ಭಾರತದ ಜೊತೆ ನಿಕಟ ಸಂಬಂಧಕ್ಕೆ ಬದ್ಧ, ಅಬ್ಬರದ ನಂತರ ಕೊಂಚ ತಣ್ಣಗಾದ ಕೆನಡಾ ಪ್ರಧಾನಿ ಟ್ರುಡೋ
ಭಾರತದ ಜೊತೆ ನಿಕಟ ಸಂಬಂಧಕ್ಕೆ ಬದ್ಧ. ಟ್ರುಡೋ- ಭಾರತ ಪ್ರಬಲ ಆರ್ಥಿಕ ಶಕ್ತಿಯಾಗುತ್ತಿದೆ ಎಂದು ಪ್ರಶಂಸೆ- ಆದರೆ ನಿಜ್ಜರ್ ಹತ್ಯೆ ತನಿಖೆಗೆ ಭಾರತದ ಸಹಕಾರ ಅಗತ್ಯ- ಕೆಲ ದಿನಗಳ ಅಬ್ಬರದ ನಂತರ ಕೊಂಚ ತಣ್ಣಗಾದ ಕೆನಡಾ ಪ್ರಧಾನಿ

ಟೊರೊಂಟೋ: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂದು ಕೆಲವು ದಿನಗಳಿಂದ ಅಬ್ಬರಿಸುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಶುಕ್ರವಾರ ಕೊಂಚ ತಣ್ಣಗಾಗಿದ್ದಾರೆ. ‘ಭಾರತದ ಜೊತೆ ನಿಕಟ ಸಂಬಂಧಕ್ಕೆ ಬದ್ಧ’ ಎಂಬ ಹೇಳಿಕೆಯನ್ನು ಅವರು ಈಗ ನೀಡಿದ್ದಾರೆ.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರುಡೋ, ‘ಹೊಸ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಮತ್ತು ಭೌಗೋಳಿಕ ರಾಜಕೀಯದಲ್ಲಿ ಪ್ರಮುಖ ಪಾತ್ರದಾರನಾಗಿರುವ ಭಾರತದ ಜೊತೆ ಆಪ್ತ ಸಂಬಂಧ ಹೊಂದಲು ನಾವು ಬದ್ಧ. ಆದರೆ ಇದೇ ವೇಳೆ ನಿಜ್ಜರ್ ಹತ್ಯೆ ತನಿಖೆ ವಿಷಯದಲ್ಲಿ ನಮಗೆ ಎಲ್ಲಾ ದಾಖಲೆಗಳನ್ನು ಒದಗಿಸುವುದನ್ನೂ ಭಾರತ ಖಚಿತಪಡಿಸಬೇಕು’ ಎಂದರು.
ನಿಜ್ಜರ್ ಹತ್ಯೆ ಕೆನಡಾ ತನಿಖೆಗೆ ಸಹಕರಿಸಿ, ಭಾರತಕ್ಕೆ ಅಮೆರಿಕ ಒತ್ತಾಯ
‘ಭಾರತದ ವಿರುದ್ಧ ಖಚಿತ ಆರೋಪಗಳಿದ್ದರೂ ಅವರ ಜೊತೆಗೆ ನಿಕಟ ಸಂಬಂಧ ಹೊಂದಲು ನಾವು ಬದ್ಧ. ಜಾಗತಿಕ ಮಟ್ಟದಲ್ಲಿ ಪ್ರಮುಖ ಶಕ್ತಿಯಾಗಿ ಹೊರಹೊಮ್ಮುತ್ತಿರುವ ಭಾರತದ ಜೊತೆ ರಚನಾತ್ಮಕವಾಗಿ ಮತ್ತು ಗಂಭೀರ ಸಂಬಂಧ ಹೊಂದುವುದು ಕೆನಡಾ ಮತ್ತು ಅದರ ಪಾಲುದಾರ ದೇಶಗಳಿಗೆ ಅತ್ಯಂತ ಮಹತ್ವದ್ದು. ಕಳೆದ ವರ್ಷವಷ್ಟೇ ನಾವು ಮುಂದಿಟ್ಟ ಇಂಡೋ-ಪೆಸಿಫಿಕ್ ಕಾರ್ಯತಂತ್ರದಲ್ಲಿ ಕೂಡಾ ಭಾರತದ ಜೊತೆ ಅತ್ಯಂತ ನಿಕಟ ಸಂಬಂಧ ಹೊಂದುವ ಬದ್ಧತೆಯನ್ನು ನಾವು ವ್ಯಕ್ತಪಡಿಸಿದ್ದೇವೆ’ ಎಂದು ಹೇಳಿದರು.
ಆದರೆ ಇದೇ ವೇಳೆ ದೇಶದ ಕಾನೂನು ಪಾಲನೆ ನಿಟ್ಟಿನಲ್ಲಿ, ನಿಜ್ಜರ್ ವಿಷಯದಲ್ಲಿ ನಾವು ಭಾರತದಿಂದ ಪೂರ್ಣ ಸಹಕಾರವನ್ನು ಬಯಸುತ್ತೇವೆ ಎಂಬುದು ಕೂಡಾ ಅಷ್ಟೇ ಮಹತ್ವದ್ದು ಎಂದು ಟ್ರುಡೋ ಹೇಳಿದ್ದಾರೆ.
ಭಾರತ, ಕೆನಡಾ ಬಿಕ್ಕಟು ನಡುವೆಯೇ ಅಮೆರಿಕಾ ವಿದೇಶಾಂಗ ಸಚಿವರ
ಖಲಿಸ್ತಾನಿ ಉಗ್ರನ ಹತ್ಯೆಯಲ್ಲಿ ಪಾಕ್ ಐಎಸ್ಐ ಕೈವಾಡ ಪಕ್ಕಾ?
ಭಾರತ ಹಾಗೂ ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟಿಗೆ ಕಾರಣವಾಗಿರುವ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಹಿಂದೆ ಪಾಕಿಸ್ತಾನಿ ಕೈವಾಡ ಇದೆ ಎಂಬ ಗುಮಾನಿಗಳ ನಡುವೆಯೇ ಕೆನಡಾ ಪೊಲೀಸರು, ಸರ್ರೆ ನಗರದಲ್ಲಿರುವ ಶಂಕಿತ ಐಎಸ್ಐ ಏಜೆಂಟ್ ರಾಹತ್ ರಾವ್ ಎಂಬಾತನನ್ನು ವಿಚಾರಣೆಗೆ ಒಳಪಡಿಸಿದ್ದಾರೆ. ಇದರಿಂದ ಭಾರತ-ಕೆನಡಾ ಸಂಬಂಧ ಹಾಳು ಮಾಡಲು ನಿಜ್ಜರ್ ಹತ್ಯೆಯನ್ನು ಪಾಕಿಸ್ತಾನವೇ ನಡೆಸಿದೆ ಎಂಬ ಗುಮಾನಿಗೆ ಪುಷ್ಟಿ ಸಿಕ್ಕಂತಾಗಿದೆ.
ಗುರುವಾರ ಸುಮಾರು 2 ತಾಸು ರಾಹತ್ನನ್ನು ಪೊಲೀಸರು ವಿಚಾರಣೆ ನಡೆಸಿದರು. ಇದೇ ವೇಳೆ ತಮ್ಮೆದುರು ಎಲ್ಲ ಸೋಷಿಯಲ್ ಮೀಡಿಯಾ ಪೇಜ್ಗಳನ್ನು ಅಳಿಸಿ ಹಾಕುವಂತೆ ಆತನಿಗೆ ಸೂಚಿಸಿದರು ಎಂದು ಮೂಲಗಳು ಹೇಳಿವೆ.
‘ವಿಚಾರಣೆ ಬಗ್ಗೆ ಪೊಲೀಸರು ಅಧಿಕೃತ ಹೇಳಿಕೆ ನೀಡಿಲ್ಲವಾದರೂ ಬಹುಶಃ ನಿಜ್ಜರ್ ಹತ್ಯೆಗೆ ಸಂಬಂಧಿಸಿದಂತೆಯೇ ಈ ವೇಳೆ ಆತನ ವಿಚಾರಣೆ ನಡೆದಿದೆ’ ಎಂದು ಅವು ಹೇಳಿವೆ.
ಡ್ರಗ್ಸ್ ವ್ಯವಹಾರ ಕಾರಣ?:
ರಾಹತ್ ರಾವ್ ಹಾಗೂ ಇನ್ನೊಬ್ಬ ಐಎಸ್ಐ ಏಜೆಂಟ್ ತಾರೀಖ್ ಕಿಯಾನಿ ಕೆನಡಾದಲ್ಲಿ ಡ್ರಗ್ಸ್ ವ್ಯವಹಾರ ನಡೆಸುತ್ತಾರೆ. ಅಲ್ಲದೆ, ಭಾರತ-ಪಾಕ್ನಿಂದ ಬಂದ ವಲಸಿಗರನ್ನು ಉಗ್ರ ಸಂಘಟನೆಗೆ ಸೇರಿಸಲು ಶ್ರಮಿಸುತ್ತಾರೆ.
ಡ್ರಗ್ಸ್ ವಹಿವಾಟಿನಲ್ಲಿ ತಮಗೆ ಪ್ರತಿಸ್ಫರ್ಧಿ ಆಗಿದ್ದ ನಿಜ್ಜರ್ನನ್ನು ಮುಗಿಸಬೇಕು ಎಂದು ಸಂಚು ರೂಪಿಸಿದ್ದ ಇಬ್ಬರೂ, ಈ ಕೊಲೆ ಮಾಡಿಸಿರಬಹುದು. ಇವರಿಗೆ ಇನ್ನೊಬ್ಬ ಖಲಿಸ್ತಾನಿ ಉಗ್ರ ಗುರುಪತ್ವಂತ್ ಸಿಂಗ್ ಪನ್ನುನ್ ಸಾಥ್ ನೀಡಿದ್ದ. ಈ ಎಲ್ಲಾ ಬೆಳವಣಿಗೆ ಹಿಂದೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐನ ಕೈವಾಡವಿದೆ ಎಂದು ಮೂಲಗಳು ಹೇಳಿವೆ.
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಅವರು ನಿಜ್ಜರ್ ಹತ್ಯೆ ಹಿಂದೆ ಭಾರತದ ಕೈವಾಡವಿದೆ ಎಂದು ಆರೋಪಿಸಿದ್ದರು. ಆದರೆ ಭಾರತ ಸರ್ಕಾರ ಅದನ್ನು ನಿರಾಕರಿಸಿತ್ತು. ಬಳಿಕ ಈ ಹತ್ಯೆ ಹಿಂದೆ ಪಾಕಿಸ್ತಾನದ ಐಎಸ್ಐ ಗುಪ್ತಚರ ಸಂಸ್ಥೆ ಕೈವಾಡ ಇದೆ. ಬಾರತ-ಕೆನಡಾ ಸಂಬಂಧ ಹಾಳು ಮಾಡಲು ಅದು ಈ ತಂತ್ರ ರೂಪಿಸಿತ್ತು ಎಂದು ಮಾಧ್ಯಮವೊಂದು ಬುಧವಾರ ವರದಿ ಮಾಡಿತ್ತು.