ಲಾಹೋರ್‌ನಿಂದ ಕರಾಚಿಗೆ ವಿಮಾನ ಹತ್ತಿದ ಪ್ರಯಾಣಿಕರೊಬ್ಬರು ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆಯೇ ಸೌದಿ ಅರೇಬಿಯಾ ತಲುಪಿದ ಘಟನೆ ನಡೆದಿದೆ. ತಪ್ಪಾದ ವಿಮಾನದಲ್ಲಿ ಹತ್ತಿಸಿದ ಪಾಕಿಸ್ತಾನ ಏರ್‌ಲೈನ್ಸ್‌ನ ನಿರ್ಲಕ್ಷ್ಯಕ್ಕೆ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. 

ಇಸ್ಲಾಮಾಬಾದ್: ನೆರೆಯ ಪಾಕಿಸ್ತಾನದಲ್ಲಿ ಚಿತ್ರ-ವಿಚಿತ್ರ ಘಟನೆಗಳು ನಡೆಯುತ್ತಲೇ ಇರುತ್ತವೆ. ಆದ್ರೆ ಇದೀಗ ನಡೆದಿರುವ ಘಟನೆ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ. ಸಾಮಾನ್ಯವಾಗಿ ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸುವಾಗ ಬದಲಿ ಮಾರ್ಗದ ವಾಹನ ಹತ್ತಿರುತ್ತವೆ. ಆದ್ರೆ ಇಲ್ಲೊಬ್ಬ ವ್ಯಕ್ತಿಯನ್ನು ಪಾಕಿಸ್ತಾನದ ಏರ್‌ಲೈನ್ಸ್, ಯಾವುದೇ ಪಾಸ್‌ಪೋರ್ಟ್‌, ವೀಸಾ ಇಲ್ಲದೇ ಸೌದಿ ಅರೇಬಿಯಾಗೆ ಕರೆದುಕೊಂಡು ಬಂದಿದೆ. ನನ್ನನ್ನು ತಪ್ಪಾದ ವಿಮಾನದಲ್ಲಿ ಬೋರ್ಡಿಂಗ್ ಮಾಡಿಸಲಾಗಿದೆ ಎಂದು ಪ್ರಯಾಣಿಕ ಆರೋಪಿಸಿದ್ದು, ಈ ಸಂಬಂಧ ವಿಮಾನಯಾಣ ಸಂಸ್ಥೆ ವಿರುದ್ಧ ದೂರು ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಪಾಕಿಸ್ತಾನದ ಏರ್‌ಲೈನ್ಸ್ ನಿರ್ಲಕ್ಷ್ಯ ಸೌದಿ ಅರೇಬಿಯಾದಲ್ಲಿ ಸುದ್ದಿಯಾಗುತ್ತಿದೆ. ವಿಮಾನಯಾನ ಸಿಬ್ಬಂದಿಯ ಎಡವಟ್ಟಿನಿಂದಾಗಿ ಪ್ರಯಾಣಿಕರೊಬ್ಬರು ವಿದೇಶಿ ಕಾನೂನು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಯಾವುದೇ ದಾಖಲೆ ಇಲ್ಲದೇ ಪ್ರಯಾಣಿಕರೊಬ್ಬರು ನೇರವಾಗಿ ವಿದೇಶ ತಲುಪಿರೋದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.

ಏನಿದು ಪ್ರಕರಣ?

ARY ವರದಿಯ ಪ್ರಕಾರ, ಶಹಜೈನ್ ಎಂಬವರು ಲಾಹೋರ್‌ನಿಂದ ಕರಾಚಿಗೆ ವಿಮಾನಯಾಣದ ಟಿಕೆಟ್ ತೆಗೆದುಕೊಂಡಿದ್ದರು. ಶಹಜೈನ್ ಹೇಳುವ ಪ್ರಕಾರ, ಅವರನ್ನು ತಪ್ಪಾದ ವಿಮಾನದಲ್ಲಿ ಬೋರ್ಡಿಂಗ್ ಮಾಡಿಸಲಾಗಿದೆ. ಇದರಿಂದ ಕರಾಚಿ ಬದಲು ಸೌದಿ ಅರೇಬಿಯಾ ತಲುಪವಂತಾಗಿತ್ತು.

ವಿಮಾನ ಟೇಕಾಫ್ ಆಗುವರೆಗೂ ಶಹಜೈನ್ ಅವರಿಗೆ ಇದು ಸೌದಿ ಅರೇಬಿಯಾಗೆ ತೆರಲುವ ಪ್ಲೇನ್ ಎಂದು ಗೊತ್ತಾಗಿಲ್ಲ. ಸುಮಾರು 2 ಗಂಟೆಗಳ ಪ್ರಯಾಣವಾದ್ರೂ ಕರಾಚಿ ತಲುಪಿದಿದ್ದಾಗ ಅನುಮಾನಗೊಂಡು ಕ್ಯಾಬಿನ್ ಸಿಬ್ಬಂದಿ ಬಳಿ ಹೋಗಿದ್ದಾರೆ. ಕರಾಚಿ ತಲುಪಲು ಯಾಕಿಷ್ಟು ವಿಳಂಬವಾಗ್ತಿದೆ ಎಂದು ಪ್ರಶ್ನೆ ಮಾಡಿದಾಗ ಎಲ್ಲರೂ ಶಾಕ್ ಆಗಿದ್ದಾರೆ. ನಂತರ ಶಹಜೈನ್‌ ವಿಮಾನ ಸಿಬ್ಬಂದಿಯನ್ನು ನನ್ನನ್ನು ಹೇಗೆ ವಿಮಾನದೊಳಗೆ ಬರಮಾಡಿಕೊಂಡಿರಿ ಎಂದು ಪ್ರಶ್ನೆ ಮಾಡಿದ್ದಾರೆ. ಇದರಿಂದಾಗಿ ಮಾರ್ಗ ಮಧ್ಯೆಯೇ ಗಲಾಟೆ ಉಂಟಾಗಿತ್ತು. ಆದ್ರೆ ಸಿಬ್ಬಂದಿ ನಮ್ಮ ತಪ್ಪೇನಿಲ್ಲ. ಶಹಜೈನ್ ಅವರ ತಪ್ಪೆಂದು ವಾದಿಸಿದ್ದಾರೆ.

ವಿಮಾನ ಸೌದಿ ಅರೇಬಿಯಾದ Jeddah ನಿಲ್ದಾಣ ತಲುಪಿದಾಗ ತಮ್ಮನ್ನು ವಾಪಸ್ ಕರಾಚಿಗೆ ಕಳುಹಿಸುವಂತೆ ವಿಮಾನಯಾನ ಸಿಬ್ಬಂದಿಗೆ ಮನವಿ ಮಾಡಿಕೊಂಡಿದ್ದಾರೆ. ಆದ್ರೆ ಕರಾಚಿಗೆ ಹಿಂದಿರುಗಲು ಎರಡರಿಂದ ಮೂರು ದಿನಗಳು ಬೇಕಾಗುತ್ತದೆ ಎಂದು ಹೇಳಿದ್ದಾರೆ. ಪಾಕಿಸ್ತಾನ ಏರ್‌ಲೈನ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಶಹಜೈನ್ ಹೇಳಿದ್ದಾರೆ.

ತನಿಖೆಗೆ ಆದೇಶ, ಕಠಿಣ ಕ್ರಮಕ್ಕೆ ಸೂಚನೆ

ಈ ಒಂದು ಪ್ರಕರಣದಿಂದ ಪಾಕಿಸ್ತಾನದ ಏರ್‌ಲೈನ್ಸ್ ಜಾಗತೀಕಮಟ್ಟದಲ್ಲಿ ತೀವ್ರ ಮುಜುಗರಕ್ಕೊಳಗಾಗಿದೆ. ಈ ಸಂಬಂಧ ಪಾಕಿಸ್ತಾನದ ವಿಮಾನ ನಿಲ್ದಾಣದ ಪ್ರಾಧಿಕಾರ ಆಂತರಿಕ ತನಿಖೆಗೆ ಆದೇಶಿಸಲಾಗಿದೆ. ಕರಾಚಿಗೆ ತೆರಳಬೇಕಿದ್ದ ಪ್ರಯಾಣಿಕ ವಿದೇಶಕ್ಕೆ ತೆರಳಬೇಕಾದ ವಿಮಾನದೊಳಗೆ ಬಂದಿದ್ದೇಗೆ ಎಂದು ಲಾಹೋರ್‌ ಏರ್‌ಪೋರ್ಟ್ ಅಧಿಕಾರಿಗಳನ್ನು ಪ್ರಶ್ನೆ ಮಾಡಲಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಸೂಚಿಸಲಾಗಿದೆ ಎಂದು ವರದಿಯಾಗಿದೆ.