ಬೀಡ್ (ಮಹಾರಾಷ್ಟ್ರ): ಇಲ್ಲಿನ ಪರಿವಾರವೊಂದರಲ್ಲಿ ಸುಮಾರು 200 ವರ್ಷಗಳ ಬಳಿಕ ಹೆಣ್ಣು ಮಗುವಿನ ಜನನವಾಗಿದ್ದು, ಆ ಕೂಸಿಗೆ ಭರ್ಜರಿ ಸ್ವಾಗತ ಸಿಕ್ಕಿದೆ. 4 ಪೀಳಿಗೆಗಳ ಬಳಿಕ ಮನೆಗೆ ಕಾಲಿಟ್ಟ ಮಹಾಲಕ್ಷ್ಮಿಯನ್ನು ತಾಯಿಯೊಂದಿಗೆ ರಥದಲ್ಲಿ ಕೂರಿಸಿ, ಡ್ರಮ್ ಬಾರಿಸುತ್ತಾ, ನೃತ್ಯ ಮಾಡುತ್ತಾ ಬರಮಾಡಿಕೊಳ್ಳಲಾಗಿದೆ.
ಈ ಕೂಸಿಗೆ ಗಾರ್ಗಿ ಎಂದು ಹೆಸರಿಡಲಾಗಿದೆ. ಮಗುವಿನ ಅಜ್ಜ ಲಿಂಬಾಜಿ ದಹಿಫಲೆ ಮಾತನಾಡಿ, ‘ಕುಟುಂಬದಲ್ಲಿ ಮಗಳೊಬ್ಬಳು ಇರುವುದು ದೊಡ್ಡ ಭಾಗ್ಯ. ಮಗಳಿಲ್ಲವೆಂದ ಇಷ್ಟು ವರ್ಷದ ಕೊರಗು ಈಗ ನೀಗಿತು’ ಎಂದು ಭಾವುಕರಾಗಿದ್ದಾರೆ. ಅವರ ಪುತ್ರ ಮಾತನಾಡಿ, ‘ಎಲ್ಲರೂ ಮಗನನ್ನು ಬಯಸುತ್ತಾರೆ. ಆದರೆ ಮಗಳನ್ನು ಪಡೆಯುವ ಖುಷಿಯೇ ಅದ್ಭುತ. ನಮ್ಮ ಕಂದಮ್ಮನನ್ನು ಹೂವಿನಂತೆ ಬೆಳೆಸುತ್ತೇವೆ’ ಎಂದರು.
ಪುತ್ರಿಯರನ್ನು ಹೊರೆಯಂತೆ ಕಾಣುವವರ ನಡುವೆಯೂ ಇಂಥ ಮನಸ್ಥಿತಿಯನ್ನು ಪ್ರದರ್ಶಿಸಿದ ಪರಿವಾರಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
07:23 AM (IST) Sep 03
ಅಯೋಧ್ಯೆ ರಾಮಮಂದಿರದ ಮೊದಲ ಕಾರ್ಯನಿರ್ವಾಹಕ ಅಧಿಕಾರಿಯಾಗಿ (ಸಿಇಒ) 'ಆಪರೇಷನ್ ಸಿಂದೂರ' ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ನಿವೃತ್ತ ಏರ್ ಮಾರ್ಷಲ್ ಜೀತೇಂದ್ರ ಮಿಶ್ರಾ ಆಯ್ಕೆಯಾಗಿದ್ದಾರೆ. 5585 ಆಕಾಂಕ್ಷಿಗಳನ್ನು ಹಿಂದಿಕ್ಕಿ ಆಯ್ಕೆಯಾಗಿದ್ದಾರೆ.