30ನೇ ವಯಸ್ಸಿನಲ್ಲಿ ಫೈನಾನ್ಷಿಯಲ್ ಪ್ಲ್ಯಾನಿಂಗ್ ಹೇಗಿದ್ದರೆ ಲೈಫ್ ಚೆನ್ನಾಗಿರುತ್ತೆ?
ವಯಸ್ಸು 30ರ ಗಡಿ ದಾಟುತ್ತಿದ್ದಂತೆ ಜವಾಬ್ದಾರಿಗಳು ಹೆಚ್ಚುತ್ತ ಸಾಗುತ್ತವೆ. ಫೈನಾನ್ಷಿಯಲ್ ಪ್ಲ್ಯಾನಿಂಗ್ಗೆ ಕೂಡ ಇದು ಸರಿಯಾದ ವಯಸ್ಸು.ಈ ವಯಸ್ಸಿನಲ್ಲಿ ಹೂಡಿಕೆ, ಉಳಿತಾಯ ಮಾಡಿದ್ರೆ ಇಳಿ ವಯಸ್ಸಿನಲ್ಲಿ ನೆಮ್ಮದಿ ಜೀವನ ನಡೆಸಬಹುದು.
ವಯಸ್ಸು 30ರ ಗಡಿ ತಲುಪುತ್ತಿದ್ದಂತೆ ಜವಾಬ್ದಾರಿಗಳು ಹೆಚ್ಚುತ್ತವೆ. ಹಾಗೆಯೇ ಹುಡುಗಾಟಿಕೆಯ ಬುದ್ಧಿ ಮಾಗಿ ಹೊಣೆಗಾರಿಕೆ ಅರಿವಾಗಿರುತ್ತದೆ. 30 ಹಾಗೂ 40ರ ನಡುವಿನ ವಯಸ್ಸು ವ್ಯಕ್ತಿಯ ಆರ್ಥಿಕ ಸ್ಥಿತಿಗತಿಗಳನ್ನು ನಿರ್ಧರಿಸೋ ನಿರ್ಣಾಯಕ ಘಟ್ಟ. ಈ ಸಮಯದಲ್ಲಿ ಚೆನ್ನಾಗಿ ದುಡಿಯೋ ಜೊತೆ ಉಳಿತಾಯ ಹಾಗೂ ಹೂಡಿಕೆ ಮಾಡಿದ್ರೆ ಮುಂದಿನ ಬದುಕು ಆರ್ಥಿಕ ಸುಭದ್ರತೆಯಿಂದ ಕೂಡಿರುತ್ತದೆ. 30ರ ನಂತರ ಸ್ಥಿರ ಹಾಗೂ ಭದ್ರ ಆದಾಯ ಹೊಂದಿರೋದು ಆರ್ಥಿಕ ಸ್ಥಿತಿಯ ಉತ್ತಮ ಮೈಲಿಗಲ್ಲು ಎಂದೇ ಹೇಳಬಹುದು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕೋ ಅಥವಾ ಇಲ್ಲವೆನ್ನೋ ಚಾಣಕ್ಯ ಮಾರ್ಗಗಳನ್ನು ಈ ವಯಸ್ಸಿನಲ್ಲಿ ಕಲಿತಿರೋದು ಅಗತ್ಯ. ಇಲ್ಲವಾದ್ರೆ ಮುಂದೆ ಪಶ್ಚತ್ತಾಪ ಪಡಬೇಕಾಗಬಹುದು. ಪ್ರತಿ ತಿಂಗಳು ಒಂದಿಷ್ಟು ಹಣ ಉಳಿತಾಯ ಮಾಡೋ ಅಭ್ಯಾಸ ಈ ವಯೋಮಾನದಲ್ಲೇ ರೂಢಿಸಿಕೊಳ್ಳೋದು ಅತ್ಯಗತ್ಯ. ತಿಂಗಳ ಒಟ್ಟು ಆದಾಯದ ಕನಿಷ್ಠ ಶೇ.20ರಷ್ಟಾದ್ರೂ ಉಳಿತಾಯ ಮಾಡ್ಬೇಕು. ನೀವು 30ರ ಆಸುಪಾಸಿನಲ್ಲಿದ್ರೆ ಆರ್ಥಿಕ ವಿಚಾರಕ್ಕೆ ಸಂಬಂಧಿಸಿ ಕೆಲವೊಂದು ನಿಯಮಗಳನ್ನು ಅನುಸರಿಸೋದು ಉತ್ತಮ.
ಮ್ಯೂಚುವಲ್ ಫಂಡ್ ಮೇಲೆ ಸಾಲ ಪಡೆಯೋದು ಹೇಗೆ?
ಹೂಡಿಕೆಗೆ ತಡ ಮಾಡ್ಬೇಡಿ
ಯೌವನದಲ್ಲಿ ಉಳಿತಾಯಕ್ಕಿಂತ ವೆಚ್ಚವೇ ಹೆಚ್ಚಿರೋದು ಕಾಮನ್. ಈ ವಯಸ್ಸಿನಲ್ಲಿ ಮೋಜು-ಮಸ್ತಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡೋ ಕಾರಣ ದುಡಿದ ದುಡ್ಡೆಲ್ಲ ಖರ್ಚಾಗಿ ಹೋಗಿದ್ದೇ ತಿಳಿಯೋದಿಲ್ಲ. ಉದ್ಯೋಗ ಸಿಕ್ಕಿ ಒಂದೆರಡು ವರ್ಷ ಈ ರೀತಿ ದುಡ್ಡು ವ್ಯಯಿಸಿದ್ರೆ ತೊಂದರೆಯಿಲ್ಲ. ಆದ್ರೆ ಇದನ್ನೇ ಮುಂದುವರಿಸಿದ್ರೆ, ಭವಿಷ್ಯದಲ್ಲಿ ತೊಂದರೆ ಎದುರಾಗೋ ಸಾಧ್ಯತೆಯಿದೆ. ಏಕೆಂದ್ರೆ ಉದ್ಯೋಗ ಸಿಕ್ಕಿದ ಪ್ರಾರಂಭದ ಕೆಲವು ವರ್ಷಗಳಲ್ಲಿ ನೀವು ಉಳಿತಾಯ ಮಾಡೋ ಹಣ ನಂತರದ 25-30 ವರ್ಷಗಳ ನಿಮ್ಮ ಆರ್ಥಿಕ ಪರಿಸ್ಥಿತಿಯ ಮೇಲೆ ನಿರ್ಣಾಯಕ ಪರಿಣಾಮ ಬೀರಬಲ್ಲದು. ಉದ್ಯೋಗ ಸಿಕ್ಕಿ 10-15 ವರ್ಷಗಳ ಬಳಿಕ ನಿಮ್ಮ ಉಳಿತಾಯದ ಮೊತ್ತ ದೊಡ್ಡದಾಗುತ್ತ ಹೋಗಬಹುದು, ಆದ್ರೆ ಊದ್ಯೋಗ ಸಿಕ್ಕ ಪ್ರಾರಂಭಿಕ ದಿನಗಳಲ್ಲಿ ನೀವು ಉಳಿಸಿದ ಸಣ್ಣ ಮೊತ್ತದ ಹಣ ಅನೇಕ ಬಿಕಟ್ಟುಗಳಿಂದ ನಿಮ್ಮನ್ನು ರಕ್ಷಿಸಬಲ್ಲದು. ಹೀಗಾಗಿ ಉದ್ಯೋಗ ಸಿಕ್ಕಿದ ಬಳಿಕ ಉಳಿತಾಯ ಹಾಗೂ ಹೂಡಿಕೆ ಮಾಡಲು ತಡ ಮಾಡಬೇಡಿ. ಉದ್ಯೋಗ ಸಿಕ್ಕ ತಕ್ಷಣ ನಿವೃತ್ತಿ ನಂತರದ ಬದುಕಿನ ಬಗ್ಗೆ ಯೋಚಿಸಬೇಕು ಎಂಬುದು ಹಿರಿಯ ಆರ್ಥಿಕ ತಜ್ಞರೊಬ್ಬರ ಮಾತು. ಹೀಗಾಗಿ ಉದ್ಯೋಗ ಸಿಕ್ಕಿದ ತಕ್ಷಣ ಉಳಿತಾಯ ಹಾಗೂ ಹೂಡಿಕೆ ಬಗ್ಗೆ ಯೋಜನೆ ರೂಪಿಸಿ.
ಚಿಕ್ಕಪುಟ್ಟ ರಿಸ್ಕ್ ತೆಗೆದುಕೊಳ್ಳಿ
ಷೇರುಗಳು ದೀರ್ಘಾವಧಿಯಲ್ಲಿ ಹೆಚ್ಚಿನ ಲಾಭ ತರುತ್ತವೆ ಎಂಬುದು ತಿಳಿದಿದ್ದರೂ ಸಣ್ಣ ಹೂಡಿಕೆದಾರರು ನಿಗದಿತ ಆದಾಯ ಹೂಡಿಕೆಗಳನ್ನೇ ನೆಚ್ಚಿಕೊಳ್ಳುತ್ತಾರೆ. ಆಶ್ಚರ್ಯಕರ ವಿಷಯವೆಂದ್ರೆ ಯುವಕರು ಕೂಡ ಷೇರುಗಳ ಬದಲು ಬ್ಯಾಂಕ್ ಠೇವಣಿ ಹಾಗೂ ಸಣ್ಣ ಉಳಿತಾಯ ಯೋಜನೆಗಳ ಕಡೆಗೆ ಹೆಚ್ಚು ಒಲವು ಹೊಂದಿರುತ್ತಾರೆ. ಆದ್ರೆ ಭವಿಷ್ಯದ ದೃಷ್ಟಿಯಿಂದ ನೋಡಿದ್ರೆ ಯೌವನದಲ್ಲಿ ಚಿಕ್ಕಪುಟ್ಟ ಆರ್ಥಿಕ ರಿಸ್ಕ್ಗಳನ್ನು ತೆಗೆದುಕೊಂಡ್ರೇನೆ ಮುಂದಿನ ಆರ್ಥಿಕ ಸ್ಥಿತಿ ಸದೃಢವಾಗೋದು. ಯೌವನದಲ್ಲಿ ಷೇರುಗಳಲ್ಲಿ ಹೂಡಿಕೆ ಮಾಡಲು ಭಯಪಟ್ಟುಕೊಂಡ್ರೆ ಉತ್ತಮ ರಿಟರ್ನ್ಸ್ ಕಳೆದುಕೊಳ್ಳೋ ಸಾಧ್ಯತೆಯಿದೆ. ಹೀಗಾಗಿ ನಡು ಹಾಗೂ ಇಳಿ ವಯಸ್ಸಿನಲ್ಲಿ ಆರ್ಥಿಕ ಸ್ಥಿತಿ ಉತ್ತಮವಾಗಿರಬೇಕೆಂದ್ರೆ ಯೌವನದಲ್ಲಿ ಚಿಕ್ಕಪುಟ್ಟ ರಿಸ್ಕ್ ತೆಗೆದುಕೊಳ್ಳೋದು ಅಗತ್ಯ.
ಆನ್ಲೈನ್ ಮೋಸದಿಂದ ಪಾರಾಗೋದು ಹೇಗೆ?
ವಿಂಗಡನೆ ಗೊತ್ತಿರಲಿ
ಸಂಪತ್ತಿನ ವಿಂಗಡನೆ ಅರಿತಿರೋ ಹೂಡಿಕೆದಾರ ಉತ್ತಮ ಲಾಭ ಗಳಿಸಬಲ್ಲ. ಒಂದೇ ಕಡೆ ಹೂಡಿಕೆ ಮಾಡೋದು ಅಪಾಯಕಾರಿ. ಹೀಗಾಗಿ ಆದಾಯವನ್ನು ಬೇರೆ ಬೇರೆ ಮೂಲಗಳಲ್ಲಿ ಹೂಡಿಕೆ ಮಾಡ್ಬೇಕು. ಹೀಗೆ ಮಾಡೋದ್ರಿಂದ ರಿಸ್ಕ್ ಕಡಿಮೆ. ಹಾಗೆಯೇ ಕಾಲ ಕಾಲಕ್ಕೆ ಮಾರ್ಕೆಟ್ ಸ್ಥಿತಿಗತಿಗಳನ್ನು ಅರಿತು ಹೂಡಿಕೆಯಲ್ಲಿ ಬದಲಾವಣೆ ಮಾಡುತ್ತಿರಬೇಕು. ಅಂದ್ರೆ ಕೆಲವೊಮ್ಮೆ ಚಿನ್ನದಲ್ಲಿ ಹೂಡಿಕೆ ಮಾಡಿದ್ರೆ ಉತ್ತಮ ಲಾಭ ಸಿಗುತ್ತದೆ. ಇಂಥ ಸಮಯದಲ್ಲಿ ಬೇರೆ ಹೂಡಿಕೆಗಳ ಪ್ರಮಾಣ ತಗ್ಗಿಸಿ ಚಿನ್ನದ ಮೇಲಿನ ಹೂಡಿಕೆ ಹೆಚ್ಚಿಸಿದ್ರೆ ಉತ್ತಮ ಲಾಭ ಗಳಿಸಬಹುದು.
ವಂಚಕರ ಬಗ್ಗೆ ಇರಲಿ ಎಚ್ಚರ
ಅತಿಯಾಸೆ ಗತಿಗೇಡು ಎಂಬ ಗಾಧೆಯೇ ಇದೆ. ಹೆಚ್ಚಿನ ಬಡ್ಡಿ ಸಿಗುತ್ತೆ ಅಥವಾ ಕಡಿಮೆ ಅವಧಿಯಲ್ಲಿ ದುಪ್ಪಟ್ಟು ಹಣ ಗಳಿಸಬಹುದು ಎಂಬ ಕಾರಣಕ್ಕೆ ಸೆಬಿ ಅನುಮತಿಯಿಲ್ಲದ ಸಂಸ್ಥೆಗಳಲ್ಲಿ ಯಾವುದೇ ಕಾರಣಕ್ಕೂ ಹೂಡಿಕೆ ಮಾಡಬೇಡಿ. ನಕಲಿ ಸಂಸ್ಥೆಗಳ ಬಣ್ಣ ಬಣ್ಣದ ಜಾಹೀರಾತಿಗೆ ಮರುಳಾಗಿ ಇದ್ದಬದ್ದ ಹಣವನ್ನೆಲ್ಲ ಹೂಡಿಕೆ ಮಾಡಿ ಕೈ ಸುಟ್ಟುಕೊಂಡವರು ಅನೇಕರಿದ್ದಾರೆ. ಹೀಗಾಗಿ ವಂಚಕರ ಬಲೆಗೆ ಬೀಳದಂತೆ ಎಚ್ಚರ ವಹಿಸಿ. ಕಡಿಮೆ ಅವಧಿಯಲ್ಲಿ ಹೆಚ್ಚಿನ ರಿಟರ್ನ್ಸ್ ಸಿಗುತ್ತೆ ಎಂದಾದ್ರೆ ಅಲ್ಲೇನೂ ಮೋಸವಿದೆ ಎಂದೇ ಅರ್ಥ.
ತುರ್ತುನಿಧಿ ಇರಲಿ
ಪ್ರತಿಯೊಬ್ಬರೂ ಒಂದು ತುರ್ತು ನಿಧಿ ಸ್ಥಾಪಿಸಿಡೋದು ಒಳ್ಳೆಯದು. ಭವಿಷ್ಯ ಅನಿಶ್ಚಿತ. ನಾಳೆ ನೀವು ಉದ್ಯೋಗ ಕಳೆದುಕೊಳ್ಳಬಹುದು, ಕುಟುಂಬದಲ್ಲಿ ಯಾರಿಗೋ ಅನಾರೋಗ್ಯ ಕಾಡಬಹುದು. ಇಂಥ ಸಮಯದಲ್ಲಿ ನಿಮ್ಮ ಕೈಯಲ್ಲಿ ಒಂದಿಷ್ಟು ಹಣವಿದ್ರೆ ಮಾತ್ರ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಸಾಧ್ಯ. ಕ್ರೆಡಿಟ್ ಕಾರ್ಡ್ ಇದೆಯಲ್ಲ, ಮತ್ತೇಕೆ ತುರ್ತುನಿಧಿ ಎಂದು ಕೆಲವರು ವಾದಿಸಬಹುದು. ಆದ್ರೆ ಕ್ರೆಡಿಟ್ ಕಾರ್ಡ್ ಬಳಸಿ 15-30 ದಿನಗಳಲ್ಲಿ ಬಿಲ್ ಬರುತ್ತೆ, ಆಗ ನೀವು ಬ್ಯಾಂಕ್ಗೆ ಹಣ ಪಾವತಿಸಲೇಬೇಕಲ್ಲ. ಇಂಥ ಸಮಯದಲ್ಲಿ ತುರ್ತುನಿಧಿ ಇಲ್ಲವೆಂದ್ರೆ ಸಾಲ ಮಾಡೋದು ಅನಿವಾರ್ಯವಾಗುತ್ತೆ.