮಲ್ಲಿ ಭಿನ್ನಾಭಿಪ್ರಾಯಗಳೇ ಇಲ್ಲ ಅಂತ ಏನಿಲ್ಲ. ನಮ್ಮಿಬ್ಬರ ಆಸಕ್ತಿಗಳಲ್ಲೇ ವ್ಯತ್ಯಾಸಗಳಿವೆ. ಆ ರೀತಿ ಇದ್ದಾಗಲೇ ಹೊಂದಿಕೊಂಡು ಬಾಳುವುದರಲ್ಲಿ ಅರ್ಥ ಬರುವುದು. ಅವರು ತಮ್ಮ ಶೂಟಿಂಗ್‌ ಆಯಿತು; ಪುಸ್ತಕಗಳಾಯಿತು ಎಂದು ಸುಮ್ಮನಿರಬಲ್ಲರು. ಆದರೆ ನನಗೆ ಶೂಟಿಂಗ್‌ ಇಲ್ಲದಿದ್ದರೆ ಇನ್ನೊಂದು, ಮತ್ತೊಂದು ಎಂದು ಏನಾದರೊಂದು ಕೆಲಸದಲ್ಲಿ ತೊಡಗಿಸಿಕೊಂಡಿರಲೇಬೇಕು. ಕೆಲವೊಮ್ಮೆ ನಮ್ಮಿಬ್ಬರಿಗೆ ಮಾತಿನ ಜಟಾಪಟಿ ನಡೆದಿರುವುದೂ ಇದೆ. ಆದರೆ ಈಗ ನಾವೇ ಪರಸ್ಪರ ಅರ್ಥ ಮಾಡಿಕೊಂಡು ಯಾರಾದರೊಬ್ಬರು ನಿಯಂತ್ರಣಕ್ಕೆ ತಂದುಕೊಂಡು ಸುಮ್ಮನಾಗುತ್ತೇವೆ. ಕೋಪದಲ್ಲಿ ಬರುವ ಮಾತುಗಳನ್ನು ನಾಲ್ಕು ಸಾಲುಗಳಾಚೆ ಮುಂದುವರಿಸುವುದಿಲ್ಲ. ಕಳೆದ ಹದಿನೈದು ವರ್ಷಗಳಿಂದಂತೂ ನಾವು ಜಗಳವೇ ಆಡಿಲ್ಲ ಎನ್ನಬಹುದು.


ನಿಮ್ಮ ವೃತ್ತಿ ಬದುಕಲ್ಲಿ ಟಿ.ಎನ್ ಸೀತಾರಾಮ್ ಪ್ರಭಾವ ಎಷ್ಟರ ಮಟ್ಟಿಗೆ ಇದೆ?
ಬಣ್ಣದ ಬದುಕು ನನ್ನ ವೃತ್ತಿ ಬದುಕಾಗಲು ಕಾರಣವೇ ಟಿ.ಎನ್ ಸೀತಾರಾಮ್ ಸರ್. `ಮಾಯಾಮೃಗ' ಧಾರಾವಾಹಿ ನನಗೆ ತಂದುಕೊಟ್ಟಂಥ ಜನಪ್ರಿಯತೆ ಮತ್ತು ಉತ್ತಮವಾದ ಅವಕಾಶಗಳೇ ನನ್ನನ್ನು ಮತ್ತೆ ವಕೀಲಿ ವೃತ್ತಿಯ ಕಡೆಗೆ ತಲೆ ಹಾಕದಂತೆ ಮಾಡಿತು. ಆಂಗ್ಲ ಮಾಧ್ಯಮದಲ್ಲಿ ಕಲಿತ ನಾನು ಕನ್ನಡ ಸಾಹಿತ್ಯದ ಬಗ್ಗೆ ಆಸಕ್ತಿ ವಹಿಸುವಂತೆ ಮಾಡಿದ್ದು, ಕನ್ನಡ ಸ್ಪಷ್ಟವಾಗಿ ಮಾತನಾಡುವಂತೆ ಮಾಡಿದ್ದು ಕೂಡ ಅವರೇ. ನಾನು ಏರು ಧ್ವನಿಯಲ್ಲಿ ಮಾತನಾಡಿದರೆ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ ಬೇಸ್ ವಾಯ್ಸ್‌ ಮಾತನಾಡಲು ಮತ್ತು ಒಟ್ಟಿನಲ್ಲಿ ನಾನು ವಾಯ್ಸ್ ಕಲ್ಚರ್ ಬಗ್ಗೆ ಅರಿತುಕೊಳ್ಳಲು ಸಾಧ್ಯವಾಗಿದ್ದು ಅವರಿಂದಲೇ. ಸಂಭಾಷಣೆ ಹೇಳುವಾಗ `ಪದಗಳ ಮಧ್ಯೆ ಗ್ಯಾಪ್ ಕೊಡಬೇಡಿ, ಅಕ್ಷರಗಳ ಮಧ್ಯೆ ಕೊಡಿ' ಎನ್ನುವ ಅವರ ಥಿಯರಿಯನ್ನು ಇಂದಿಗೂ ನಾನು ಅನುಸರಿಸುತ್ತಿದ್ದೇನೆ. ಅವರ ಧಾರಾವಾಹಿ ಸೆಟ್‌ಗಳು ನಟನೆಗೆ ಮಾತ್ರ ಸೀಮಿತವಲ್ಲ. ಸೀತಾರಾಮ್ ಸರ್ ಕೂಡ ಓರ್ವ ವಕೀಲರಾಗಿ, ಸಾಮಾಜಿಕ ಹೋರಾಟಗಾರರಾಗಿ ಬಂದವರು. ಹಾಗಾಗಿ ಅವರ ಮೂಲಕ ಸಂಗೀತ, ಸಾಹಿತ್ಯ, ರಾಜಕೀಯ ಹೀಗೆ ತುಂಬ ವಿಭಾಗಗಳ ದಿಗ್ಗಜರ ಪರಿಚಯ ನನಗಾಗಿದೆ. ಇಂದಿಗೂ ಕೂಡ ನಾನು ಎಷ್ಟೇ ದೊಡ್ಡ ಪಾತ್ರದಲ್ಲಿ ಬ್ಯುಸಿ ಇದ್ದರೂ ಅವರು ಸಣ್ಣ ಪಾತ್ರಕ್ಕಾಗಿ ಕರೆದಾಗ ಇಲ್ಲ ಎನ್ನುವುದಿಲ್ಲ. ಯಾಕೆಂದರೆ ಮಾಳವಿಕಾ ಎನ್ನುವ ನಟಿಯ ಆರಂಭವಾಗಿದ್ದೇ ಅಲ್ಲಿಂದ ತಾನೇ? ಮಾತ್ರವಲ್ಲ; ಅವರ ತಂಡದಲ್ಲಿ ಕೆಲಸ ಮಾಡುವಾಗ ಸಿಗುವ ಸಂತೋಷ, ಸಮಾಧಾನ ಬೇರೆ ಕಡೆ ಸಿಗುವುದೂ ಇಲ್ಲ. 

ಕನ್ನಡದ ಕೆಲಸಕ್ಕೆ ಕಾಂಗ್ರೆಸ್ಸಿಗರ ಅಡ್ಡಗಾಲೇಕೆ?

ಕೆಜಿಎಫ್ ಎರಡು ಭಾಗಗಳಲ್ಲಿ ನಟಿಸಿದ ಅನುಭವ ಹೇಗಿತ್ತು?
ಮೊದಲ ಬಾರಿ ನಾನು ಕೆಜಿಎಫ್ ಒಪ್ಪಿಕೊಂಡಾಗ ಒಂದು ಸಾಧಾರಣ ನಿರೀಕ್ಷೆಯಲ್ಲಿ ಇದ್ದೆ. ಇದುವರೆಗೆ ಸಾಕಷ್ಟು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿದ ಅನುಭವ ಇರುವುದರಿಂದ ನನಗೆ ಆತಂಕವೇನೂ ಇರಲಿಲ್ಲ. ಆದರೆ ಪ್ರಶಾಂತ್ ನೀಲ್ ನನ್ನಿಂದ ತುಂಬ ಟೇಕ್ ತೆಗೆದುಕೊಂಡರು. ಅವರು ಏನು ಹೇಳಿದ್ದರೋ ಅದರ ಪ್ರತಿ ಅಂಶವನ್ನು ಕೂಡ ನಟಿಸುವಾಗ ಕ್ಯಾರಿ ಮಾಡಬೇಕಾಗಿತ್ತು. ನನಗೆ ಕಾಂಬಿನೇಶನ್ ಆಗಿ ಮುಂದುಗಡೆ ಅನಂತನಾಗ್ ಸರ್ ಇದ್ದರು. ಆದರೆ ಅವರ ಕಾರಣಕ್ಕಾಗಿಯಾದರೂ ಬೇಗ ಶಾಟ್ ಮುಗಿಸೋಣ ಎನ್ನುವ ಮನೋಭಾವ ಕೂಡ ಪ್ರಶಾಂತ್ ನೀಲ್ ಅವರಲ್ಲಿ ಕಾಣುತ್ತಿರಲಿಲ್ಲ! ನಾನು ಮನಸ್ಸಲ್ಲೇ 'ಇಷ್ಟೊಂದು ಟೇಕ್ ಮಾಡ್ತಿದ್ದಾರಲ್ಲ? ಫೈನಲಾಗಿ ಏನು ಬರುತ್ತೆ ನಾನೂ ನೋಡ್ತೀನಿ' ಎಂದುಕೊಂಡಿದ್ದೆ. ಯಾಕೆಂದರೆ ಒಳಗೊಳಗೆ ಸಿಟ್ಟು ಬರಿಸುವಷ್ಟು  ಟೇಕ್ ತೆಗೆದುಕೊಂಡಿದ್ದರು! ಆದರೆ ಡಬ್ಬಿಂಗ್ಗೆ ಹೋದಾಗ ಕಂಡ ದೃಶ್ಯ ನೋಡಿ ನಿಜಕ್ಕೂ ಅದ್ಭುತ ಎನಿಸಿತ್ತು. ಸದ್ಯದ ಕನ್ನಡದ ಡೈರೆಕ್ಟರ್ಗಳಲ್ಲಿ ಮಾಸ್ಟರ್ ಅವರು ಎಂದು ಧೈರ್ಯದಿಂದ ಹೇಳಬಲ್ಲೆ.


ರಾಜಕಾರಣದ ಬದುಕನ್ನು ಹೇಗೆ ಕಾಣುತ್ತೀರಿ?
ನನ್ನ ಪ್ರಕಾರ ರಾಜಕೀಯದ ಬದುಕು ಎಂದರೆ ತುಂಬ ಜವಾಬ್ದಾರಿ ಮತ್ತು ಸ್ವಲ್ಪವೇ ಸ್ವಲ್ಪ ಅಧಿಕಾರ! ಉಳಿದಂತೆ ಸಮಾಜದ ಒಳಿತಿಗಾಗಿ ನನ್ನಿಂದ ಸಾಧ್ಯವಾಗುವ ಹೋರಾಟ ನಿರಂತರ ನಡೆದಿರುತ್ತದೆ. ಇತ್ತೀಚೆಗೆ ಫೇಸ್ಬುಕ್‌ ಮೊದಲಾದ ಸಾಮಾಜಿಕ ಜಾಲತಾಣಗಳಲ್ಲಿ ರಾಜಕೀಯ ಸಿದ್ಧಾಂತಗಳಿಗಾಗಿ ಜಗಳವಾಡುವವರನ್ನು ಕಂಡಿದ್ದೇನೆ. ರಾಜಕೀಯವನ್ನು ಮಧ್ಯದಲ್ಲಿ ತಂದು ತಮ್ಮ ದಶಕಗಳ ಸ್ನೇಹಕ್ಕೆ ಅಂತ್ಯ ಹಾಡುತ್ತಿದ್ದಾರೆ. ವಾಸ್ತವದಲ್ಲಿ ಇದನ್ನು ಐಡಿಯಾಲಾಜಿಕಲ್ ಡಿಫರೆನ್ಸಸ್ ಎಂದು ಮಾತ್ರ ಪರಿಗಣಿಸಬೇಕಿದೆ. ನಾನಂತೂ ಅವುಗಳನ್ನು ವೈಯಕ್ತಿಕವಾಗಿ ತೆಗೆದುಕೊಳ್ಳುವುದೇ ಇಲ್ಲ. ಇತ್ತೀಚೆಗೆ ಕಾಂಗ್ರೆಸ್ ವಕ್ತಾರ ಬ್ರಿಜೇಶ್ ಕಾಳಪ್ಪ ಅವರ ಪೋಸ್ಟ್ ಒಂದಕ್ಕೆ ನಾನು ಶುಭಕೋರಿದ್ದನ್ನು ನೋಡಿದ ಟಿಎನ್ನೆಸ್ ಸರ್ "ನೀವು ರಾಜಕಾರಣಿಗಳೆಲ್ಲ ಸ್ನೇಹಿತರು ಕಣ್ರೀ..' ಎಂದರು. ಹೌದು ನಾವಿಬ್ಬರು ಪ್ರತಿನಿಧಿಸುವ ಪಕ್ಷ ಬೇರೆ ಎನ್ನುವುದನ್ನು ಬಿಟ್ಟರೆ, ಬ್ರಿಜೇಶ್ ಕಾಳಪ್ಪ ಅವರೊಂದಿಗೆ ಆಗಲೀ, ಜೆಡಿಎಸ್ ನ ತನ್ವೀರ್ ಅವರೊಂದಿಗೆ ಆಗಲೀ, ಒಟ್ಟಿಗೆ ಕುಳಿತು ಚಹಾ ಕುಡಿಯುವಂಥ ಸ್ನೇಹ ನಮ್ಮೊಳಗಿದೆ. ನಮ್ಮೆಲ್ಲರ ಅಂತಿಮ ಉದ್ದೇಶ ದೇಶದ ಅಭಿವೃದ್ಧಿ ಎನ್ನುವ ಬಗ್ಗೆ ಸಂದೇಹವೇ ಇಲ್ಲವಲ್ಲ?  ಪ್ರಸ್ತುತ ಕೊರೋನ ವಿರುದ್ಧದ ಹೋರಾಟದಲ್ಲಿ ಕಾಂಗ್ರೆಸ್ ಸೇರಿದಂತೆ ಎಲ್ಲ ಪಕ್ಷಗಳು ಕೂಡ ಜತೆಯಾಗಿ ಕೈ ಜೋಡಿಸಿರುವುದು ಕೂಡ ಅದಕ್ಕೊಂದು ಉದಾಹರಣೆ ಎನ್ನಬಹುದು. 

ಮಗನ ಫೋಟೋ ರಿವೀಲ್ ಮಾಡಿದ ಯಶ್-ರಾಧಿಕಾ

Follow Us:
Download App:
  • android
  • ios