JeM Commander Admits Masood Family Shattered ಆಪರೇಷನ್ ಸಿಂದೂರ್ ಅಡಿಯಲ್ಲಿ ಬಹಾವಲ್ಪುರದಲ್ಲಿ ನಡೆದ ದಾಳಿಯಲ್ಲಿ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಕುಟುಂಬ ಛಿದ್ರವಾಗಿದೆ ಎಂದು ಜೆಇಎಂ ಕಮಾಂಡರ್ ಒಪ್ಪಿಕೊಂಡಿದ್ದಾನೆ.
ಇಸ್ಲಾಮಾಬಾದ್ (ಸೆ.16): ಭಾರತವು 'ಆಪರೇಷನ್ ಸಿಂದೂರ್' ಅಡಿಯಲ್ಲಿ ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಹಲವಾರು ಭಯೋತ್ಪಾದಕ ನೆಲೆಗಳನ್ನು ನಾಶಪಡಿಸಿದ ತಿಂಗಳುಗಳ ನಂತರ, ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ ಸಂಘಟನೆಯ ಕಮಾಂಡರ್ ಬಹಾವಲ್ಪುರದ ಮೇಲಿನ ದಾಳಿಯಲ್ಲಿ ಭಯೋತ್ಪಾದಕ ಗುಂಪಿನ ಉನ್ನತ ಕಮಾಂಡರ್ ಮಸೂದ್ ಅಜರ್ ಅವರ ಕುಟುಂಬವನ್ನು ಛಿದ್ರ ಛಿದ್ರ ಮಾಡಲಾಗಿದೆ ಎಂದು ಒಪ್ಪಿಕೊಂಡಿದ್ದಾನೆ.
ಇಂಟರ್ನೆಟ್ನಲ್ಲಿ ವೈರಲ್ ಆದ ಮಸೂದ್ ಇಲ್ಯಾಸ್ ಕಾಶ್ಮೀರಿ ವಿಡಿಯೋ
ಇಂಟರ್ನೆಟ್ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಜೆಇಎಂ ಕಮಾಂಡರ್ ಮಸೂದ್ ಇಲ್ಯಾಸ್ ಕಾಶ್ಮೀರಿ ಭಾರತೀಯ ಸಶಸ್ತ್ರ ಪಡೆಗಳು ತಮ್ಮ ಅಡಗುತಾಣಕ್ಕೆ ಹೇಗೆ ಪ್ರವೇಶಿಸಿ ದಾಳಿ ಮಾಡಿದವು ಎನ್ನುವುದನ್ನೂ ಕುಡ ವಿವರಿಸಿದ್ದಾನೆ. "ಭಯೋತ್ಪಾದನೆಯನ್ನು ಸ್ವೀಕರಿಸಿ, ಈ ದೇಶದ ಗಡಿಗಳನ್ನು ರಕ್ಷಿಸುವುದಕ್ಕಾಗಿ ನಾವು ದೆಹಲಿ, ಕಾಬೂಲ್ ಮತ್ತು ಕಂದಹಾರ್ ವಿರುದ್ಧ ಹೋರಾಡಿದೆವು. ಎಲ್ಲವನ್ನೂ ತ್ಯಾಗ ಮಾಡಿದ ನಂತರ, ಮೇ 7 ರಂದು, ಬಹಾವಲ್ಪುರದಲ್ಲಿ ಭಾರತೀಯ ಪಡೆಗಳು ಮೌಲಾನಾ ಮಸೂದ್ ಅಜರ್ ಅವರ ಕುಟುಂಬವನ್ನು ಛಿದ್ರ ಛಿದ್ರ ಮಾಡಿದವು" ಎಂದು ಕಾಶ್ಮೀರಿ ಉರ್ದು ಭಾಷೆಯಲ್ಲಿ ಹೇಳಿದ್ದಾನೆ. ಹಿನ್ನೆಲೆಯಲ್ಲಿ ಹಲವಾರು ಬಂದೂಕು ಹಿಡಿದ ಭದ್ರತಾ ಸಿಬ್ಬಂದಿ ಆತನನ್ನು ಸುತ್ತುವರಿದಿದ್ದರು.
ಅದೇ ಕಾರ್ಯಕ್ರಮದಲ್ಲಿ, ಮಸೂದ್ ಇಲ್ಯಾಸ್ ಕಾಶ್ಮೀರಿ ಭಯೋತ್ಪಾದಕ ಗುಂಪುಗಳಿಗೆ ಪಾಕಿಸ್ತಾನ ಸೇನೆ ಮತ್ತು ಅದರ ಮುಖ್ಯಸ್ಥ ಅಸಿಮ್ ಮುನೀರ್ ಬೆಂಬಲವಿದೆ ಎಂದು ಹೆಮ್ಮೆಯಿಂದ ಹೇಳಿದ್ದಾನೆ. ಭಾರತೀಯ ದಾಳಿಯಲ್ಲಿ ಕೊಲ್ಲಲ್ಪಟ್ಟವರ ಅಂತ್ಯಕ್ರಿಯೆಗೆ 'ಸೇನೆಯು ಜನರಲ್ಗಳನ್ನು ಕಳಿಸಿತ್ತು' ಎಂದು ಹೇಳಿದ್ದಾನೆ.
ಆಪರೇಷನ್ ಸಿಂಧೂರ್ ಅಡಿಯಲ್ಲಿ ಭಾರತೀಯ ವಾಯುದಾಳಿಯಲ್ಲಿ ಕೊಲ್ಲಲ್ಪಟ್ಟ ಭಯೋತ್ಪಾದಕರ ಅಂತ್ಯಕ್ರಿಯೆಯಲ್ಲಿ ಹಲವಾರು ಉನ್ನತ ಪಾಕಿಸ್ತಾನಿ ಮಿಲಿಟರಿ ಮತ್ತು ನಾಗರಿಕ ಅಧಿಕಾರಿಗಳು ಭಾಗವಹಿಸಿದ್ದರು ಎಂದು ವರದಿಗಳು ಹೇಳಿವೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ನಾಗರಿಕರು ಸಾವನ್ನಪ್ಪಿದ ವಾರಗಳ ನಂತರ, ಭಾರತೀಯ ಸಶಸ್ತ್ರ ಪಡೆಗಳು 'ಆಪರೇಷನ್ ಸಿಂದೂರ್' ಅಡಿಯಲ್ಲಿ, ಪಾಕಿಸ್ತಾನ ಮತ್ತು ಪಿಒಕೆಯೊಳಗಿನ ಒಂಬತ್ತು ಭಯೋತ್ಪಾದಕ ನೆಲೆಗಳ ಮೇಲೆ ಸಂಘಟಿತ ದಾಳಿ ನಡೆಸಿದವು. ಜೈಶ್-ಎ-ಮೊಹಮ್ಮದ್ (ಜೆಇಎಂ) ಮತ್ತು ಲಷ್ಕರ್-ಎ-ತೈಬಾ (ಎಲ್ಇಟಿ) ಮೂಲಸೌಕರ್ಯವನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ಮಾಡಿತ್ತು. ಬಹಾವಲ್ಪುರ್, ಕೋಟ್ಲಿ ಮತ್ತು ಮುರಿಡ್ಕೆ ಸ್ಥಳಗಳು ಸೇರಿದಂತೆ ಒಂಬತ್ತು ಸ್ಥಳಗಳು ದಾಳಿಯಲ್ಲಿ ಹಾನಿಗೊಳಗಾದವು ಎಂದು ಪಾಕಿಸ್ತಾನ ನಂತರ ಒಪ್ಪಿಕೊಂಡಿದೆ. ಇವೆಲ್ಲವೂ ಉಗ್ರಗಾಮಿ ಚಟುವಟಿಕೆಯ ಕೇಂದ್ರಗಳಾಗಿದ್ದವು ಎಂದು ಭಾರತ ಹೇಳಿದೆ.
ಪಾಕಿಸ್ತಾನದ 12ನೇ ಅತಿದೊಡ್ಡ ನಗರವಾದ ಬಹವಾಲ್ಪುರ್, ಜೆಇಎಂನ ನರ ಪ್ರಮುಖ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತಿದ್ದರಿಂದ ಅದನ್ನು ಗುರಿಯಾಗಿಸಲಾಗಿತ್ತು. ಲಾಹೋರ್ನಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಈ ಕೇಂದ್ರ, ಉಸ್ಮಾನ್-ಒ-ಅಲಿ ಕ್ಯಾಂಪಸ್ ಎಂದೂ ಕರೆಯಲ್ಪಡುವ ಜಾಮಿಯಾ ಮಸೀದಿ ಸುಭಾನ್ ಅಲ್ಲಾಹ್ನಲ್ಲಿ ಜೆಇಎಂನ ಕಾರ್ಯಾಚರಣೆಯ ಪ್ರಧಾನ ಕಚೇರಿಯನ್ನು ಹೊಂದಿದೆ.
ಕುಟುಂಬ ಸದಸ್ಯರ ಸಾವನ್ನು ಒಪ್ಪಿಕೊಂಡಿದ್ದ ಅಜರ್ ಮಸೂದ್
2000ದ ದಶಕದ ಆರಂಭದಲ್ಲಿ ವಿಶ್ವಸಂಸ್ಥೆಯಿಂದ ನಿಷೇಧಿತ ಭಯೋತ್ಪಾದಕ ಮಸೂದ್ ಅಜರ್ ಕಾಶ್ಮೀರದಲ್ಲಿ ಜಿಹಾದ್ಗೆ ಕರೆ ನೀಡಿದಾಗ ರಚನೆಯಾದ ಜೆಇಎಂ, ಕಳೆದ ಎರಡು ದಶಕಗಳಲ್ಲಿ ಭಾರತದ ನೆಲದಲ್ಲಿ ನಡೆದ ಹಲವಾರು ದಾಳಿಗಳಿಗೆ ಕಾರಣವಾಗಿದೆ. ಆಪರೇಷನ್ ಸಿಂದೂರ್ ನಂತರ, ಮಸೂದ್ ಅಜರ್ ಭಾರತೀಯ ಕಾರ್ಯಾಚರಣೆಯಲ್ಲಿ ತನ್ನ ಕುಟುಂಬದ 10 ಸದಸ್ಯರು ಸಾವನ್ನಪ್ಪಿದ್ದಾರೆ ಎಂದು ಒಪ್ಪಿಕೊಂಡು ಹೇಳಿಕೆ ನೀಡಿದ್ದ ಎಂದು ಪಾಕಿಸ್ತಾನಿ ಮಾಧ್ಯಮ ವರದಿ ಮಾಡಿದೆ.
ಸ್ವತಃ ಅಜರ್ ವರ್ಷಗಳಿಂದ ತಲೆಮರೆಸಿಕೊಂಡಿದ್ದಾರೆ, ಪಾಕಿಸ್ತಾನಿ ರಾಜಕಾರಣಿ ಬಿಲಾವಲ್ ಭುಟ್ಟೋ ಜರ್ದಾರಿ, ಪಾಕ್ನಲ್ಲಿ ಅವರ ಇರುವಿಕೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಿದ್ದಾರೆ. ಜೂನ್ನಲ್ಲಿ ನೀಡಿದ ಸಂದರ್ಶನದಲ್ಲಿ, ಭುಟ್ಟೋ ಜರ್ದಾರಿ ಅವರು ಪಾಕಿಸ್ತಾನಿ ನೆಲದಲ್ಲಿದ್ದಾರೆ ಎಂದು ಭಾರತ ಮಾಹಿತಿ ನೀಡಿದರೆ ಅವರನ್ನು ಬಂಧಿಸಲು ತಮ್ಮ ದೇಶವು "ಸಂತೋಷಪಡುತ್ತದೆ" ಎಂದು ಹೇಳಿದರು.
