ಭಾರತವು ಪಾಕಿಸ್ತಾನವನ್ನು ಮೂರು ಹೋಳು ಮಾಡುತ್ತದೆ ಎಂದು ಎಚ್ಚರಿಸಿದ ಮಾಜಿ ಪ್ರಧಾನಿ ಇಮ್ರಾನ್ ಖಾನ್!
"ಭಾರತದಲ್ಲಿರುವ ಥಿಂಕ್ ಟ್ಯಾಂಕ್ಗಳು ಬಲೂಚಿಸ್ತಾನವನ್ನು ಪ್ರತ್ಯೇಕಿಸಲು ಯೋಚಿಸುತ್ತಿವೆ, ಅವುಗಳ ಕುರಿತಾಗಿ ಪಕ್ಕಾ ಯೋಜನೆಗಳನ್ನು ಹೊಂದಿವೆ" ಎಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದು, ಭಾರತವು ಪಾಕಿಸ್ತಾನವನ್ನು 3 ಭಾಗಗಳಾಗಿ ವಿಭಜಿಸಲು ಯೋಜಿಸುತ್ತಿದೆ ಎಂದಿದ್ದಾರೆ. ಇದರ ಬೆನ್ನಲ್ಲಿಯೇ ಇಮ್ರಾನ್ ಖಾನ್ ಹೇಳಿಕೆಯ ಕುರಿತು ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿದೆ.
ಇಸ್ಲಾಮಾಬಾದ್ (ಜೂ. 2): ಪಾಕಿಸ್ತಾನದ ಪ್ರಧಾನಿ ಪದವಿಯಿಂದ ಹೊರಹಾಕಲಾಗಿರುವ ಪಾಕಿಸ್ತಾನ್ ತೆಹ್ರಿಕ್ ಇ ಇನ್ಸಾಫ್ (ಪಿಟಿಐ) (Pakistan Tehreek-E-Insaf)ಪಕ್ಷದ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಇಮ್ರಾನ್ ಖಾನ್ (mran Khan) ಹೇಳಿರುವ ಹೇಳಿಕೆಗೆ ಪಾಕಿಸ್ತಾನದಲ್ಲಿ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತವಾಗಿದೆ. ಬುಧವಾರ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಇಮ್ರಾನ್ ಖಾನ್, ದೇಶವು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ, ಭಾರತವು (India) ಪಾಕಿಸ್ತಾನವನ್ನು (Pakistan) ಮೂರು ಹೋಳು ಮಾಡುವುದು ಖಂಡಿತ. ಇದಕ್ಕಾಗಿ ಭಾರತವು ಎಲ್ಲಾ ಯೋಜನೆಗಳನ್ನು ಹೊಂದಿದೆ ಎಂದು ಹೇಳಿಕೆ ನೀಡಿದ್ದಾರೆ.
ಬಿಒಎಲ್ ನ್ಯೂಸ್ ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಇಮ್ರಾನ್ ಖಾನ್, "ಸರಿಯಾದ ನಿರ್ಧಾರಗಳನ್ನು ಮಾಡದೇ ಇದ್ದಲ್ಲಿ ನಮ್ಮ ದೇಶ ಇತಿಹಾಸದ ಪುಟದಿಂದ ಮರೆಯಾಗುವುದು ಖಂಡಿತ. ಇದು ಈಗಾಗಲೇ ಪೂರ್ವ ನಿಯೋಜಿತ. ಹಾಗೇನಾದರೂ ಪಾಕಿಸ್ತಾನ ಹಿನ್ನಡೆ ಕಂಡಲ್ಲಿ 1990ರಲ್ಲಿ ಉಕ್ರೇನ್ ದೇಶಕ್ಕೆ ಮಾಡಿದಂತೆ ಪಾಕಿಸ್ತಾನವನ್ನು ಅಣ್ವಸ್ತ್ರ ನಿಶ್ಯಕ್ತಿಗೊಳಿಸುವಂತೆ ಅಂತರರಾಷ್ಟ್ರೀಯ ಸಮುದಾಯವು ಒತ್ತಡ ಹೇರುತ್ತದೆ' ಎಂದಿದ್ದಾರೆ.
ಕಳೆದ ತಿಂಗಳಿನ ಆರಂಭದಲ್ಲಿ ಇಮ್ರಾನ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಅವರನ್ನು ಪ್ರಧಾನಿ ಪದವಿಯಿಂದ ಕಿತ್ತೊಗೆಯಲಾಗಿತ್ತು. ಇದರ ಬೆನ್ನಲ್ಲಿಯೇ ಕೇಂದ್ರ ಸರ್ಕಾರದ ವಿರುದ್ಧ ಆಜಾದಿ ಮಾರ್ಚ್ ಗೆ ಮುಂದಾಗಿರುವ ಇಮ್ರಾನ್ ಖಾನ್, ಪಾಕಿಸ್ತಾನ ಸಂಸತ್ತಿಗೆ ಜೂನ್ 6ರ ಒಳಗಾಗಿ ಚುನಾವನೆ ಘೋಷಣೆ ಮಾಡಬೇಕು ಎಂದಿದ್ದಾರೆ.
ಪಾಕಿಸ್ತಾನದಲ್ಲಿ ಮತ್ತೆ ಅಧಿಕಾರಕ್ಕೇರಲು ವಿಫಲವಾಗಿರುವುದರಿಂದ ಭವಿಷ್ಯದ ಯೋಜನೆಯೇನು ಎಂದು ಇಮ್ರಾನ್ ಖಾನ್ ಗೆ ಪ್ರಶ್ನಿಸಲಾಯಿತು. ಇದಕ್ಕೆ ಉತ್ತರಿಸಿದ ಅವರು. "ಇಲ್ಲಿ ನಿಜವಾದ ಸಮಸ್ಯೆ ಏನೆಂದರೆ ಪಾಕಿಸ್ತಾನ ಮತ್ತು ಇಲ್ಲಿನ ಅಧಿಕಾರಶಾಹಿ. ಇಲ್ಲಿನ ಅಧಿಕಾರಿಗಳು, ರಾಜಕಾರಣಿಗಳು ಸರಿಯಾದ ನಿರ್ಧಾರ ತೆಗೆದುಕೊಳ್ಳದೇ ಇದ್ದಲ್ಲಿ ಇವರೆಲ್ಲರೂ ನಾಶವಾಗುತ್ತಾರೆ. ನಾನು ನಿಮಗೆ ಎಲ್ಲವನ್ನೂ ಲಿಖಿತವಾಗಿ ಕೂಡ ನೀಡಬಲ್ಲೆ. ಎಲ್ಲವೂ ನಾಶವಾಗುತ್ತದೆ. ನಮ್ಮ ಸೇನೆಯು ಧ್ವಂಸವಾಗುವ ಮೊದಲ ಅಂಗ' ಎಂದು ಹೇಳಿದ್ದಾರೆ.
ಮೋದಿ ಭಾಷೆಯನ್ನು ಇಮ್ರಾನ್ ಮಾತನಾಡುತ್ತಿದ್ದಾರೆ: ಇಮ್ರಾನ್ ಖಾನ್ ಹೇಳಿಕೆಗೆ ಪಾಕಿಸ್ತಾನದ ಮಾಜಿ ಪ್ರಧಾನಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ .ಅವರ ಹೇಳಿಕೆಗೆ ಪಾಕಿಸ್ತಾನದಲ್ಲಿ ಕೋಲಾಹಲ ಎದ್ದಿದೆ. ಇಮ್ರಾನ್ ಖಾನ್ ಹೇಳಿಕೆಯನ್ನು ಖಂಡಿಸಿದವರಲ್ಲಿ ಪಾಕಿಸ್ತಾನದ ಮಾಜಿ ಅಧ್ಯಕ್ಷ ಮತ್ತು ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಪಿಪಿ) ಸಹ-ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಕೂಡ ಸೇರಿದ್ದಾರೆ.
ಪಾಕಿಸ್ತಾನದಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ 30 ರೂಪಾಯಿ ಏರಿಕೆ!
ಇಮ್ರಾನ್ ಖಾನ್ ಅವರ ಭಾಷೆ ಯಾವುದೇ ಪಾಕಿಸ್ತಾನಿಯದ್ದಲ್ಲ, ಭಾರತದ ಪ್ರಧಾನಿ ಮೋದಿಯವರ ಭಾಷೆ ಇದಾಗಿದೆ. ಪಾಕಿಸ್ತಾನವನ್ನು ಮೂರು ತುಂಡು ಮಾಡುವ ಬಗ್ಗೆ ಯಾವುದೇ ಪಾಕಿಸ್ತಾನಿ ಮಾತನಾಡುವುದಿಲ್ಲ ಎಂದು ಜರ್ದಾರಿ ಹೇಳಿದ್ದಾರೆ. ಇಮ್ರಾನ್ ಖಾನ್ ಅವರಿಗೆ ಸಲಹೆ ನೀಡಿದ ಜರ್ದಾರಿ, ಅಧಿಕಾರವೇ ಸರ್ವಸ್ವವಲ್ಲ. ಧೈರ್ಯವಾಗಿ ನಿಮ್ಮ ಕಾಲ ಮೇಲೆ ನಿಂತು ರಾಜಕೀಯ ಮಾಡಿ. ನಾವು ಮತ್ತು ನಮ್ಮ ವಂಶಸ್ಥರು ಬದುಕಿರುವವರೆಗೆ ಪಾಕಿಸ್ತಾನವನ್ನು ತುಂಡು ತುಂಡಾಗಿಸುವ ಆಸೆ ಈಡೇರುವುದಿಲ್ಲ ಎಂದು ಅವರು ಹೇಳಿದ್ದಾರೆ. ಭೂಮಿ ಪ್ರಳಯವಾಗುವವರೆಗೂ ಪಾಕಿಸ್ತಾನ ಎನ್ನುವ ದೇಶ ಇರುತ್ತದೆ ಎಂದಿದ್ದಾರೆ.
ಕಳ್ಳರ ಕೈಗೆ ಅಧಿಕಾರ ಕೊಡೋದಕ್ಕಿಂತ ದೇಶದ ಮೇಲೆ ಅಣ್ವಸ್ತ್ರ ಹಾಕಿ ಎಂದ ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್!
ಇಮ್ರಾನ್ ಖಾನ್ ಹೇಳಿಕೆಯನ್ನು ಖಂಡಿಸಿರುವ ಪಿಎಂಎಲ್-ಎನ್ ನಾಯಕ ತಲಾಲ್ ಚೌಧರಿ, ಮಾನಸಿಕ ಅಸ್ವಸ್ಥರು ಮಾತ್ರ ಇಂತಹ ಮಾತುಗಳನ್ನು ಹೇಳಬಹುದು ಎಂದು ಹೇಳಿದ್ದಾರೆ. ಈ ಹಿಂದೆ ಇಮ್ರಾನ್ ಖಾನ್ಪಾಕಿಸ್ತಾನದ ಮೇಲೆ ಪರಮಾಣು ಬಾಂಬ್ ಹಾಕುವಂತೆ ಸಲಹೆ ನೀಡಿದ್ದರು. ಸರ್ಕಾರದ ವಿರುದ್ಧ ಆಂದೋಲನ ನಡೆಸಿ ಹುಂಡಿ (ಹವಾಲಾ) ಮೂಲಕ ಹಣ ಕಳುಹಿಸುವಂತೆಯೂ ಅವರು ಕೇಳಿಕೊಂಡರು. ಇಮ್ರಾನ್ ಖಾನ್ ವಿರುದ್ಧ ಕ್ರಮ ಕೈಗೊಳ್ಳುವ ಸಮಯ ಇದೀಗ ಬಂದಿದೆ ಎಂದರು. ಆಜಾದಿ ಮಾರ್ಚ್ ಕುರಿತ ತನ್ನ ಆದೇಶದ ಉಲ್ಲಂಘನೆಯ ಕುರಿತು ಸುಪ್ರೀಂ ಕೋರ್ಟ್ ವರದಿ ಕೇಳಿದೆ. ಇಮ್ರಾನ್ ವಿರುದ್ಧ ಕ್ರಮ ಕೈಗೊಳ್ಳುವ ಭರವಸೆ ಇದೆ ಎಂದು ಹೇಳಿದ್ದಾರೆ.