26/11 ದಾಳಿ ಯತ್ನಕ್ಕೆ ಮೌಲಾನಾ ಅಜರ್‌ ಸೋದರನೇ ರೂವಾರಿ?|  ಹತ ನಾಲ್ವರು ಜೈಷ್‌ ಉಗ್ರರಿಗೆ ನಿರ್ದೇಶನ ನೀಡಿದ್ದ ಮುಫ್ತಿ| ಜಿಪಿಎಸ್‌, ಮೊಬೈಲ್‌ ಫೋನ್‌ನಿಂದ ಮಾಹಿತಿ ಬೆಳಕಿಗೆ

ನವದೆಹಲಿ(ನ.22): 26/11 ಎಂದೇ ಜನಮಾನಸದಲ್ಲಿ ಬೇರೂರಿರುವ ಮುಂಬೈ ಮೇಲಿನ ದಾಳಿ ಪ್ರಕರಣದ 12ನೇ ವರ್ಷಾಚರಣೆ ಸಂದರ್ಭ ಬೃಹತ್‌ ಪ್ರಮಾಣದ ಭಯೋತ್ಪಾದಕ ಕೃತ್ಯ ನಡೆಸಲು ಪಾಕಿಸ್ತಾನ ಮೂಲದ ಭಯೋತ್ಪಾದಕರು ರೂಪಿಸಿದ್ದ ಸಂಚಿಗೆ ಜೈಷ್‌ ಎ ಮೊಹಮ್ಮದ್‌ ಉಗ್ರಗಾಮಿ ಸಂಘಟನೆ ಸಂಸ್ಥಾಪಕ ಮೌಲಾನಾ ಮಸೂದ್‌ ಅಜರ್‌ ಕಿರಿಯ ಸೋದರನೇ ರೂವಾರಿಯಾಗಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.

Add Asianetnews Kannada as a Preferred SourcegooglePreferred

26/11 ಮಾದರಿ ‘ದೊಡ್ಡ ದಾಳಿ’ಗೆ ಪಾಕ್‌ ಸಂಚು?: ಉಗ್ರರ ಹತ್ಯೆಯಿಂದ ಪ್ಲಾನ್ ಬಹಿರಂಗ!

ಗುರುವಾರ ಜಮ್ಮು-ಕಾಶ್ಮೀರದ ನಗ್ರೋಟಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಹತರಾದ ನಾಲ್ವರು ಉಗ್ರರ ಬಳಿ ಪತ್ತೆಯಾಗಿರುವ ಜಿಪಿಎಸ್‌ ಸಾಧನ ಹಾಗೂ ಮೊಬೈಲ್‌ ಫೋನ್‌ಗಳ ಪರಿಶೀಲನೆಯಿಂದ ಈ ಗುಮಾನಿ ವ್ಯಕ್ತವಾಗಿದೆ. ನಾಲ್ವರೂ ಉಗ್ರರು ಮೌಲಾನಾ ಮಸೂದ್‌ ಅಜರ್‌ ಸೋದರನಾದ ಜೈಷ್‌ ಎ ಮೊಹಮ್ಮದ್‌ ಆಪರೇಷನಲ್‌ ಕಮಾಂಡರ್‌ ಮುಫ್ತಿ ರೌಫ್‌ ಅಸ್ಘರ್‌ ಜತೆ ಸಂಪರ್ಕ ಹೊಂದಿದ್ದರು ಎಂಬುದು ಪ್ರಾಥಮಿಕ ಮಾಹಿತಿಯಿಂದ ಗೊತ್ತಾಗಿದೆ ಎಂದು ಮೂಲಗಳು ತಿಳಿಸಿವೆ.

2019ರಲ್ಲಿ 40 ಸಿಆರ್‌ಪಿಎಫ್‌ ಯೋಧರ ಬಲಿ ಪಡೆದ ಪುಲ್ವಾಮಾ ದಾಳಿಯ ಹಿಂದೆಯೂ ಜೈಷ್‌ ಸಂಘಟನೆಯ ಕೈವಾಡ ಇತ್ತು. ಅದಕ್ಕೆ ಪ್ರತೀಕಾರವಾಗಿ ಭಾರತವು ಬಾಲಾಕೋಟ್‌ನಲ್ಲಿ ಜೈಷ್‌ ಸಂಘಟನೆ ಹೊಂದಿದ್ದ ಉಗ್ರ ಶಿಬಿರಗಳ ಮೇಲೆ ದಾಳಿ ನಡೆಸಿ ನಾಶಗೊಳಿಸಿತ್ತು. ಇಷ್ಟಾದರೂ ಜೈಷ್‌ ಮತ್ತೊಂದು ಉಗ್ರ ದಾಳಿಗೆ ಸಂಚು ನಡೆಸಿರುವುದು ಆತಂಕಕಾರಿಯಾಗಿದೆ.

ಮುಂಬೈ ದಾಳಿ ಸಂಚುಕೋರಗೆ 10 ವರ್ಷ ಜೈಲು

ಗಡಿಯಾಚೆಯಿಂದ ಉಗ್ರರನ್ನು ಭಾರತಕ್ಕೆ ಕಳುಹಿಸಿ ದಾಳಿ ನಡೆಸಲು ಜೈಷ್‌ ಎ ಮೊಹಮ್ಮದ್‌ನಂತಹ ಇಸ್ಲಾಮಿಕ್‌ ಜಿಹಾದಿ ಗುಂಪುಗಳನ್ನು ಪಾಕಿಸ್ತಾನ ಬಳಸಿಕೊಳ್ಳುತ್ತಿದೆ. ಭಾರತ ತನ್ನ ಯುದ್ಧ ವಿಮಾನಗಳನ್ನು ಬಳಸಿ ನಾಶಪಡಿಸಿರುವ ಬಾಲಾಕೋಟ್‌ ಉಗ್ರಗಾಮಿ ತರಬೇತಿ ಘಟಕವನ್ನು ಮತ್ತೆ ಜೈಷ್‌ ಸಂಘಟನೆಗೆ ಹಸ್ತಾಂತರಿಸಲು ಪಾಕಿಸ್ತಾನ ನಿರ್ಧರಿಸಿದೆ ಎಂದು ಹೇಳಲಾಗಿದೆ.

ಪ್ರಾಥಮಿಕ ತನಿಖೆಯ ಪ್ರಕಾರ, ಹತರಾದ ನಾಲ್ವರೂ ಉಗ್ರರು ಶಾಕರಗಢದ ಗಡಿ ಮೂಲಕ ಸಾಂಬಾ ವಲಯಕ್ಕೆ ನುಸುಳಿದ್ದರು ಎನ್ನಲಾಗಿದೆ.