ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 125 ವರ್ಷಗಳಷ್ಟು ಹಳೆಯದಾದ ಹಿಂದೂ ದೇವಾಲಯವನ್ನು ನೆಲಸಮಗೊಳಿಸಲಾಗಿದೆ. ಮದರಸಾ ವಿಸ್ತರಣೆಗಾಗಿ ದೇವಾಲಯವನ್ನು ಕೆಡವಲಾಗಿದೆ ಎಂದು ಸ್ಥಳೀಯರು ಆರೋಪಿಸಿದರೆ, ಮಳೆಯಿಂದ ಕುಸಿದಿದೆ ಎಂದು ಸರ್ಕಾರ ಹೇಳುತ್ತಿದೆ. ಈ ಘಟನೆಯ ತನಿಖೆ ನಡೆಸಿ, ದೇವಾಲಯವನ್ನು ಪುನರ್ ನಿರ್ಮಿಸಬೇಕೆಂದು ಅಲ್ಪಸಂಖ್ಯಾತ ಸಂಘಟನೆಗಳು ಒತ್ತಾಯಿಸಿವೆ.

ಪಾಕಿಸ್ತಾನದಲ್ಲಿರುವ ಸುಮಾರು 100 ರಿಂದ 125 ವರ್ಷಗಳಷ್ಟು ಹಳೆಯದಾದ ಹಿಂದೂ ಧಾರ್ಮಿಕ ಮಂದಿರವನ್ನು ಕೆಡವಲಾಗಿದೆ. ಆಗಸ್ಟ್ 21ರಂದು ಘಟನೆ ನಡೆದಿದ್ದು, ದೇವಾಲಯ ನೆಲಸಮ ಸುದ್ದಿ ತಿಳಿಯುತ್ತಿದ್ದಂತೆ ಅಲ್ಲಿನ ಅಲ್ಪಸಂಖ್ಯಾತ ಸಂಘಟನೆಗಳು ಮತ್ತು ಸ್ಥಳೀಯರು ತನಿಖೆಯ ನಡೆಸಿ ದೇವಾಲಯದ ಪುನರ್ ನಿರ್ಮಾಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ರದಲ್ಲಿ ಘಟನೆ ನಡೆದಿದ್ದು, ಲಾಹೋರ್‌ನಿಂದ ಸುಮಾರು 130 ಕಿಲೋ ಮೀಟರ್ ದೂರದಲ್ಲಿರುವ ನರೋವಾಲ್ ಜಿಲ್ಲೆಯ ಸಿರಾಜ್ ಗ್ರಾಮದಲ್ಲಿ ಸುಮಾರು ಒಂದು ಸಾವಿರ ಚದರ ಮೀಟರ್ ವಿಸ್ತೀರ್ಣದಲ್ಲಿದ್ದ ದೇವಾಲಯವನ್ನು ನಾಶ ಮಾಡಲಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಇನ್ನು ದೇವಾಲಯದ ಪಕ್ಕ ಇರುವ ಮದರಸಾ ವಿಸ್ತರಣೆಗಾಗಿ ದೇವಾಲಯವನ್ನು ಕೆಡವಾಗಲಿದೆ ಎಂದು ಸ್ಥಳೀಯ ಹಿಂದೂಗಳು ಆರೋಪಿಸಿದ್ದಾರೆ. ಆದರೆ ಅಲ್ಲಿನ ಸರ್ಕಾರ ಮಾತ್ರ ಧಾರಾಕಾರ ಮಳೆಯಿಂದ ಹಳೆದಾಗಿದ್ದ ದೇವಾಲಯ ಏಕಾಏಕಿ ಕುಸಿತಗೊಂಡಿದೆ ಎಂದು ಹೇಳಿದೆ.

ಪಾಕ್‌ನಲ್ಲಿ ಪುರಾತನ ದೇಗುಲ ಧ್ವಂಸ: ಮದರಸಾದ ಕೈವಾಡ?

ಸರ್ಕಾರ ಉತ್ತರದಿಂದ ಮತ್ತಷ್ಟು ಆಕ್ರೋಶಗೊಂಡಿರುವ ಸ್ಥಳೀಯ ಹಿಂದೂಗು ಸರ್ಕಾರ ಘಟನೆ ಬಗ್ಗೆ ತನಿಖೆ ನಡೆಸಬೇಕು, ಮತ್ತು ಇದಕ್ಕೆ ಕಾರಣರಾದವರ ವಿರುದ್ಧ ತನಿಖೆ ನಡೆಸಬೇಕು. ಜೊತೆಗೆ ದೇವಾಲಯದ ಪುನರ್ ನಿರ್ಮಾಣ ಮಾಡಬೇಕು. ಮದರಸಾಗೆ ನೀಡಿರುವ ಆಸ್ತಿಯ ಗುತ್ತಿಗೆ ರದ್ದು ಮಾಡಿ, ಈ ಬಗ್ಗೆಯೂ ಅಕ್ರಮ ಆಕ್ರಮಣವನ್ನು ತಡೆಯಬೇಕು ಎಂದು ಬೇಡಿಕೆ ಮುಂದಿಟ್ಟಿದ್ದಾರೆ.

ಈ ಸಂಬಂಧ ಪಿಎಂಎಂಪಿ ಅಧ್ಯಕ್ಷ ಅಸ್ಲಾಂ ಪರ್ವೇಜ್ ಸಹೋತ್ರಾ, ಆಗಸ್ಟ್ 28ರಂದು ಪಂಜಾಬ್ ಹೆಚ್ಚುವರಿ ಗೃಹ ಕಾರ್ಯದರ್ಶಿಯನ್ನು ಭೇಟಿ ಮಾಡಿ ದೂರು ನೀಡಿದ್ದಾರೆ. ದೇವಾಲಯ ಕೆಡವಿದ ದುಷ್ಕರ್ಮಿಗಳ ವಿರುದ್ಧ ತನಿಖೆ ನಡೆಸಬೇಕು ಹಾಗೂ ದೇವಾಲಯವನ್ನು ರಕ್ಷಣೆ ಮಾಡಬೇಕು ಎಂದು ಮನವಿ ಮಾಡಿರುವುದಾಗಿ ಪಿಎಂಎಂಪಿ ಹೇಳಿದೆ. ಇದೇ ವೇಳೆ ದೇವಾಲಯ ನಾಶ ಮಾಡಿರುವವು ಇಸ್ಲಾಮಿಕ್ ರಾಜಕೀಯ ಪಕ್ಷ ಟಿಎಲ್ಪಿಗೆ ಸೇರಿದವರು ಎಂದು ಸಹೋತ್ರಾ ಆರೋಪಿಸಿದ್ದಾರೆ ಎಂದು ಮನಿಕಂಟ್ರೋಲ್ ವರದಿ ಮಾಡಿದೆ.

ಇದೇ ಸಂದರ್ಭದಲ್ಲಿ ದೇವಾಲಯ ರೂಪದಲ್ಲಿ ಪುನರ್ ನಿರ್ಮಾಣ ಮಾಡಬೇಕು. ಹಿಂದೂ, ಸಿಖ್, ಗುರುದ್ವಾರ ಹಾಗೂ ಕ್ರಿಶ್ಚಿಯನ್ ಚರ್ಚ್‌ಗಳು ಮತ್ತು ಅವುಗಳ ಪಕ್ಕದ ಆಸ್ತಿಗಳನ್ನು ರಕ್ಷಿಸುವಂತೆ ಪಂಜಾಬ್ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅಧಿಕಾರಿಗಳು, ಈ ದೇವಾಲಯ 125 ವರ್ಷಗಳಿಗಿಂತ ಪುರಾತನವಾದದ್ದು, ತುಂಬಾ ಹಳೆಯ ದೇಗುಲ ಇದಾಗಿದೆ. ದೇವಾಲಯದ ಪಕ್ಕ ಭೂಮಿಯನ್ನು ಮಾತ್ರ ಗುತ್ತಿಗೆಗೆ ನೀಡಲಾಗಿದೆ. ನಮ್ಮ ಪುಸ್ತಕಗಳಲ್ಲಿ ದೇವಾಲಯದ ಹೆಸರು ಇಲ್ಲ. ದೇವಾಲಯದ ಸ್ವಂತ ಭೂಮಿಯನ್ನು ಯಾರಿಗೂ ಗುತ್ತಿಗೆ ನೀಡಿಲ್ಲ ಎಂದು ಹೇಳಿದ್ದಾರೆ. ದೇವಾಲಯ ಪುನರ್ ನಿರ್ಮಾಣ ಮಾಡಬೇಕಾ ಬೇಡವೇ ಅಂತ ಇಟಿಪಿಬಿ ಅಧಿಕಾರಿಗಳು ನಿರ್ಧರಿಸುತ್ತಾರೆ.

ಈ ಬಗ್ಗೆ ಮಾತನಾಡಿರುವ ಹಿಂದೂ ಸಮುದಾಯದ ನಾಯಕ ರತ್ತನ್ ಲಾಲ್, ಸ್ಥಳೀಯ ಅಧಿಕಾರಿಗಳು ಈ ಸ್ಥಳವನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ. ಸ್ಥಳೀಯ ಹಿಂದೂ ಸಮುದಾಯದ ಸದಸ್ಯರು ಸ್ಥಳಕಕೆ ಭೇಟಿ ನೀಡಲು ಹಿಂಜರಿಯುತ್ತಿದ್ದಾರೆ. ಮದರಸಾ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿರುವುದರಿಂದ ನಾವು ಅಲ್ಲಿಗೆ ಭೇಟಿ ನೀಡಲು ಹೆದರಿಕೆ ಆಗುತ್ತಿದೆ ಎಂದು ಹೇಳಿದ್ದಾರೆ.