ಮಗುವನ್ನು ಪಡೆಯೋದು ಎಷ್ಟು ಖುಷಿ ನೀಡುವ ಸಂಗತಿಯೋ ಅಷ್ಟೇ ಸವಾಲಿನ ಕೆಲಸ. ಎಲ್ಲರ ಮನಸ್ಥಿತಿ ಒಂದೇ ರೀತಿ ಇರಲು ಸಾಧ್ಯವಿಲ್ಲ. ಕೆಲ ಮಹಿಳೆಯರು, ಹೆರಿಗೆ ನಂತ್ರ ಸಂಪೂರ್ಣ ಕುಗ್ಗಿ ಹೋಗ್ತಾರೆ. ಅದನ್ನು ಪತ್ತೆ ಮಾಡಿ, ಮತ್ತೆ ವಾಸ್ತವಕ್ಕೆ ಮರಳುವ ಅಗತ್ಯವಿರುತ್ತದೆ.  

ಮಾನಸಿಕ ರೋಗ, ಖಿನ್ನತೆ ಬಗ್ಗೆ ನಮ್ಮ ಜನರಿಗೆ ಇನ್ನೂ ಸರಿಯಾದ ಮಾಹಿತಿ ಇಲ್ಲ. ನನಗೆ ಖಿನ್ನತೆ ಕಾಡ್ತಿದೆ ಅಥವಾ ನನಗೆ ಮಾನಸಿಕ ಸಮಸ್ಯೆ ಇದೆ ಎಂಬುದನ್ನು ಜನರು ಒಪ್ಪಿಕೊಳ್ಳಲು ಹಿಂದೇಟು ಹಾಕ್ತಾರೆ. ಹೆರಿಗೆ ನಂತ್ರ ಕಾಡುವ ಮಾನಸಿಕ ಸಮಸ್ಯೆ ಬಗ್ಗೆ ಬಹುತೇಕರು ನಿರ್ಲಕ್ಷ್ಯ ಮಾಡ್ತಾರೆ. ಆದ್ರೆ ಹೆರಿಗೆ ನಂತ್ರ ಮಹಿಳೆಯನ್ನು ಕಾಡುವ ಮಾನಸಿಕ ಖಿನ್ನತೆ ಬಹಳ ಅಪಾಯಕಾರಿ. ಕೆಲವೊಮ್ಮೆ ಅದು ಮನಸ್ಥಿತಿಯನ್ನು ಸಂಪೂರ್ಣ ಹಾಳು ಮಾಡುತ್ತದೆ. ಮಹಿಳೆ ಹುಚ್ಚಾಸ್ಪತ್ರೆ ಸೇರುವ ಸ್ಥಿತಿಗೆ ತಂದು ನಿಲ್ಲಿಸುತ್ತದೆ. ಮತ್ತೆ ಕೆಲವರು ಖಿನ್ನತೆಯಲ್ಲಿ ಆತ್ಮಹತ್ಯೆಗೆ ಶರಣಾಗ್ತಾರೆ. ಬರೀ ಸಾಮಾನ್ಯರಿಗೆ ಮಾತ್ರವಲ್ಲ ಉನ್ನತ ಹುದ್ದೆಯಲ್ಲಿರುವ ಮಹಿಳೆಯನ್ನು ಕೂಡ ಇದು ಬಿಡೋದಿಲ್ಲ. ಆದಾಯ ತೆರಿಗೆಯ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿರುವ ಐಆರ್ ಎಸ್ ಅಧಿಕಾರಿ ಶುಭ್ರತಾ ಪ್ರಕಾಶ್ ತಮ್ಮ ಅನುಭವವನ್ನು ಜನರ ಮುಂದಿಟ್ಟಿದ್ದಾರೆ. 

Add Asianetnews Kannada as a Preferred SourcegooglePreferred

ಹೆರಿಗೆ (Child birth )ನಂತ್ರ ಇವರನ್ನೂ ಕಾಡಿತ್ತು ಖಿನ್ನತೆ (Depression) : ಶುಭ್ರತಾ ಪ್ರಕಾಶ್ ಸಿ ಸೆಕ್ಷನ್ ಹೆರಿಗೆಗೆ ಒಳಗಾಗಿದ್ದರು. ಹೆರಿಗೆ ಸಂದರ್ಭದಲ್ಲೇ ಹೆದರಿದ್ದ ಅವರು ಮಗು ಹುಟ್ಟಿದ್ಮೇಲೆ ಸಂತೋಷವಾಗಿ ಕಾಣ್ತಿದ್ದರೂ ವಾಸ್ತವವಾಗಿ ಹಾಗಿರಲಿಲ್ಲ. ಅವರ ಮನಸ್ಸು ಕಾರಣವಿಲ್ಲದೆ ಅಳ್ತಾಯಿತ್ತು.

ಮರುಜನ್ಮ ಪಡೆದ ಪತ್ನಿಗೆ ಜೋಡಿ ನಂ.1 ವೇದಿಕೆಯಲ್ಲಿ ಸೀರೆ ಕೊಟ್ಟು ಕಣ್ಣೀರು ತರಿಸಿದ 'ಅಮೃತಧಾರೆ' ಆನಂದ್​

ಶೂನ್ಯ ಅರಿವು ಎಂದರೆ ಅದು ಪ್ರಸವಾನಂತರದ ಖಿನ್ನತೆ ಎಂದು ಅವರಿಗೆ ತಿಳಿದಿರಲಿಲ್ಲ. ಮನೆಗೆ ಹಿಂತಿರುಗಿದ ನಂತ್ರ ನಾನು ನನ್ನ ಗಮನವನ್ನು ಬೇರೆಡೆ ಸೆಳೆಯಲು ಪ್ರಯತ್ನಿಸಿದೆ. ನಾನು ಕೆಲಸಕ್ಕೆ ಮರಳಿದೆ. ಆದರೆ ನಾನು ಮತ್ತೆ ನನ್ನ ಹಳೆಯ ಸ್ವಭಾವವನ್ನು ಎಂದಿಗೂ ಅನುಭವಿಸಲಿಲ್ಲ ಎನ್ನುತ್ತಾರೆ ಶುಭ್ರತಾ ಪ್ರಕಾಶ್. 

ಶುಭ್ರತಾ ಪ್ರಕಾಶ್, ಹಾಸಿಗೆಯಿಂದ ಹೊರಬರಲು ಅಥವಾ ಹಲ್ಲುಜ್ಜಲು ಸಾಧ್ಯವಾಗದ ದಿನಗಳು ಇದ್ದವು. ಕೆಲಸ ಮಾಡಲು ಅವರಿಗೆ ಇಷ್ಟವಿರಲಿಲ್ಲ. ಯಾರಾದರೂ ಒಳ್ಳೆಯ ಮಾತು ಹೇಳಿದರೂ ಅದರ ಬಗ್ಗೆ ಹೆಚ್ಚು ಗಮನ ಹರಿಸುತ್ತಿರಲಿಲ್ಲ. ದೈಹಿಕವಾಗಿ ಏನೂ ಬದಲಾವಣೆ ಆಗಿಲ್ಲದೆ ಹೋದ್ರೂ ಏನೋ ಆಗಿದೆ ಎಂಬ ಅನುಭವ ಅವರಿಗಾಗ್ತಾ ಇತ್ತು. ಆದ್ರೆ ಏನು ಎಂಬ ಪ್ರಶ್ನೆಗೆ ಉತ್ತರ ಸಿಗ್ತಾ ಇರಲಿಲ್ಲ. ಶುಭ್ರತಾ ಪ್ರಕಾಶ್ ವರ್ತನೆ ವಿಚಿತ್ರವಾಗಿದೆ ಎಂದು ಜನರು ಬೆನ್ನ ಹಿಂದೆ ಮಾತನಾಡ್ತಿದ್ದರು. ನಾನು ಯಾವುದೇ ದುಃಖದಲ್ಲಿಲ್ಲ, ನನಗೆ ಅನಾರೋಗ್ಯ ಕಾಡಿದೆ ಎಂಬುದು ಜನರಿಗೆ ಗೊತ್ತೆ ಆಗಿರಲಿಲ್ಲ ಎಂದು ಶುಭ್ರತಾ ಪ್ರಕಾಶ್ ಹೇಳ್ತಾರೆ. ನನಗಿಂತ ಕಡಿಮೆ ಸಂಬಳ ಹಾಗೂ ಕುಟುಂಬ ಬೆಂಬಲ ಹೊಂದಿರುವವರು ಕೂಡ ನನಗಿಂತ ಚೆನ್ನಾಗಿ ಜೀವನ ಮಾಡ್ತಿದ್ದಾರೆ ಎಂಬ ಹೋಲಿಕೆ ಶುರುವಾಗಿತ್ತು ಎನ್ನುತ್ತಾರೆ ಶುಭ್ರತಾ.

ಭಾರತದ ಶ್ರೀಮಂತ ಸೆಲ್ಫ್ ಮೇಡ್ ಮಹಿಳೆ ರಾಧಾ ವೆಂಬು; ಉದ್ಯಮ ಜಗತ್ತಿನಲ್ಲಿ ಇವರ ಸಾಧನೆ ಹಲವರಿಗೆ ಪ್ರೇರಣೆ

ಈ ಎಲ್ಲ ಮಾತುಗಳು ಶುಭ್ರತಾ ಒತ್ತಡವನ್ನು ಮತ್ತಷ್ಟು ಹೆಚ್ಚಿಸಿತ್ತು. 2011ರಲ್ಲಿ ಪ್ಯಾನಿಕ್ ಅಟ್ಯಾಕ್ ಗೆ ಒಳಗಾದ ಅವರು ಕಂಗಾಲಾಗಿದ್ರು. ಹೃದಯ ಬಡಿತ ಹೆಚ್ಚಾಗಿತ್ತು. ಇಡೀ ದೇಹ ಬೆವರಿತ್ತು. ಕೈಕಾಲುಗಳು ನಡುಗುತ್ತಿದ್ದವು. ಇನ್ನೇನು ಸತ್ತೆ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಆಗ ನೇರವಾಗಿ ಆಫೀಸ್ ನಿಂದ ವೈದ್ಯರ ಬಳಿ ಓಡಿದ್ರು ಶುಭ್ರತಾ. ಮನೋವೈದ್ಯರನ್ನು ಭೇಟಿಯಾದ ಶುಭ್ರತಾಗೆ ತಾನು ಖಿನ್ನತೆಯಿಂದ ಬಳಲುತ್ತಿದ್ದೇನೆ ಎಂಬ ಸತ್ಯ ಗೊತ್ತಾಯಿತು. ಖಿನ್ನತೆಗೆ ಸಂಬಂಧಿಸಿದ ಮಾತ್ರೆ ಸೇವನೆಯನ್ನು ಶುಭ್ರತಾ ತೆಗೆದುಕೊಳ್ಳಲು ಮುಂದಾದ್ರು. 

ಮಾತ್ರೆ ತಾತ್ಕಾಲಿಕ ಪರಿಹಾರ ನೀಡಿತ್ತು. ಇದ್ರಿಂದ ಕೈಕಾಲು ನಡುಗುವ ಸಮಸ್ಯೆ ಹೆಚ್ಚಾಯ್ತು. ಹಾಗಾಗಿ ಶುಭ್ರತಾ ಮಾತ್ರೆ ಬಿಡುವ ನಿರ್ಧಾರಕ್ಕೆ ಬಂದ್ರು. ತಮ್ಮ ಸಮಸ್ಯೆಯನ್ನು ತಾವೇ ಬಗೆಹರಿಸಿಕೊಳ್ಳುವ ನಿರ್ಧಾರ ಮಾಡಿದ್ರು. ಸಾವಧಾನತೆ, ಧ್ಯಾನ, ಯೋಗ, ಈಜು ಮತ್ತು ಬ್ಲಾಗಿಂಗ್‌ನೊಂದಿಗೆ ಮತ್ತೆ ವಾಪಸ್ ಬಂದಿದ್ದಾರೆ ಶುಭ್ರತಾ. ಈಗ್ಲೂ ಕೆಲವೊಮ್ಮೆ ಪ್ಯಾನಿಕ್ ಅಟ್ಯಾಕ್ ಆಗುತ್ತೆ. ಆದ್ರೆ ಅದರಿಂದ ಹೊರಗೆ ಬರೋದನ್ನು ಕಲಿತಿದ್ದೇನೆ. ಡಿ ವರ್ಡ್: ಎ ಸರ್ವೈವರ್ಸ್ ಗೈಡ್ ಟು ಡಿಪ್ರೆಶನ್ ಎಂಬ ಪುಸ್ತಕವನ್ನೂ ಬರೆದಿದ್ದೇನೆ. ಮಹಿಳೆಯರಿಗೆ ಹೆರಿಗೆ ಡಿಪ್ರೆಶನ್ ಬಗ್ಗೆ ತಿಳಿಯುವ ಅಗತ್ಯವಿದೆ. ಜೀವನದಲ್ಲಿ ಅನೇಕ ಸಮಸ್ಯೆಗಳು ಬರುತ್ತವೆ. ಅದನ್ನು ಶಾಂತಿಯಿಂದ ಪರಿಹರಿಸಬೇಕು ಎನ್ನುತ್ತಾರೆ ಶುಭ್ರತಾ.