Asianet Suvarna News Asianet Suvarna News

ರಾಷ್ಟ್ರಪತಿಯೊಂದಿಗೆ ಬಂಟ್ವಾಳ ಮಹಿಳೆಯರ ಸಂವಾದ: ದೆಹಲಿಯತ್ತ ಪಯಣ

ಅದ್ಯಾವ ಭಾಗ್ಯ ಇವರನ್ನು ಅರಸಿ ಬಂದಿತೋ ಗೊತ್ತಿಲ್ಲ , ಬಂಟ್ವಾಳದ ಈ ಮೂವರು ಮಹಿಳೆಯರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಜೊತೆ ಸಂವಾದ ನಡೆಸುವ ಸೌಭಾಗ್ಯ ಪಡೆದುಕೊಂಡಿದ್ದು, ಅದಕ್ಕಾಗಿ ಬುಧವಾರ ದೆಹಲಿಯತ್ತ ಹೊರಟಿದ್ದಾರೆ.

Bantwa women interaction with the President Journey to Delhi rav
Author
First Published Mar 30, 2023, 11:07 AM IST

ಮೌನೇಶ ವಿಶ್ವಕರ್ಮ

ಬಂಟ್ವಾಳ (ಮಾ.30) : ಅದ್ಯಾವ ಭಾಗ್ಯ ಇವರನ್ನು ಅರಸಿ ಬಂದಿತೋ ಗೊತ್ತಿಲ್ಲ , ಬಂಟ್ವಾಳದ ಈ ಮೂವರು ಮಹಿಳೆಯರು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿಗಳ ಜೊತೆ ಸಂವಾದ ನಡೆಸುವ ಸೌಭಾಗ್ಯ ಪಡೆದುಕೊಂಡಿದ್ದು, ಅದಕ್ಕಾಗಿ ಬುಧವಾರ ದೆಹಲಿಯತ್ತ ಹೊರಟಿದ್ದಾರೆ.

ದಕ್ಷಿಣ ಕನ್ನಡ(Dakshina kannada) ಜಿಲ್ಲೆಯಿಂದ ಆಯ್ಕೆಯಾಗಿರುವ ಈ ಮೂವರು ಮಹಿಳೆಯರೂ ಬಂಟ್ವಾಳ(Bantwal) ತಾಲೂಕಿನವರು. ಬೆಂಗಳೂರಿಗೆ ರೈಲಿನಲ್ಲಿ, ಅಲ್ಲಿಂದ ದೆಹಲಿಗೆ ವಿಮಾನದಲ್ಲಿ ಪಯಣಿಸುವ ಭಾಗ್ಯ ಇವರಿಗೆ ಒದಗಿ ಬಂದಿದ್ದು, ತಾಲೂಕಿನ ಅಳಿಕೆ ಅನುಗ್ರಹ ಒಕ್ಕೂಟದ ವಾರಿಜ ಮತ್ತು ಅಮಿತ ಹಾಗೂ ಕೊಳ್ನಾಡು ನೇತ್ರಾವತಿ ಸಂಜೀವಿನೀ ಒಕ್ಕೂಟದ ಇಂದ್ರಾವತಿ ಎಂಬವರೇ ರಾಷ್ಟ್ರಪತಿಗಳ ಭೇಟಿಯ ಅವಕಾಶ ಪಡೆದವರು.

ನೇತ್ರಾವತಿ ನದಿಯಲ್ಲಿ ಮರಳು ಗಣಿಗಾರಿಕೆ, ನೀರಾವರಿ ಇಲಾಖೆಗೆ ಹಸಿರು ಪೀಠದಿಂದ 50 ಕೋಟಿ ಮೊತ್ತದ ಭಾರೀ ದಂಡ!

ರಾಷ್ಟ್ರಪತಿ(President of India)ಯವರು ಬುಡಕಟ್ಟು ಜನಾಂಗದ ಸ್ವ-ಸಹಾಯ ಗುಂಪಿನ ಸದಸ್ಯರನ್ನು ಭೇಟಿಯಾಗುವ ಸಲುವಾಗಿ ದೆಹಲಿಯ ರಾಷ್ಟ್ರಪತಿ ಭವನದ ಅಮೃತ ಉದ್ಯಾನಕ್ಕೆ ದೇಶದ ಎಲ್ಲೆಡೆಯಿಂದ ಬುಡಕಟ್ಟು ಜನಾಂಗದ ಮಹಿಳೆಯರನ್ನು ಆಯ್ಕೆ ಮಾಡಲಾಗುತ್ತಿದ್ದು, ರಾಜ್ಯದಿಂದ 30 ಮಹಿಳೆಯರನ್ನು ಆಯ್ಕೆ ಮಾಡಲಾಗಿದೆ.

ದೆಹಲಿ ಭೇಟಿಯ ಕುರಿತು ತೀವ್ರ ಸಂತೋಷ ವ್ಯಕ್ತಪಡಿಸಿರುವ ಮೂವರು ಮಹಿಳೆಯರು, ಇದು ನಮ್ಮ ಬದುಕಿನ ಸೌಭಾಗ್ಯ ಎಂದು ಸಂತಸ ಹಂಚಿಕೊಂಡಿದ್ದಾರೆ.

ಯಾರಿವರು ಮೂವರು..?

ವಾರಿಜಾ

ತಾಲೂಕಿನ ಅನುಗ್ರಹ ಸಂಜೀವಿನೀ ಒಕ್ಕೂಟ(Anugraha sanjeevini vokkoota)ದಲ್ಲಿ ಕಳೆದ ಮೂರುಬವರ್ಷಗಳಿಂದ ಎಂಬಿಕೆ ಆಗಿ ಕಾರ್ಯನಿರ್ವಹಿಸುತ್ತಿರುವ ವಾರಿಜಾ ಅವರು, ಈ ಒಕ್ಕೂಟದಿಂದ ಸ್ವ ಉದ್ಯೋಗಕ್ಕೆ ಪ್ರೇರಣೆ ಪಡೆದವರು. ಕೃಷಿ ಸಹಿತ ಮಲ್ಲಿಗೆ ಕೃಷಿಯಲ್ಲೂ ತೊಡಗಿಸಿಕೊಂಡಿರುವ ಇವರು ಆಡು ಸಾಕಣೆ, ಕೋಳಿ ಸಾಕಣೆಯಲ್ಲೂ ತೊಡಗಿಸಿಕೊಂಡಿದ್ದಾರೆ. ಇದು ನಮಗೆ ನೆನೆಯದೇ ಬಂದ ಭಾಗ್ಯ ಎಂದವರು ಖುಷಿಯನ್ನು ಹಂಚಿಕೊಂಡಿದ್ದಾರೆ.

ಅಮಿತಾ

ಅವಿಭಕ್ತ ಕುಟುಂಬದ ಸದಸ್ಯೆಯಾಗಿರುವ ಇವರು, ಕನ್ಯಾನ ಕೆಪಿಎಸ್‌ ವಿದ್ಯಾಸಂಸ್ಥೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಣಬೆ ಕೃಷಿಯ ಸ್ವ ಉದ್ಯೋಗದಲ್ಲಿ ತೊಡಗಿಸಿಕೊಂಡ ಇವರ ತುಂಬು ಕುಟುಂಬ, ಮಲ್ಲಿಗೆ ಕೃಷಿ, ಹೈನುಗಾರಿಕೆಯಲ್ಲೂ ಮುಂದಿದೆ. ಸಂಜೀವಿನೀ ಒಕ್ಕೂಟ ನನ್ನ ಜೀವನಕ್ಕೆ ಹೊಸ ಪ್ರೇರಣೆ ನೀಡಿದೆ, ದೆಹಲಿ ಪಯಣ ಅತ್ಯಂತ ಸಂತಸದ ಕ್ಷಣ ಎಂದವರು ಹರ್ಷ ವ್ಯಕ್ತಪಡಿಸಿದ್ದಾರೆ.

ಇಂದ್ರಾವತಿ

ಕೊಳ್ನಾಡು ನೇತ್ರಾವತಿ ಒಕ್ಕೂಟ(Kolnadu Netravati Union)ದಲ್ಲಿ ಕಳೆದ 20 ವರ್ಷಗಳಿಂದ ತೊಡಗಿಸಿಕೊಂಡಿರುವ ಇಂದ್ರಾವತಿ(Indravati)ಯವರು ಹಪ್ಪಳ, ಸಂಡಿಗೆ ತಯಾರಿಸಿ ಮಾರಾಟ ಮಾಡುವ ಜೊತೆಗೆ ಟೈಲರಿಂಗ್‌ ವೃತ್ತಿಯನ್ನೂ ನೆಚ್ಚಿಕೊಂಡವರು. ಸಂಜೀವಿನೀ ಒಕ್ಕೂಟದ ಮೂಲಕ ಪ್ರತೀ ವಾರ ಹೊಸಬಗೆಯ ಪ್ರೇರಣೆ ಸಿಗುತ್ತಿದೆ ಎನ್ನುವ ಅವರು ದೆಹಲಿಗೆ ಹೋಗುವ ಅವಕಾಶ ದೊರೆತಿರುವುದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ್ದಾರೆ.

ಮಾ.31 ರಂದು ದೆಹಲಿಯಲ್ಲಿ ರಾಷ್ಟ್ರಪತಿಗಳನ್ನು ಭೇಟಿಯಾಗಲಿರುವ ಇವರ ಪ್ರಯಾಣದ ವೆಚ್ಚವನ್ನು ಸರ್ಕಾರವೇ ಭರಿಸಲಿದೆ. ಬೆಂಗಳೂರಿಗೆ ಹೋಗುವ ವೆಚ್ಚವನ್ನು ಸಂಜೀವಿನೀ ಜಿಲ್ಲಾ ಅಭಿಯಾನ ಘಟಕವೇ ಭರಿಸಲಿದ್ದು, ಬೆಂಗಳೂರಿನಿಂದ ದೆಹಲಿಗೆ ಹೋಗುವ ವಿಮಾನದ ವೆಚ್ಚವನ್ನು ರಾಜ್ಯ ಅಭಿಯಾನ ಘಟಕ ಭರಿಸಲಿದೆ. ರಾಜ್ಯದಿಂದ ಇಬ್ಬರು ಅಧಿಕಾರಿಗಳು, 30 ಮಹಿಳೆಯರು ಸೇರಿದಂತೆ ಒಟ್ಟು 32 ಮಂದಿ ದೆಹಲಿಗೆ ತೆರಳುತ್ತಿದ್ದಾರೆ.

ದಕ್ಷಿಣ ಕನ್ನಡದಲ್ಲಿ ಬೇಸಗೆ ಮಳೆ ಸಿಂಚನ: ಉಡುಪಿಯಲ್ಲಿ ತುಂತುರು

ರಾಷ್ಟ್ರಪತಿಭವನಕ್ಕೆ ಬುಡಕಟ್ಟು ಜನಾಂಗದ ಸ್ವಸಹಾಯ ಗುಂಪಿನ ಸದಸ್ಯರ ಭೇಟಿಗೆ ದ.ಕ.ಜಿಲ್ಲೆಯಿಂದ ಬಂಟ್ವಾಳ ತಾಲೂಕಿನ ಮೂವರು ಸದಸ್ಯರು ಆಯ್ಕೆಯಾಗಿ ನವದೆಹಲಿಗೆ ಪಯಣಿಸುತ್ತಿರುವುದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿ.

ಶ್ರೀಮತಿ ಸುಧಾ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು

ಸಂಜೀವಿನೀ ತಾಲೂಕು ಅಭಿಯಾನ ಘಟಕ ಬಂಟ್ವಾಳ

Follow Us:
Download App:
  • android
  • ios