ಜಪ್ತಿಯಾದ ವಾಹನ ಬಿಡುಗಡೆಗೆ 55 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆಯಿಟ್ಟಿದ್ದ ಇಬ್ಬರು ಕೇಂದ್ರ ಜಿಎಸ್‌ಟಿ ಅಧಿಕಾರಿಗಳನ್ನು ಗುಜರಾತ್ ಭ್ರಷ್ಟಾಚಾರ ನಿಗ್ರಹದಳ ಬಂಧಿಸಿದೆ. ಮೊದಲ ಕಂತಿನ 10 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗ ಕಚೇರಿಯಲ್ಲೇ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾರೆ.

ಜಿಎಸ್‌ಟಿ ಅಧಿಕಾರಿಗಳು ಎಸಿಬಿ ಬಲೆಗೆ

ನಾಡಿಯಾಡ್‌: ಜಪ್ತಿಯಾಗಿದ್ದ ಟ್ರಾನ್ಸ್‌ಪೋರ್ಟ್‌ ವಾಹನವನ್ನು ಬಿಡುಗಡೆ ಮಾಡುವುದಕ್ಕೆ 55 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟ ಕೇಂದ್ರ ಸರಕು ಹಾಗೂ ಸೇವಾ ತೆರಿಗೆ ಇಲಾಖೆಯ ಇಬ್ಬರು ಉನ್ನತಮಟ್ಟದ ಅಧಿಕಾರಿಗಳನ್ನು ಗುಜರಾತ್ ರಾಜ್ಯ ಭ್ರಷ್ಟಾಚಾರ ನಿಗ್ರಹದಳದ ಅಧಿಕಾರಿಗಳು ಬಂಧಿಸಿದ್ದಾರೆ. ಬೇಡಿಕೆ ಇರಿಸಿದ 55 ಲಕ್ಷ ಮೊತ್ತದ ಲಂಚದಲ್ಲಿ ಮೊದಲ ಕಂತನ್ನು ಸ್ವೀಕರಿಸುತ್ತಿದ್ದಾಗ ಕಚೇರಿಯಲ್ಲೇ ಅವರನ್ನು ರೆಡ್‌ಹ್ಯಾಂಡ್ ಆಗಿ ಸೆರೆಹಿಡಿಯಲಾಗಿದೆ.

50ಲಕ್ಷಕ್ಕೆ ಡೀಲ್: 10 ಲಕ್ಷದ ಮೊದಲ ಕಂತ ಸ್ವೀಕರಿಸುವಾಗ ಅರೆಸ್ಟ್

ಬಂಧಿತ ಜಿಎಸ್‌ಟಿ ಅಧಿಕಾರಿಗಳನ್ನು ಕ್ಲಾಸ್‌ ಸೆಕೆಂಡ್ ಸೂಪರಿಟೆಂಡೆಂಟ್ ಅಮರ್‌ನಾಥ್ ಗೋವರ್ಧನ್ ಸರೋಜ್ ಹಾಗೂ ಕ್ಲಾಸ್ ಸೆಕೆಂಡ್ ಜಿಎಸ್‌ಟಿ ಇನ್ಸ್‌ಪೆಕ್ಟರ್ ಸುಭೋದ್ ಸುಭಾಷ್ ಚೌಹಾಣ್ ಎಂಬುವರನ್ನು ಬಂಧಿಸಲಾಗಿದೆ. ಇಬ್ಬರು ನಡಿಯಾಡ್‌ನ ಕೇಂದ್ರ ಜಿಎಸ್‌ಟಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ವಿರುದ್ಧ ದೂರು ನೀಡಿದವರು ಸಾರಿಗೆ ಉದ್ಯಮವನ್ನು ನಡೆಸುತ್ತಿದ್ದು, ಅವರಿಗೆ ಸಂಬಂಧಿಸಿದ ಒಂದು ಸರಕು ಸಾಗಣೆ ಟ್ರಕ್‌ ವಾಹನವನ್ನು ಕೇಂದ್ರ ಜಿಎಸ್‌ಟಿ ಅಧಿಕಾರಿಗಳು ಜಪ್ತಿ ಮಾಡಿದ್ದರು. ಹೀಗೆ ಜಪ್ತಿ ಮಾಡಿದ ಟ್ರಕ್‌ ಅನ್ನು ನಾಡಿಯಾಡ್‌ನ ಜಿಎಸ್‌ಟಿ ಕಚೇರಿಗೆ ತಪಾಸಣೆಗೆ ಕರೆತರಲಾಗಿತ್ತು.

ಈ ವೇಳೆ ದೂರುದಾರರು ವಾಹನ ಬಿಡುಗಡೆ ಮಾಡುವಂತೆ ಜಿಎಸ್‌ಟಿ ಅಧಿಕಾರಿಗಳಾದ ಇನ್ಸ್‌ಪೆಕ್ಟರ್ ಸುಬೋಧ್ ಚೌಹಾಣ್ ಹಾಗೂ ಸೂಪರಿಟೆಂಡೆಂಟ್ ಅಮರ್‌ನಾಥ್ ಸರೋಜ್ ಅವರು ವಾಹನದ ಜಿಎಸ್‌ಟಿ ದಾಖಲೀಕರಣದಲ್ಲಿನ ಕೊರತೆಗಳನ್ನು ಉಲ್ಲೇಖಿಸಿ ಅದನ್ನು ಸೆಟಲ್‌ಮೆಂಟ್ ಮಾಡಿ ಬೇರೆ ಯಾವುದೇ ಕಾನೂನು ದಂಡ ಪಾವತಿ ಇಲ್ಲದೇ ಈ ವಾಹನವನ್ನು ರಿಲೀಸ್ ಮಾಡುವುದಕ್ಕೆ 55 ಲಕ್ಷ ರೂಪಾಯಿ ಲಂಚ ನೀಡುವಂತೆ ಬೇಡಿಕೆ ಇರಿಸಿದ್ದರು. ಹಾಗೂ ಈ ಪ್ರಕ್ರಿಯೆಯನ್ನು ಆರಂಭಿಸುವುದಕ್ಕೆ ಲಂಚದ ಮೊದಲ ಕಂತಾಗಿ 10 ಲಕ್ಷ ರೂಪಾಯಿಗಳನ್ನು ಕೂಡಲೇ ಪಾವತಿಸುವಂತೆ ಕೇಳಿದ್ದರು.

ಇದನ್ನೂ ಓದಿ: ಟ್ರಂಪ್ ಜತೆ ವಾಗ್ವಾದ ಇಷ್ಟವಿಲ್ಲ ಎಂದ ಪೋಪ್

ಆದರೆ ಇಷ್ಟೊಂದು ದುಬಾರಿ ಮೊತ್ತದ ಲಂಚವನ್ನು ಪಾವತಿಸಲಾಗದೇ ಈ ಟ್ರಾನ್ಸ್‌ಪೋರ್ಟ್ ಉದ್ಯಮ ನಡೆಸುತ್ತಿದ್ದ ದೂರುದಾರರು ಭ್ರಷ್ಟಾಚಾರ ನಿಗ್ರಹದಳದ ಟೋಲ್ ಫ್ರೀ ಹೆಲ್ಫ್‌ಲೈನ್‌ 1064ಗೆ ಕರೆ ಮಾಡಿ ದೂರು ನೀಡಿದ್ದರು. ನಂತರ ಗಾಂಧಿನಗರ ಎಸಿಬಿ ಘಟಕದ ಅಧಿಕಾರಿಗಳು ಈ ಇಬ್ಬರು ಲಂಚಬಾಕ ಅಧಿಕಾರಿಗಳ ಬಲೆಗೆ ಬೀಳಿಸುವುದಕ್ಕೆ ಬಲೆ ಹೆಣೆದಿದ್ದಾರೆ.

ನಾಡಿಯಾದ್‌ನ ಕೇಂದ್ರ ಜಿಎಸ್‌ಟಿ ಕಚೇರಿ ಆವರಣದಲ್ಲಿಯೇ ಈ ಲಂಚ ವಿನಿಮಯ ನಡೆದಿದ್ದು, ಕಾರ್ಯಾಚರಣೆಯ ಸಮಯದಲ್ಲಿ, ಆರೋಪಿಗಳು ಲಂಚದ ಅಗತ್ಯವನ್ನು ದೃಢೀಕರಿಸುವ ರೆಕಾರ್ಡ್ ಮಾಡಿದ ಉದ್ದೇಶಪೂರ್ವಕ ಸಂಭಾಷಣೆಯಲ್ಲಿ ತೊಡಗಿದ್ದರು. ಇದಾದ ನಂತರ ದೂರುದಾರರಿಂದ 10 ಲಕ್ಷ ರೂ. ನಗದು ಸ್ವೀಕರಿಸಿದ ತಕ್ಷಣ, ಪಿಐ ಡಿ.ಎ. ಚೌಧರಿ ನೇತೃತ್ವದ ಎಸಿಬಿ ತಂಡವು ಸ್ಥಳದಲ್ಲೇ ಇಬ್ಬರೂ ಅಧಿಕಾರಿಗಳನ್ನು ಬಂಧಿಸಿದೆ. ಕಚೇರಿಯಲ್ಲಿ 10 ಲಂಚಬಾಕ ಅಧಿಕಾರಿಗಳಿಂದ 10 ಲಕ್ಷ ರೂಪಾಯಿ ಹಣವನ್ನು ಜಪ್ತಿ ಮಾಡಲಾಗಿದೆ.

ಇದನ್ನೂ ಓದಿ: ಒಂದೇ ಗಂಟೆಯಲ್ಲಿ 7 ಸುಳ್ಳು: ಟ್ರಂಪ್ ವಿರುದ್ದ ಇಸ್ರೇಲ್ ಇರಾನ್ ಎರಡೂ ದೇಶಗಳ ಆಕ್ರೋಶ

ಲಂಚ ಕೇಳಿ ಸ್ವೀಕರಿಸಿ ಸಿಕ್ಕಿಬಿದ್ದ ಇಬ್ಬರು ಉನ್ನತಮಟ್ಟದ ಅಧಿಕಾರಿಗಳಿಬ್ಬರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಕ್ರಿಮಿನಲ್ ದುಷ್ಕೃತ್ಯಕ್ಕಾಗಿ ಪ್ರಕರಣ ದಾಖಲಿಸಲಾಗಿದೆ. ಈ ಉನ್ನತ ಮಟ್ಟದ ಬಂಧನವು ಜಿಎಸ್‌ಟಿ ಇಲಾಖೆಯಲ್ಲಿ ಅಡಗಿರುವ ಭ್ರಷ್ಟಾಚಾರವನ್ನು ಬಯಲು ಮಾಡಿದ್ದು, ತೀವ್ರ ಸಂಚಲನ ಮೂಡಿಸಿದೆ, ಏಕೆಂದರೆ ಈ ಅಧಿಕಾರಿಗಳು ಈ ಪ್ರದೇಶದಲ್ಲಿ ಸಾಗಣೆದಾರರನ್ನು ಗುರಿಯಾಗಿಸಿಕೊಂಡು ದೊಡ್ಡ ಸುಲಿಗೆ ಜಾಲದ ಭಾಗವಾಗಿ ಕೆಲಸ ಮಾಡುತ್ತಿದ್ದರಾ ಎಂದು ಎಸಿಬಿ ತನಿಖೆ ನಡೆಸುತ್ತಿದೆ.