ಕೇಂದ್ರ ಸರ್ಕಾರ ಇರಾನ್ ಯುದ್ಧದ ವೇಳೆ ಪೆಟ್ರೋಲ್ ಹಾಗೂ ಡೀಸೆಲ್ ಮೇಲೆ ಕೆಲ ನಿರ್ಬಂಧ ವಿಧಿಸಿತ್ತು. ಇದೀಗ ಪೂರೈಕೆ ಸರಿಯಾದ ಪ್ರಮಾಣದಲ್ಲಿ ಆಗುತ್ತಿರುವ ಕಾರಣ ಜುಲೈ 1 ರಿಂದಲೇ ಇಂಧನ ಮೇಲಿನ ನಿರ್ಬಂಧ ತೆರೆವುಗೊಳಿಸಿದೆ. 

ನವ ದೆಹಲಿ (ಜೂ.29) ಇರಾನ್, ಅಮೆರಿಕ, ಇಸ್ರೇಲ್ ಯುದ್ಧದ ಪರಿಣಾಮ ಭಾರತ ಸೇರಿದಂತೆ ಹಲವು ದೇಶಗಳು ತೈಲ ಸಮಸ್ಯೆ ಎದುರಿಸಿತ್ತು. ಪರಿಣಾಮ ಭಾರತದಲ್ಲಿ ಪೆಟ್ರೋಲ್ , ಡೀಸೆಲ್, ಎಲ್‌ಪಿಜಿ ಗ್ಯಾಸ್ ಮೇಲೆ ನಿರ್ಬಂಧಗಳನ್ನು ಹೇರಲಾಗಿತ್ತು. ಈಗಾಗಲೇ ಎಲ್‌ಪಿಜಿ ಮೇಲಿನ ನಿರ್ಬಂಧ ತೆರವುಗೊಳಿಸಿರುವ ಕೇಂದ್ರ ಸರ್ಕಾರ ಇದೀಗ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ನಿರ್ಬಂಧವನ್ನು ತೆರವು ಮಾಡುತ್ತಿದೆ. ಜುಲೈ 1 ರಿಂದ ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ನಿರ್ಬಂಧ ತೆರವಾಗುತ್ತಿದೆ. ಈ ಕುರಿತು ಕೇಂದ್ರ ಸರ್ಕಾರ ಅಧಿಕೃತ ಘೋಷಣೆ ಮಾಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪೆಟ್ರೋಲ್ ಡೀಸೆಲ್ ಮೇಲಿನ ನಿರ್ಬಂಧ ಏನು?

ಯುದ್ದ ಕಾರಣದಿಂದ ಭಾರತದಲ್ಲಿ ತೈಲ ಅಭಾವ ಸೃಷ್ಟಿಯಾಗಿತ್ತು. ಈ ವೇಳೆ ಕೆಲ ನಿರ್ಬಂಧಗಳನ್ನು ಹೇರಲಾಗಿತ್ತು. ವಾಣಿಜ್ಯ ಇಂಧನ ಖರೀದಿದಾರರು ಪೆಟ್ರೋಲ್ ಪಂಪ್‌ಗಳಿಂದ ಪೆಟ್ರೋಲ್ ಅಥವಾ ಡೀಸೆಲ್ ಖರೀದಿಸುವುದು ನಿರ್ಬಂಧಿಸಲಾಗಿತ್ತು. ಕೈಗಾರಿಕೆ, ವಾಣಿಜ್ಯ, ಸಂಘ ಸಂಸ್ಥೆಗಳು ಪೆಟ್ರೋಲ್ ಪಂಪ್‌ನಿಂದ ಇಂಧನ ಖರೀದಿಯನ್ನು ನಿರ್ಬಂಧಿಸಲಾಗಿತ್ತು. ಸ್ಥಳೀಯರಿಗೆ, ಗ್ರಾಹಕರಿಗೆ ಇಂಧನ ಕೊರತೆ ತಪ್ಪಿಸಲು ಈ ನಿರ್ಭಂಧ ಹೇರಲಾಗಿತ್ತು. ಇತ್ತ ವಾಣಿಜ್ಯ ಉದ್ದೇಶಕ್ಕೆ ದೊಡ್ಡ ಪ್ರಮಾಣದಲ್ಲಿ ಇಂಧನ ಖರೀದಿಸುವವರು ಬಲ್ಕ್ ಸೆಲ್ಲರ್ ಮೂಲಕ ಖರೀದಿಗೆ ಸೂಚಿಸಲಾಗಿತ್ತು.

ಜೂನ್ ತಿಂಗಳಲ್ಲಿ ಸಗಟು (ಬಲ್ಕ್) ಡೀಸೆಲ್ ಬೆಲೆಗಿಂತ ಸಾಮಾನ್ಯ ರೀಟೇಲ್ ಪೆಟ್ರೋಲ್ ಬಂಕ್‌ಗಳಲ್ಲಿನ ಬೆಲೆ ಲೀಟರ್‌ಗೆ ಸುಮಾರು 40 ರೂಪಾಯಿಯಷ್ಟು ಕಡಿಮೆಯಿತ್ತು. ಈ ಭಾರಿ ಬೆಲೆ ವ್ಯತ್ಯಾಸದಿಂದಾಗಿ ದೊಡ್ಡ ದೊಡ್ಡ ಟ್ರಕ್ಕಿಂಗ್ ಕಂಪನಿಗಳು ಮತ್ತು ಕೈಗಾರಿಕೆಗಳು ಸಗಟು ಮಾರುಕಟ್ಟೆಯನ್ನು ಬಿಟ್ಟು ಸಾಮಾನ್ಯ ಪೆಟ್ರೋಲ್ ಬಂಕ್‌ಗಳ ಕಡೆ ಮುಖ ಮಾಡಿದ್ದವು. ಇದರಿಂದಾಗಿ ಸರ್ಕಾರಿ ತೈಲ ಕಂಪನಿಗಳಾದ IOC, BPCL ಮತ್ತು HPCL ಬಂಕ್‌ಗಳ ಮೇಲೆ ತೀವ್ರ ಒತ್ತಡ ಉಂಟಾಗಿ, ದೇಶದ ಹಲವು ಭಾಗಗಳಲ್ಲಿ ಇಂಧನ ಕೊರತೆಯ ಭೀತಿ ಎದುರಾಗಿತ್ತು. ಇದನ್ನು ನಿಯಂತ್ರಿಸಲು ಸರ್ಕಾರ ತಾತ್ಕಾಲಿಕ ಬ್ರೇಕ್ ಹಾಕಿತ್ತು.

ಜಾಗತಿಕ ಸಮಸ್ಯೆಗಳಿಂದ ಈ ನಿರ್ಬಂಧ ಹೇರಿದ್ದ ಕೇಂದ್ರ ಸರ್ಕಾರ ಇದೀಗ ನಿರ್ಬಂಧ ತೆರವುಗೊಳಿಸುತ್ತಿದೆ. ಜುಲೈ 1 ರಿಂದ ಈ ಎಲ್ಲಾ ನಿರ್ಬಂಧ ತೆರವಾಗುತ್ತಿದೆ. ಸದ್ಯ ಪರಿಸ್ಥಿತಿ ಸಹಜ ಸ್ಥಿತಿಗೆ ಮರಳುತ್ತಿದೆ. ಹೀಗಾಗಿ ನಿರ್ಬಂಧ ತೆರವುಗೊಳಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಕಳೆದ ವಾರವಷ್ಟೇ ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ಮೇಲಿನ ನಿಯಂತ್ರಣವನ್ನು ಸಡಿಲಗೊಳಿಸಿದ್ದ ಕೇಂದ್ರ ಇಂಧನ ಸಚಿವಾಲಯ, ಇದೀಗ ಪೆಟ್ರೋಲ್-ಡೀಸೆಲ್ ಮಾರುಕಟ್ಟೆಯನ್ನೂ ಮುಕ್ತಗೊಳಿಸಿದೆ. ಸರ್ಕಾರದ ಈ ಮಹತ್ವದ ನಿರ್ಧಾರದಿಂದಾಗಿ ಸಾರಿಗೆ ಉದ್ಯಮ, ಕೈಗಾರಿಕೆಗಳು ಹಾಗೂ ಸಾಮಾನ್ಯ ವಾಹನ ಸವಾರರಿಗೆ ಜುಲೈ ಆರಂಭದಲ್ಲೇ ಭಾರಿ ನೆಮ್ಮದಿ ಸಿಕ್ಕಂತಾಗಿದೆ.