ಹೆಣ್ಣು ಅಂದರೆ ಪ್ರೀತಿ, ಕರುಣೆ, ಮಮತೆಯ ಆಗರ. ಎಲ್ಲಿದ್ದರೂ ಆಕೆಯ ಮಾತೃಹೃದಯ ಮಾತ್ರ ಮಿಡಿಯುತ್ತಿರುತ್ತದೆ. ಅದು ನಿಜ ಅನ್ನೋದನ್ನು ಕೇರಳದ ಮಹಿಳಾ ಪೊಲೀಸ್ ಸಾಬೀತುಪಡಿಸಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

ಕಲ್ಲಿಕೋಟೆ: ಅಪಹರಣಕ್ಕೊಳಗಾಗಿದ್ದ 12 ದಿನದ ಪುಟ್ಟಮಗುವಿಗೆ ಮಹಿಳಾ ಪೊಲೀಸ್‌ ಅಧಿಕಾರಿ ಎದೆಹಾಲು ಕುಡಿಸಿ ಅದರ ಪ್ರಾಣ ಕಾಪಾಡಿದ ಮನಕಲಕುವ ಘಟನೆಯೊಂದು ಕೇರಳದಲ್ಲಿ ನಡೆದಿದೆ. ಪೂಲಕ್ಕಡವು ನಿವಾಸಿಯಾಗಿರುವ ಆಶಿಖಾ ಎಂಬ ಮಹಿಳೆ ಚೆವಾಯೂರು ಪೊಲೀಸ್‌ ಠಾಣೆಯಲ್ಲಿ ತನ್ನ ಪತಿ ಆದಿಲ್‌ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಮಗುವನ್ನು ಅಪಹರಿಸಿದ್ದಾರೆ ಎಂದು ಅ.22ರಂದು ದೂರು ಸಲ್ಲಿಸಿದ್ದರು. ಇದರ ಬೆನ್ನಲ್ಲೇ ಪೊಲೀಸರು ಪರಿಶೀಲನೆ ನಡೆಸಿದಾಗ ಮಹಿಳೆಯ ಪತಿ ಹಸುಗೂಸನ್ನು ಸುಲ್ತಾನ್‌ಬತೇರಿಗೆ ಒಯ್ದಿದ್ದು, ಅಲ್ಲಿಂದ ಬೆಂಗಳೂರಿಗೆ ರವಾನೆ ಮಾಡುವ ಸಿದ್ಧತೆ ನಡೆಸಿದ್ದು ಕಂಡುಬಂದಿತ್ತು.

ಕೇರಳದ ಪೊಲೀಸ್ ಮಮತೆಗೆ ಮೆಚ್ಚುಗೆ
ಈ ವೇಳೆ ಅಲ್ಲಿಗೆ ದಾಳಿ ನಡೆಸಿದ ಪೊಲೀಸರು ಮಗುವನ್ನು (Baby) ರಕ್ಷಿಸಿ, ಆದಿಲ್‌ನನ್ನು ವಶಕ್ಕೆ ಪಡೆದಿತ್ತು. ಆದರೆ ಮಗುವಿಗೆ ಬಹಳ ಸಮಯದಿಂದಲೂ ಆಹಾರ (Food) ನೀಡದೇ ಇರುವುದರಿಂದ ಅದರ ಆರೋಗ್ಯ (Health) ಹದಗೆಟ್ಟಿತ್ತು. ಈ ವೇಳೆ ಚೆವಾಯೂರು ಸಿವಿಲ್‌ ಪೊಲೀಸ್‌ ಅಧಿಕಾರಿ ರಮ್ಯಾ ಠಾಣೆಯಲ್ಲಿ ತಾವೇ ಮಗುವಿಗೆ ಕುಡಿಸಿ ಮನಗೆದ್ದಿದ್ದಾರೆ. ಅದಕ್ಕೂ ಮೊದಲು ರಮ್ಯಾ ವೈದ್ಯರಿಗೆ ಕರೆ ಮಾಡಿ ಅವರ ಅನುಮತಿ ಕೇಳಿದ್ದಾರೆ. ರಮ್ಯಾ ಒಂದು ವರ್ಷದ ಮಗುವಿನ ತಾಯಿಯಾಗಿದ್ದು, ಹೀಗಾಗಿ ಕಂದಮ್ಮನಿಗೆ ಹಾಲು (Milk) ಕುಡಿಸುವುದರಿಂದ ತೊಂದರೆಯಿದೆಯೇ ಎಂದು ವಿಚಾರಿಸಿದ್ದಾರೆ. ವೈದ್ಯರು ಒಪ್ಪಿಗೆ ನೀಡಿದ ಬಳಿಕ 12 ದಿನದ ಪುಟ್ಟಮಗುವಿಗೆ ರಮ್ಯಾ ಹಾಲು ಕುಡಿಸಿದ್ದಾರೆ.

ಸ್ತನಪಾನ ಮಾಡೋ ತಾಯಂದಿರು ಅಪ್ಪಿ ತಪ್ಪಿಯೂ ಈ Skin care ಕ್ರೀಮ್ ಬಳಸಬೇಡಿ

ಹೈಕೋರ್ಟ್ ನ್ಯಾಯಾಧೀಶದರಿಂದ ಅಭಿನಂದನೆ
ಕಿಡ್ನಾಪ್‌ ಆಗಿದ್ದ ಮಗುವಿಗೆ ಹಾಲು ಕುಡಿಸಿದ ರಮ್ಯಾ ಇದು ನನ್ನ ಜೀವನದ (Life) ಅತ್ಯಂತ ಖುಷಿಯ, ನೆನಪಿನಲ್ಲಿ ಉಳಿಯುವ ದಿನ ಎಂದು ಹೇಳಿಕೊಂಡಿದ್ದಾರೆ. ಈ ಘಟನೆ ವರದಿಯಾಗಿದ್ದ ಬೆನ್ನಲ್ಲೇ ಕೇರಳದ ಹೈಕೋರ್ಚ್‌ ನ್ಯಾಯಾಧೀಶ ದೇವನ್‌ ರಾಮಚಂದ್ರನ್‌ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದು, ರಮ್ಯ ಅವರಿಗೆ ಪತ್ರದ ಮೂಲಕ ಅಭಿನಂದನೆ (Compliments) ಸಲ್ಲಿಸಿದ್ದಾರೆ. ಮಾತ್ರವಲ್ಲ ಸ್ಟೇಟ್ ಪೊಲೀಸ್ ಮೀಡಿಯಾ ಸೆಲ್‌ನಿಂದ ಸರ್ಟಿಫಿಕೇಟ್‌ನ್ನು ಸಹ ಕಳುಹಿಸಲಾಗಿದೆ.

ಈ ಅಭಿನಂದನಾ ಪತ್ರದಲ್ಲಿ ನ್ಯಾಯಾಧೀಶ ದೇವನ್‌ ರಾಮಚಂದ್ರನ್‌, 'ಇಂದು ನೀವು ಪೊಲೀಸ್‌ ಇಲಾಖೆಯ (Police department) ಉತ್ತಮ ಮುಖವನ್ನು ಜನತೆಗೆ ತೋರಿಸಿದ್ದೀರಿ. ಉತ್ತಮ ಅಧಿಕಾರಿ ಮತ್ತು ನಿಜವಾದ ತಾಯಿ' ಎಂದು ಹೊಗಳಿದ್ದಾರೆ.

ಮಗುವಿನ ಆರೋಗ್ಯದ ಬಗ್ಗೆ ತಿಳಿದು ಮಾತೃಹೃದಯ ಜಾಗೃತವಾಯಿತು
ಮಗುವಿಗೆ ಹಾಲುಣಿಸಿದ ಘಟನೆಯ ಬಗ್ಗೆ ಮಾತನಾಡಿದ ಪೊಲೀಸ್ ರಮ್ಯಾ, 'ಮಗುವಿನ ಆರೋಗ್ಯ ಚೆನ್ನಾಗಿಲ್ಲ. ಶುಗರ್ ಲೆವೆಲ್‌ ಕಡಿಮೆಯಾಗುತ್ತಿದೆ ಎಂದು ತಿಳಿದಾಗ ನನಗೆ ಗಾಬರಿಯಾಯಿತು. ನನಗೆ ಬೇರೇನನ್ನೂ ಯೋಚಿಸಲು ಸಾಧ್ಯವಾಗಲ್ಲಿಲ್ಲ. ನನ್ನ ಮಾತೃಹೃದಯ ಜಾಗೃತವಾಯಿತು. ಹೇಗಾದರೂ ಮಗುವಿನ ಆರೋಗ್ಯ ಚೆನ್ನಾಗಿ ಆಗಲಿ ಎಂದು ನಾನು ಬಯಸಿದೆ' ಎಂದಿದ್ದಾರೆ. 

ಮಗುವನ್ನು ಕೂರಿಸಲು ಸೈಕಲ್‌ಗೆ ಚೇರ್‌ ಸೇರಿಸಿದ ತಾಯಿ; ವೀಡಿಯೋ ವೈರಲ್‌

ಮೂಲತಃ ಕೋಝಿಕ್ಕೋಡ್‌ ಜಿಲ್ಲೆ ಚಿಂಗಾಪುರಂನವರಾಗಿರುವ ರಮ್ಯಾ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ. ಒಂದು ಮಗುವಿಗೆ ನಾಲ್ಕು, ಇನ್ನೊಂದು ಮಗುವಿಗೆ ಒಂದು ವರ್ಷ. ಇತ್ತೀಚಿಗಷ್ಟೇ ರಮ್ಯಾ ಮೆಟರ್ನಿಟಿ ಲೀವ್ ಮುಗಿಸಿ ಕರ್ತವ್ಯಕ್ಕೆ ಹಾಜರಾಗಿದ್ದರು. ರಮ್ಯಾ ಪತಿ ಶಾಲೆಯೊಂದರಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷಗಳಿಂದ ರಮ್ಯಾ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅದೇನೆ ಇರ್ಲಿ, ಒಟ್ನಲ್ಲಿ ಪೊಲೀಸ್ ಮಾತೃ ಹೃದಯದ ಕಾರ್ಯ ನೆಟ್ಟಿಗರ ಮೆಚ್ಚುಗೆ ಪಾತ್ರವಾಗಿರೋದಂತೂ ನಿಜ.