ರಥ ಸಪ್ತಮಿಯ ವಿಶೇಷ ದಿನದಂದು ಶತ್ರುಕಾಟ, ನಕಾರಾತ್ಮಕ ಶಕ್ತಿ ಹಾಗೂ ಅರ್ಧಕ್ಕೆ ನಿಂತ ಕೆಲಸಗಳಂತಹ ಸಮಸ್ಯೆಗಳಿಗೆ ಜ್ಯೋತಿಷಿ ಸುಧೀಂದ್ರ ದೇಶಪಾಂಡೆ ಗುರೂಜಿಯವರು ಸರಳ ಪರಿಹಾರಗಳನ್ನು ಸೂಚಿಸಿದ್ದಾರೆ. ನಿಂಬೆಹಣ್ಣಿನ ಪ್ರಯೋಗ ಮತ್ತು ಸೂರ್ಯೋದಯದ ಸಮಯದ ಪ್ರಾರ್ಥನೆಯ ಮೂಲಕ ಬದಲಾವಣೆ ತರುವ ಉಪಾಯ ವಿವರಿಸಲಾಗಿದೆ.

ನಾಳೆ ಅರ್ಥಾತ್​ ಜನವರಿ 25 ರಥ ಸಪ್ತಮಿ. ಸೂರ್ಯ ಜಯಂತಿ ಎಂದೂ ಇದನ್ನು ಕರೆಯಲಾಗುತ್ತದೆ. ಪುರಾಣದ ಪುಟದಲ್ಲಿ, ಇದನ್ನು ವಿಶೇಷ ದಿನ ಎಂದೇ ಪರಿಗಣಿಸಲಾಗುತ್ತದೆ. ರಥ ಸಪ್ತಮಿಯ ದಿನ ಕಶ್ಯಪ ಮುನಿ ಮತ್ತು ಅದಿತಿ ದಂಪತಿಗೆ ಸೂರ್ಯದೇವನು ಜನಿಸಿದ. ಅವನನ್ನು ಭಕ್ತಿಯಿಂದ ಆರಾಧಿಸಿದರೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಲಭಿಸುವುದಲ್ಲದೆ, ಚರ್ಮವ್ಯಾಧಿಗಳು ಗುಣವಾಗುತ್ತದೆ ಎಂದು ಹೇಳಾಗುತ್ತದೆ. ಇದೇ ಕಾರಣಕ್ಕೆ ಹಲವು ದೇಗುಲಗಳಲ್ಲಿ ಪೂಜೆ, ಹೋಮ, ಹವನಗಳು ನಡೆಯುತ್ತವೆ. ಇದೇ ದಿನದಂದು ಹಲವು ಸಮಸ್ಯೆಗಳಿಗೆ ಪರಿಹಾರವೂ ಸಿಗಲಿದೆ.

Add Asianetnews Kannada as a Preferred SourcegooglePreferred

ಪರಿಹಾರ ಸೂಚಿಸಿದ ಗುರೂಜಿ

ಇದೀಗ ಖ್ಯಾತ ಜ್ಯೋತಿಷಿ ಸುಧೀಂದ್ರ ದೇಶಪಾಂಡೆ ಗುರೂಜಿ ಅವರು ರಥಸಪ್ತಮಿ ದಿನ ಮಾಡಬಹುದಾದ ಕೆಲವೊಂದು ಪರಿಹಾರಗಳನ್ನು ಸೂಚಿಸಿದ್ದಾರೆ. ಶತ್ರುಕಾಟವಿದ್ದರೆ, ಯಾರೋ ಪಿತೂರಿ ಮಾಡುತ್ತಿದ್ದಾರೆ ಎನ್ನಿಸಿದರೆ, ಕಚೇರಿ-ಮನೆಗಳಲ್ಲಿ ನೆಗೆಟಿವ್​ ಎನರ್ಜಿ ನಿಮ್ಮನ್ನು ಬಾಧಿಸುತ್ತಿದೆ ಎಂದು ಎನ್ನಿಸಿದರೆ ರಥ ಸಪ್ತಮಿಯ ದಿನ ಈ ಒಂದು ಪರಿಹಾರ ಮಾಡಿಕೊಳ್ಳಲು ಅವರು ಸೂಚಿಸಿದ್ದಾರೆ. ಅದೇ ರೀತಿ, ಮದುವೆ, ಉದ್ಯೋಗ ಸೇರಿದಂತೆ ಇನ್ನಾವುದೇ ಕಾರ್ಯಗಳು ಅರ್ಧಕ್ಕೆ ನಿಂತು ಹೋಗಿದ್ದರೆ, ರಥಸಪ್ತಮಿಯ ದಿನ ಮಾಡುವ ಒಂದು ಚಿಕ್ಕ ಕಾರ್ಯ ಹೇಗೆ ಜೀವನದಲ್ಲಿ ಬದಲಾವಣೆ ತರಬಲ್ಲುದು ಎನ್ನುವುದನ್ನು ಅವರು ವಿವರಿಸಿದ್ದಾರೆ.

ಶತ್ರುಕಾಟ, ನೆಗೆಟಿವ್​ ಎನರ್ಜಿ ಹೋಗಲು

ಕೆಲಸ ಸ್ಥಳ, ಮನೆಯಲ್ಲಿ, ಸಂಬಂಧಿಕರಲ್ಲಿ, ಅಕ್ಕ-ಪಕ್ಕದ ಮನೆಯವರಲ್ಲಿ ಎಲ್ಲಿಯೇ ಆದರೂ ಶತ್ರುಕಾಟವಿದ್ದರೆ, ಯಾರೋ ನಿಮ್ಮನ್ನು ಸಮಸ್ಯೆಗೆ ಸಿಲುಕಿಸುತ್ತಿದ್ದಾರೆ ಎಂದು ಎನ್ನಿಸಿದರೆ, ನೆಗೆಟಿವ್​ ಎನರ್ಜಿ ನಿಮ್ಮ ಮೇಲೆ ಬೀಳುತ್ತಿದೆ ಎಂದು ಎನ್ನಿಸಿದರೆ, ಯಾರೋ ಪಿತೂರಿ ಮಾಡುತ್ತಿದ್ದಾರೆ ಎಂದು ಎನ್ನಿಸಿದರೆ, ನಿಮ್ಮ ಶತ್ರುಗಳು ಶಾಂತವಾಗಿ ನಿಮಗೆ ಯಾವುದೇ ರೀತಿಯ ತೊಂದರೆ ಬಾರದೇ ಇರಲಿ ಎನ್ನುವುದಕ್ಕೆ ನೀವು ಮಾಡಬೇಕಾದದ್ದು ಇಷ್ಟು:

ಒಂದು ನಿಂಬೆಹಣ್ಣನ್ನು ತೆಗೆದುಕೊಳ್ಳಿ. ಅದನ್ನು Anti Clock wise ಅಂದರೆ ಎರಡದಿಂದ ಬಲಕ್ಕೆ ಏಳು ಸಲ ನಿಮ್ಮನ್ನು ಸುತ್ತಿಕೊಳ್ಳಿ. ನಿಮ್ಮ ಮೇಲೆ ಯಾವ ದುಷ್ಟ ಶಕ್ತಿ, ನೆಗೆಟಿವ್​ ಎನರ್ಜಿ ಬಾರದೇ ಇರಲಿ, ಶತ್ರುತ್ವ ಶಮನವಾಗಲಿ, ಅವರು ನಮ್ಮ ಸುದ್ದಿಗೆ ಬಾರದೇ ಇರಲಿ ಎಂದು ಬೇಡಿಕೊಳ್ಳಿ. ಆ ಬಳಿಕ ಕೆಂಪುದಾರದಿಂದ ಆ ಲಿಂಬೆ ಹಣ್ಣನ್ನು ಸುತ್ತಿ ಹತ್ತು ನಿಮಿಷ ಸೂರ್ಯನ ಬಿಸಿಲಿನಲ್ಲಿ ಇಡಿ. ಆ ಬಳಿ ಅದನ್ನು ಕಸದ ತೊಟ್ಟಿಗೋ, ಚರಂಡಿಗೋ ಎಲ್ಲಿಯೋ ಎಸೆದು ಅದನ್ನು ಹಿಂದಿರುಗಿ ನೋಡಬೇಡಿ. ವಾಪಸ್​ ಬಂದು ನಿಮ್ಮ ಕೆಲಸದಲ್ಲಿ ತೊಡಗಿಸಿಕೊಳ್ಳಿ ಎಂದು ಸುಧೀಂದ್ರ ದೇಶಪಾಂಡೆ ಗುರೂಜಿ ತಿಳಿಸಿದ್ದಾರೆ.

ಅರ್ಧಕ್ಕೆ ನಿಂತ ಕೆಲಸ ಚಿಟಿಕೆಯಲ್ಲಿ ಪರಿಹಾರ

ಇನ್ನು ರಥಸಪ್ತಮಿಯ ದಿನ ಈ ಒಂದು ಕೆಲಸ ಮಾಡುವುದರಿಂದ ಅರ್ಧಕ್ಕೆ ನಿಂತಿರುವ ಕೆಲಸ ಚಿಟಿಕೆ ಹೊಡೆಯುವಷ್ಟರಲ್ಲಿ ಪರಿಹಾರ ಆಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ. ಇದಕ್ಕಾಗಿ ನೀವು, ಬೆಳಿಗ್ಗೆ ಸೂರ್ಯ ಏಳುವ ಮೊದಲೇ ಏಳಬೇಕು. (ನಾಳೆ ಸೂರ್ಯೋದಯದ ಸಮಯ ಬೆಳಿಗ್ಗೆ 06.50). ಸ್ನಾನ ಮಾಡಿ ಸೂರ್ಯ ಉದಯಿಸುವುದನ್ನು ನೋಡಬೇಕು. ಆ ಸಮಯದಲ್ಲಿ ನಿಮ್ಮ ಕೈಯನ್ನು ಹೃದಯದ ಮೇಲೆ ಇಟ್ಟು, ಯಾವುದಾದರೂ ಒಂದೇ ಒಂದು ವಿಷ್​ ಮಾಡಿಕೊಳ್ಳಿ. ನಿಮಗೆ ಹಲವಾರು ಆಸೆಗಳು ಇದ್ದರೂ, ಈ ಸಮಯದಲ್ಲಿ ತುಂಬಾ ಮುಖ್ಯ ಆಗಿರುವಂಥ ಒಂದು ವಿಷ್​ ಮಾಡಿಕೊಳ್ಳಬೇಕು. ಬಳಿಕ 11 ಬಾರಿ ಓಂ ಆದಿತ್ಯಾಯ ನಮಃ ಎಂದು ಪಠಿಸಬೇಕು. ಅದಾದ ಬಳಿಕ 5 ನಿಮಿಷ ಸೈಲೆಂಟ್ ಆಗಿ ಇದ್ದು, ಬಳಿಕ ನಿಮ್ಮ ಕಾರ್ಯದಲ್ಲಿ ತೊಡಗಿಸಿಕೊಳ್ಳಿ ಎಂದಿದ್ದಾರೆ ಗುರೂಜಿ.